ರಾಜ್ಯ ವಿಧಾನಸಭೆಗೂ ಮುನ್ನ ಕಾಂಗ್ರೆಸ್ ಘೋಷಣೆ ಮಾಡಿದ್ದ 5 ಗ್ಯಾರಂಟಿಗಳಲ್ಲಿ ಮೊದಲನೆ ಗ್ಯಾರಂಟಿ ಜಾರಿಗೆ ಬರುತ್ತಿದೆ. ನಾಳೆ ಬಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಕ್ತಿ ಯೋಜನೆಗೆ ಚಾಲನೆ ನೀಡುತ್ತಿದ್ದಾರೆ. ಆ ಬಳಿಕ ಯಾವುದೇ ಮಹಿಳೆ ಸಾಮಾನ್ಯ ಸಾರಿಗೆಯಲ್ಲಿ (AC, ಐಶಾರಾಮಿ ಬಸ್, ಸ್ಲೀಪರ್ ಕೋಚ್ ಹೊರತುಪಡಿಸಿ) ಹಣ ಪಾವತಿ ಮಾಡದೆ ಉಚಿತವಾಗಿ ಸಂಚಾರ ಮಾಡಬಹುದಾಗಿದೆ. ರಾಜ್ಯಾದ್ಯಂತ ಎಲ್ಲಿಂದ ಎಲ್ಲಿಗೆ ಬೇಕಾದರೂ ಸಂಚಾರ ಮಾಡಬಹುದಾಗಿದೆ. ಒಂದು ವೇಳೆ ಬಾರ್ಡರ್ ದಾಟಿ ಬೇರೆ ರಾಜ್ಯಕ್ಕೆ ಹೋಗುವುದಾದರೆ ಕರ್ನಾಟಕದ ಬಾರ್ಡರ್ ತನಕ ಟಿಕೆಟ್ ಇಲ್ಲದೆ ಪ್ರಯಾಣ ಮಾಡಬಹುದು. ಬೇರೆ ರಾಜ್ಯಕ್ಕೆ ಹೋದಾಗ ಅಲ್ಲಿ ಟಿಕೆಟ್ ಖರೀದಿ ಅನಿವಾರ್ಯ. ಇನ್ನೊಂದು ವಿಶೇಷ ಸಂಗತಿ ಅಂದರೆ ಒಂದು ವೇಳೆ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಕರ್ನಾಟಕದಿಂದ ಹೊರಟು, ಆಂಧ್ರದ ಕೆಲವು ಹಳ್ಳಿಗಳಲ್ಲಿ ಸಂಚರಿಸಿ ಮತ್ತೆ ಕರ್ನಾಟಕಕ್ಕೆ ಎಂಟ್ರಿ ತೆಗೆದುಕೊಳ್ಳುವ ಬಸ್ನಲ್ಲಿ ಮಧ್ಯದಲ್ಲಿ ಬೇರೆ ರಾಜ್ಯದಲ್ಲಿ ಹೋಗುವಾಗ ಟಿಕೆಟ್ ಖರೀದಿ ಅವಶ್ಯಕತೆ ಇಲ್ಲ. ಆದರೆ ಈ ಯೋಜನೆಯಿಂದ ಸರ್ಕಾರಕ್ಕೆ ನಷ್ಟ ಆಗುತ್ತಾ..? ಅನ್ನೋದು ಚರ್ಚೆಯ ವಿಚಾರ.
![](https://pratidhvani.com/wp-content/uploads/2023/06/pic-5-1-1024x768.jpg)
ಬಸ್ನಲ್ಲಿ ಮಹಿಳೆಯರ ಸಂಚಾರ ಹೆಚ್ಚಾಗುತ್ತಾ..?
ಸರ್ಕಾರಿ ಬಸ್ನಲ್ಲಿ ಮಹಿಳೆಯರಿಗೆ ಫ್ರೀ ಅಂದಾಕ್ಷಣ ಈಗ ಇರುವ ಮಹಿಳಾ ಪ್ರಯಾಣಿಕರ ಸಂಖ್ಯೆ ದ್ವಿಗುಣ ಆಗುವುದಿಲ್ಲ. ಅನಿವಾರ್ಯ ಕಾರಣಕ್ಕಾಗಿ ಸಂಚಾರ ಮಾಡುವ ಮಹಿಳಾ ಉದ್ಯೋಗಿಗಳು ಈ ಯೋಜನೆಯ ಲಾಭ ಪಡೆಯಬಹುದು. ಆದರೆ ಮನೆಯಲ್ಲಿರುವ ಗೃಹಿಣಿಯರು ಈ ಯೋಜನೆಯ ಲಾಭ ಪಡೆಯುತ್ತಾರೆ, ಆದರೂ ಕೆಲವೊಮ್ಮೆ ಮಾತ್ರ. ಇನ್ನು ಮೆಟ್ರೋದಲ್ಲಿ ಸಂಚಾರ ಮಾಡುವ ಮಹಿಳೆಯರು ಬಸ್ನಲ್ಲಿ ಕೆಲವೊಮ್ಮೆ ಪ್ರಯಾಣ ಮಾಡುತ್ತಾರೆ, ಆದರೂ ಮೆಟ್ರೋ ಪ್ರಯಾಣಿಕರಿಗೆ ಬಿಎಂಟಿಸಿ ಹಾಗು ಕೆಎಸ್ಆರ್ಟಿಸಿ ಪ್ರಯಾಣ ಹೊಂದುವುದಿಲ್ಲ. ಹೀಗಾಗಿ ಮೆಟ್ರೋ ಪ್ರಯಾಣಿಕರು ಬಸ್ಗೆ ಬಂದು ಬಿಡ್ತಾರೆ ಅನ್ನೋದು ಸುಳ್ಳು. ಇನ್ನು ಎಸಿ ಬಸ್ನಲ್ಲಿ ಸಂಚಾರ ಮಾಡುವ ಮಹಿಳಾ ಪ್ರಯಾಣಿಕರು ಕೆಎಸ್ಆರ್ಟಿಸಿ ಬಸ್ ಹತ್ತುವುದಿಲ್ಲ. ಇನ್ನು ದೂರ ಪ್ರಯಾಣಕ್ಕೆ ಸ್ಲೀಪಿಂಗ್ ಕೋಚ್ ಬಸ್ಗಳಲ್ಲಿ ಪ್ರಯಾಣ ಮಾಡುವ ಮಹಿಳೆಯರು ಸಾಮಾನ್ಯ ಬಸ್ಗಳಲ್ಲಿ ಪ್ರಯಾಣ ಮಾಡುವುದಿಲ್ಲ. ಸಾಮಾನ್ಯ ಬಸ್ನಲ್ಲಿ ಸಂಚಾರ ಮಾಡುತ್ತಿದ್ದಾರೆ ಎಂದರೆ ತೀರ ಬಡವರೇ ಆಗಿರುತ್ತಾರೆ ಎನ್ನುವುದು ಮಾತ್ರ ಸತ್ಯ.
ಮಹಿಳಾ ಸಂಘ ಸಂಸ್ಥೆಗಳಿಂದ ಶುರುವಾಗುತ್ತೆ ಪ್ರವಾಸ..!
ಮಹಿಳಾ ಸಂಘ ಸಂಸ್ಥೆಗಳ ಸದಸ್ಯರು ವಾರಾಂತ್ಯದಲ್ಲಿ ಪ್ರವಾಸ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದು ಸತ್ಯ ಕೂಡ ಹೌದು. ಮಹಿಳಾ ಮಣಿಗಳು ವಾರಾಂತ್ಯದಲ್ಲಿ ಪ್ರವಾಸಕ್ಕೆ ಯೋಜನೆ ಮಾಡಬಹುದು. ಆದರೆ ಪ್ರತಿ ವಾರವೂ ಪ್ರವಾಸ ಹೋಗಲು ಸಾಧ್ಯವೇ ಇಲ್ಲ. ತಿಂಗಳಿಗೋ, ಎರಡು ತಿಂಗಳಿಗೋ ಒಮ್ಮೆ ಪ್ರವಾಸ ಮಾಡಬಹುದು. ಪ್ರತಿ ವಾರವೂ ಪ್ರವಾಸ ಮಾಡುತ್ತಾ ಸಂಸಾರ ಬಿಟ್ಟು ಹೋದರೆ ಸಂಸಾರ ಬೀದಿಗೆ ಬರುತ್ತದೆ ಎನ್ನುವ ಕನಿಷ್ಟ ಜ್ಞಾನ ಎಲ್ಲರಲ್ಲಿಯೂ ಜಾಗೃತವಾಗಿರುತ್ತದೆ. ಇನ್ನು ಕೆಲವು ಕುಟುಂಬದಲ್ಲಿ ಮಹಿಳೆಯರು ಮಾತ್ರ ಪ್ರವಾಸ ಹೋಗುವುದಕ್ಕೆ ಸಾಧ್ಯವಿಲ್ಲ. ಪ್ರವಾಸದಲ್ಲಿ ಇಡೀ ಕುಟುಂಬವೇ ಹಾಜರಿರುತ್ತದೆ. ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಇದ್ದರೂ ಪುರುಷರು ಬಸ್ ಚಾರ್ಜ್ ಕೊಡಲೇ ಬೇಕು. ಇನ್ನು ಈ ರೀತಿ ಜನರು ಪ್ರವಾಸಕ್ಕೆ ಹೊರಟರೆ ಪ್ರವಾಸೋದ್ಯಮ ಅಭಿವೃದ್ಧಿ ಆಗುತ್ತದೆ. ಸರ್ಕಾರಕ್ಕೆ ಹಣ ತೆರಿಗೆ ರೂಪದಲ್ಲಿ ಹರಿದು ಬರುತ್ತದೆ.
ಧಾರ್ಮಿಕ ಕೇಂದ್ರಗಳಿಗೆ ಪ್ರವಾಸ ಹೋಗುವುದು ಹೆಚ್ಚಳ..!
ರಾಜ್ಯದ ಧಾರ್ಮಿಕ ಕೇಂದ್ರಗಳಿಗೆ ಪ್ರವಾಸ ಹೋಗುವವರ ಸಂಖ್ಯೆ ಹೆಚ್ಚಾಗಬಹುದು. ಆದರೆ ಬಸ್ನಲ್ಲಿ ಉಚಿತ ಎನ್ನುವ ಕಾರಣಕ್ಕೆ ಧಾರ್ಮಿಕ ಕೇಂದ್ರಗಳಿಗೆ ಪ್ರವಾಸ ಹೋಗುವ ಮಹಿಳೆಯರು ದೇವಸ್ಥಾನದ ಹುಂಡಿಗೆ ಹಣ ಹಾಕುತ್ತಾರೆ. ಹರಕೆಗಳನ್ನು ತೀರಿಸುತ್ತಾರೆ. ಇನ್ನು ಹೋಟೆಲ್ ಉದ್ಯಮ ಹೆಚ್ಚಿನ ಲಾಭದತ್ತ ಮುನ್ನುಗ್ಗುತ್ತದೆ. ಇದರಿಂದಲೂ ಸರ್ಕಾರಕ್ಕೆ ಲಾಭವೇ ಹೊರತು ನಷ್ಟವೇನಿಲ್ಲ. ಜನರು ಮನೆಯಿಂದ ಹೊರಕ್ಕೆ ಬಂದಷ್ಟೂ ಸರ್ಕಾರಗಳಿಂದ ಒಂದಲ್ಲ ಒಂದು ಮೂಲದಿಂದ ಲಾಭ ಬರುತ್ತದೆಯೇ ಹೊರತು ನಷ್ಟ ಆಗುವುದಿಲ್ಲ. ಇನ್ನು ಆಟೋ, ಟ್ಯಾಕ್ಸಿಗಳಿಗೆ ಸಂಕಷ್ಟ ಎದುರಾಗಲಿದೆ ಅನ್ನೋ ಮಾತುಗಳಿವೆ. ಇದು ಸತ್ಯ ಆಗುವ ಸಾಧ್ಯತೆಯಿದೆ. ಮಹಿಳೆಯರು ಬಸ್ನಲ್ಲಿ 20 ರೂಪಾಯಿ ಕೊಟ್ಟು ಹೋಗುವ ಬದಲು ಆಟೋದಲ್ಲಿ ಸಂಚರಿಸಬಹುದು ಅನ್ನೋ ನಿರ್ಧಾರಕ್ಕೆ ಬರುತ್ತಿದ್ದರು. ಆದರೆ ಇನ್ಮುಂದೆ 10 ನಿಮಿಷ ತಡವಾದರೂ ಬಸ್ನಲ್ಲೇ ಹೋಗೋಣ ಎನ್ನಬಹುದು. ಇನ್ನು ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಬಸ್ ಬರುವ ಮುಂಚೆ ಆಟೋ ಓಡಿಸುವ ಪ್ರವೃತ್ತಿ ಇತ್ತು. ಆದರೆ ಇನ್ಮುಂದೆ ಆ ರೀತಿಯ ತಂತ್ರಗಾರಿಗೆ ಇನ್ಮುಂದೆ ನಡೆಯುವುದಿಲ್ಲ. ಜನರು ಬಸ್ನಲ್ಲೇ ಪ್ರಯಾಣ ಮಾಡುತ್ತಾರೆ ಎನ್ನಬಹುದು.
ಕೃಷ್ಣಮಣಿ