ಅರಣ್ಯನಾಶ, ಪರಿಸರ ಮಾಲಿನ್ಯದ ಕಾರಣಕ್ಕೆ ಅಕಾಲಿಕ ಮಳೆ, ಪ್ರವಾಹ, ಭೂಕುಸಿತ, ಬರ, ಚಂಡಮಾರುತಗಳು ಕಳೆದ ಕೆಲವು ವರ್ಷಗಳಿಂದ ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಮನುಷ್ಯನೊಂದಿಗೆ ಇಡೀ ಜೀವಜಾಲವನ್ನೇ ಸಂಚಕಾರಕ್ಕೆ ತಳ್ಳಿವೆ. ಆ ಹಿನ್ನೆಲೆಯಲ್ಲಿ ಇಡೀ ಜಗತ್ತು ಪರಿಸರ ಸಮತೋಲನ ಮತ್ತು ಅದಕ್ಕೆ ಅಗತ್ಯವಾಗಿ ಬೇಕಾದ ಅರಣ್ಯ ಸಂರಕ್ಷಣೆಯ ದಿಕ್ಕಿನಲ್ಲಿ ಕೆಲಸ ಮಾಡುತ್ತಿದೆ.
ಆದರೆ,‘ವಿಶ್ವಗುರು’ವಿನ ಜಪ ಮಾಡುವ ಭಾರತ ಮಾತ್ರ, ಬಹುತೇಕ ಇತರೆಲ್ಲಾ ವಿಷಯಗಳಂತೆ ಪರಿಸರದ ವಿಷಯದಲ್ಲಿ ಕೂಡ ಹಿಮ್ಮುಖ ಚಲನೆ ಆರಂಭಿಸಿದೆ. ಅಂತಹ ತಿರುವುಮುರುವು ನಡಿಗೆಯ ಭಾಗವಾಗಿ ಇದೀಗ 1980ರ ಅರಣ್ಯ ಕಾಯ್ದೆಗೆ ತಿದ್ದುಪಡಿ ತಂದು, ಇನ್ನು ಮುಂದೆ ದೇಶದ ಗಡಿ ಭಾಗದ ಮೂಲಸೌಕರ್ಯ ಮತ್ತು ಆಂತರಿಕ ಹೆದ್ದಾರಿ ಸೇರಿದಂತೆ ರಕ್ಷಣಾ ಕಾರ್ಯತಂತ್ರ ಮತ್ತು ಭದ್ರತೆಗೆ ಸಂಬಂಧಿಸಿದ ಯೋಜನೆಗಳಿಗೆ ಯಾವುದೇ ಪೂರ್ವಾನುಮತಿ ಪಡೆಯದೆ ಅರಣ್ಯ ಭೂಮಿ ಬಳಕೆ, ಮರ ಕಡಿತಲೆ, ಕೆರೆ-ಕಟ್ಟೆ, ನದಿ-ಸರೋವರಗಳ ಬಳಕೆಗೆ ಮುಕ್ತ ಅವಕಾಶ ನೀಡಲು ಪ್ರಧಾನಿ ಮೋದಿಯವರ ಸರ್ಕಾರ ಮುಂದಾಗಿದೆ.

ಈಗಿರುವ ಅರಣ್ಯ ಕಾಯ್ದೆಯ ನಿಯಮಗಳ ಪ್ರಕಾರ, ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಯಾವುದೇ ತುರ್ತು ಕೆಲಸಗಳನ್ನು ಕೂಡ ಮಾಡುವಂತಿಲ್ಲ. ಇಂತಹ ಕಠಿಣ ಕಾನೂನಿಂದಾಗಿ ದೇಶದ ರಕ್ಷಣೆ ಮತ್ತು ಭದ್ರತೆಯ ನಿಟ್ಟಿನಲ್ಲಿ ತೀರಾ ನಿರ್ಣಾಯಕವಾಗಿರುವ ಹಲವು ಗಡಿ ಮೂಲಸೌಕರ್ಯ ಯೋಜನೆಗಳು ಮತ್ತು ಹೆದ್ದಾರಿ ಯೋಜನೆಗಳು ತೀರಾ ವಿಳಂಬವಾಗುತ್ತಿವೆ. ಹಾಗಾಗಿ ದೇಶದ ಭದ್ರತೆಯ ದೃಷ್ಟಿಯಿಂದ ತುರ್ತಾಗಿ ಆಗಬೇಕಾದ ಯೋಜನೆಗಳು ಕೂಡ ಅಗತ್ಯ ಅವಧಿಯಲ್ಲಿ ಕಾರ್ಯರೂಪಕ್ಕೆ ಬರುತ್ತಿಲ್ಲ. ಆ ಹಿನ್ನೆಲೆಯಲ್ಲಿ ದೇಶದ ಭದ್ರತೆ ಮತ್ತು ಸುರಕ್ಷತೆಯೊಂದಿಗೆ ನಿರ್ಣಾಯಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಅರಣ್ಯ ಕಾಯ್ದೆಗೆ ತಿದ್ದುಪಡಿ ತರಲು ಪ್ರಸ್ತಾವನೆ ಮಂಡಿಸಲಾಗಿದೆ ಎಂದು ಪರಿಸರ ಸಚಿವಾಲಯ ಈ ತಿದ್ದುಪಡಿಯನ್ನು ಸಮರ್ಥಿಸಿಕೊಂಡಿದೆ.
ಆ ಹಿನ್ನೆಲೆಯಲ್ಲಿ ಪ್ರಮುಖವಾಗಿ, ಅರಣ್ಯ ಭೂಮಿಯನ್ನು ಅರಣ್ಯೇತರ ಬಳಕೆಗಾಗಿ ಅನುಮೋದನೆ ಪಡೆಯುವ ಪ್ರಸ್ತುತ ಸನ್ನಿವೇಶವನ್ನು ಗಮನಿಸಿದರೆ, ಅನೇಕ ಬಾರಿ, ರಾಷ್ಟ್ರೀಯ ಮಹತ್ವದ ಕಾರ್ಯತಂತ್ರದ ದೃಷ್ಟಿಯಿಂದ ಆಯಕಟ್ಟಿನ ಮತ್ತು ಭದ್ರತಾ ಯೋಜನೆಗಳು ತೀರಾ ವಿಳಂಬವಾಗುತ್ತಿವೆ ಮತ್ತು ಭದ್ರತಾ ದೃಷ್ಟಿಯಿಂದ ಆಯಕಟ್ಟಿನ ಸ್ಥಳಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ಆ ಹಿನ್ನೆಲೆಯಲ್ಲಿ ಇಂತಹ ಯೋಜನೆಗಳಿಗೆ ಕೇಂದ್ರ ಪರಿಸರ ಸಚಿವಾಲಯದ ಬದಲಾಗಿ, ಆಯಾ ಯೋಜನೆಗಳ ವ್ಯಾಪ್ತಿಯ ರಾಜ್ಯಗಳೇ ಅನುಮತಿ ನೀಡುವುದು ಮತ್ತು 1980ಕ್ಕಿಂತ ಮುನ್ನ(ಹಾಲಿ ಅರಣ್ಯ ಕಾಯ್ದೆ ಜಾರಿಗೆ ಮುನ್ನ ರೈಲ್ವೆ, ಹೆದ್ದಾರಿ ಪ್ರಾಧಿಕಾರ, ಪಿಡಬ್ಲ್ಯೂಡಿ ಮುಂತಾದವು ವಶಪಡಿಸಿಕೊಂಡ) ಅರಣ್ಯೇತರ ಚಟುವಟಿಕೆಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಯಾವುದೇ ಅನುಮತಿ ಇಲ್ಲದೆ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅವಕಾಶ ನೀಡುವುದು ಸೇರಿದಂತೆ ಹಲವು ಮಹತ್ವದ ತಿದ್ದುಪಡಿಗಳನ್ನು ಪ್ರಸ್ತಾಪಿಸಲಾಗಿದೆ.

ಹಾಗೇ, ನೆಲದಾಳ ತೈಲ ನಿಕ್ಷೇಪ, ನೈಸರ್ಗಿಕ ಅನಿಲ ಗಣಿಗಾರಿಕೆಗಳಿಗೆ, ಎಕ್ಸಟೆಂಡೆಡ್ ರೀಚ್ ಡ್ರಿಲ್ಲಿಂಗ್(Extended Reach Drilling (ERD), ನಂತಹ ಹೊಸ ತಂತ್ರಜ್ಞಾನ ಬಳಕೆಗೆ ಅವಕಾಶ ನೀಡುವುದು.ERD ತಂತ್ರಜ್ಞಾನ ಅರಣ್ಯ ಭೂಮಿಯ ಕೆಳಗೆ ಆಳವಾದ ತೈಲ ಮತ್ತು ನೈಸರ್ಗಿಕ ಅನಿಲವನ್ನು ಅನ್ವೇಷಿಸಲು ಅಥವಾ ಹೊರತೆಗೆಯಲು ಅನುವು ಮಾಡಿಕೊಡುತ್ತದೆ ಮತ್ತು ಮಣ್ಣು, ವನ್ಯಜೀವಿ, ಜಲಚರಗಳ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಹಾಗಾಗಿ ಅಂತಹ ತಂತ್ರಜ್ಞಾನದ ಬಳಕೆಯನ್ನು ಪರಿಸರ ಸ್ನೇಹಿ ಎಂದು ಪರಿಗಣಿಸಿ ಅದನ್ನು ಕಾಯ್ದೆಯ ವ್ಯಾಪ್ತಿಯ ಹೊರಗೆ ಇಡಬೇಕು ಎಂಬ ಪ್ರಸ್ತಾಪ ಕೂಡ ಇದೆ.
ಜೊತೆಗೆ, ಖಾಸಗಿ ಅರಣ್ಯ ಕಾಯ್ದೆಯೊಳಗೆ ಬರುವ ಅಥವಾ 1996 ರ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಅರಣ್ಯ ಎಂಬ ವ್ಯಾಖ್ಯಾನದ ವ್ಯಾಪ್ತಿಗೆ ಬರುವ ಖಾಸಗೀ ಭೂಮಿಯ ಮಾಲೀಕರಿಗೆ ಕಾಯ್ದೆಯಿಂದ ಕೆಲವು ಸಡಿಲಿಕೆ ಮಾಡಲು ಪ್ರಸ್ತಾಪಿಸಲಾಗಿದೆ. ಆ ಪ್ರಕಾರ, ಅರಣ್ಯ ಸಂರಕ್ಷಣಾ ಪರ್ಯಾಯ ಕ್ರಮಗಳೊಂದಿಗೆ ವಸತಿ ಘಟಕವನ್ನು ಒಳಗೊಂಡಂತೆ 250 ಚದರ ಮೀಟರ್ ವಿಸ್ತೀರ್ಣದವರೆಗೆ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ನೀಡಲು ಅರಣ್ಯ ಕಾಯ್ಕೆ ಅಡ್ಡಿಯಾಗದು.
ಇನ್ನು ಸಫಾರಿಗಳು, ಅರಣ್ಯ ತರಬೇತಿ ಕೇಂದ್ರಗಳು ಮತ್ತು ಪ್ರಾಣಿ ಸಂಗ್ರಹಾಲಯಗಳಂತಹ ಯೋಜನೆಗಳು ಮತ್ತು ಅವುಗಳಿಗೆ ಸಂಬಂಧಿಸಿದ ಮೂಲಸೌಕರ್ಯ ಯೋಜನೆಗಳನ್ನು ಅರಣ್ಯೇತರ ಚಟುವಟಿಕೆಯ ವ್ಯಾಪ್ತಿಯಿಂದ ಕೈಬಿಡಬೇಕು ಎಂಬ ಪ್ರಸ್ತಾವನೆ ಕೂಡ ಇದೆ. ಅಂದರೆ, ಅರಣ್ಯ ಪ್ರದೇಶದಲ್ಲಿ ನಡೆಯುವ ಸಫಾರಿಗಳು, ಇರುವ ಅರಣ್ಯ ತರಬೇತಿ ಕೇಂದ್ರಗಳು, ಮೃಗಾಲಯಗಳನ್ನು ಅರಣ್ಯ ಚಟುವಟಿಕೆಗಳೆಂದೇ ಪರಿಗಣಿಸಿ ಅವುಗಳ ಅಭಿವೃದ್ಧಿ ಮತ್ತು ಮೂಲಸೌಕರ್ಯ ಕಾಮಗಾರಿಗಳನ್ನು ಅರಣ್ಯ ಕಾಯ್ದೆಯ ಹೊರಗಿಡುವುದು ಮತ್ತು ಅವುಗಳ ಆದಾಯದ ನಿರ್ದಿಷ್ಟ ಪ್ರಮಾಣವನ್ನು ಅರಣ್ಯ ಚಟುವಟಿಕೆಗೆ ಬಳಸುವ ನಿಯಮದಿಂದ ವಿನಾಯಿತಿ ನೀಡುವುದು ಈ ಪ್ರಸ್ತಾವನೆಯ ಉದ್ದೇಶ
ಜೊತೆಗೆ ಹಾಗೇ ಅರಣ್ಯ ಕಾಯ್ದೆ ಉಲ್ಲಂಘಿಸಿ ನಡೆಯುವ ಅರಣ್ಯ ಹಾನಿ, ನಾಶ ಪ್ರಕರಣಗಳಲ್ಲಿ ಆರೋಪಿಗಳಿಗೆ ಒಂದು ವರ್ಷ ಸಾದಾ ಶಿಕ್ಷೆ ಮತ್ತು ಜಾಮೀನುರಹಿತ ವಾರಂಟ್ ಜಾರಿಗೊಳಿಸುವ ಪ್ರಸ್ತಾಪವೂ ಇದೆ. ಹಾಗೇ ಈಗಾಗಲೇ ಅರಣ್ಯಪ್ರದೇಶದಲ್ಲಿ ಈಗಾಗಲೇ ಮರಗಳಿಗೆ ಹಾನಿಯಾದ ಪ್ರಕರಣಗಳಲ್ಲಿ ಕೇವಲ ದಂಡ ವಿಧಿಸಿ ಅಪರಾಧವನ್ನು ವಜಾ ಮಾಡುವ ಹೊಸ ಪ್ರಸ್ತಾವನೆಯೂ ಈ ತಿದ್ದುಪಡಿ ಪ್ರಸ್ತಾಪದಲ್ಲಿದೆ.
ಅಂದರೆ, ಅರಣ್ಯಕ್ಕೆ ಎದುರಾಗಿರುವ ಸರ್ಕಾರಿ ಮತ್ತು ಖಾಸಗೀ ವಲಯದ ಒತ್ತಡ ಮತ್ತು ಅಪಾಯಗಳ ಹಿನ್ನೆಲೆಯಲ್ಲಿ ಈಗಿರುವ ಅರಣ್ಯ, ನದಿ, ಕಣಿವೆ, ಕೆರೆಕಟ್ಟೆಗಳನ್ನು ಉಳಿಸಿ ಸಂರಕ್ಷಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೊಳಿಸಬೇಕಾದ ಹೊತ್ತಲ್ಲಿ, ಪ್ರಧಾನಿ ಮೋದಿಯವರ ಸರ್ಕಾರ, ದೇಶದ ಭದ್ರತೆ, ಗಡಿ ನೆಪಮಾಡಿಕೊಂಡು ಇರುವ ಅರಣ್ಯ ಕಾಯ್ದೆಯನ್ನೂ ದುರ್ಬಲಗೊಳಿಸಲು ಹೊರಟಿದೆ. ಸರ್ಕಾರದ ಇಂತಹ ನಡೆಯ ಹಿಂದೆ ದೇಶದ ಭದ್ರತೆಯಂತಹ ಸೂಕ್ಷ್ಮ ವಿಷಯಕ್ಕಿಂತ ಹೆಚ್ಚಾಗಿ ಪ್ರಭಾವಿ ಕಂಪನಿಗಳು ಮತ್ತು ಖಾಸಗೀ ಹೂಡಿಕೆದಾರರಿಗೆ ದೊಡ್ಡ ತಲೆನೋವಾಗಿರುವ ಅರಣ್ಯ ಕಾಯ್ದೆಗಳನ್ನು ಅನುಕೂಲಕ್ಕೆ ತಕ್ಕಂತೆ ಬದಲಾಯಿಸುವ ಉದ್ದೇಶವಿದ್ದಂತಿದೆ ಎಂಬುದು ಪರಿಸರವಾದಿಗಳ ಆತಂಕ.
ಆ ಹಿನ್ನೆಲೆಯಲ್ಲಿ; ದೇಶದ ಅರಣ್ಯ ರಕ್ಷಣೆಗಾಗಿ ಪ್ರಜ್ಞಾವಂತ ನಾಗರಿಕರು, ಈ ಹೊಸ ತಿದ್ದುಪಡಿ ಪ್ರಸ್ತಾಪಗಳನ್ನು ವಿರೋಧಿಸಬೇಕಿದೆ. ಆದರೆ, ಸರ್ಕಾರ, ಹೊಸ ತಿದ್ದುಪಡಿ ಪ್ರಸ್ತಾಪಗಳ ಕರಡು ಪ್ರತಿಗೆ ಆಕ್ಷೇಪಣೆ ಸಲ್ಲಿಸಲು ಕೇವಲ ಹದಿನೈದು ದಿನ ಕಾಲಾವಕಾಶ ನೀಡಿದೆ. ಅಲ್ಲದೆ, ಮೊದಲು ಅಕ್ಟೋಬರ್ 2ರಂದು ಹೊರಡಿಸಿದ ಅಧಿಸೂಚನೆಯಲ್ಲಿ ತಪ್ಪು ಇಮೇಲ್ ನೀಡಿ, ಜನರನ್ನು ದಿಕ್ಕು ತಪ್ಪಿಸುವ ಯತ್ನ ಮಾಡಲಾಗಿತ್ತು. ಆ ಬಗ್ಗೆ ಹಲವು ಪರಿಸರವಾದಿಗಳು ಸರ್ಕಾರದ ಗಮನ ಸೆಳೆದ ಬಳಿಕ, ಇದೀಗ ಅ.4ರಂದು ಮತ್ತೊಮ್ಮೆ ತಿದ್ದುಪಡಿ ಅಧಿಸೂಚನೆ ಹೊರಡಿಸಿ, ಕಾಯ್ದೆ ತಿದ್ದುಪಡಿ ಪ್ರಸ್ತಾಪಗಳಿಗೆ ಸಂಬಂಧಿಸಿದಂತೆ ನಾಗರಿಕರು, fcaamendment@gov.in (https://parivesh.nic.in/writereaddata/Corrigendum_FC_04102021.pdf) ಇಮೇಲ್ ಮೂಲಕ ಆಕ್ಷೇಪಣೆ ಸಲ್ಲಿಸಬಹುದು ಎಂದು ತಿಳಿಸಲಾಗಿದೆ. ಹಾಗಾಗಿ ದೇಶದ ಭವಿಷ್ಯದ ಬಗ್ಗೆ, ಭವಿಷ್ಯದ ತಲೆಮಾರುಗಳು ನೆಮ್ಮದಿಯ ಬದುಕಿನ ಬಗ್ಗೆ ಕಾಳಜಿಯುಳ್ಳ ನಾಗರಿಕರು ಈ ಇಮೇಲ್ ಬಳಸಿ ತಿದ್ದುಪಡಿ ಪ್ರಸ್ತಾವಗಳಿಗೆ ವಿರೋಧ ವ್ಯಕ್ತಪಡಿಸಬೇಕು ಎಂದು ಪರಿಸರ ಕಾರ್ಯಕರ್ತರು ಮತ್ತು ಸಂಘಟನೆಗಳು ಮನವಿ ಮಾಡಿವೆ.
ಅರಣ್ಯ, ಪರಿಸರ, ಕೃಷಿ, ಜಲಮೂಲ ಸೇರಿದಂತೆ ಕಳೆದ ಕೆಲವು ವರ್ಷಗಳಲ್ಲಿ ಇಡೀ ಜಗತ್ತು ಸಂರಕ್ಷಣೆ, ಸಂವರ್ಧನೆಯ ಜಪ ಮಾಡುತ್ತಿದ್ದರೆ, ಭಾರತ ಮಾತ್ರ ಆಡಳಿತ ಪಕ್ಷ ಮತ್ತು ಅಧಿಕಾರರೂಢ ನಾಯಕರ ಪರಮಾಪ್ತ ಮಿತ್ರರಾದ ಬೆರಳೆಣಿಕೆಯ ಉದ್ಯಮಿಗಳ ಲಾಭಕ್ಕಾಗಿ ಎಲ್ಲವನ್ನೂ ಮುಕ್ತಮುಕ್ತಗೊಳಿಸುತ್ತಿದೆ. ಸರ್ಕಾರದ ಇಂತಹ ನಡೆಗಳನ್ನು ಪ್ರಶ್ನಿಸಬೇಕಾದ, ವಿರೋಧಿಸಬೇಕಾದ, ವನ್ಯಜೀವಿ ಮಂಡಳಿ, ಜೀವವೈವಿಧ್ಯ ಮಂಡಳಿಗಳ ಆಡಳಿತಗಳು ಮುಗ್ಗುಮ್ಮಾಗಿ ಕೂತಿವೆ. ಜನರ ತೆರಿಗೆ ಹಣದಲ್ಲಿ ಮೋಜು ಮಾಡುತ್ತಿರುವ ಅಂತಹ ಸಂಸ್ಥೆಗಳ ಅಧ್ಯಕ್ಷರು ಮತ್ತು ಸದಸ್ಯರುಗಳು ಜಾಣಕುರುಡು ಪ್ರದರ್ಶಿಸುತ್ತಾ ಠಳಾಯಿಸುತ್ತಿದ್ದಾರೆ!

ಇಂತಹ ದುರವಸ್ಥೆಯ, ಅಸಲೀ ದೇಶದ್ರೋಹಿ, ಜನದ್ರೋಹಿ ವರಸೆಯ ನಡುವೆ, ಸಣ್ಣ ಸಣ್ಣ ಊರುಗಳ, ಯುವ ಪರಿಸರಾಸಕ್ತರು ಕೇಂದ್ರ ಸರ್ಕಾರದ ಈ ಪರಿಸರ ದ್ರೋಹಿ ನಡೆಗಳನ್ನು ಪ್ರಶ್ನಿಸತೊಡಗಿದ್ದಾರೆ ಮತ್ತು ಆಕ್ಷೇಪಣೆ ಸಲ್ಲಿಸುವಂತೆ ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸತೊಡಗಿದ್ದಾರೆ.