ದಿ ಕ್ವಿಂಟ್ ವರದಿ ಮಾಡಿರುವ ಪ್ರಕಾರ ಪೆಗಸಸ್ ಬೇಹುಗಾರಿಕೆಗೆ ಗುರಿಯಾಗಿದ್ದ ಐವರು ಪತ್ರಕರ್ತರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಸರ್ಕಾರಿ ಸಂಸ್ಥೆಗಳು ಅನಧಿಕೃತವಾಗಿ ಗೂಢಚರ್ಯೆ ನಡೆಸುವುದು ಸಂವಿಧಾನ ಬದ್ಧವಾಗಿ ನೀಡಲಾದ ತಮ್ಮ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದಿದ್ದಾರೆ. ಪತ್ರಕರ್ತರಾದ ಪರಂಜಯ್ ಗುಹಾ ಠಾಕೂರ್ತಾ, ಎಸ್ಎನ್ಎಂ ಅಬ್ದಿ, ಪ್ರೇಮಶಂಕರ್ ಝಾ, ರೂಪೇಶ್ ಕುಮಾರ್ ಸಿಂಗ್, ಇಪ್ಸಾ ಶತಾಕ್ಷಿ ತಮ್ಮ ವಿರುದ್ಧ ಪೆಗಸಸ್ ಬಳಕೆಗೆ ಸಂಬಂಧಿಸಿದ ಎಲ್ಲಾ ತನಿಖೆ, ಅಧಿಕಾರ ಮತ್ತು ಆದೇಶಗಳ ಕುರಿತಾದ ಸಾಕ್ಷ್ಯ ಮತ್ತು ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಮತ್ತು ಬಹಿರಂಗಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.
ಖಾಸಗಿತನದ ಮೇಲಿನ ಆಕ್ರಮಣ ಮತ್ತು ಹ್ಯಾಕಿಂಗ್ ಕುರಿತು ಯಾವುದೇ ದೂರುಗಳನ್ನು ಪರಿಗಣಿಸಲು ಮತ್ತು ಅದಕ್ಕೆ ಕಾರಣರಾದ ಎಲ್ಲಾ ಸರ್ಕಾರಿ ಅಧಿಕಾರಿಗಳನ್ನು ಶಿಕ್ಷಿಸಲು ನ್ಯಾಯಾಂಗ ಮೇಲ್ವಿಚಾರಣೆ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂದು ತಮ್ಮ ಅರ್ಜಿಯಲ್ಲಿ ಇವರು ಮನವಿ ಮಾಡಿದ್ದಾರೆ. ದಿ ಕ್ವಿಂಟ್ ವರದಿಯನುಸಾರ, ಅರ್ಜಿಯ ಪ್ರಮುಖಾಂಶಗಳೇನೆಂದರೆ :
ತಮ್ಮನ್ನು ಆಳವಾದ ಕಣ್ಗಾವಲಿಗೆ ಒಳಪಡಿಸಲಾಗಿದೆ. ಮತ್ತು ಕೇಂದ್ರ ಸರ್ಕಾರ ಅಥವಾ ಯಾವುದೋ ಮೂರನೇ ಕಣ್ಣು ನಮ್ಮನ್ನು ನಿರೀಕ್ಷಿಸುತ್ತಿದೆ.
ಆಮ್ನೆಸ್ಟಿ ಇಂಟರ್ ನ್ಯಾಷನಲ್ ನ ಭದ್ರತಾ ಪ್ರಯೋಗಾಲಯ ನಡೆಸಿದ ವಿಧಿ ವಿಜ್ಞಾನ ಪರೀಕ್ಷೆಗಳಿಂದ ಪೆಗಸಸ್ ಭದ್ರತಾ ಉಲ್ಲಂಘನೆ ಮಾಡಿರುವುದು ದೃಢಪಟ್ಟಿದೆ.
ಪತ್ರಕರ್ತರ ಮೂಲಗಳು ಹಾಗೂ ಮಾಹಿತಿದಾರರಿಗೆ ಈ ರೀತಿಯ ಬೇಹಗಾರಿಕೆ ಬೆದರಿಕೆಯೊಡ್ಡಿದಂತೆ. ಸರ್ಕಾರದ ಪಾರದರ್ಶಕ ಕಾರ್ಯನಿರ್ವಹಣೆಗೆ ಅವಕಾಶ ಕಲ್ಪಿಸುವ ಸದೃಢ ಮತ್ತು ಮುಕ್ತ ಪತ್ರಿಕೋದ್ಯೋಮ ಅಸ್ತಿತ್ವದಲ್ಲಿರಲು ಪ್ರಕರಣದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಬೇಕು.

ಈ ರೀತಿಯಾದ ಸರ್ಕಾರಿ ಪ್ರಾಯೋಜಿತ ಕಾನೂನುಬಾಹಿರ ಹ್ಯಾಕಿಂಗ್ನಿಂದ ಉಂಟಾಗುವ ಧಕ್ಕೆ ಅನೂಹ್ಯ.
ಈ ಮೂಲಕ ಸಂವಿಧಾನದ 19 ಮತ್ತು 21ನೇ ವಿಧಿ ಅಡಿಯಲ್ಲಿ ಅರ್ಜಿದಾರರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ.
ಐಟಿ ಕಾಯಿದೆಯ ವಿವಿಧ ಸೆಕ್ಷನ್ಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದ್ದು ಕಂಪ್ಯೂಟರ್ ಮತ್ತು ಕಂಪ್ಯೂಟರ್ ಸಿಸ್ಟಂನ ವಿವರಣೆಗೆ ಒಳಪಡುವ ಸ್ಮಾರ್ಟ್ ಫೋನ್ಗಳನ್ನು ಪೆಗಸಸ್ ನಂತಹ ಮಿಲಿಟರಿ ದರ್ಜೆಯ ತಂತ್ರಜ್ಞಾನವನ್ನು ಬಳಸಿ ಹ್ಯಾಕ್ ಮಾಡುವುದು ಕಾನೂನುಬಾಹಿರ ಎಂದು ತಿಳಿಸಲಾಗಿದೆ.
ಪೆಗಸಸ್ನಂತಹ ಕುತಂತ್ರಗಳ ಬಳಕೆಯಿಂದ ದೇಶವನ್ನು ರಕ್ಷಿಸುವ ಸಲುವಾಗಿ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು.
“ಈ ಕಾರಣಗಳಿಂದಾಗಿ ಐಟಿ ಕಾಯಿದೆ ಅನ್ವಯ ಪೆಗಸಸ್ ಒಂದು ಕಂಪ್ಯೂಟರ್ ವೈರಸ್ ಆಗಿದ್ದು, ಇದರ ಉದ್ದೇಶ ಗುರಿಗೀಡಾದ ಉಪಕರಣಗಳಿಗೆ ತಾನಾಗಿಯೇ ಜೋಡಣೆಗೊಂಡು ಆನಂತರ ಆ ಗುರಿಗೀಡಾದ ಉಪಕರಣವನ್ನು ತಿರುಚಿ, ದತ್ತಾಂಶವನ್ನು ಸಂಗ್ರಹಿಸಿ, ದಾಖಲಿಸಿ, ಪ್ರಸರಿಸುವುದಾಗಿದೆ” ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಇನ್ನು ಪೆಗಸಸ್ ಗೂಢಚರ್ಯೆಗೆ ನೇರವಾಗಿ ತುತ್ತಾದ ವ್ಯಕ್ತಿಗಳು ನ್ಯಾಯಾಲಯದ ಮೊರೆ ಹೋದ ಮೊದಲ ಪ್ರಕರಣ ಇದಾಗಿದ್ದು. ಈ ಅರ್ಜಿಗಳು PIL (ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಸ್ವರೂಪದಲ್ಲಿವೆ. ಆಗಸ್ಟ್ 5 ರಂದು ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ನೇತೃತ್ವದ ನ್ಯಾಯಪೀಠ ಈ PILಗಳ ವಿಚಾರಣೆ ನಡೆಸಲಿದೆ.