ರಾಜ್ಯದ ಎಲ್ಲಾ ಕಡೆಗಳಲ್ಲಿ ಮಳೆ ಅಧಿಕವಾಗಿ ಬಿದ್ದು ಪ್ರವಾಹ ಪರಿಸ್ಥಿತಿ ಇದೆ, ಸುಮಾರು 7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ, ರೈತರಿಗೆ ಪರಿಹಾರ ಕೊಟ್ಟಿಲ್ಲ, ಜನರ ಆಸ್ತಿ ಪಾಸ್ತಿ, ಮನೆಗಳಿಗೆ ಹಾನಿಯಾಗಿದೆ, ರಸ್ತೆಗಳ ಮೇಲೆ ನೀರು ನಿಂತು ಬೋಟ್ ಗಳಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಇದೆ. ಜನರ ಈ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸದೆ ಬಿಜೆಪಿ ಅವರು ಜನಸ್ಪಂದನ ಕಾರ್ಯಕ್ರಮ ಅಂತ ಹೇಳಿ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡುತ್ತಿದ್ದರೆ ಹೇಗೆ? ಇವರಿಗೆ ನಿಜವಾಗಿ ಜನರ ಬಗ್ಗೆ ಕಾಳಜಿ ಇದೆಯಾ? ಲಂಚ ಹೊಡೆದು ಸಂಪಾದಿಸಿರುವ ಹಣದಲ್ಲಿ ಜನ ಸೇರಿಸಿಕೊಂಡು ಜನಸ್ಪಂದನೆ ಎಂದು ಕಾರ್ಯಕ್ರಮ ಮಾಡಿದರೆ ಅದನ್ನು ಜನ ಒಪ್ಪಿಕೊಳ್ಳಲು ಸಿದ್ಧರಿದ್ದಾರ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಉಮೇಶ್ ಕತ್ತಿ ಅವರು ಉತ್ತರ ಕರ್ನಾಟಕದ ಪ್ರಭಾವಿ ನಾಯಕ. ಎಂಟು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ, ಸರ್ಕಾರದಲ್ಲಿ ಸಚಿವರು ಆಗಿದ್ದವರು. ಇವರು ಮರಣ ಹೊಂದಿದಾಗ ಒಂದು ಕಡೆ ಶೋಕಾಚರಣೆ ಮಾಡುತ್ತೇವೆ ಎನ್ನುತ್ತಾರೆ, ಇನ್ನೊಂದು ಕಡೆ ಬಿಜೆಪಿ ನಾಯಕರೇ ಡ್ಯಾನ್ಸ್ ಮಾಡುತ್ತಾರೆ. ಇದೇನಾ ಅವರಿಗೆ ಕೊಡುವ ಗೌರವ? ಈ ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿ ಇಲ್ಲ, ಬರೀ ದುಡ್ಡು ಹೊಡೆಯುವ ಬಗ್ಗೆ ಮಾತ್ರ ಕಾಳಜಿ ಇದೆ ಎಂದು ಕಿಡಿಕಾರಿದ್ದಾರೆ.
ಸದನದಲ್ಲಿ ಪ್ರವಾಹ, 40% ಕಮಿಷನ್ ಹಗರಣ ಮುಂತಾದ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಪಿಎಸ್ಐ ನೇಮಕಾತಿಯಲ್ಲಿ ಲಂಚ ಪಡೆದಿದ್ದನ್ನು ಬಿಜೆಪಿಯ ಒಬ್ಬ ಶಾಸಕರೇ ಒಪ್ಪಿಕೊಂಡಿದ್ದಾರೆ, ಅವರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡು, ಅವರನ್ನು ಬಂಧಿಸಿ, ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಬಿಜೆಪಿಯವರಿಗೆ ಬರೀ ಸೇಡಿನ ರಾಜಕಾರಣ ಮಾಡುವುದು ಗೊತ್ತು. ನೆಲದ ಕಾನೂನನ್ನು ಹೊಸಕಿ ಹಾಕಿ ತಮಗೆ ಬೇಕಾದಂತೆ ಆಡಳಿತ ಮಾಡುತ್ತಿದ್ದಾರೆ. ನಮ್ಮ ಶಾಸಕರಾದ ಪ್ರಿಯಾಂಕ್ ಖರ್ಗೆ ಅವರಿಗೆ ನೋಟಿಸ್ ನೀಡಿದ್ದವರು, ಬಿಜೆಪಿ ಶಾಸಕನಿಗೆ ಯಾಕೆ ನೋಟಿಸ್ ನೀಡಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಹೊಸಪೇಟೆಯ ಮಾಜಿ ಶಾಸಕರಾದ ಗವಿಯಪ್ಪ ಅವರು ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತಗಳನ್ನು, ನಾಯಕತ್ವವನ್ನು ಒಪ್ಪಿ ಯಾವುದೇ ಬೇಡಿಕೆಗಳಿಲ್ಲದೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಚುನಾವಣೆ ಬಂದಾಗ ಯಾರು ಗೆಲ್ಲುತ್ತಾರೆ ಎಂಬುದನ್ನು ನೋಡಿ ಟಿಕೇಟ್ ಕೊಡುವುದು. ಆಗ ನೋಡಿದರಾಯ್ತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಯಾವ ಜಿಲ್ಲೆಗಳಿಗೂ ಹೋಗುತ್ತಿಲ್ಲ, ನಾನು ಬೆಂಗಳೂರು ನಗರದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಮಾಡಿ ಜನರ ಸಮಸ್ಯೆಗಳನ್ನು ಆಲಿಸಿದೆ. ಈಗಿನ ನೆರೆ ಪರಿಸ್ಥಿತಿಗೆ ರಾಜ್ಯ ಸರ್ಕಾರವೇ ಕಾರಣ. ನಮ್ಮ ಸರ್ಕಾರದ ಅವಧಿಯಲ್ಲಿ ರಾಜಕಾಲುವೆ ಒತ್ತುವರಿ ತೆರವು ಮಾಡುವ ಕೆರೆ ಹೂಳೆತ್ತುವ ಕಾರ್ಯವನ್ನು ಮಾಡುತ್ತಿದ್ದೆವು, ಈ ಸರ್ಕಾರ ಈ ಕಾಮಗಾರಿಗಳನ್ನು ನಿಲ್ಲಿಸಿದೆ.
ದಾವಣಗೆರೆಯಲ್ಲಿ ನಡೆದ ನನ್ನ ಜನ್ಮದಿನದ ಅಮೃತೋತ್ಸವ ಸಮಾರಂಭಕ್ಕೆ ಉತ್ತರವಾಗಿ ಬಿಜೆಪಿಯವರು ಜನಸ್ಪಂದನ ಕಾರ್ಯಕ್ರಮ ಮಾಡುತ್ತಿದ್ದಾರೆ. ನಮ್ಮ ಕಾರ್ಯಕ್ರಮಕ್ಕೆ ಜನ ಸ್ವಯಂಪ್ರೇರಿತವಾಗಿ ಬಂದಿದ್ದು, ಆದರೆ ಬಿಜೆಪಿ ಅವರ ಬಳಿ ಇರುವ ಭ್ರಷ್ಟ ಹಣ ಮತ್ತು ಅಧಿಕಾರದ ಬಲದಿಂದ ಜನ ಸೇರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.