ಲಕ್ನೋ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಾಲುವೆಗೆ ಬಿದ್ದ ಪರಿಣಾಮ ಐವರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿಯ ಶಾರದಾ ಕಾಲುವೆ ಬಳಿ ನಡೆದಿದೆ.

ಬಹ್ರೈಚ್ ಜಿಲ್ಲೆಯ ನಿವಾಸಿಗಳಾದ ಸುರೇಶ್, ಲಾಲ್ಜಿ, ಘನಶ್ಯಾಮ್, ಜಿತೇಂದ್ರ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದ್ದು, ಕಾಲುವೆಯಲ್ಲಿ ಸಾವನ್ನಪ್ಪಿರುವ ಇನ್ನೋರ್ವ ವ್ಯಕ್ತಿಯ ಗುರುತು ಈವರೆಗೂ ಪತ್ತೆಯಾಗಿಲ್ಲ.

ಧೇಖೇರ್ವಾ-ಗಿರ್ಜಾಪುರಿ ಹೆದ್ದಾರಿಯ ಪರಾಸ್ ಪೂರ್ವಾ ಗ್ರಾಮದ ಬಳಿ ನಿನ್ನೆ ತಡರಾತ್ರಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಬಿದಿದ್ದೆ. ನೋಡ ನೋಡುತ್ತಿದ್ದಂತೆ ಸಂಪೂರ್ಣ ಕಾರು ಕಾಲುವೆಯಲ್ಲಿ ಮುಳುಗಿ ಹೋಗಿದೆ. ಸ್ಥಳೀಯರು ಹಾಗೂ ಪೊಲೀಸರು ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಏಳು ಜನರಲ್ಲಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಮೃತರೆಲ್ಲರೂ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ತಮ್ಮ ಗ್ರಾಮಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.







