
ಮಂಡ್ಯ; ಹೊರ ರಾಜ್ಯಗಳಿಂದ ಮಂಡ್ಯ ಜಿಲ್ಲೆಯ ಕೆಆರ್ಎಸ್ ಬೃಂದಾವನ ಗಾರ್ಡನ್ ನೋಡಲು ಬರುತ್ತಿದ್ದ ವಾಹನಗಳನ್ನು ಗುರಿಯಾಗಿಸಿಕೊಂಡು ಅವರ ಚಾಲಕರಿಂದ ವಿನಾಕಾರಣ ಹಣವನ್ನು ವಸೂಲಿ ಮಾಡುತ್ತಿದ್ದ ಮೂವರು ಭ್ರಷ್ಟ ಪೊಲೀಸರನ್ನು ಅಮಾನತು ಮಾಡಲಾಗಿದೆ. ಈ ಕುರಿತು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ.


ಮಂಡ್ಯ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾತನಾಡಿ ಕೆಆರ್ಎಸ್ ಪೊಲೀಸ್ ಠಾಣೆಯ ಮುಖ್ಯಪೇದೆ ಸೇರಿದಂತೆ ಒಟ್ಟು ಮೂವರು ಪೊಲೀಸರು ಸೇರಿಕೊಂಡು ಹೊರ ರಾಜ್ಯದಿಂದ ಕೆಆರ್ಎಸ್ ಉದ್ಯಾನವನ ನೋಡಲು ಬರುತ್ತಿದ್ದ ವಾಹನಗಳಿಂದ ಹಣ ವಸೂಲಿ ಮಾಡುತ್ತಿದ್ದರು.ಈ ಬಗ್ಗೆ ವಿಡಿಯೋ ಸಾಕ್ಷಿ ಸಮೇತ ದೂರು ಬಂದ ಹಿನ್ನೆಲೆಯಲ್ಲಿ ಮೂವರನ್ನೂ ಸಸ್ಪೆಂಡ್ ಮಾಡಲಾಗಿದೆ.
ಬುಧವಾರ ಎಸ್ಪಿ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಠಾಣೆಯ ಮುಖ್ಯ ಪೇದೆ ಪುರುಷೋತ್ತಮ್, ಪೇದೆಗಳಾದ ಅನಿಲ್ ಕುಮಾರ್, ಪ್ರಭುಸ್ವಾಮಿ ಅಮಾನತ್ತಾದವರಾಗಿದ್ದಾರೆ. ಕೆಆರ್ಎಸ್ ವೀಕ್ಷಿಸಲು ಹೊರ ರಾಜ್ಯದಿಂದ ಹೆಚ್ಚಿನ ಪ್ರವಾಸಿಗರು ಬರುತ್ತಿದ್ದರು. ಈ ಭ್ರಷ್ಟರು ಹೊರ ರಾಜ್ಯದ ವಾಹನಗಳನ್ನೇ ಗುರಿಯಾಗಿಸಿ ಹಣ ವಸೂಲಿ ಮಾಡುತ್ತಿದ್ದ ವೀಡಿಯೋ ವೈರಲ್ ಆಗಿತ್ತು. ಈ ವೀಡಿಯೋ ಆಧರಿಸಿ ಮೂವರು ಪೊಲೀಸರನ್ನು ಅಮಾನತ್ತು ಮಾಡಿದ್ದು ಇಲಾಖಾ ವಿಚಾರಣೆ ನಡೆಸಲಾಗುತ್ತಿದೆ.