
ಭಾರತ ಸಾಗುತ್ತಿರುವ ಆರ್ಥಿಕ ಹಾದಿಯಲ್ಲಿ ರೈತ ಹೋರಾಟಗಳ ಭವಿಷ್ಯಕ್ಕೆ ಹೊಸಮಾದರಿ ಬೇಕಿದೆ
ನಾ ದಿವಾಕರ
ಭಾಗ 1
ಸ್ವತಂತ್ರ ಭಾರತದ ಚರಿತ್ರೆಯಲ್ಲಿ ರೈತ ಹೋರಾಟಗಳು ತಮ್ಮ ಪ್ರಜಾಸತ್ತಾತ್ಮಕ ಚಳುವಳಿಗಳ ಮೂಲಕ ಅಂತಿಮ ಗೆಲುವು ಸಾಧಿಸಿರುವ ಉದಾಹರಣೆಗಳು ಬಹಳ ವಿರಳ. ಕೆಲವು ಚಳುವಳಿಗಳು ಸಾಂಘಿಕ ಐಕ್ಯತೆ, ಇತರೆ ಜನಪರ ಸಂಘಟನೆಗಳ ಐಕಮತ್ಯ ಮತ್ತು ಸ್ಥಳೀಯ ರೈತರ ಗೆಲ್ಲುವ ಛಲ, ಈ ಕಾರಣಗಳಿಂದಾಗಿ ಯಶಸ್ಸು ಪಡೆದಿವೆ. ಸಮಕಾಲೀನ ಭಾರತದಲ್ಲಿ ಅತಿ ಹೆಚ್ಚು ವಿಘಟನೆಗೊಳಗಾಗಿರುವ ಎರಡು ಜನಪರ ಹೋರಾಟಗಳೆಂದರೆ ಕಾರ್ಮಿಕರ ಹೋರಾಟ ಮತ್ತು ರೈತರ ಸಂಘರ್ಷ. ಎರಡೂ ಹೋರಾಟಗಳಲ್ಲಿ ಕಾಣಬಹುದಾದ ಗುಣಾತ್ಮಕ ಸಮಾನ ಎಳೆ ಎಂದರೆ ವಿಘಟಿತವಾದರೂ ತಮ್ಮ ಉದ್ದೇಶಿತ ಗುರಿ ಸಾಧನೆಗಾಗಿ ಸಾಂಘಿಕ ನೆಲೆಯಲ್ಲಿ ರೂಪಿಸಲಾಗುವ ಚಳುವಳಿಗಳ ಮಾದರಿ. ಮತ್ತೊಂದು ಋಣಾತ್ಮಕವಾಗಿ ಇದನ್ನು ಆಂತರಿಕ ವೈರುಧ್ಯಗಳು, ದೂರಗಾಮಿ ನಾಯಕತ್ವದ ಕೊರತೆ, ಬಾಹ್ಯ ಸಮಾಜದ ಐಕಮತ್ಯದ ಕೊರತೆ ಮತ್ತು ಪ್ರಭುತ್ವ-ರಾಜಕೀಯ ಶಕ್ತಿಗಳ ಕುತಂತ್ರಗಳಿಗೆ ಸುಲಭವಾಗಿ ಬಲಿಯಾಗುವ ದೌರ್ಬಲ್ಯಗಳಲ್ಲಿ ಕಾಣಬಹುದು.
ದಿಟ್ಟ ಕ್ರಾಂತಿಕಾರಿ ಹೋರಾಟಗಳ ನಡುವೆಯೂ ಪ್ರಭುತ್ವದ ದಮನಕಾರಿ ನೀತಿ ಮತ್ತು ಕಾರ್ಯಾಚರಣೆಯ ಪರಿಣಾಮವಾಗಿ ರೈತ ಹೋರಾಟಗಳು ಹಿಮ್ಮೆಟ್ಟಿರುವುದನ್ನು ತೆಲಂಗಾಣ-ತೇಭಾಗ ದಿಂದ ಇತ್ತೀಚಿನವರೆಗೂ ಗುರುತಿಸಬಹುದು. ಆದಾಗ್ಯೂ ಈ ರೈತ ಹೋರಾಟಗಳು ಏಳು ದಶಕಗಳ ನಂತರವೂ ಭಾರತದ ವ್ಯವಸಾಯ ಕ್ಷೇತ್ರದ ದುಡಿಯುವ ವರ್ಗಗಳಿಗೆ ಮತ್ತು ಅನ್ನ ಬೆಳೆಯುವ ರೈತರಿಗೆ ಒಂದು ಪರಂಪರೆಯ ತಳಹದಿಯನ್ನು ಒದಗಿಸಿವೆ. ಆದರೆ ಈ ಹೋರಾಟಗಳ ವೈಫಲ್ಯ ಅಥವಾ ಹಿಮ್ಮೆಟ್ಟುವಿಕೆಗೆ ಇದ್ದಿರಬಹುದಾದ ಚಾರಿತ್ರಿಕ-ಸಾಂಘಿಕ ಕಾರಣಗಳನ್ನು ವೈಜ್ಞಾನಿಕ ಮಾದರಿಯಲ್ಲಿ ಗುರುತಿಸಿ, ಈ ದೇಶದ ಬಹುದೊಡ್ಡ ಶ್ರಮಿಕ ವರ್ಗವನ್ನು ಪ್ರತಿನಿಧಿಸುವ ಕೃಷಿ ವಲಯವನ್ನು ಪ್ರಜಾಪ್ರಭುತ್ವೀಯ ಮೌಲ್ಯಗಳ ನೆಲೆಯಲ್ಲಿ ಜನಪರ ಹೋರಾಟಗಳ ಕೇಂದ್ರ ಬಿಂದುವನ್ನಾಗಿ ಮಾಡುವಲ್ಲಿ ನಾವು ಸೋತಿರುವುದು ಸ್ಪಷ್ಟ.
ಈ ವೈಫಲ್ಯದ ಕಾರಣಗಳನ್ನು ರಾಜಕೀಯ ಭಿನ್ನತೆ, ಪ್ರಾದೇಶಿಕ ಭೌಗೋಳಿಕ ಲಕ್ಷಣಗಳು, ಸೈದ್ಧಾಂತಿಕ ನಿಲುವು, ಸಾಂಘಿಕ ಅಸ್ತಿತ್ವ ಮತ್ತು ಅಸ್ಮಿತೆ ಹಾಗೂ ಬಹುಮುಖ್ಯವಾಗಿ ಶ್ರೇಣೀಕೃತ ಜಾತಿ ವ್ಯವಸ್ಥೆಯೊಳಗಿನ ಒಳಬಿರುಕುಗಳ ನಡುವೆ ಗುರುತಿಸಬಹುದು. ರೈತ-ಕೃಷಿಕ-ಬೇಸಾಯಗಾರ ಎಂಬ ಸಮಾನಾರ್ಥದ ಪದವನ್ನು ಒಳಹೊಕ್ಕು ನೋಡಿದಾಗ ಅಲ್ಲಿ ನಮಗೆ ಗೋಚರಿಸುವ ವರ್ಗ ಹಿತಾಸಕ್ತಿ, ಜಾತಿ ಶ್ರೇಣಿಯ ವ್ಯತ್ಯಯಗಳು, ಆರ್ಥಿಕ ಹಿತಾಸಕ್ತಿಗಳು, ಸಾಮಾಜಿಕ ಸ್ಥಾನಮಾನ ಮತ್ತು ರಾಜಕೀಯ ಒಲವು ಇವೆಲ್ಲವೂ ತಡೆಗೋಡೆಗಳಾಗಿ ಕಂಡುಬರುತ್ತವೆ. ಹಾಗಾಗಿ ವಿಶಾಲಾರ್ಥದಲ್ಲಿ ರೈತ ಎಂದರೆ ಅನ್ನದಾತ ಎಂದು ನಿರ್ವಚಿಸಬಹುದಾದರೂ, ಹೋರಾಟಗಳ ನೆಲೆಯಲ್ಲಿ ಇದು ಭೂ ಒಡೆತನ, ಭೂ ರಹಿತ ಸ್ಥಿತಿ, ಮಾರುಕಟ್ಟೆಯ ಸಾಮೀಪ್ಯಗಳ ಚೌಕಟ್ಟುಗಳೊಳಗೆ ಸಿಲುಕಿ ಛಿದ್ರವಾಗುತ್ತದೆ.
ಸಾಂಘಿಕ ಸವಾಲು -ಸಾಂಸ್ಥಿಕ ದೌರ್ಬಲ್ಯ
ಇದಕ್ಕೆ ಪೂರಕವಾದ ಅಧಿಕಾರ ರಾಜಕಾರಣದ ಪ್ರಭಾವ ಮತ್ತು ರಾಜಕೀಯ ಪಕ್ಷ/ಪ್ರತಿನಿಧಿಗಳ ಸ್ವ-ಹಿತಾಸಕ್ತಿಗಳೂ ಸಹ ರೈತ ಸಂಘಟನೆ ಮತ್ತು ಹೋರಾಟಗಳನ್ನು ಪ್ರಭಾವಿಸುತ್ತವೆ. ಐಕಮತ್ಯ ಅಥವಾ ಐಕ್ಯತೆಯನ್ನು ಸಾಧಿಸಲು ಬಹುಮುಖ್ಯವಾಗಿ ಬೇಕಾಗುವ ಗುರಿ ಸಾಧನೆಯ ಇಚ್ಛಾಶಕ್ತಿ ಮತ್ತು ವೃತ್ತಿ ಆಧಾರಿತ ಏಕೀಕರಣದ ಪ್ರಕ್ರಿಯೆಗಳಿಗೆ ರಾಜಕೀಯ ಶಕ್ತಿಗಳೇ ಬಹುದೊಡ್ಡ ತೊಡಕಾಗುವುದನ್ನು ಚರಿತ್ರೆಯುದ್ದಕ್ಕೂ ಗುರುತಿಸಬಹುದು. ಕಾರ್ಮಿಕ ಚಳುವಳಿಗಳ ಹಾಗೆಯೇ ರೈತ ಹೋರಾಟಗಳೂ ಸಹ ಈ ಪ್ರಭಾವಕ್ಕೊಳಗಾಗುವುದು ಸಹಜ. ರೈತ ಹೋರಾಟಗಳ ಐಕ್ಯತೆಯ ನೆಲೆಯಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ ಭೂ ಹೀನ-ಭೂ ವಂಚಿತ ರೈತರಿಗೂ, ಅಲ್ಪಸ್ವಲ್ಪ ಭೂಮಿ ಹೊಂದಿರುವ ರೈತರಿಗೂ ನಡುವೆ ಇರುವ ಸಾಮಾಜಿಕ ಸ್ಥಾನಮಾನ-ಆರ್ಥಿಕ ಸ್ಥಿತಿಗತಿಗಳ ವ್ಯತ್ಯಯಗಳು. ಭೂಮಿಯನ್ನು ಹೊಂದಿರುವ ರೈತಾಪಿ ಸಮುದಾಯವನ್ನೂ ನೀರಾವರಿ ಮತ್ತು ಒಣಬೇಸಾಯಗಾರರ ನಡುವಿನ ಅಂತರ ಪ್ರತ್ಯೇಕಿಸುವುದನ್ನು ಸ್ಪಷ್ಟವಾಗಿ ಗುರುತಿಸಬಹುದು.

ನೀರಾವರಿ ಸೌಲಭ್ಯ ಹೊಂದಿರುವ ಕೃಷಿಕರು ಹಾಗೂ ವಾಣಿಜ್ಯ ಬೆಳೆಗಾರರು ರೈತ ಸಮಾಜದ ಮೇಲ್ಪದರದ ವರ್ಗವನ್ನು ಪ್ರತಿನಿಧಿಸುತ್ತಾರೆ. ಈ ಸಮಾಜದ ಬೇಕು ಬೇಡಗಳು, ಬೇಡಿಕೆಗಳು ಹಾಗೂ ಹಕ್ಕೊತ್ತಾಯಗಳು ಮೂಲತಃ ಉತ್ತಮ ಬೆಂಬಲ ಬೆಲೆ, ಮಾರುಕಟ್ಟೆ ಸೌಲಭ್ಯ, ಫಸಲು ಸಂಗ್ರಹದ ಸವಲತ್ತುಗಳು ಹಾಗೂ ವಿತರಣೆಯ ಸುತ್ತ ಕಂಡುಬರುತ್ತವೆ. ಇದು ಭಾರತದುದ್ದಕ್ಕೂ ಗುರುತಿಸಬಹುದಾದ ಒಂದು ಪ್ರಧಾನ ವ್ಯತ್ಯಾಸ. ಸಣ್ಣ ಮತ್ತು ಮಧ್ಯಮ ರೈತರಲ್ಲೂ ಸಹ ಈ ವರ್ಗ ಹಿತಾಸಕ್ತಿಗಳನ್ನೇ ಪ್ರತಿನಿಧಿಸುವವರನ್ನು ಗುರುತಿಸಬಹುದು. ಮತ್ತೊಂದೆಡೆ ಮಳೆ ಆಧಾರಿತ ಕೃಷಿಯನ್ನು ಅವಲಂಬಿಸುವ ರೈತ ಸಮುದಾಯಗಳು ತಮ್ಮ ಅಲ್ಪ ಪ್ರಮಾಣದ ಭೂಮಿಯನ್ನೇ ನಂಬಿ ಜೀವನೋಪಾಯಗಳನ್ನು ಕಂಡುಕೊಳ್ಳುತ್ತವೆ. ಇವರ ಪೈಕಿ ಸಣ್ಣ ಮತ್ತು ಅತಿ ಸಣ್ಣ ರೈತರು ಮಳೆ ಇಲ್ಲದ ಸಮಯದಲ್ಲಿ ಅನ್ಯ ದುಡಿಮೆಗಳನ್ನು ಅವಲಂಬಿಸುವುದು ಅನಿವಾರ್ಯವಾಗಿರುತ್ತದೆ. ಕೆಲವೊಮ್ಮೆ ನಗರಗಳಲ್ಲಿ ವಲಸೆ ಕಾರ್ಮಿಕರಾಗಿ ದುಡಿಯುವ ಸಂದರ್ಭಗಳೂ ಎದುರಾಗುತ್ತವೆ.
ʼ ರೈತ ʼ ಅಥವಾ ʼ ಕೃಷಿಕ ʼ ಎಂಬ ವಿಶಾಲಾರ್ಥದ ವರ್ಗವು ಒಳಗೊಳ್ಳುವ ಕೃಷಿ ಕಾರ್ಮಿಕರು, ಗುತ್ತಿಗೆ ಬೇಸಾಯಗಾರರು ಮತ್ತು ಇಂದಿಗೂ ಕೆಲವು ಪ್ರದೇಶಗಳಲ್ಲಾದರೂ ಜೀತಕ್ಕೆ ಭೂ ಮಾಲೀಕರ ಜಮೀನುಗಳಲ್ಲಿ ಕೃಷಿ ಮಾಡುವವರು ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಡಪಕ್ಷಗಳನ್ನು ಹೊರತುಪಡಿಸಿ, ಈ ಆರ್ಥಿಕವಾಗಿ ಕೆಳವರ್ಗಕ್ಕೆ ಸೇರುವ ʼ ಕೃಷಿ ಕಾರ್ಮಿಕ ʼರನ್ನು ಸಂಘಟಿಸುವ ಜವಾಬ್ದಾರಿಯನ್ನು ಮುಖ್ಯವಾಹಿನಿಯ ರೈತ ಸಂಘಟನೆಗಳು ಗಂಭೀರವಾಗಿ ಪರಿಗಣಿಸುವುದಿಲ್ಲ. ಇಲ್ಲಿ ಎದ್ದುಕಾಣುವ ವರ್ಗ ಹಿತಾಸಕ್ತಿಗಳು ಮತ್ತು ಅಂತರ್ ವರ್ಗೀಯ ವೈರುಧ್ಯಗಳನ್ನು ಸಮತೋಲನಗೊಳಿಸುವ ಪ್ರಯತ್ನಗಳು ಸಂಘಟನಾತ್ಮಕ ಚೌಕಟ್ಟಿನಲ್ಲಿ ನಡೆದಿಲ್ಲ ಎಂದೇ ಹೇಳಬಹುದು. ವರ್ಷದ ಕನಿಷ್ಠ ಆರು ತಿಂಗಳಲ್ಲಾದರೂ, ನಗರಗಳ ವಲಸೆ ಕಾರ್ಮಿಕರಾಗಿ ದುಡಿಯುವ ಕೃಷಿ ಕಾರ್ಮಿಕ ವರ್ಗ ನವ ಭಾರತದ ಅತ್ಯಂತ ನಿರ್ಲಕ್ಷಿತ ಶ್ರಮಿಕ ವರ್ಗ ಎನ್ನುವುದು ಸ್ಪಷ್ಟ.

ಐಕ್ಯತೆ-ಐಕಮತ್ಯದ ಸವಾಲುಗಳು
ʼ ರೈತರ ಐಕ್ಯತೆ ʼ ಎಂಬ ಪ್ರಶ್ನೆಯನ್ನು ಮುಂದಿಟ್ಟು ಈ ಪದಗಳನ್ನು ಬಿಡಿಸಿ ನೋಡಿದಾಗ ನಮಗೆ ಅಲ್ಲಿ ಭೂಮಿ ಇರುವ ರೈತರನ್ನು ಹೊರತುಪಡಿಸಿ, ಕೃಷಿ, ಕೃಷಿಯೇತರ, ಕರಕುಶಲ, ವಲಸೆಗಾರ ಕಾರ್ಮಿಕ ವರ್ಗವನ್ನು ಪ್ರತಿನಿಧಿಸುವ ಬಹುದೊಡ್ಡ ಜನಸಂಖ್ಯೆಯೂ ಕಾಣುತ್ತದೆ. ಬಹುಮಟ್ಟಿಗೆ ನಗರ ಪ್ರದೇಶಗಳಂತೆಯೇ ಗ್ರಾಮೀಣ ಭಾಗಗಳಲ್ಲೂ ಸಹ ಈ ಸಮೂಹವನ್ನು ʼ ಅಸಂಘಟಿತ ʼ ಎಂದೇ ವರ್ಗೀಕರಿಸಬಹುದು. ಸ್ವತಂತ್ರ ಭಾರತದ ಎಂಟು ದಶಕಗಳ ಆಳ್ವಿಕೆಯಲ್ಲಿ ಹಲವು ಆಯಾಮಗಳ ʼ ಕೃಷಿ ನೀತಿ ʼಗಳನ್ನು ಸರ್ಕಾರಗಳು ಜಾರಿಗೊಳಿಸಿ, ಅನುಸರಿಸುತ್ತಾ ಬಂದಿವೆ. ಆದರೆ ಯಾವುದೇ ಸರ್ಕಾರವೂ ಸಹ ʼ ಕೃಷಿ ಕಾರ್ಮಿಕ ನೀತಿ ʼಯೊಂದನ್ನು ರೂಪಿಸಿರುವ ನಿದರ್ಶನಗಳು ಕಾಣುವುದಿಲ್ಲ. ಈ ರೀತಿಯ ಬೇಡಿಕೆಯೂ ಸಹ ಸಾಂಘಿಕ ನೆಲೆಯಲ್ಲಿ ಪ್ರಖರವಾಗಿ ವ್ಯಕ್ತವಾಗಿಲ್ಲ.
ಅಲ್ಪ ಸ್ವಲ್ಪ ಭೂಮಿ ಹೊಂದಿರುವ ರೈತ ವರ್ಗವು ಕಾಲಕಾಲಕ್ಕೆ ಎದುರಿಸುವ ಸಮಸ್ಯೆಗಳಿಗೂ, ಭೂ ಹೀನ, ಭೂ ರಹಿತ ಬೇಸಾಯಗಾರರು ಎದುರುಗಾಣುವ ಸಮಸ್ಯೆಗಳಿಗೂ ನಡುವೆ ಇರುವ ಅಪಾರ ವ್ಯತ್ಯಾಸವನ್ನು ಗುರುತಿಸಬೇಕಿದೆ. ಮೊದಲನೆಯ ವರ್ಗವನ್ನು ಸರ್ಕಾರದ ಬೆಂಬಲ ಬೆಲೆ ನೀತಿ, ಸಾಲ ಸೌಲಭ್ಯಗಳು, ಜಲ ಸಂಪನ್ಮೂಲಗಳ ಕೊರತೆ, ಮಾರುಕಟ್ಟೆ ವಿತರಣೆ ಮತ್ತು ಮಾರುಕಟ್ಟೆ ದಲ್ಲಾಳಿಗಳ ಉಪಟಳ ಮುಖ್ಯವಾಗಿ ಕಾಡುತ್ತದೆ. ಆದರೆ ಎರಡನೆ ವರ್ಗದ ಕೃಷಿ ಆಧಾರಿತ ಜನಸಂಖ್ಯೆಗೆ ಜೀವನ-ಜೀವನೋಪಾಯದ ಮಾರ್ಗಗಳೇ ಸವಾಲಾಗಿ ಪರಿಣಮಿಸುತ್ತವೆ. ಇಲ್ಲಿ ವೈಯುಕ್ತಿಕ ಹಾಗೂ ಕೌಟುಂಬಿಕ ಭವಿಷ್ಯದ ಪ್ರಶ್ನೆಗಳು ಪ್ರಧಾನವಾಗುತ್ತವೆ. ಈ ವರ್ಗವನ್ನು ವಿಶಾಲಾರ್ಥದ ʼ ಕಾರ್ಮಿಕ ವರ್ಗ ʼದ ಚೌಕಟ್ಟಿನಲ್ಲಿ ಪರಿಗಣಿಸಿ, ಸಂಘಟಿತ ಕಾರ್ಮಿಕ ವರ್ಗಗಳು ಸಾಂಘಿಕವಾಗಿಯಾಗಲಿ , ಸಾಂಸ್ಥಿಕವಾಗಿಯಾಗಲಿ ಪ್ರತಿನಿಧಿಸುವ ಒಂದು ಮಾದರಿಯನ್ನು ನಾವು ಅನುಸರಿಸುತ್ತಿಲ್ಲ.
ʼ ಶ್ರಮ ಜೀವಿಗಳ ಐಕ್ಯತೆ ಚಿರಾಯುವಾಗಲಿ ʼ ಎಂಬ ಮೇ ದಿನದ ಉದ್ಘೋಷವನ್ನು ಛೇದಿಸಿ ನೋಡಿದಾಗ, ಮೇ ದಿನದ ಆಚರಣೆಗಳಲ್ಲಿ, ಆಗ ನಡೆಯುವ ವಿಚಾರ ಸಂಕಿರಣಗಳಲ್ಲಿ, ಸಾರ್ವಜನಿಕ ಮೆರವಣಿಗೆ – ಸಂವಾದಗಳಲ್ಲಿ, ʼ ರೈತ ಕಾರ್ಮಿಕ ʼರನ್ನು ಒಳಗೊಳ್ಳುವುದು ಅಪರೂಪದ ವಿದ್ಯಮಾನ. ಬಹುಮುಖ್ಯವಾಗಿ ವಿಚಾರ ಗೋಷ್ಠಿಗಳಲ್ಲಿ ಸರ್ಕಾರಗಳ ಕಾರ್ಮಿಕ ನೀತಿ ಸಂಹಿತೆಗಳನ್ನು ಚರ್ಚಿಸುವಾಗ, ವೇತನ ಆಧಾರಿತ ದುಡಿಯುವ ವರ್ಗಗಳನ್ನು ಮಾತ್ರವೇ ಪ್ರಧಾನವಾಗಿ ಪ್ರತಿನಿಧಿಸುವುದನ್ನು ಗುರುತಿಸಬಹುದು. ʼ ಕೃಷಿ ಕಾರ್ಮಿಕ ನೀತಿ ʼ ಎನ್ನುವುದೇ ಇಲ್ಲವಾಗಿರುವುದರಿಂದ ಇದು ವಿದ್ವತ್ ವಲಯದ ಅಥವಾ ಬೌದ್ಧಿಕ-ಶೈಕ್ಷಣಿಕ ವಲಯದ ಸಂವಾದಗಳಲ್ಲಿ ಪ್ರಧಾನವಾಗಿ ಬಿಂಬಿಸಲ್ಪಡುವುದಿಲ್ಲ. ಈ ನ್ಯೂನತೆಯನ್ನು ಎಡಪಂಥೀಯ ಚಳುವಳಿಗಳ ನಡುವೆಯೂ ಗುರುತಿಸಬಹುದು. ಇದಕ್ಕೆ ವೈಟ್ ಕಾಲರ್ ನೌಕರಿ ಅಥವಾ ಮೇಲ್ಮಟ್ಟದ-ಮೇಲ್ಪದರದ (Upper Elite) ನೌಕರಿಯ ಸಾಮಾಜಿಕ ಅಂತಸ್ತು ಸಹ ಕಾರಣವಿರಬಹುದು.
ಕಾರ್ಪೋರೇಟ್ ಮಾರುಕಟ್ಟೆಯ ಸವಾಲು
ಇದೇ ವ್ಯತ್ಯಯವನ್ನು ಮತ್ತೊಂದು ಮಗ್ಗುಲಿನಲ್ಲಿ ನೋಡಿದಾಗ, ನವ ಉದಾರವಾದಿ ಡಿಜಿಟಲ್ ಬಂಡವಾಳಶಾಹಿ ಆರ್ಥಿಕತೆಯಲ್ಲಿ ನಮಗೆ ಮೂಲ ಸೌಕರ್ಯಗಳ ನಿರ್ಮಾಣಗಳ ಚೌಕಟ್ಟಿನಲ್ಲಿ ವಿಶಾಲಾರ್ಥದ ʼರೈತ ಅಥವಾ ಕೃಷಿಕ ʼ ಸಮುದಾಯದ ಜಟಿಲ ಸಮಸ್ಯೆಗಳು ಎದುರಾಗುತ್ತವೆ. ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆಯಲ್ಲಿ ಪ್ರಧಾನವಾಗಿ ಅವಲಂಬಿಸುವ ಮೂಲ ಸೌಕರ್ಯಾಭಿವೃದ್ಧಿಯ ನೆಲೆಯಲ್ಲಿ ವಿಶಾಲ ರಸ್ತೆಗಳು, ಸೂಪರ್ ಎಕ್ಸ್ಪ್ರೆಸ್ವೇ ಎನ್ನಲಾಗುವ ಚತುಷ್ಪಥ-ಷಟ್ಪಥ-ಅಷ್ಟಪಥ-ದಶಪಥ ಹೆದ್ದಾರಿಗಳು, ನಗರಗಳ ಒಳಗೆ ಮತ್ತು ಹೊರವಲಯದಲ್ಲಿನ ಮೇಲ್ಸೇತುವೆ, ವರ್ತುಲ ರಸ್ತೆಗಳು, ಮೆಟ್ರೋ ಮತ್ತಿತರ ಸಾರಿಗೆ ಮಾರ್ಗಗಳು ಇವೆಲ್ಲವೂ ಸಹ ಕೃಷಿ ಭೂಮಿಯನ್ನು ಆವರಿಸಿಕೊಂಡೇ ನಿರ್ಮಿತವಾಗುತ್ತವೆ. ಇದಕ್ಕೆ ಪೂರಕವಾಗಿ ಬೆಳೆಯುವ ಔದ್ಯಮಿಕ-ಔದ್ಯೋಗಿಕ ಮಾರುಕಟ್ಟೆಯು ರಿಯಲ್ ಎಸ್ಟೇಟ್ ಮತ್ತು ತಂತ್ರಜ್ಞಾನ ಆಧಾರಿತ ಕೈಗಾರಿಕೋದ್ಯಮದ ವಿಸ್ತರಣೆಯನ್ನೂ ಪರಿಗಣಿಸಬೇಕಾಗುತ್ತದೆ.

ಈ ಮೂಲ ಸೌಕರ್ಯಗಳ ನಿರ್ಮಾಣದಿಂದ, ಕೈಗಾರಿಕೋದ್ಯಮ-ವಾಣಿಜ್ಯೋದ್ಯಮದ ವಿಸ್ತರಣೆಯಿಂದ ಸ್ವಾಧೀನಕ್ಕೊಳಪಟ್ಟ ಕೃಷಿ ಭೂಮಿಯ ಪ್ರಮಾಣ ಮತ್ತು ಸಾವಿರಾರು ಕಿಲೋಮೀಟರ್ ವಿಸ್ತೀರ್ಣದ ಹೆದ್ದಾರಿಗಳ ಎರಡೂ ಬದಿಗಳಲ್ಲಿ ಅತ್ಯಾಧುನಿಕ ನವ ಬಡಾವಣೆಗಳಿಗೆ ಬಲಿಯಾಗಿರುವ ಸಣ್ಣಪುಟ್ಟ ಗ್ರಾಮಗಳ ಸಂಖ್ಯೆ, ಇದರ ಫಲವಾಗಿ ನಗರೀಕರಣಕ್ಕೊಳಗಾಗಿ ತಮ್ಮ ಮೂಲ ನೆಲವನ್ನಷ್ಟೇ ಅಲ್ಲದೆ, ನೆಲದ ಸಾಮಾಜಿಕ ಚೌಕಟ್ಟು ಮತ್ತು ಸಾಂಸ್ಕೃತಿಕ ಭೂಮಿಕೆಗಳನ್ನೂ ಕಳೆದುಕೊಂಡಿರುವ ಗ್ರಾಮೀಣ ರೈತರ ಪ್ರಮಾಣ, ಆಧುನಿಕ ಮಾರುಕಟ್ಟೆ ಆರ್ಥಿಕತೆಯ ಪರಿಣಾಮವಾಗಿ ತಮ್ಮ ಮೂಲ ಕೃಷಿ-ಕೃಷಿಯಾಧಾರಿತ ಕಸುಬು ಕಳೆದುಕೊಂಡು, ನಗರೀಕರಣಕ್ಕೊಳಗಾಗಿ ನಗರ ಕೆಂದ್ರಿತ ನಿರ್ಮಾಣ ಕಾರ್ಮಿಕರಾಗಿ ಪರಿವರ್ತನೆ ಹೊಂದಿರುವ ರೈತರ ಸಂಖ್ಯೆ ಹಾಗೂ ಈ ರೈತ-ಕೃಷಿಕ ಕುಟುಂಬಗಳು ರೂಪಾಂತರಗೊಂಡು ತಮ್ಮ ಜೀವನೋಪಾಯದ ಹೊಸ ಮಾರ್ಗಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳು, ಇವೆಲ್ಲವೂ ಗಂಭೀರ ಸಂಶೋಧನೆಗೊಳಗಾಗಬೇಕಾದ ವಿದ್ಯಮಾನಗಳು.
ಇದಕ್ಕಿಂತಲೂ ಮುಖ್ಯವಾದುದೆಂದರೆ, ಈ ಮೂಲ ಸೌಕರ್ಯ-ಕೈಗಾರಿಕಾ ಅಭಿವೃದ್ಧಿಯ ಹಾದಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯಿಂದ ಇರುವ ಭೂಮಿಯನ್ನೂ ಕಳೆದುಕೊಳ್ಳುವ ರೈತರಿಗೆ ಸರ್ಕಾರಗಳು ಪರಿಹಾರಧನವನ್ನು ಘೋಷಿಸುತ್ತವೆ. ಈ ರೈತರನ್ನು ಪ್ರತಿನಿಧಿಸುವ ಸಂಘಟನೆಗಳು ಪ್ರಬಲವಾಗಿರುವ ಕಾರಣ ಹೆಚ್ಚಿನ ಪರಿಹಾರವನ್ನು ಜೊತೆಗೆ ಪರ್ಯಾಯ ನಿವೇಶನಗಳನ್ನು ಪಡೆಯುವ ಸಾಧ್ಯತೆಗಳೂ ಇರುತ್ತವೆ. ರಿಯಲ್ ಎಸ್ಟೇಟ್ ಮತ್ತು ವಸತಿ ಬಡಾವಣೆಗಳಿಗಾಗಿ ಭೂಮಿಯನ್ನು ಕಳೆದುಕೊಳ್ಳುವ ರೈತರಿಗೆ ವಸತಿ ನಿವೇಶನಗಳನ್ನು ಸಹ ನೀಡುವುದು ವಾಡಿಕೆ. ಈ ರೈತ ಸಮುದಾಯ ತಾವು ಪಡೆದ ಪರಿಹಾರ ಧನವನ್ನು ಭವಿಷ್ಯದ ಬದುಕಿಗೆ ಪೂರಕವಾಗಿ ಉಳಿತಾಯ ಮಾಡುವ, ಹೂಡಿಕೆ ಮಾಡುವ ಮತ್ತು ವ್ಯಯ ಮಾಡುವ ಮಾರ್ಗಗಳು ವಿಭಿನ್ನವಾಗಿದ್ದು, ಅಸಂಖ್ಯಾತ ರೈತರು ಎಲ್ಲವನ್ನೂ ಕಳೆದುಕೊಂಡು, ನಗರಗಳಲ್ಲಿ ಕಡಿಮೆ ವೇತನದ ವಲಸೆ ಕಾರ್ಮಿಕರಾಗಿ ಪರ್ಯವಸಾನ ಹೊಂದುವ ಸನ್ನಿವೇಶಗಳನ್ನು ನೋಡುತ್ತಲೇ ಇದ್ದೇವೆ. ಆದರೆ ಇಂತಹ ನಿರ್ವಸತಿಕರಾದ, ನಿರ್ಗತಿಕರಾದ, ಪರಾವಲಂಬಿ ದುಡಿಮೆಯ ಶ್ರಮಜೀವಿಗಳಾಗಿ (Proletarian ) ಪರಿವರ್ತನೆಗೊಳಗಾದ ರೈತರ ಸಂಖ್ಯೆಯ ಬಗ್ಗೆ ನಿಖರವಾದ ಮಾಹಿತಿ/ದತ್ತಾಂಶಗಳು ದೊರೆಯುವುದು ದುಸ್ತರ.

ಏಕೆಂದರೆ ಈ ನಿಟ್ಟಿನಲ್ಲಿ ಶೈಕ್ಷಣಿಕ ಕೇಂದ್ರಗಳು, ವಿಶ್ವವಿದ್ಯಾಲಯಗಳು, ಕಾರ್ಮಿಕ/ರೈತ ಸಂಘಟನೆಗಳು ಯಾವುದೇ ರೀತಿಯ ಗಂಭೀರ ಸಂಶೋಧನೆಯನ್ನು ಕೈಗೊಂಡಿಲ್ಲ. ಇದಕ್ಕೆ ಕೇವಲ ಆರ್ಥಿಕ-ಮಾನವ ಸಂಪನ್ಮೂಲಗಳ ಕೊರತೆಗಿಂತಲೂ, ಇಚ್ಛಾಶಕ್ತಿಯ ಕೊರತೆಯೇ ಹೆಚ್ಚು ಎನ್ನುವುದು ಕಟುಸತ್ಯ. ಇನ್ನೂ ದುರಂತ ಎಂದರೆ, ಈ ಅಭಿವೃದ್ಧಿ ಆರ್ಥಿಕತೆಯಲ್ಲಿ ತಮ್ಮ ಮೂಲ ದುಡಿಮೆಯ ಬುನಾದಿಯನ್ನೇ ಶಾಶ್ವತವಾಗಿ ಕಳೆದುಕೊಳ್ಳುವ ʼಕೃಷಿ ಕಾರ್ಮಿಕರು ʼ ಹಾಗೂ ಗ್ರಾಮೀಣ ಕುಶಲಕರ್ಮಿ-ಗುಡಿ ಕೈಗಾರಿಕೆಗಳನ್ನು ಅವಲಂಬಿಸಿರುವ ಶ್ರಮಿಕ ವರ್ಗ , ಕೃಷಿ ಕೂಲಿಯನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ಲಕ್ಷಾಂತರ ಕಾರ್ಮಿಕ ಕುಟುಂಬಗಳು, ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಯಾವುದೇ ಆರ್ಥಿಕ ಪರಿಹಾರವನ್ನು ಪಡೆಯುವುದಿಲ್ಲ. ತಾವು ಕಳೆದುಕೊಳ್ಳುವ ಭೂಮಿಗೆ ಪರಿಹಾರ ಪಡೆಯುವ ರೈತ ಸಮುದಾಯಗಳು, ತಮ್ಮೊಂದಿಗೇ ಇದ್ದು ಜೀವನೋಪಾಯದ ಮಾರ್ಗವನ್ನೇ ಕಳೆದುಕೊಳ್ಳುವ ಕೃಷಿ ಕಾರ್ಮಿಕರ ಭವಿಷ್ಯದ ಬಗ್ಗೆ ಯೋಚನೆ ಮಾಡುತ್ತವೆಯೇ ?
ಮುಂದುವರೆಯುತ್ತದೆ ,,,,,