ಬೆಂಗಳೂರು: ಗೋದ್ರಾ ರೀತಿಯ ಘಟನೆಯ ಬಗ್ಗೆ ಬಿ.ಕೆ. ಹರಿಪ್ರಸಾದ್ ಹೇಳಿದ್ದರ ಬಗ್ಗೆ ಪೋಲಿಸರ ಬಳಿ ಮಾಹಿತಿ ನೀಡಬೇಕು ಎಂದು ಮಾಜಿ ಸಚಿವ ಸಿ.ಟಿ. ರವಿ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಹೇಳಿಕೆಯ ಬಗ್ಗೆ ಮಾಹಿತಿ ನೀಡಬೇಕು. ನಾಳೆ ಈ ರೀತಿಯ ಘಟನೆ ನಡೆದರೆ ಆಗ ನಾನು ಮುಂಚೆಯೇ ಹೇಳಿಕೆ ನೀಡಿದ್ದೆ, ನನ್ನ ಬಳಿ ಮಾಹಿತಿ ಕೇಳಲಿಲ್ಲ ಎಂದು ಹೇಳಬಹುದು. ಹೀಗಾಗಿ ಅವರು ಮಾಹಿತಿ ನೀಡಬೇಕು. ರಾಜ್ಯಪಾಲರು ಹರಿಪ್ರಸಾದ್ ಗೆ ಹೇಳಿ ಹೇಳಿಕೆ ಕೊಡಿಸಿದ್ರಾ? ಅಥವಾ ಎಐಸಿಸಿ ಪ್ರಚೋದನೇನಾ? ಅವರು ಎಐಸಿಸಿ ಜನರಲ್ ಸೆಕ್ರೆಟ್ರಿ ಆಗಿದವರು, ಪರಿಷತ್ ವಿಪಕ್ಷ ನಾಯಕರಾಗಿದ್ರು, ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದವರು, ಅವರು ಹಾದಿಬೀದಿಯಲ್ಲಿ ಹೋಗುವವರಲ್ಲ. ಅಂಥವರು ಹೇಳಿಕೆ ನೀಡಿದ್ದಾರೆ, ಅವರು ಯಾರ ಸಂಪರ್ಕದಿಂದ ಹೇಳಿಕೆ ನೀಡಿದ್ದಾರೆ. ಜೈಷೇ ಮಹಮದ್ ಸಂಪರ್ಕನಾ..? ತಾಲಿಬಾನ್ ಸಂಪರ್ಕನಾ.? ದಾವೂದ್ ಇಬ್ರಾಹಿಂ ಸಂಪರ್ಕನಾ..? ಯಾರ ಸಂಪರ್ಕದಿಂದ ಹೇಳಿದ್ದರು. ರಾಜ್ಯಪಾಲರು ಸಾವಿಂಧಾನಿಕ ಹುದ್ದೆ, ಅದನ್ನ ಮೀರಿ ಅವರು ಕೆಲಸ ಮಾಡೊಲ್ಲ, ನಾಳೆ ಈ ರೀತಿಯ ಘಟನೆ ನಡೆದ್ರೆ ಯಾರು ಕಾರಣ? ಎಂದು ರಾಜ್ಯಪಾಲರ ಮೂಲಕ ರಾಜ್ಯದಲ್ಲಿ ಆಳ್ವಿಕೆ ಮಾಡಲು ಕೇಂದ್ರ ಸರ್ಕಾರದ ಒತ್ತಡ ಎಂಬ ಪ್ರಿಯಾಂಕ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದರು.
![](https://pratidhvani.com/wp-content/uploads/2024/01/CT-ravi-1.png)
ಗುಜರಾತ್ ಕಾಂಗ್ರೆಸ್ ಶಾಸಕರು ಚಾವ್ಡಾ ಕಾಂಗ್ರೆಸ್ಗೆ ರಾಜೀನಾಮೆ ನೀಡಿರುವ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ನ ನಿಲುವನ್ನ ವಿರೋಧಿ ಅವರು ರಾಜೀನಾಮೆ ನೀಡಿದ್ದಾರೆ ಅದನ್ನ ಸ್ವಾಗತಿಸುತ್ತೇನೆ. ರಾವಣನ ಸಹೋದರ ವಿಭಿಷಣ ರಾವಣನ ದುರ್ನಡತೆ ವಿರೋಧಿಸಿ ರಾಮನ ಪರ ಬಂದ. ಅದೇ ರೀತಿ ಕಾಂಗ್ರೆಸ್ನಲ್ಲಿ ರಾಮನ ಮಂದಿರ ವಿಚಾರವಾಗಿ ಬೇರೆ ಬೇರೆ ಹೇಳಿಕೆಯನ್ನ ನೀಡಿದ್ದಾರೆ. ಹೀಗಾಗಿ ವಿಭಿಷಣ ಮನಸ್ಥಿತಿಯ ಕಾಂಗ್ರೆಸ್ನವರು ಪಕ್ಷ ತೊರೆದು ಬರುವುದು ಒಳಿತು ಎಂದರು.
ಜನವರಿ 22ರಂದು ಸರ್ಕಾರಿ ರಜೆ ವಿಷಯವಾಗಿ ಪ್ರತಿಕ್ರಿಯಿಸಿದ ಅವರು, ಇಷ್ಟು ದಿನ ಮೀನಾಮೇಷ ಎಣಿಸಿದ್ದೆ ತಪ್ಪು, ರಜೆ ಕೊಡಬೇಕೆಂದು ಹೇಳಿಸಿಕೊಂಡು ಮಾಡಬೇಕಾ? ಇವರು ಸ್ವಯಂ ಪ್ರೇರಿತವಾಗಿ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಪಿಎಸ್ಐ ಪ್ರಶ್ನೆ ಪತ್ರಿಕೆ ಲೀಕ್ ಆರೋಪದ ವಿಚಾರವಾಗಿ ಮಾತನಾಡಿದ ಅವರು, ಹಿಂದೆ ಆರೋಪ ಮಾಡ್ತಿದ್ರು, ಆರೋಪಿಗಳನ್ನ ಬಂಧಿಸಿದ್ರು, ಈಗ ಪದೇ ಪದೇ ಪ್ರಶ್ನೆ ಪತ್ರಿಕೆ ಬಹಿರಂಗ ಆಗ್ತಿದೆ ಎನ್ನುವುದು, ಗಂಭೀರ ವಿಚಾರ. ಇದರ ಕಿಂಗ್ ಪಿನ್ ಯಾರು. ಎಂದು ಪತ್ತೆ ಆಗಬೇಕು. ಹೊರಗಡೆ ಇದ್ದಾರೊ, ಕ್ಯಾಬಿನೆಟ್ ಒಳಗಡೆಯೇ ಇದ್ದಾರೋ? ಅವರಿಗೆ ಯಾರು ರಕ್ಷಣೆ ಕೊಡ್ತಿದ್ದಾರೆ. ಇದರ ಹಿಂದೆ ಯಾರ ಲಾಬಿ ಇದೆ ಇದನ್ನ ಬುಡ ಸಮೇತ ಕಿತ್ತು ಹಾಕಬೇಕು. ಇಲ್ಲದಿದ್ದರೆ ರಾಜಾಶ್ರಯದ ಕೃಪಾ ಕಟಾಕ್ಷದ ಮೂಲಕ ನಡೆಯುತ್ತಿದ್ಯಾ ಎಂಬ ಅನುಮಾನ ಮೂಡುತ್ತೆ ಎಂದರು.