ಕಾರ್ಖಾನೆಯ ಮಿಷನ್ ಗೆ ಬಲಿಯಾದ ಕಾರ್ಮಿಕನ ಎಡಗೈ; ಬೀದಿಗೆ ಬಿದ್ದ ಕಾರ್ಮಿಕನ ಕುಟುಂಬ.!
![](https://pratidhvani.com/wp-content/uploads/2024/06/IMG-20240607-WA00011-1024x576.jpg)
ಮನೆಯಲ್ಲಿ ಕಡು ಬಡತನ, ಹೆತ್ತ ತಂದೆ ತಾಯಿ ಮತ್ತು ಪತ್ನಿ ಮಕ್ಕಳನ್ನು ಸಾಕಿ ಸಲುಹುವ ಸಲುವಾಗಿ ನಂಜನಗೂಡು ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದಕ್ಕೆ ಕೆಲಸಕ್ಕೆಂದು ತೆರಳಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ತನ್ನ ಎಡಗೈಯನ್ನು ಸಂಪೂರ್ಣವಾಗಿ ಕಳೆದುಕೊಂಡ ಕಾರ್ಖಾನೆಯ ಕಾರ್ಮಿಕನ ಕುಟುಂಬ ಈಗ ಬೀದಿಗೆ ಬಿದ್ದಿದೆ.
ನಂಜನಗೂಡು ನಗರದ ಕೈಗಾರಿಕಾ ಪ್ರದೇಶದಲ್ಲಿರುವ ರಾಜ್ ಶೀಲ್ ಪೇಪರ್ ಕಾರ್ಖಾನೆಯಲ್ಲಿ ಬರೋಬ್ಬರಿ 11 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಮಿಷಿನ್ ಆಪರೇಟರ್ ಆಗಿ ನಂಜನಗೂಡು ತಾಲ್ಲೂಕಿನ ಹೊಸಕೋಟೆ (ಮಸಗೆ) ಗ್ರಾಮದ ಕಾರ್ಮಿಕ ಅಂದಾನಿ ಎಂಬಾತ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಎಡಗೈ ಮಿಷಿನ್ಗೆ ಸಿಲುಕಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕೂಡಲೇ ಘಟನೆ ನಡೆದ ತಕ್ಷಣ ಸಮೀಪದಲ್ಲಿದ್ದ ಸಹೋದ್ಯೋಗಿ ಕಾರ್ಮಿಕರು ಮತ್ತು ಕಾರ್ಖಾನೆಯ ನೌಕರರು ಮೈಸೂರಿನ ಅಪೋಲೋ ಖಾಸಗಿ ಆಸ್ಪತ್ರೆಗೆತುರ್ತು ಚಿಕಿತ್ಸೆಗೆ ದಾಖಲು ಮಾಡಿದವರು ಮುಂದೆ ನನ್ನ ಕಷ್ಟಕ್ಕೆ ಸ್ಪಂದಿಸದೇ ನಾಪತ್ತೆಯಾಗಿದ್ದಾರೆ ಎಂದು ಕೈ ಕಳೆದುಕೊಂಡಿರುವ ಕಾರ್ಮಿಕ ಅಂದಾನಿ ಅಳಲು ತೋಡಿಕೊಂಡಿದ್ದಾನೆ.
ರಾಜ್ ಶೀಲ್ ಕಾರ್ಖಾನೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಹೌಸ್ ಕೀಪಿಂಗ್ ಕೆಲಸಕ್ಕೆ ಸೇರಿಕೊಂಡೆ ನಂತರ ಕಾರ್ಖಾನೆಯ ವ್ಯವಸ್ಥಾಪಕರಾದ ಟಾಮಿ, ಎಚ್ ಆರ್ ಮನು ಎಂಬುವರು ನೀನು ಸಾಕಷ್ಟು ವರ್ಷಗಳಿಂದ ಕಾರ್ಖಾನೆಯಲ್ಲಿ ಸೀನಿಯರ್ ಕಾರ್ಮಿಕನಾಗಿದ್ದೀಯ ಹಾಗಾಗಿ ನೀನು ಮಿಷಿನ್ ಆಪರೇಟರ್ ಆಗಿ ಕೆಲಸವನ್ನು ಮಾಡಬೇಕು ಎಂದು ತಾಕೀತು ಮಾಡಿದರು. ನಾನು ಅದನ್ನು ತಿರಸ್ಕಾರ ಮಾಡಿದರೆ ಕಾರ್ಖಾನೆಯಿಂದ ಹೊರ ದಬ್ಬುತ್ತೇವೆ ಎಂದು ಬೆದರಿಸಿದ ಬಳಿಕ ನಾನು ಕೆಲ ವರ್ಷಗಳ ಕಾಲ ಮಿಷಿನ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದೆ. ನನಗೆ ಯಾವ ರೀತಿಯ ತರಬೇತಿ ನೀಡದ ಕಾರಣ ಇಂದು ನನ್ನ ದುಡಿಯುವ ಕೈಯನ್ನೇ ಕಳೆದುಕೊಂಡಿದ್ದೇನೆ, ಇದಕ್ಕೆ ಮೂಲ ಕಾರಣ ಕಾರ್ಖಾನೆಯ ವ್ಯವಸ್ಥಾಪಕ ಟಾಮಿ ಮತ್ತು ಎಚ್ ಆರ್ ಮನು, ಮಾಲೀಕ ಜೆಮ್ಸ್ ಮೂಲಯಲ್, ಸೂಪರ್ವೈಸರ್ ಶ್ರೀನಿವಾಸ್ ಎಂಬುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಂಜನಗೂಡು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಾರ್ಮಿಕ ಇಲಾಖೆ ಮತ್ತು ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಬೀದಿಗೆ ಬಿದ್ದಿರುವ ಕುಟುಂಬಕ್ಕೆ ಆಸರೆಯಾಗಿ, ಕಾರ್ಖಾನೆಯ ಮಾಲೀಕರ ವಿರುದ್ಧ ಕ್ರಮ ಕೈಗೊಂಡು ಪರಿಹಾರ ಮತ್ತು ನ್ಯಾಯ ಕಲ್ಪಿಸಿ ಕೊಡಬೇಕೆಂದು ನೊಂದ ಕಾರ್ಮಿಕ ಮನವಿ ಮಾಡಿದ್ದಾನೆ.