ಪಶ್ಚಿಮ ಬಂಗಾಳ ಚುನಾವಣೆ ಈಗ ಮುಗಿದುಹೋದ ಅಧ್ಯಾಯ. ಈ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಐತಿಹಾಸಿಕ ಜಯ ದಾಖಲಿಸಿದ ನಂತರ, ಪಕ್ಷ ತೊರೆದಿದ್ದ ಹಲವು ಜನ ನಾಯಕರು ವಾಪಸ್ಸು ಬರುವ ಇಚ್ಚೆ ವ್ಯಕ್ತಪಡಿಸಿದ್ದಾರೆ.
ಚುನಾವಣೆಗೂ ಮುಂಚೆ ಸಾಲು ಸಾಲಾಗಿ ಟಿಎಂಸಿ ನಾಯಕರು ಪಕ್ಷ ತೊರೆದು ಬಿಜೆಪಿ ಸೇರಿದಾಗ ಈ ಬಾರಿ ಟಿಎಂಸಿ ಪಾತಾಳಕ್ಕೆ ಕುಸಿಯುತ್ತದೆ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಎಲ್ಲ ಅಡೆತಡೆಗಳನ್ನು ಮಿರಿ ಅದ್ಧೂರಿ ಜಯ ಸಾಧಿಸಿದ್ದ ದೀದಿ ನೇತೃತ್ವದ ಟಿಎಂಸಿ ತಮ್ಮ ಬದ್ದ ವೈರಿ ಬಿಜೆಪಿ ವಿರುದ್ದ ನೈತಿಕ ಗೆಲುವು ಸಾಧಿಸಿದ್ದರು. 292 ರಲ್ಲಿ 213 ಸ್ಥಾನಗಳನ್ನು ಗೆಲ್ಲುವ ಮೂಲಕ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು.

ಈಗ, ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಪಶ್ಚಿಮ ಬಂಗಾಳದ ನಾಯಕರು, ‘ಘರ್ ವಾಪ್ಸಿ’ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಮತ್ತೆ ಟಿಎಂಸಿ ಸೇರಲು ಬಯಸಿ ಮಮತಾ ಬ್ಯಾನರ್ಜಿ ಅವರಿಗೆ ಪತ್ರವನ್ನು ಬರೆಯುತ್ತಿದ್ದಾರೆ.
ಮಾಜಿ ಶಾಸಕಿಯಾಗಿರುವ ಸೊನಾಲಿ ಗುಹಾ ಅವರು, ಟಿಎಂಸಿ ತೊರೆದಿರುವುದು ‘ನೀರಿನಿಂದ ಹೊರ ಬಿದ್ದ ಮೀನಿ’ನಂತೆ ಭಾಸವಾಗುತ್ತಿದೆ ಎಂದಿದ್ದಾರೆ. ಇನ್ನೊಬ್ಬ ನಾಯಕ ದೀಪೆಂಧು ಬಿಸ್ವಾಸಸ್ ಅವರು ಮತ್ತೆ ತೃಣಮೂಲ ಕಾಂಗ್ರೆಸ್ ಬಾವುಟವನ್ನು ಹಿಡಿಯುವ ಇಚ್ಚೆ ವ್ಯಕ್ತಪಡಿಸಿದ್ದಾರೆ.

ಕಳೆದ ದೀದಿ ಸರ್ಕಾರದಲ್ಲಿ ಸಚಿವರಾಗಿದ್ದ ರಾಜಿಬ್ ಬ್ಯಾನರ್ಜಿ ಅವರು ಕೂಡಾ ಪಕ್ಷಕ್ಕೆ ಮರಳುವ ಬಯಕೆ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತಾಗಿ NDTVಗೆ ಮಾಹಿತಿ ನೀಡಿರುವ ಟಿಎಂಸಿ ವಕ್ತಾರ ಕುನಾಲ್ ಘೋಷ್ ಅವರು, ಕೇವಲ ನಾಯಕರಷ್ಟೇ ಅಲ್ಲ, 7-8 ಶಾಸಕರು, 3-4 ಸಂಸದರು ಬಿಜೆಪಿಯಿಂದ ಟಿಎಂಸಿ ಸೇರಲು ಇಚ್ಚೆ ವ್ಯಕ್ತಪಡಿಸಿದ್ದಾರೆ, ಎಂದಿದ್ದಾರೆ. ಆದರೆ ಈ ಕುರಿತಾಗಿ ಪಕ್ಷದ ತೀರ್ಮಾನ ಏನು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.
“ನಾವು ಪಕ್ಷದ ನಿಷ್ಟಾವಮತ ಕಾರ್ಯಕರ್ತರ ಕುರಿತಾಗಿಯೂ ಯೋಚಿಸಬೇಕಿದೆ. ಚುನಾವಣೆಗೆ ಕೆಲವೇ ವಾರಗಳಿದ್ದಾಗ ಕೆಲವು ನಾಯಕರು ಪಕ್ಷ ತೊರೆದಿದ್ದರು. ಆದರೂ, ನಮ್ಮ ಕಾರ್ಯಕರ್ತರು ಹಾಗು ನಾಯಕರು ಜಯ ಸಾಧಿಸುವಲ್ಲಿ ಸಫಲರಾಗಿದ್ದರು,” ಎಂದು ಘೋಷ್ ಹೇಳಿದ್ದಾರೆ.

ಅಚ್ಚರಿಯ ವಿಚಾರವೇನೆಂದರೆ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿರುವ ಮಾಜಿ ಟಿಎಂಸಿ ನಾಯಕ ಮುಕುಲ್ ರಾಯ್ ಅವರು ಕೂಡಾ ಟಿಎಂಸಿಗೆ ವಾಪಾಸು ಬರಲು ಪ್ರಯತ್ನಿಸುತ್ತಾ ಇದ್ದಾರೆ ಎಂಬ ಕುರಿತು ವದಂತಿಗಳು ಹಬ್ಬಿವೆ.
ಈ ಬೆಳವಣಿಗೆಗಳನ್ನು ಟೀಕಿಸಿ ಮಾತನಾಡಿರುವ ಬಿಜೆಪಿ ನಾಯಕ ಶಮಿಕ್ ಭಟ್ಟಾಚಾರ್ಯ ಅವರು, ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬ ಭಾವನೆ ಇತ್ತು. ಆ ಸಂದರ್ಭದಲ್ಲಿ ಎಲ್ಲರೂ ಅಳುತ್ತಾ ಬಿಜೆಪಿ ಸೇರಿದ್ದರು. ಆದರೆ, ಈಗ ನಗುತ್ತಾ ಬಿಜೆಪಿ ತೊರೆಯುತ್ತಿದ್ದಾರೆ. ಇವರ ಕುಟಿಲ ಯೋಚನೆಗಳನ್ನು ಜನರು ಅರ್ಥ ಮಾಡಿಕೊಳ್ಳುತ್ತಾರೆ, ಎಂದು ಹೇಳಿದ್ದಾರೆ.




