ಲಿಂಗಾಯತರಿಗೆ ಹೆಚ್ಚಿನ ಟಿಕೆಟ್ ಕೊಡಿ, ಶಾಮನೂರು ಪತ್ರ ಆಗ್ರಹರಾಜ್ಯಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ಮನವಿ ಮಾಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವ್ರಿಗೆ ವೀರಶೈವ ಲಿಂಗಾಯತ ಮಹಾಸಭಾ ಆಧ್ಯಕ್ಷ ಶಾಮನೂರು ಶಿವಶಂಕರಪ್ಪ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಇತ್ತೀಚೆಗೆ ವೀರಶೈವ ಲಿಂಗಾಯತರ ನಾಯಕತ್ವವನ್ನ ಕಡೆಗಾಣಿಸಿದ್ದು, ಕಾಂಗ್ರೆಸ್ ಅಸ್ತಿತ್ವಕ್ಕೆ ಧಕ್ಕೆ ಬರುವಂತಾಗಿದೆ. ಹೀಗಾಗಿ ಆಗಿರುವ ನ್ಯೂನ್ಯತೆ ಸರಿಪಡಿಸಿಕೊಳ್ಳಲು ಕರ್ನಾಟಕದಿಂದ ರಾಜ್ಯಸಭೆಯ 3 ಸ್ಥಾನಗಳ ಪೈಕಿ ಕನಿಷ್ಠ 1 ಸ್ಥಾನವನ್ನಾದರೂ ವೀರಶೈವ ಲಿಂಗಾಯತ ನಾಯಕರಿಗೆ ಕೊಡಬೇಕು
ಎಂದಿದ್ದಾರೆ.ಲೋಕಸಭಾ ಚುನಾವಣೆಗೂ ಸಮಾಜದ ಜನಸಂಖ್ಯೆಗೆ ಅನುಗುಣವಾಗಿ ಟಿಕೆಟ್ ಹಂಚಿಕೆ ಮಾಡಬೇಕು ಎಂದಿರುವ ಶಾಮನೂರು ಶಿವಶಂಕರಪ್ಪ, ನೇರವಾಗಿ ಎಐಸಿಸಿ ಅಧ್ಯಕ್ಷರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಕಳೆದ ಬಾರಿ ಲಿಂಗಾಯತ ಸಮುದಾಯಕ್ಕೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ಭರ್ಜರಿ ಲಾಭವನ್ನೂ ಮಾಡಿಕೊಂಡಿತ್ತು. ಆದರೆ ಆ ಬಳಿಕ ಸಚಿವ ಸ್ಥಾನ ಹಾಗು ಕೆಲವೊಂದು ವಿಚಾರದಲ್ಲಿ ಶಾಮನೂರು ಅವರನ್ನು ಪರಿಗಣನೆಗೆ ತೆಗೆದುಕೊಳ್ಳಲಿಲ್ಲ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧವೇ ಚಾಟಿ ಬೀಸಿದ್ದರು. ಇದೀಗ ಚುನಾವಣೆ ಟಿಕೆಟ್ ಹಂಚಿಕೆಯಲ್ಲಿ ಲಿಂಗಾಯತರಿಗೆ ನ್ಯಾಯ ಸಿಗಬೇಕು ಎಂದು ಪತ್ರ ಮುಖೇನಾ ಆಗ್ರಹ ಮಾಡಿದ್ದಾರೆ. ಒಂದು ವೇಳೆ ರಾಜ್ಯಸಭಾ ಸ್ಥಾನ ಕೊಡದಿದ್ದರೆ ಮುಂದಿನ ದಿನಗಳಲ್ಲಿ ಮತ್ತೆ ಸಿಡಿಯುವ ಸೂಚನೆ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಲಿಂಗಾಯತ ಸಮುದಾಯ ಅಧಿಕಾರಿಗಳು ಇಲ್ಲವೇ ಇಲ್ಲ ಎಂದಿದ್ದ ಶಾಮನೂರು ಶಿವಶಂಕರಪ್ಪ, ಕಾಂಗ್ರೆಸ್ನಲ್ಲಿ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಎಂದರೆ ತಪ್ಪಾಗುವುದಿಲ್ಲ. ಇತ್ತೀಚಿಗೆ ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ ಬಿ.ವೈ ರಾಘವೇಂದ್ರ ಅವರನ್ನು ಹಾಡಿ ಹೊಗಳಿದ್ದ ಶಾಮನೂರು, ಮತ್ತೊಮ್ಮೆ ರಾಘವೇಂದ್ರ ಅವರನ್ನೇ ಗೆಲ್ಲಿಸಿ ಎಂದು ಕರೆ ನೀಡಿದ್ದರು. ಪಕ್ಷಕ್ಕಿಂತಲೂ ನನಗೆ ಸಮುದಾಯವೇ ಮುಖ್ಯ
ಎನ್ನುವುದನ್ನು ಸಾಬೀತು ಮಾಡಿದ್ದರು. ಈಗಲೂ ಕೂಡ ಲಿಂಗಾಯತ ಸಮುದಾಯಕ್ಕೆ ಹೆಚ್ಚಿನ ಟಿಕೆಟ್ ನೀಡಬೇಕು ಎಂದು ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದಿದ್ದು, ನಿರ್ಲಕ್ಷ್ಯ ಮಾಡಿದರೆ ಮುಂದಿನ ದಿನಗಳಲ್ಲಿ ಲಿಂಗಾಯತ ಮತಬ್ಯಾಂಕ್ ‘ಕೈ’ ತಪ್ಪಲಿದೆ ಎನ್ನುವ ಸಂದೇಶ ರವಾನಿಸಿದ್ದಾರೆ.