ಐದು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಈ ದಿನ ರಾತ್ರೋ ರಾತ್ರಿ ನೋಟು ನಿಷೇಧ ಜಾರಿಗೆ ತಂದಿದ್ದರು. ಈ ದೇಶದಲ್ಲಿ ಇದೇ ಮೊದಲ ಬಾರಿಗೆ ಅತಿ ದೊಡ್ಡ ಆರ್ಥಿಕ ನೀತಿಯೊಂದು ರಾಜಕೀಯ ಹುನ್ನಾರಗಳನ್ನು ಒಳಗೊಂಡು ಜಾರಿಗೆ ಬಂತು. ಭ್ರಷ್ಟಾಚಾರ ಬಯಲಿಗೆಳೆಯುವುದು, ಕಪ್ಪು ಹಣ ಹೊರತರುವುದು ಎಂದೆಲ್ಲಾ ಸರ್ಕಾರ ಹೇಳಿಕೊಂಡರೂ ಅದರ ಹಿಂದಿನ ರಾಜಕೀಯ ಲೆಕ್ಕಾಚಾರಗಳು ಹೊರಬೀಳಲು ಹೆಚ್ಚಿನ ಸಮಯ ತಗುಲಲಿಲ್ಲ. ಇಡೀ ಆಡಳಿತ ಯಂತ್ರ ಬೆಟ್ಟ ಅಗೆದು ಇಲಿಯನ್ನೂ ಹಿಡಿಯಲು ಅಸಮರ್ಥವಾಯಿತು.
ಇಡೀ ದೇಶಕ್ಕೆ ದೇಶವೇ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಸಾರ್ವಜನಿಕ ಬ್ಯಾಂಕ್ ಶಾಖೆಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿತ್ತು. ಹಳ್ಳಿಗಳ ಪುಟ್ಟ ಪುಟ್ಟ ಅಂಗಡಿಗಳ ಯುವಕರು, ವೃದ್ಧರು, ಕೂಲಿ ಕಾರ್ಮಿಕರು, ಜಾತಿಭೇದವಿಲ್ಲದೆ ದಿನನಿತ್ಯದ ಅಗತ್ಯಗಳನ್ನೂ ಪೂರೈಸಲು ಹಣವಿಲ್ಲದೆ ತೀವ್ರ ಬಿಕ್ಕಟ್ಟು ಎದುರಿಸಿದರು. ಆದರೆ ಅವರಲ್ಲಿ ಬಹುತೇಕ ಮಂದಿ ಮೋದಿ ಸರಿಯಾದುದ್ದನ್ನೇ ಮಾಡುತ್ತಿದ್ದಾರೆ ಎಂದು ನಂಬಿಕೊಂಡಿದ್ದರು.
ಯಾಕೆಂದರೆ ಅವರಲ್ಲಿ ಅನೇಕರಲ್ಲಿ ಶ್ರೀಮಂತರನ್ನು, ಕಪ್ಪು ಹಣ ಹೊಂದಿರುವವರನ್ನು ಶಿಕ್ಷಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಭಾವನೆ ಇತ್ತು. ಇದು ಆರ್ಥಿಕ ಅಸಮಾನತೆಯ ವಿರುದ್ದ ಮೋದಿ ಸಾರಿದ ಸಮರ ಎಂದೇ ಅವರನ್ನು ನಂಬಿಸಲಾಗಿತ್ತು. ಕಪ್ಪು ಹಣ ಒಂದು ಹೊರಬಂದರೆ ಸಾಕು ಇಡೀ ದೇಶ ಸುಭಿಕ್ಷವಾಗುತ್ತದೆ ಎಂದು ಜನಸಾಮಾನ್ಯರು ನಂಬಿಕೊಂಡಿದ್ದರು. ಬಿಜೆಪಿಯ ರಾಜಕೀಯ ಉದ್ದೇಶವೂ ಇದೇ ಆಗಿತ್ತು.

ನೋಟು ನಿಷೇಧದ ಸಂದರ್ಭದಲ್ಲಿ ಆಡಳಿತ ಪಕ್ಷವು ರಾಜಕೀಯ ಲಾಭ ಪಡೆದುಕೊಳ್ಳಲು ಹೂಡಿದ ಮತ್ತೊಂದು ಬಾಣ ರಾಷ್ಟ್ರೀಯ ಭದ್ರತೆ. ಕಾಶ್ಮೀರದಲ್ಲಿನ ಭಯೋತ್ಪಾದನೆಯನ್ನು ಮಟ್ಟ ಹಾಕಲು ಮತ್ತು ಮಾವೋವಾದಿಗಳ ಕೈಗಳನ್ನು ಆರ್ಥಿಕವಾಗಿ ಕಟ್ಟಿ ಹಾಕಲು ಈ ಕ್ರಮ ಅನಿವಾರ್ಯ ಎನ್ನುವ ಸಿದ್ಧಾಂತ ತೇಲಿ ಬಿಡಲಾಯಿತು. ಇದರಿಂದ ಭಾವುಕರಾದ ಜನ ‘ಸೈನಿಕರು ವರ್ಷಪೂರ್ತಿ ದಿನದ 24 ಗಂಟೆಗಳನ್ನೂ ದೇಶದ ರಕ್ಷಣೆಗಾಗಿ ವ್ಯಯಿಸುವಾಗ ನಾವು ಬ್ಯಾಂಕ್ ಮುಂದೆ ಕ್ಯೂ ನಿಲ್ಲುವುದು ದೊಡ್ಡ ತ್ಯಾಗವೇನಲ್ಲ’ ಎಂಬ ಭಾವನೆ ಬೆಳೆಸಿಕೊಂಡರು.
ಅಲ್ಲದೆ ನೋಟು ರದ್ದತಿಯು ಬಡವರಿಗೆ ನೇರ ನಗದು ನೀಡುವ ತನ್ನ ಚುನಾವಣಾ ಭರವಸೆಯನ್ನು ಈಡೇರಿಸಲು ಸರ್ಕಾರಕ್ಕೆ ಹಣಕಾಸಿನ ನೆರವನ್ನು ನೀಡುತ್ತದೆ ಎಂಬ ವ್ಯಾಪಕ ಗ್ರಹಿಕೆಯೂ ಜನಸಾಮಾನ್ಯರಲ್ಲಿ ಇತ್ತು.
ಆದರೆ ನೋಟು ನಿಷೇಧವು ಯಾವ ರೀತಿಯಲ್ಲೂ ಭಯೋತ್ಪಾದನೆಯನ್ನು ಹತೋಟಿಗೆ ತರುವಲ್ಲಿ ಸಹಕಾರಿಯಾಗಲಿಲ್ಲ ಅಥವಾ ಕಪ್ಪು ಹಣವನ್ನೂ ಬಯಲಿಗೆಳೆಯಲಿಲ್ಲ . ಬದಲಿಗೆ ಇದು ಜನರಲ್ಲಿ ಸುಪ್ತವಾಗಿದ್ದ ರಾಷ್ಟ್ರೀಯತೆಯನ್ನು ಬಡಿದೆಬ್ಬಿಸಿ ದೇಶಕ್ಕಾಗಿ ನಾವೂ ಕೊಡುಗೆ ನೀಡುತ್ತಿದ್ದೇವೆ ಎಂಬ ಭ್ರಮೆಯನ್ನು ಸೃಷ್ಟಿಸಿತು. ಅಂತಿಮವಾಗಿ ತೆರಿಗೆ ಕಳ್ಳತನದಿಂದ ಸಂಗ್ರಹವಾದ ಕೋಟ್ಯಾಂತರ ದುಡ್ಡು ಜನರ ಕಲ್ಯಾಣಕ್ಕೆ ಬಳಕೆಯಾಗುತ್ತದೆ, ಈ ದೇಶದ ಬಡವರಿಗೂ ಸಂಪನ್ಮೂಲ ಹಂಚಿಕೆಯಾಗುತ್ತದೆ ಎಂಬ ತಾತ್ಕಾಲಿಕ ಭರವಸೆಯೇ ಅನೇಕರಿಗೆ ಮುಖ್ಯವಾಗಿತ್ತು. ಮತ್ತು ಇಂತಹ ಅಪ್ರಾಯೋಗಿಕ ನಂಬಿಕೆಗಳನ್ನು ಜನರ ಮನಸ್ಸಿನಲ್ಲಿ ಬಿತ್ತಲು ಆಡಳಿತ ಪಕ್ಷವು ಅತ್ಯಂತ ಯಶಸ್ವಿಯೂ ಆಗಿತ್ತು.

ಆದರೆ ದೀರ್ಘಾವಧಿಯ ರಾಜಕೀಯ ಪ್ರಭಾವವಳಿಯೊಂದನ್ನು ಸೃಷ್ಟಿಸಿದ ಆರ್ಥಿಕ ನೀತಿಯು ಭ್ರಷ್ಟರನ್ನು ಶಿಕ್ಷಿಸಲು ಅಸಮರ್ಥವಾದದ್ದು, ಸಮಾನ ಸಮಾಜವನ್ನು ಸೃಷ್ಟಿಸದ್ದು, ಆದಾಯದ ಸಮಾನ ಹಂಚಿಕೆ ಸಾಧ್ಯವಾಗದ್ದು, ಭಯೋತ್ಪಾದನೆಯನ್ನು ದುರ್ಬಲಗೊಳಿಸದ್ದು ಐದು ವರ್ಷಗಳ ನಂತರ ಸಾರ್ವಜನಿಕ ನೆನಪಿನಿಂದ ಮಾಸಿದ್ದರೂ ಇತಿಹಾಸದಲ್ಲಿ ಇಂದು ರಾಜಕೀಯ ಬ್ಲಂಡರ್ ಆಗಿ ದಾಖಲುಗೊಳ್ಳುವುದನ್ನು ತಡೆಯಲು ಮಾತ್ರ ಸಾಧ್ಯವಿಲ್ಲ.