ಒಂಬತ್ತು ಜನರ ಸಜೀವ ದಹನಕ್ಕೆ ಕಾರಣವಾದ ಮಧುರೈ ರೈಲು ದುರಂತ ಸಂಬಂಧ ಗ್ಯಾಸ್ ಸಿಲಿಂಡರ್ ಅನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ಸರ್ಕಾರಿ ರೈಲ್ವೆ ಪೊಲೀಸರು(ಜಿಆರ್ಪಿ) ಟೂರ್ ಆಪರೇಟರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ ಎಂದು ಭಾನುವಾರ (ಆಗಸ್ಟ್ 27) ವರದಿಯಾಗಿದೆ.
“ಟೂರಿಸ್ಟ್ ಕೋಚ್ನಲ್ಲಿ ಅಡುಗೆ ಅನಿಲ ಸಿಲಿಂಡರ್ ಅನ್ನು ‘ಅಕ್ರಮವಾಗಿ ಸಾಗಿಸಿದ’ ಟೂರ್ ಆಪರೇಟರ್ ವಿರುದ್ಧ ಜಿಆರ್ಪಿಯು ಐಪಿಸಿ ಮತ್ತು ರೈಲ್ವೆ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದೆ” ಎಂದು ದಕ್ಷಿಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಐಆರ್ಸಿಟಿಸಿಯ ಸಹಯೋಗದೊಂದಿಗೆ ದಕ್ಷಿಣ ರೈಲ್ವೆಯು ಬದುಕುಳಿದ ಪ್ರಯಾಣಿಕರನ್ನು ಲಖನೌ ಕಳುಹಿಸಲು ವಿಮಾನ ಪ್ರಯಾಣದ ವ್ಯವಸ್ಥೆ ಮಾಡುತ್ತದೆ ಎಂದು ಪ್ರಕಟಣೆ ಹೇಳಿದೆ.
ಮದುರೈ ರೈಲು ನಿಲ್ದಾಣದಲ್ಲಿ ನಿಲುಗಡೆಯಾಗಿದ್ದ ಪ್ರವಾಸಿಗರ ರೈಲು ಬೋಗಿಯಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಅಗ್ನಿ ದುರಂತದಲ್ಲಿ ಉತ್ತರ ಪ್ರದೇಶ ಮೂಲದ ಒಂಬತ್ತು ತೀರ್ಥಯಾತ್ರಿಗಳು ಮೃತಪಟ್ಟಿದ್ದಾರೆ. 20 ಮಂದಿ ಗಾಯಗೊಂಡಿದ್ದು, ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಆಹಾರ ತಯಾರಿಸುವ ಉದ್ದೇಶಕ್ಕಾಗಿ ಬೋಗಿಯಲ್ಲಿ ಅಕ್ರಮವಾಗಿ ತರಲಾಗಿದ್ದ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡಿರುವುದೇ ಮಧುರೈ ರೈಲು ದುರಂತ ಉಂಟಾಗಲು ಕಾರಣ ಎಂಬುದು ದಕ್ಷಿಣ ರೈಲ್ವೆ ವಿಭಾಗದಿಂದ ನಡೆಸಿರುವ ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ.
ಬೆಳಗಿನ ಚಹಾ ಅಥವಾ ತಿಂಡಿ ತಯಾರಿಸುವ ವೇಳೆ ಗ್ಯಾಸ್ ಸೋರಿಕೆಯಾಗಿರುವ ಸಾಧ್ಯತೆ ಇದೆ. ಬೋಗಿಯಲ್ಲಿ ದೊರೆತಿರುವ ಎಲ್ಪಿಜಿ ಸಿಲಿಂಡರ್, ಅಲೂಗಡ್ಡೆ ಚೀಲ ಹಾಗೂ ಸುಟ್ಟು ಕರಕಲಾಗಿರುವ ಪಾತ್ರೆಗಳು ಇದಕ್ಕೆ ಪುಷ್ಟಿ ನೀಡಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
“ಭದ್ರಪಡಿಸಿದ್ದ ಬೋಗಿಯ ಬಾಗಿಲನ್ನು ಮುರಿದು ಹಲವರು ಹೊರಗೆ ಓಡಿಬಂದರು. ಹಾಗಾಗಿ, ಹೆಚ್ಚಿನ ಜೀವಹಾನಿ ತಪ್ಪಿದೆ” ಎಂದು ಬದುಕುಳಿದ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ತೆರಳಿದ ಮದುರೈ ಜಿಲ್ಲಾಧಿಕಾರಿ ಎಂ.ಎಸ್. ಸಂಗೀತಾ ಅವರು ಗಾಯಾಳುಗಳ ಚಿಕಿತ್ಸೆಯ ನೆರವಿಗಾಗಿ ಸ್ಪಂದಿಸಿದ್ದಾರೆ. ಮೃತದೇಹಗಳನ್ನು ಅವರ ಊರುಗಳಿಗೆ ಕಳುಹಿಸಲು ಅಗತ್ಯ ವ್ಯವಸ್ಥೆ ಕೈಗೊಂಡಿದ್ದಾರೆ.
ಲಖನೌ ನಗರದ ಸುತ್ತಮುತ್ತಲಿನ ಪ್ರದೇಶಕ್ಕೆ ಸೇರಿದ ಈ ನತದೃಷ್ಟರು ವಾರದ ಹಿಂದೆ ತಮಿಳುನಾಡಿನ ರಾಮೇಶ್ವರಂಗೆ ಪ್ರತ್ಯೇಕ ಬೋಗಿಯಲ್ಲಿ ತೀರ್ಥಯಾತ್ರೆ ಆರಂಭಿಸಿದ್ದರು. ಭಾನುವಾರ ಚೆನ್ನೈಗೆ ತಲುಪಿ ಬಳಿಕ ಅಲ್ಲಿಂದ ಹುಟ್ಟೂರಿಗೆ ಮರಳಲು ನಿರ್ಧರಿಸಿದ್ದರು.
ಪುಣಲೂರು-ಮದುರೈ ಎಕ್ಸ್ಪ್ರೆಸ್ಗೆ ಆಗಸ್ಟ್ 25ರಂದು ಈ ಬೋಗಿಯನ್ನು ಅಳವಡಿಸಲಾಗಿತ್ತು. ರೈಲು ಮದುರೈ ನಿಲ್ದಾಣ ತಲುಪಿದಾಗ ಅದನ್ನು ಪ್ರತ್ಯೇಕಿಸಿ ನಿಲ್ದಾಣದ ಹಳಿಯೊಂದರ ಮೇಲೆ ನಿಲ್ಲಿಸಲಾಗಿತ್ತು. ಅಕ್ರಮವಾಗಿ ತಂದಿದ್ದ ಸಿಲಿಂಡ ಬಳಸಿ ಕೆಲವರು ಚಹಾ ಅಥವಾ ತಿಂಡಿ ತಯಾರಿಕೆಗೆ ಹೋದಾಗ ಬೆಂಕಿ ಹೊತ್ತಿಕೊಂಡಿದೆ ಎಂದು ದಕ್ಷಿಣ ರೈಲ್ವೆ ಹೇಳಿಕೆಯಲ್ಲಿ ತಿಳಿಸಿದೆ.
ಬೆಳಿಗ್ಗೆ 5.15ಕ್ಕೆ ಬೆಂಕಿ ಹೊತ್ತಿಕೊಂಡಿದೆ. ಅರ್ಧಗಂಟೆ ವಿಳಂಬವಾಗಿ ಅಗ್ನಿಶಾಮಕ ಮತ್ತು ತುರ್ತುಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. 7.15ರ ಹೊತ್ತಿಗೆ ಬೆಂಕಿ ನಂದಿಸಿ ಹೆಚ್ಚಿನ ಅವಘಡವನ್ನು ತಪ್ಪಿಸಲಾಯಿತು ಎಂದು ವಿವರಿಸಿದೆ.
ಆರಂಭದಲ್ಲಿ 10 ಮಂದಿ ಮೃತಪಟ್ಟಿದ್ದಾರೆ ಎಂದು ರೈಲ್ವೆ ವಿಭಾಗ ತಿಳಿಸಿತ್ತು. ಬಳಿಕ ಮೃತಪಟ್ಟವರ ಸಂಖ್ಯೆಯನ್ನು ಪರಿಷ್ಕರಿಸಿ ಹೇಳಿಕೆ ನೀಡಿದೆ.
ಪರಿಹಾರ ಘೋಷಣೆ :
ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದುರಂತದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಮೃತಪಟ್ಟವರ ಕುಟುಂಬಗಳಿಗೆ ತಮಿಳುನಾಡು ಸರ್ಕಾರ ತಲಾ 1 3 ಲಕ್ಷ ಹಾಗೂ ಉತ್ತರ ಪ್ರದೇಶ ಸರ್ಕಾರವು ತಲಾ 12 ಲಕ್ಷ ಪರಿಹಾರ ಘೋಷಿಸಿದೆ. ದಕ್ಷಿಣ ರೈಲ್ವೆಯು ತಲಾ – 10 ಲಕ್ಷ ಪರಿಹಾರ ಘೋಷಿಸಿದ್ದು, ಎರಡು ಸಹಾಯವಾಣಿಗಳನ್ನೂ ಆರಂಭಿಸಿದೆ.