
ಭಾರತ ಸಾಗುತ್ತಿರುವ ಆರ್ಥಿಕ ಹಾದಿಯಲ್ಲಿ ರೈತ ಹೋರಾಟಗಳ ಭವಿಷ್ಯಕ್ಕೆ ಹೊಸಮಾದರಿ ಬೇಕಿದೆ
ನಾ ದಿವಾಕರ
ಭಾಗ 3
ಭೂ ಸ್ವಾಧೀನದ ವಿಭಿನ್ನ ಆಯಾಮಗಳು
ಈ ನವ ನಗರದಲ್ಲಿ ಜ್ಞಾನ, ನಾವೀನ್ಯತೆ ಮತ್ತು ಯೋಗಕ್ಷೇಮದ ಜೊತೆಗೇ ಔದ್ಯಮಿಕ ಕ್ಷೇತ್ರವನ್ನೂ ವಿಸ್ತರಿಸಲಾಗುತ್ತದೆ. ಈ ಮೂರು ಕ್ಷೇತ್ರಗಳಲ್ಲಿ ಬಂಡವಾಳ ಹೂಡುವ ಕಾರ್ಪೊರೇಟ್ ಉದ್ದಿಮೆಗಳು ಕಲಿಕೆ ಮತ್ತು ನಾವೀನ್ಯತೆಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತವೆ. ಈ ನಗರದ ಮತ್ತೊಂದು ಪ್ರಮುಖ ಯೋಜನೆ ಎಂದರೆ ಗಂಧದ ಮರದ ಉದ್ಯಮವನ್ನು (Sandal Farms) ಉತ್ತೇಜಿಸುವುದು. ಸುಗಂಧ ದ್ರವ್ಯಗಳ, ಸೌಂದರ್ಯ ಸಾಧಕಗಳ ಮತ್ತು ಔಷಧಿಗಳ ಉತ್ಪಾದನೆಗೆ ತೆರೆದುಕೊಳ್ಳುವ ಗಂಧದ ಮರದ ಉದ್ದಿಮೆಗಳು ಇಲ್ಲಿ ಮಾರುಕಟ್ಟೆಯ ಮೇಲೆ ಆಧಿಪತ್ಯ ಸಾಧಿಸುತ್ತವೆ. ಗಂಧದ ಮರಗಳನ್ನು ಬೆಳೆಯುವ ದೊಡ್ಡ ಎಸ್ಟೇಟ್ ಅಥವಾ Farm ಗಳನ್ನು ಉತ್ತೇಜಿಸಲಾಗುತ್ತದೆ. ಈ ಎಲ್ಲ ವಲಯಗಳಲ್ಲಿ ಉದ್ಯೋಗ ಸೃಷ್ಟಿಯ ಪ್ರಮಾಣ ಎಷ್ಟು, ಇಲ್ಲಿ ತಮ್ಮ ಭೂಮಿಯನ್ನು ಕಳೆದುಕೊಂಡಿರುವ ಲಕ್ಷಾಂತರ ಜನತೆಗೆ ಈ ಉದ್ಯೋಗಗಳು ಎಷ್ಟರಮಟ್ಟಿಗೆ ನಿಲುಕುತ್ತವೆ, ಇಲ್ಲಿ ಆರಂಭವಾಗುವ ಜ್ಞಾನ ಕೇಂದ್ರಗಳಲ್ಲಿ, ಕೆಳಸ್ತರದ, ಮಧ್ಯಮ ವರ್ಗದ ಸಮಾಜಕ್ಕೆ ಎಷ್ಟರ ಮಟ್ಟಿಗೆ ಪ್ರವೇಶ ಸಾಧ್ಯವಾಗುತ್ತದೆ, ಇವೇ ಮುಂತಾದ ಜಟಿಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ.
ಈ ನಗರದ ಮೊದಲ ಹಂತವನ್ನು 2,000 ಎಕರೆ ಪ್ರದೇಶದಲ್ಲಿ ಆರಂಭಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ 2024ರಲ್ಲೇ ಚಾಲನೆ ನೀಡಿದ್ದಾರೆ. ಈ ನಗರದಲ್ಲಿ 5 ಲಕ್ಷ ಜನರು ವಾಸಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಈ ವಸತಿ ಸಮುಚ್ಚಯಗಳು ಸಾಮಾನ್ಯ ನಗರ ಬಡಾವಣೆಗಳಾಗಿರುವುದಿಲ್ಲ. ವಿಲ್ಲಾಗಳ ರೂಪದ ಬೃಹತ್ ಬಂಗಲೆಗಳು ಇಲ್ಲಿ ರಾರಾಜಿಸುತ್ತವೆ. ಈಗಾಗಲೇ ಯೋಗಕ್ಷೇಮ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ವೈದ್ಯಕೀಯ ಉದ್ದಿಮೆಗಳನ್ನು ಆರಂಭಿಸಲು ಅಮೆರಿಕದ ಹಾಪ್ಕಿನ್ಸ್ ವಿಶ್ವವಿದ್ಯಾಲಯ, ಕ್ಯಾರಿ ಬ್ಯುಸಿನೆಸ್ ಸ್ಕೂಲ್, ಬ್ಲೂಂಬರ್ಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್, ಲಿವರ್ಪೂಲ್ ವಿಶ್ವವಿದ್ಯಾಲಯ, ಈಸ್ಟ್ ಲಂಡನ್ ವಿಶ್ವವಿದ್ಯಾಲಯ, ಯಾರ್ಕ್ ವಿಶ್ವವಿದ್ಯಾಲಯ, ವೋಲ್ವರ್ ಹಾಂಪ್ಟನ್ ವಿಶ್ವವಿದ್ಯಾಲಯ ಮುಂತಾದ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಇಲ್ಲ ಕ್ಯಾಂಪಸ್ಗಳನ್ನು ಆರಂಭಿಸಲು ಅವಕಾಶ ಕಲ್ಪಿಸಲಾಗಿದೆ. ಇಲ್ಲಿಯೂ ಸಹ ಭೂ ಸ್ವಾಧೀನದ ಜವಾಬ್ದಾರಿಯನ್ನು ಕೆಐಎಡಿಬಿ ಸಂಸ್ಥೆಗೆ ವಹಿಸಲಾಗಿದ್ದು, ಶೇಕಡಾ 80ರಷ್ಟು ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣವಾಗಿದೆ.
ಮೇಲೆ ಉಲ್ಲೇಖಿಸಲಾಗಿರುವ ರಿಯಲ್ ಎಸ್ಟೇಟ್ ಔದ್ಯಮಿಕ ಹಿತಾಸಕ್ತಿಗಳ ಒಂದು ಆಯಾಮವನ್ನು KWIN ಸಿಟಿಯ ಸಂದರ್ಭದಲ್ಲೂ ಕಾಣಬಹುದು. ದೊಡ್ಡಬಳ್ಳಾಪುರದ ಹುಲಿಕುಂಟೆ ಗ್ರಾಮದಲ್ಲಿರುವ 560 ಎಕರೆ ಫಲವತ್ತಾದ ಕೃಷಿ ಭೂಮಿಯಲ್ಲಿ ಅಡಿಕೆ, ತೆಂಗು, ಹೂವು ಮತ್ತು ತರಕಾರಿಗಳನ್ನು ಬೆಳೆಯಲಾಗುತ್ತದೆ. ಈ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಅಧಿಸೂಚನೆಯನ್ನು 2021ರಲ್ಲೇ ಸರ್ಕಾರ ಹೊರಡಿಸಿತ್ತು. ಈ ಬಗ್ಗೆ ನೋಟಿಸ್ ಬಂದ ಕೂಡಲೇ ಸ್ಥಳೀಯ ರೈತರು, ಭೂಮಿಯನ್ನು ಕೊಡಲು ತಾವು ಒಪ್ಪುವುದಿಲ್ಲ ಎಂದು ಪ್ರತಿಭಟನೆಗೆ ಮುಂದಾಗಿದ್ದರು. ಏತನ್ಮಧ್ಯೆ ಇದೇ ಗ್ರಾಮದ ಮತ್ತೊಂದು ಬದಿಯಲ್ಲಿ ಕೆಐಎಡಿಬಿ ಅದೇ ವರ್ಷದಲ್ಲಿ 2000 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಈ ಪ್ರದೇಶದ ದಾಬಸ್ಪೇಟೆ, ಸೋಂಪುರ, ಓಬಳಾಪುರ ಗ್ರಾಮಗಳನ್ನು ಆ ವೇಳೆಗಾಗಲೇ STRR ಕೈಗಾರಿಕಾ ವಲಯ ಸ್ಥಾಪಿಸಲು ಸ್ವಾಧೀನಪಡಿಸಿಕೊಂಡು ಆಗಿತ್ತು. ಈ ಭೂಮಿಯಲ್ಲಿ ಯಾವುದೇ ಕೃಷಿ ಬೆಳೆಯನ್ನು ಬೆಳೆಯುವಂತಿಲ್ಲ ಎಂದು ನಿರ್ಬಂಧಿಸಿದ್ದ ಕೆಐಎಡಿಬಿ ಅಂತಿಮ ಅಧಿಸೂಚನೆಗೂ ಮುನ್ನ ಯಾವುದೇ ಪರಿಹಾರವನ್ನೂ ನೀಡಿರಲಿಲ್ಲ. ಹಾಗಾಗಿ ಇಲ್ಲಿನ ರೈತರು ಭೂಮಿಯನ್ನು ಕಳೆದುಕೊಂಡಿದ್ದೇ ಅಲ್ಲದೆ, ತಮ್ಮದೇ ಭೂಮಿಯಲ್ಲಿ ಬೇಸಾಯ ಮಾಡುವ ಹಕ್ಕನ್ನೂ ಕಳೆದುಕೊಂಡಿದ್ದರು.
ಇದಕ್ಕೂ ಮುನ್ನ ಕೆಲವು ವರ್ಷಗಳ ಹಿಂದೆ ಹೊರಗಿನಿಂದ ಬಂದಿದ್ದ ಕೆಲವು ರಿಯಲ್ ಎಸ್ಟೇಟ್ ಉದ್ಯಮಿಗಳು ಗ್ರಾಮಸ್ಥರನ್ನು ಸಂಪರ್ಕಿಸಿ ಗೋರಘಟ್ಟ ಮತ್ತಿತರ ಗ್ರಾಮಗಳಲ್ಲಿ ಸರ್ಕಾರದ ಮಾರ್ಗದರ್ಶಿ ಬೆಲೆ ಎಕರೆಗೆ 15 ಲಕ್ಷ ರೂಗಳಷ್ಟೇ ಇದ್ದರೂ, ರೈತರಿಗೆ 25 ರಿಂದ 40 ಲಕ್ಷದವರೆಗೂ ಬೆಲೆ ನೀಡಿ ಭೂಮಿಯನ್ನು ಖರೀದಿಸಿದ್ದರು. ವಹಿವಾಟು ಪೂರ್ಣವಾದ ನಂತರ ಎಕರೆಗೆ 1.15 ಕೋಟಿ ರೂ ನಿಗದಿಪಡಿಸಲಾಗಿತ್ತು. ತದನಂತರವಷ್ಟೇ ಕೆಐಎಡಿಬಿ ಈ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಅಧಿಸೂಚನೆ ಹೊರಡಿಸಿತ್ತು. ಕೆಲವು ಸ್ಥಳೀಯ ಗ್ರಾಮಸ್ಥರ ಪ್ರಕಾರ ಈ 2000 ಎಕರೆಯ ಪೈಕಿ 400 ಎಕರೆ ಭೂಮಿಯು ಕೇವಲ ಇಬ್ಬರ ಒಡೆತನದಲ್ಲಿತ್ತು. ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಾಗುತ್ತದೆ ಎಂದು ಡೆಕ್ಕನ್ ಹೆರಾಲ್ಡ್ ವರದಿಯಲ್ಲಿ ಹೇಳಲಾಗಿತ್ತು. ವಿವರಗಳಿಗಾಗಿ ಈ ಲಿಂಕ್ನಲ್ಲಿರುವ ವರದಿಯನ್ನು ಗಮನಿಸಬಹುದು.

(https://www.deccanherald.com/india/karnataka/an-unbalanced-scale-development-and-land-loss-3230224)
ನಗರೀಕರಣ-ವಾಣಿಜ್ಯೀಕರಣ-ಅಭಿವೃದ್ಧಿ
ಈ KWIN ನಗರದ ವ್ಯಾಪ್ತಿಗೊಳಪಡುವ ದೊಡ್ಡಬಳ್ಳಾಪುರ-ದಾಬಸ್ಪೇಟೆ-ನೆಲಮಂಗಲ ತಾಲ್ಲೂಕುಗಳ ಹಾಗೆಯೇ ದೇವನ ಹಳ್ಳಿಯೂ ಸಹ ನಗರ ಮುಖಿಯಾಗಿಯೇ ಬೆಳೆದುಬಂದಿವೆ. ಇಲ್ಲಿ ಸಂಪೂರ್ಣ ಕೃಷಿಯಲ್ಲಿ ತೊಡಗಿರುವ ರೈತರೂ ಸಹ ನಗರಮುಖಿ ರೈತರಾಗಿಯೇ ತಮ್ಮ ಬೇಸಾಯವನ್ನು ಅಭಿವೃದ್ಧಿಪಡಿಸಿಕೊಂಡು ಬಂದಿದ್ದಾರೆ. ಹಾಗಾಗಿ ಈ ಪ್ರದೇಶದ ರೈತರಿಗೆ ನಗರೀಕರಣಕ್ಕೆ ಬೇಗನೆ ಒಗ್ಗಿಕೊಳ್ಳುವುದು ಕಷ್ಟವಾಗಲಿಕ್ಕಿಲ್ಲ. ತಮ್ಮ ಕೃಷಿ ಫಸಲಿನ ಮಾರುಕಟ್ಟೆಗೆ ಬೆಂಗಳೂರು ನಗರವನ್ನೇ ಅವಲಂಬಿಸುವ ಈ ರೈತರು ಸಹಜವಾಗಿಯೇ ಬೆಂಗಳೂರಿನ ಮಾರುಕಟ್ಟೆ ವ್ಯವಸ್ಥೆಯನ್ನೇ ಅವಲಂಬಿಸಿ ಕೃಷಿ ಮತ್ತು ಕೃಷಿಯೇತರ, ಹೈನುಗಾರಿಕೆ ಮುಂತಾದ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಪ್ರಸ್ತುತ ರೈತ ಹೋರಾಟಕ್ಕೆ ಮಣಿದು ರಾಜ್ಯ ಸರ್ಕಾರ ಭೂ ಸ್ವಾಧೀನವನ್ನು ಕೈಬಿಟ್ಟಿದ್ದರೂ ಇಲ್ಲಿನವರೇ ಆದ ಕೆಲವು ರೈತರು ತಾವು ಸ್ವ ಇಚ್ಛೆಯಿಂದ ಭೂಮಿಯನ್ನು ಕೊಡಲು ಸಿದ್ದ ಎಂದು ಘೋಷಿಸಿರುವುದು ಗಮನಿಸಬೇಕಾದ ಬೆಳವಣಿಗೆ.

ನಮ್ಮ ಆಳ್ವಿಕೆಯು ಪ್ರಜಾಸತ್ತಾತ್ಮಕವಾದರೂ, ಇಂತಹ ಪ್ರಸಂಗಗಳಲ್ಲಿ ರಾಜಕೀಯ ಪಕ್ಷಗಳು ಬಳಸುವುದು ಊಳಿಗಮಾನ್ಯ ವ್ಯವಸ್ಥೆಯ ಮಾದರಿಗಳನ್ನೇ ಎನ್ನುವುದು ನಮ್ಮ ಗಮನದಲ್ಲಿರಬೇಕು. ಬಹಳ ಮುಖ್ಯವಾಗಿ ಕೆಐಎಡಿಬಿ ಸಂಸ್ಥೆಯಷ್ಟೇ ಅಲ್ಲದೆ ಖಾಸಗಿ ವಲಯದ ರಿಯಲ್ ಎಸ್ಟೇಟ್ ಉದ್ಯಮಿಗಳು ಇಲ್ಲಿ ನಿರ್ವಹಿಸುವ ಪಾತ್ರವನ್ನೂ ಗಮನಿಸಬೇಕಿದೆ. ರೈತ ಹೋರಾಟಕ್ಕೆ ಪ್ರತಿಯಾಗಿ ಮತ್ತೊಂದು ರೈತರ ಗುಂಪನ್ನು ಸಿದ್ಧಪಡಿಸುವ ಈ ತಂತ್ರಗಾರಿಕೆಯ ಫಲವೇ, ಸಚಿವ ಎಂ.ಬಿ. ಪಾಟೀಲ್ ಅವರ ಅತಿಯಾದ ವಿಶ್ವಾಸಕ್ಕೆ ಕಾರಣ ಎನ್ನುವುದನ್ನೂ ಗಮನಿಸಬೇಕಿದೆ. ತಮ್ಮ ಕೃಷಿ ಭೂಮಿಯ ಸುತ್ತಲೂ ನಗರೀಕರಣ ಪ್ರಕ್ರಿಯೆ ತೀವ್ರತೆ ಪಡೆದಾಗಿ, ಅತಿ ಸಮೀಪದಲ್ಲೇ ಇರುವ ದೊಡ್ಡಬಳ್ಳಾಪುರ ಪ್ರದೇಶವು KWIN ನಗರವಾಗಿ ಮಾರ್ಪಡುತ್ತಿರುವಾಗ, ಚನ್ನರಾಯಪಟ್ಟಣದ ರೈತರು ಎಷ್ಟು ವರ್ಷಗಳ ಕಾಲ ತಮ್ಮ ಮೂಲ ಕೃಷಿ ಕಸುಬಿಗೆ ಬದ್ಧರಾಗಿರುತ್ತಾರೆ , ಇರಲು ಸಾಧ್ಯ ? ಈ ಪ್ರಶ್ನೆಯನ್ನು ಗಂಭೀರವಾಗಿ ಪರಾಮರ್ಶಿಸಬೇಕಿದೆ.
ಈ ಗ್ರಾಮಗಳನ್ನು ಸುತ್ತುವರೆಯುವ ರಿಯಲ್ ಎಸ್ಟೇಟ್ ಉದ್ಯಮಿಗಳು ಒಂದೆಡೆ ರಾಜಕೀಯವಾಗಿ ಪ್ರಭಾವಿಗಳಾಗಿದ್ದರೆ, ಮತ್ತೊಂದು ಮಗ್ಗುಲಿನಲ್ಲಿ ಸ್ವತಃ ಅಧಿಕಾರ ರಾಜಕಾರಣದ ಪ್ರತಿನಿಧಿಗಳೂ, ವಾರಸುದಾರರೂ, ಫಲಾನುಭವಿಗಳೂ ಆಗಿರುತ್ತಾರೆ ಎಂಬ ವಾಸ್ತವ ಅರಿಯಲು ರಾಕೆಟ್ ವಿಜ್ಞಾನದ ಸಂಶೋಧನೆಯೇನೂ ಬೇಕಿಲ್ಲ. ಭಾರತದಾದ್ಯಂತ, ಜಾರ್ಖಂಡ್-ಛತ್ತಿಸ್ಘಡದಿಂದ ಕೋಲಾರದವರೆಗೂ ಕಾಣಬಹುದಾದ ವಿದ್ಯಮಾನವೇ ಇದು. ಈ ಅಭಿವೃದ್ಧಿ ಮಾದರಿಯ ಮುನ್ನಡೆಗೆ ಪೂರಕವಾಗಿಯೇ 2014ರಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ನರೇಂದ್ರ ಮೋದಿ ಸರ್ಕಾರವು 2013ರ ಭೂಸ್ವಾಧೀನ ಪುನರ್ ಸ್ಥಾಪನೆ-ಪುನರ್ವಸತಿ ಕಾಯ್ದೆ (LARR) ಕಾಯ್ದೆಗೆ ತಿದ್ದುಪಡಿ ತಂದು, ಅದರಲ್ಲಿದ್ದ ರೈತ ಸ್ನೇಹಿ ನಿಯಮಗಳನ್ನು ಸಡಿಲಗೊಳಿಸಿತ್ತು.

2013ರ ಮೂಲ ಕಾಯ್ದೆಯ ಅನ್ವಯ ಬಾಧಿತ ಪ್ರದೇಶಗಳಲ್ಲಿ ಭೂ ಸ್ವಾಧೀನ ಜಾರಿಗೊಳಿಸಲು ಶೇಕಡಾ 80ರಷ್ಟು ಬಾಧಿತ ರೈತರ ಸಮ್ಮತಿ ಪಡೆಯಬೇಕಿತ್ತು. ಕಡ್ಡಾಯವಾಗಿ ಸಾಮಾಜಿಕ ಪರಿಣಾಮದ ಪರಿಶೋಧನೆ ನಡೆಸಬೇಕಿತ್ತು. ಕಡ್ಡಾಯವಾಗಿ ಪುನರ್ವಸತಿ ಯೋಜನೆಯನ್ನು ಸರ್ಕಾರ ರೈತರ ಮುಂದಿಡಬೇಕಿತ್ತು. ಈ ಎಲ್ಲ ನಿಯಮಗಳನ್ನೂ ಕೇಂದ್ರ ಸರ್ಕಾರದ ತಿದ್ದುಪಡಿ ಸಡಿಲಗೊಳಿಸಿದ್ದು, ಬಿಜೆಪಿ ಆಳ್ವಿಕೆಯ ಎಲ್ಲ ರಾಜ್ಯಗಳೂ ಈ ತಿದ್ದುಪಡಿಯಾದ ಕಾಯ್ದೆಯನ್ನೇ ಅನುಸರಿಸುತ್ತಿವೆ. 2018ರಲ್ಲಿ ಅಧಿಕಾರಕ್ಕೆ ಬಂದ ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವೂ ಈ ಹೊಸ ಕಾಯ್ದೆಯನ್ನೇ ಒಪ್ಪಿಕೊಂಡಿತ್ತು. 2023ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈವರೆಗು ಈ ತಿದ್ದುಪಡಿಯಾದ ಕಾಯ್ದೆಯನ್ನು ಬದಲಿಸಲು ಮುಂದಾಗಿಲ್ಲ. ಮುಖ್ಯಮಂತ್ರಿಯ ಸ್ಥಾನದಲ್ಲಿರುವವರು ಮಣ್ಣಿನ ಮಗ ಆದರೂ ಅಷ್ಟೇ ಸಮಾಜವಾದಿ ಎನಿಸಿಕೊಂಡರೂ ಅಷ್ಟೇ, ಆರ್ಥಿಕ ಅಭಿವೃದ್ಧಿ ಮಾದರಿಯನ್ನು ಅನುರಿಸುವುದು ಕಾರ್ಪೋರೇಟ್ ಬಂಡವಾಳಶಾಹಿಯ ಅನುಕೂಲಕ್ಕಾಗಿಯೇ !
ಗೆಲುವು ಸಂಭ್ರಮಿಸುವ ಮುನ್ನ
ಈ ಹಿನ್ನೆಲೆಯಲ್ಲೇ ದೇವನಹಳ್ಳಿ-ಚನ್ನರಾಯಪಟ್ಟಣ ರೈತ ಹೋರಾಟದ ಗೆಲುವನ್ನೂ ವಿಮರ್ಶೆಗೊಳಪಡಿಸಬೇಕಿದೆ. ತಮ್ಮ ಗ್ರಾಮಗಳ ಸುತ್ತಲೂ ಕೈಗಾರಿಕೆ, ವಾಣಿಜ್ಯ ಉದ್ದಿಮೆಗಳು, ಸಾಫ್ಟ್ವೇರ್ ಕಂಪನಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳ ವಸತಿ ಬಡಾವಣೆಗಳು ಮತ್ತು ಅತ್ಯಾಧುನಿಕ ಹೆದ್ದಾರಿ, ಎಕ್ಸ್ಪ್ರೆಸ್ ವೇ ಹೆದ್ದಾರಿಗಳು ನಿರ್ಮಾಣವಾದರೆ, ಇಲ್ಲಿನ ರೈತರು ಎಷ್ಟು ವರ್ಷಗಳ ಕಾಲ ತಮ್ಮ ಕೃಷಿಯಲ್ಲಿ ಮುಂದುವರೆಯಲು ಸಾಧ್ಯ ? ಅಥವಾ ವರ್ತಮಾನದ ತಲೆಮಾರು ತಮ್ಮ ಪಾರಂಪರಿಕ ಕೃಷಿ ಕಸುಬನ್ನೇ ಅವಲಂಬಿಸಿ ಬೆಳೆದಿರುವುದರಿಂದ, ಈ ಪೀಳಿಗೆಯ ಹಿರಿಯರಲ್ಲಿ ಕೃಷಿ-ಹೈನುಗಾರಿಕೆಯ ಬಗ್ಗೆ ಇರುವ ಪಾರಂಪರಿಕ ಶ್ರದ್ಧೆ ಮತ್ತು ನಂಬಿಕೆಗಳು, ಅವರದೇ ಮುಂದಿನ ತಲೆಮಾರಿಗೂ ಮುಂದುವರೆಯಲು ಸಾಧ್ಯವೇ ? ವಿಶೇಷವಾಗಿ 21ನೇ ಶತಮಾನದ, ಮಿಲೆನಿಯಂ ಯುವ ಸಮೂಹ, ನವ ಉದಾರವಾದದ ಭ್ರಾಮಕ ಜಗತ್ತಿನ ಆಕರ್ಷಣೆಗೊಳಗಾಗದೆ, ತಮ್ಮ ಪೂರ್ವಿಕರ ಕೃಷಿ ವೃತ್ತಿಯನ್ನು ಮುಂದುವರೆಸುತ್ತಾರೆಯೇ ?

ಇದು ಭವಿಷ್ಯ ಭಾರತದ ದೃಷ್ಟಿಯಿಂದ ರೈತ ಸಂಘಟನೆಗಳನ್ನು ಹಾಗೂ ಪ್ರಜ್ಞಾವಂತ ನಾಗರಿಕರನ್ನು ಕಾಡಬೇಕಾದ ಪ್ರಶ್ನೆ. KWIN ಸಿಟಿ ನಿರ್ಮಾಣದ ಸುತ್ತ ಹಬ್ಬಿರುವ ರಿಯಲ್ ಎಸ್ಟೇಟ್-ಕಾರ್ಪೋರೇಟ್ ಮಾರುಕಟ್ಟೆ ಸಂಬಂಧಗಳೇ ಮತ್ತೊಂದು ರೂಪದಲ್ಲಿ ಅಥವಾ ಅದೇ ಸ್ವರೂಪದಲ್ಲಿ ಇಲ್ಲಿಯೂ ಸಹ ಅನಾವರಣಗೊಳ್ಳುವುದನ್ನು ಅಲ್ಲಗಳೆಯಲಾಗುವುದಿಲ್ಲ. ಈ ದೃಷ್ಟಿಯಿಂದ ಯೋಚಿಸಿದಾಗ, ಈಗಾಗಲೇ ವಿಘಟಿತವಾಗಿರುವ, ಕೆಲವು ಬಣಗಳ ಲೋಹಿಯಾ ತತ್ವಗಳ , ಎಡಪಂಥೀಯ ಸೈದ್ಧಾಂತಿಕ ನೆಲೆಗಳನ್ನು ಹೊರತುಪಡಿಸಿ, ಬಹುಮಟ್ಟಿಗೆ ಯಾವುದೇ ನಿರ್ದಿಷ್ಟ ಸಿದ್ಧಾಂತಕ್ಕೆ ಅಂಟಿಕೊಳ್ಳದ ರೈತ ಸಮುದಾಯ ಮತ್ತು ಸಂಘಟನೆಗಳು, ಈ ಅಭಿವೃದ್ಧಿ ಮಾದರಿಯನ್ನು ಹೇಗೆ ನೋಡುತ್ತವೆ ಎಂಬ ಪ್ರಶ್ನೆ ಎದುರಾಗುತ್ತದೆ.
ಏತನ್ಮಧ್ಯೆ ಆಳುವ ಸರ್ಕಾರಗಳು ಎಲ್ಲ ರೀತಿಯ ಕಾರ್ಮಿಕ ಸಂಘಟನೆಗಳಲ್ಲೂ ಬಿರುಕು ಮೂಡಿಸುವ ತಮ್ಮ ಪ್ರಯತ್ನಗಳನ್ನು ಭಿನ್ನ ಆಯಾಮಗಳಲ್ಲಿ ಮುಂದುವರೆಸುವುದು ಖಚಿತ. ಕೆಲವು ವರ್ಷಗಳ ಹಿಂದೆ ರಾಜ್ಯ ರಸ್ತೆ ಸಾರಿಗೆ ನೌಕರರ ಐಕ್ಯತೆಯನ್ನು ಭಂಗಗೊಳಿಸಲು, ರೈತ ಸಂಘಟನೆಯ ಒಂದು ಬಣವನ್ನು ಬಳಸಿಕೊಂಡ ಪ್ರಸಂಗ ನಮ್ಮ ನೆನಪಿನಲ್ಲಿ ಉಳಿದಿರಬೇಕು. ಈ ತಂತ್ರಗಾರಿಕೆಯನ್ನು ಅಳವಡಿಸಲು ಎಲ್ಲ ಬೂರ್ಷ್ವಾ ರಾಜಕೀಯ ಪಕ್ಷಗಳೂ ಸಜ್ಜಾಗಿರುತ್ತವೆ. ಏಕೆಂದರೆ ಅಂತಿಮವಾಗಿ ಭಾರತ ಸಾಗುತ್ತಿರುವ ಆರ್ಥಿಕ ಹಾದಿಯಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ವೃತ್ತಿಗಳು ಅತ್ಯಂತ ಹೆಚ್ಚು ಕಡೆಗಣಿಸಲ್ಪಡುವ ವಲಯವಾಗುತ್ತದೆ. ಬದಲಾಗುತ್ತಿರುವ ಭಾರತದ ಈ ಲಕ್ಷಣವನ್ನು ಎಲ್ಲ ರಾಜ್ಯಗಳಲ್ಲೂ ಕಾಣಬಹುದು. ಕೃಷಿಯನ್ನೇ ನಂಬಿ ಅನಿಶ್ಚಿತ ಬದುಕನ್ನು ಎದುರಿಸುವ ಬದಲು, ದೊಡ್ಡ ಮೊತ್ತದ ಪರಿಹಾರ ಪಡೆದು ಅನ್ಯ ಜೀವನೋಪಾಯ ಮಾರ್ಗಗಳನ್ನು ಅನುಸರಿಸುವ ತಮ್ಮ ಮುಂದಿನ ತಲೆಮಾರಿನ ಮಕ್ಕಳು-ಮೊಮ್ಮಕ್ಕಳಿಗೆ ಸುಭದ್ರ ಬುನಾದಿ ಒದಗಿಸುವ, ಆಲೋಚನೆ ಸ್ವಾಭಾವಿಕವಾಗಿ ರೈತರಲ್ಲಿ ಬೇರೂರುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ.
ಐಕ್ಯತೆ-ಐಕಮತ್ಯ-ಧೃವೀಕರಣ
ಈ ಸಾಧ್ಯಾಸಾಧ್ಯತೆಗಳ ನಡುವೆಯೇ ರೈತ ಸಂಘಟನೆಗಳು ತಮ್ಮ ಐಕ್ಯತೆ, ಐಕಮತ್ಯ ಮತ್ತು ಸಂಯುಕ್ತ ಹೋರಾಟಗಳ ರೂಪುರೇಷೆಗಳನ್ನು ನಿಷ್ಕರ್ಷೆ ಮಾಡಬೇಕಾಗುತ್ತದೆ. ದೆಹಲಿ ರೈತ ಮುಷ್ಕರದ ನಂತರದಲ್ಲಿ ದೇಶಾದ್ಯಂತ ರೈತ ಸಂಘಟನೆಗಳು ಈ ನಿಟ್ಟಿನಲ್ಲಿ ಸಕಾರಾತ್ಮಕ ಧೋರಣೆ ಮತ್ತು ಬೆಳವಣಿಗೆಯನ್ನು ಕಂಡಿದ್ದರೂ, ರೈತ ಸಂಘಟನೆಗಳಲ್ಲೇ ಇರುವ ತಾತ್ವಿಕ ಭಿನ್ನಾಭಿಪ್ರಾಯಗಳು, ಹೋರಾಟದಲ್ಲಿ ಅನುಸರಿಸಬೇಕಾದ ಮಾದರಿ, ಸೈದ್ಧಾಂತಿಕ ನಿಲುವು ಮತ್ತು ನವ ಉದಾರವಾದಿ ಆರ್ಥಿಕತೆಯ ಬಗ್ಗೆ ಇರಬಹುದಾದ ಧೋರಣೆ ಇವೆಲ್ಲವನ್ನೂ ಧೃವೀಕರಿಸುವ ಪ್ರಯತ್ನಗಳು ಸ್ಪಷ್ಟವಾಗಿ ಕಾಣುತ್ತಿಲ್ಲ. ಹಾಗಾಗಿಯೇ ರಾಜಕೀಯ ಪಕ್ಷಗಳಿಗೆ-ಸರ್ಕಾರಗಳಿಗೆ ಮತ್ತು ಔದ್ಯಮಿಕ ಹಿತಾಸಕ್ತಿಗಳಿಗೆ ರೈತ ಹೋರಾಟಗಳನ್ನು ಮತ್ತು ಅದರಲ್ಲಿನ ಐಕಮತ್ಯವನ್ನು ಭೇದಿಸಿ, ವಿಘಟನೆಗೆ ಒಳಪಡಿಸಲು ಸುಲಭ ಸಾಧ್ಯವಾಗುತ್ತಿದೆ.

ಮೂಲತಃ ರೈತ ಸಂಘಟನೆಗಳು ತಮ್ಮ ʼ ರೈತ-ಅನ್ನದಾತ-ಮಣ್ಣಿನಮಕ್ಕಳು ʼ ಎಂಬ ಉದಾತ್ತ ಪದಗಳನ್ನು ನಿರ್ವಚಿಸುವಾಗ ಅದರೊಳಗೆ ಸಂಘಟನಾತ್ಮಕವಾಗಿ ಕೃಷಿ ಕಾರ್ಮಿಕರು, ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ಅತಿ ಸಣ್ಣ ಕೃಷಿಕರು ಹಾಗೂ ಕೃಷಿಯೇತರ-ಹೈನುಗಾರಿಕೆಯಲ್ಲಿ ತೊಡಗಿರುವವರನ್ನೂ ಒಳಗೊಳ್ಳುವುದು ಮುಖ್ಯವಾಗುತ್ತದೆ. ಇಲ್ಲಿ ಹೆಚ್ಚು ಬಾಧಿತರಾಗುವ ಮಹಿಳಾ ಸಮೂಹವನ್ನೂ ಸಹ ಪರಿಗಣಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಂಘಟನಾತ್ಮಕ ವೈಫಲ್ಯ ಇರುವುದನ್ನು ದೇಶಾದ್ಯಂತ ಗುರುತಿಸಬಹುದು. ಮಾರುಕಟ್ಟೆ ಸ್ನೇಹಿ, ವಾಣಿಜ್ಯ ಬೆಳೆ ಬೆಳೆಯುವ ಕೃಷಿಕರು, ಕಬ್ಬು-ಭತ್ತ ಮುಂತಾದ ನೀರಾವರಿ ಕೃಷಿಯನ್ನು ಅವಲಂಬಿಸುವ ರೈತರು, ಒಣಭೂಮಿ ಬೇಸಾಯದಲ್ಲಿ ತೊಡಗಿ, ಮಳೆಯನ್ನೇ ಆಧರಿಸಿ ಬದುಕು ಸವೆಸುವ ರೈತರು ಹಾಗೂ ಈ ಮೂರೂ ವಲಯಗಳಲ್ಲಿ ತಮ್ಮ ಕೈಕೆಲಸವನ್ನೇ ನಂಬಿ ಬದುಕುವ ಲಕ್ಷಾಂತರ ಕೃಷಿ ಕಾರ್ಮಿಕರು ಒಂದು ವಿಶಾಲ ಹಂದರದಲ್ಲಿ ಐಕ್ಯತೆ ಸಾಧಿಸುವುದು ವರ್ತಮಾನದ ತುರ್ತು.

ದೇವನ ಹಳ್ಳಿ ರೈತರ ಗೆಲುವನ್ನು ಸಂಭ್ರಮಿಸುತ್ತಲೇ, ದೆಹಲಿ ರೈತ ಮುಷ್ಕರದ ಚಾರಿತ್ರಿಕ ಯಶಸ್ಸನ್ನು ಗಮನದಲ್ಲಿಟ್ಟುಕೊಂಡೇ, ಈ ಭವಿಷ್ಯದ ಹಾದಿಯನ್ನು ಗುರುತಿಸಬೇಕಾದ ಅನಿವಾರ್ಯತೆ ಭಾರತದ ʼ ಅನ್ನದಾತ ʼ ಬಂಧುಗಳ ಮೇಲಿದೆ. ಈ ಹೋರಾಟ-ಸಂಘಟನೆಗಳ ಕಡೆಗೆ ತಿರುಗಿಯೂ ನೋಡದ ವೈಟ್ ಕಾಲರ್ ವೃತ್ತಿಬಾಂಧವರು, ಸಂಘಟಿತ ವಲಯದ ಕಾರ್ಮಿಕ ಸಂಘಟನೆಗಳು ಮತ್ತು ಈಗಾಗಲೇ ಮಧ್ಯಮ ವರ್ಗಕ್ಕೆ ಸೇರಿದವರಾಗಿ ಸಮಾಜದ ಮೇಲ್ಪದರ ವರ್ಗದ (Elite class) ಭಾಗವಾಗಿರುವ ಕೈಗಾರಿಕೆ-ಉದ್ದಿಮೆ-ಹಣಕಾಸು ವಲಯದ ಕಾರ್ಮಿಕರು ಈ ನಿಟ್ಟಿನಲ್ಲಿ ವಿಶಾಲ ಮನೋಭಾವದೊಂದಿಗೆ ಭಾರತದ ರೈತ ಸಮುದಾಯ ಎದುರಿಸುತ್ತಿರುವ ಅಪಾಯಗಳನ್ನು, ಅನಿಶ್ಚಿತತೆಯನ್ನೂ ಗಮನಿಸುವುದು ಈ ಕಾಲದ ತುರ್ತು. ಸ್ಥಾಪಿತ ರೈತ ಸಂಘಟನೆಗಳು ಈ ನಿಟ್ಟಿನಲ್ಲಿ ವಿಶಾಲ ಸಮಾಜದ ಜನಪರ-ಪ್ರಗತಿಪರ-ಎಡಪಂಥೀಯ ಸಂಘಟನೆಗಳೊಡನೆ ಸಮಾಲೋಚನೆ ನಡೆಸುವ ಮೂಲಕ ಹೊಸ ಮಾರ್ಗವನ್ನು ರೂಪಿಸಬೇಕಿದೆ. ಇದು ಭವಿಷ್ಯ ಭಾರತಕ್ಕೆ ನಾವು ಕೊಡಬಹುದಾದ ಕೊಡುಗೆ ಅಥವಾ ಬಿಟ್ಟುಹೋಗಬಹುದಾದ ಉದಾತ್ತ ಮಾದರಿಯಾದರೆ ಸಾರ್ಥಕವಾದೀತು.
-೦-೦-೦-೦-