
ಲಕ್ನೋ, ತನ್ನ ನೆರೆಹೊರೆಯವರು ಸುಳ್ಳು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದರಿಂದ ಇಂಜಿನಿಯರ ಒಬ್ಬ ತನ್ನ ಜೀವವನ್ನೆ ಕೊನೆಗೊಳಿಸಿರುವ ಘಟನೆ ಲಕ್ನೋದ ರಹೀಮಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತನ ತಂದೆ ನೆರೆಹೊರೆಯವರ ವಿರುದ್ಧ ದೂರು ದಾಖಲಿಸಿದ್ದು, ಅವರ ಕಿರುಕುಳದಿಂದ ತನ್ನ ಮಗನನ್ನು ಆತ್ಮಹತ್ಯೆ ಮಾಡಿಕೊಳ್ಳಲು ನೆರೆಹೊರೆಯವರು ಪ್ರಚೋದಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಎಂಟು ಜನರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಮೃತರನ್ನು ಪ್ರದೇಶದ ಗೋಸ್ವಾ ಗ್ರಾಮದ ವೈಭವ್ ಅವಸ್ತಿ (28) ಎಂದು ಗುರುತಿಸಲಾಗಿದ್ದು ಇವರು ಬ್ರಾಡ್ಬ್ಯಾಂಡ್ ಇಂಟರ್ನೆಟ್ ಎಂಜಿನಿಯರ್ ಆಗಿದ್ದರು. ಅವರ ತಂದೆ ಸಮೀರ್ ಬಾಬು ಅವರ ಪ್ರಕಾರ, ಅವರು ತಮ್ಮ ನೆರೆಹೊರೆಯವರಾದ ಸುನೀಲ್ ಅವಸ್ತಿ ಅವರೊಂದಿಗೆ ಹಳೆಯ ದ್ವೇಷವನ್ನು ಹೊಂದಿದ್ದರು. ಕಳೆದ ಭಾನುವಾರ ಸುನಿಲ್ ಮತ್ತು ಆತನ ಕುಟುಂಬ ಸದಸ್ಯರಾದ ಪಪ್ಪು, ಗಪ್ಪು, ಮನೋಜ್, ಅಟಲ್, ರಾಧಾ, ದೀಪಾಲಿ ಮತ್ತು ಗುಡ್ಡನ್ ಎಂಬುವರು ಹರಿತವಾದ ಆಯುಧಗಳನ್ನು ಹಿಡಿದು ಮೃತರ ಮನೆಗೆ ನುಗ್ಗಿದ್ದರು.

ಆರೋಪಿಗಳು ನಮ್ಮನ್ನು ನಿಂದಿಸಿದ್ದಾರೆ ಮತ್ತು ಮನೆಯ ಮೇಲೆ ಕಲ್ಲು ತೂರಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ. ತಮ್ಮ ಮನೆಯ ಮೇಲೆ ಧಾಳಿ ನಡೆಸಿ ಅವರ ಮೇಲೆ ಹಲ್ಲೆ ನಡೆಸಿದ್ದನ್ನು ವಿರೋಧಿಸಿ ಅವರ ಪುತ್ರ ವೈಭವ್ ವಿರೋಧಿಸಿದ್ದರು ಎನ್ನಲಾಗಿದೆ. “ಆರೋಪಿಗಳು ವೈಭವ್ ಮೇಲೆ ದಾಳಿ ಮಾಡಿದರು, ಆಗ ವೈಭವ್ ಸ್ಥಳದಿಂದ ಓಡಿಹೋದರು ಆದರೆ ಧಾಳಿಕೋರರು ಅವರ ಬೆನ್ನಟ್ಟಿದರು. ಹೇಗೋ ನನ್ನ ಮಗ ಮತ್ತೊಬ್ಬರ ಮನೆಗೆ ನುಗ್ಗಿ ಪ್ರಾಣ ಉಳಿಸಿಕೊಂಡ’ ಎಂದು ಸಮೀರ್ ಹೇಳಿದರು. ಇಡೀ ಕುಟುಂಬ ಸೋಮವಾರ ತೋಟಕ್ಕೆ ಹೋಗಿತ್ತು ,ಮನೆಯಲ್ಲಿ ವೈಭವ್ ಒಬ್ಬರೇ ಇದ್ದರು. ನಾನು ಮನೆಗೆ ತಲುಪಿದಾಗ, ಕೋಣೆಯಲ್ಲಿ ಫ್ಯಾನ್ನ ಕೊಕ್ಕೆಗೆ ಹಗ್ಗದಿಂದ ವೈಭವ್ನ ಶವ ನೇತಾಡುತ್ತಿರುವುದು ಕಂಡು ಆಘಾತವಾಯಿತು, ”ಎಂದು ಅವರು ಹೇಳಿದರು.
ಗ್ರಾಮದ ಮುಖಂಡರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ರಹೀಮಾಬಾದ್ನ ಠಾಣಾಧಿಕಾರಿ ಅನುಭವ್ ಸಿಂಗ್ ತಿಳಿಸಿದ್ದಾರೆ.






