ಬೆಂಗಳೂರು: ಸಿದ್ದರಾಮಯ್ಯ(Siddaramaiah) ಹುಟ್ಟು ಮುಸ್ಲಿಮ್ ಆಗದಿದ್ರೂ ಟೋಪಿ ಹಾಕಿದಾಗ ಒರಿಜಿನಲ್ ಮುಸ್ಲಿಂ ಥರ ಕಾಣಿಸುತ್ತಾರೆ, ಇದು ಡೋಂಗಿತನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮಾಜಿ ಸಚಿವ ಸಿ.ಟಿ. ರವಿ(CT Ravi) ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯವರದ್ದು ಡೋಂಗಿ ಹಿಂದುತ್ವ ಎಂಬ ಸಿದ್ದರಾಮಯ್ಯ ಟ್ವೀಟ್ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹುಟ್ಟು ಮುಸ್ಲಿಮ ಅಲ್ಲ, ಆದರೆ ಅವರು ಟೋಪಿ ಮೇಲಿನ ಪ್ರೀತಿಯನ್ನು ಕೇಸರಿ ಮೇಲೆ ತೋರಿಸಲಿಲ್ಲ. ಆರತಿ ತಟ್ಟೆಯಿಂದ ದೃಷ್ಟಿ ತೆಗೆಯುವುದನ್ನೂ ಸಿದ್ದರಾಮಯ್ಯ ನಿರಾಕರಿಸಿದವರು, ಟೋಪಿ ಹಾಕ್ಕೊಂಡು ಸೂಟ್ ಆಗುತ್ತಾ ಇಲ್ವಾ ಅಂತ ನೋಡಿಕೊಂಡಿದ್ದಾರೆ. ಕೆಸರಿ ಪೇಟ ಇಡಲು ಬಂದರೆ ಧಿಕ್ಕರಿಸ್ತಾರೆ, ಹೀಗಾಗಿ ಸಿದ್ದರಾಮಯ್ಯ ಹುಟ್ಟು ಮುಸ್ಲಿಮ ಆಗದಿದ್ರೂ ಟೋಪಿ ಹಾಕಿದಾಗ ಒರಿಜಿನಲ್ ಮುಸ್ಲಿಂ ಥರ ಕಾಣಿಸುತ್ತಾರೆ, ಇದು ಢೋಂಗಿತನ ಎಂದು ಟೀಕಿಸಿದರು.
![](https://pratidhvani.com/wp-content/uploads/2023/12/Siddaramaiah-1024x576.jpg)
ಸಿದ್ದರಾಮಯ್ಯ ಯಾವ ಸಂದರ್ಭದಲ್ಲೂ ರಾಮಮಂದಿರ ನಿರ್ಮಾಣಕ್ಕೆ ಬೆಂಬಲ ವ್ಯಕ್ತಪಡಿಸಿಲ್ಲ. ಅವರು ಕರಸೇವೆಗೂ ಬಂದಿಲ್ಲ, ನಾವು ಹೆಮ್ಮೆಯಿಂದ ಹೇಳಿಕೊಳ್ತೇವೆ, ನಾವು ರಾಮಮಂದಿರ ಪರ, ನಾವೂ ಕರಸೆವಕರು ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಇನ್ನೂ ಅಪೂರ್ಣ ರಾಮಮಂದಿರ ಉದ್ಘಾಟನೆ ಎಂಬ ಕಾಂಗ್ರೆಸ್ ಟೀಕೆ ವಿಚಾರದ ಬಗ್ಗೆ ಟಾಂಗ್ ನೀಡಿದ ಅವರು, ಇದು ದೇವಾಲಯಗಳ ಸಮುಚ್ಛಯ, ಮೊದಲ ಹಂತ ಈಗ ಪೂರ್ಣ ಆಗಿ ರಾಮಲಲ್ಲ ಪ್ರತಿಷ್ಠಾಪನೆ ಈಗ ಆಗುತ್ತಿದೆ. ಹಲವು ಹಂತಗಳಲ್ಲಿ ನಿರ್ಮಾಣ ಆಗಲಿದೆ. ಈ ನಿರ್ಣಯ ಕೈಗೊಂಡಿರೋದು ಟ್ರಸ್ಟ್, ಅದು ಯಾವ ಪಕ್ಷಕ್ಕೂ ಸೇರಿದ ಟ್ರಸ್ಟ್ ಅಲ್ಲ. ಕಾಂಗ್ರೆಸ್ ಅವರಿಗೆ ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಹುಡುಕುವ ಗಾದೆ ಸೂಕ್ತ ಆಗುತ್ತೆ. ಈ ಮೊದಲು ರಾಮಮಂದಿರ ಉದ್ಘಾಟನೆಗೆ ಆಹ್ವಾನ ಬಂದಿಲ್ಲ ಎನ್ನುತ್ತಿದ್ದರು, ಆಹ್ವಾನ ಬಂದ್ಮೇಲೆ ಬರಲ್ಲ ಅನ್ನೋದು, ಅವರು ಬರೋದು ರಾಮನ ಇಚ್ಛೆಯೂ ಅಲ್ಲ ಎಂದು ಕಿಡಿಕಾರಿದರು.
![](https://pratidhvani.com/wp-content/uploads/2024/01/20190529210936_IMG_5439-1-1024x683.webp)
ಇದೇ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸಂಸದ ಪ್ರತಾಪ್ ಸಿಂಹ ಭೇಟಿಯನ್ನು ಸಮರ್ಥಿಸಿಕೊಂಡ ಸಿ ಟಿ ರವಿ, ಜೆಡಿಎಸ್ ಅವರು ಎನ್ಡಿಎ ಭಾಗವಾಗಿದ್ದು, ಈ ಭೇಟಿ ಸೌಹಾರ್ದಯುತ ಭೇಟಿಯಾಗಿದೆ. ಯಾರೂ ಕದ್ದುಮುಚ್ಚಿ ಭೇಟಿ ಆಗ್ತಿಲ್ಲ, ಸಾರ್ವಜನಿಕ ಸಭೆಗಳಲ್ಲಿ ಕೈಗಳನ್ನು ಎತ್ತಿ ಹಿಡಿಯೋದ್ರಿಂದ ಸಂಬಂಧಗಳು ಸುಧಾರಿಸಲ್ಲ. ಹಾಗೆ ಕೈಎತ್ತಿ ಹಿಡಿದುಕೊಂಡು ಅಣ್ತಮ್ಮ ಅಂತ ಹೇಳಿಕೊಂಡವರೆಲ್ಲ ಏನಾದರು ಅಂತ ನಿಮಗೆ ಗೊತ್ತಿದೆ. ಇಲ್ಲಿ ಅಂತದ್ದೇನು ಇಲ್ಲ, ಇದು ವೈಯಕ್ತಿಕ ಭೇಟಿಯಾಗಿದೆ. ವೈಯಕ್ತಿಕ ಸಂಬಂಧಗಳನ್ನು ಯಾರ ಜತೆಗಾದರೂ ಇಟ್ಟುಕೊಳ್ಳಬಹುದು. ಆದರೆ ಪಕ್ಷದ ನಿರ್ಣಯಗಳನ್ನು ಪಕ್ಷವೇ ತೆಗೆದುಕೊಳ್ಳುತ್ತದೆ ಎಂದು ಪರೋಕ್ಷವಾಗಿ ಕೈ ನಾಯಕರಿಗೆ ಟಾಂಗ್ ನೀಡಿದರು.