ರಾಜ್ಯ ವಿಧಾನಸಭಾ ಚುನಾವಣೆ ಚುನಾವಣೆಯಲ್ಲಿ ಬಿಜೆಪಿ ಇನ್ನೂ 12 ಕ್ಷೇತ್ರಗಳ ಪಟ್ಟಿ ಬಿಡುಗಡೆ ಬಾಕಿ ಇದೆ. ಬೆಂಗಳೂರಿನ ಗೋವಿಂದರಾಜನಗರ, ಮಹದೇವಪುರ, ಹೆಬ್ಬಾಳ, ಶೆಟ್ಟರ್ ಶಾಸಕರಾಗಿದ್ದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್, ಮೈಸೂರಿನ ಕೃಷ್ಣರಾಜ, ಶಿವಮೊಗ್ಗ ನಗರ, ವಿಜಯಪುರದ ನಾಗಠಾಣ, ಕಲಬುರಗಿಯ ಸೇಡಂ, ರಾಯಚೂರಿನ ಮಾನ್ವಿ, ಕೊಪ್ಪಳ, ಗದಗದ ರೋಣ, ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆ ಇನ್ನೂ ನಿಗೂಢವಾಗಿದೆ. ಆದರೆ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಟಿಕೆಟ್ಗಾಗಿ ಬಿಜೆಪಿ ಹೈಕಮಾಂಡ್ಗೆ ಡೆಡ್ಲೈನ್ ನೀಡಿದ್ದಾರೆ. ದೆಹಲಿಗೆ ಹೋಗಿ ಬಂದು 2 ದಿನಗಳು ಕಳೆದು ಹೋಗಿವೆ. ಇನ್ನೂ ಟಿಕೆಟ್ ಘೋಷಣೆ ಆಗಿಲ್ಲ. ಈಗಲೂ ನಾನು ಆಶಾವಾದ ಹೊಂದಿದ್ದೇನೆ. ಶನಿವಾರ ಟಿಕೆಟ್ ಘೋಷಣೆ ಆಗದೆ ಹೋದ್ರೆ ನಾನು ಯೋಚನೆ ಮಾಡ್ತೀನಿ. ಅಭಿಮಾನಿಗಳ ಸಭೆ ಮಾಡಿ ಅಂತಿಮ ತೀರ್ಮಾನ ಮಾಡುತ್ತೇನೆ ಎಂದಿದ್ದಾರೆ. ಅಭಿಮಾನಿಗಳು ಬರ್ತಾರೆ, ಸಭೆ ಮಾಡ್ತೀನಿ ಎಂದಿದ್ದಾರೆ ಜಗದೀಶ್ ಶೆಟ್ಟರ್. ಇಂದು ಬೆಳಗ್ಗೆ 11 ಗಂಟೆ ಒಳಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡದಿದ್ದರೆ ಜಗದೀಶ್ ಶೆಟ್ಟರ್ ದಾರಿ ಎತ್ತ ಕಡೆ ಎನ್ನುವಂತಾಗಿದೆ.
ಮಾಜಿ ಸಿಎಂ ಶೆಟ್ಟರ್ಗೆ ಸಿಕ್ಕಿದೆ ಭರಪೂರ ಬೆಂಬಲ..!
ಬಿಜೆಪಿ ನಾಯಕರ ಮೇಲೆ ಜಗದೀಶ್ ಶೆಟ್ಟರ್ ಅಂತಿಮ ಹಂತದ ಒತ್ತಡ ತಂತ್ರ ಅನುಸರಿಸಿದ್ದಾರೆ. ಮೊದಲನೆಯದಾಗಿ ಶನಿವಾರ ಬೆಳಗ್ಗೆ 11 ಗಂಟೆಗೆ ಅಭಿಮಾನಿಗಳ ಸಭೆ ಕರೆದಿದ್ದೇನೆ. ಟಿಕೆಟ್ ಘೋಷಣೆ ಆಗದಿದ್ದರೆ ನಾನು ಅಭಿಮಾನಿಗಳ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ. ಅದರ ಹೊರತಾಗಿಯೂ ಜಗದೀಶ್ ಶೆಟ್ಟರ್ 2ನೇ ರೀತಿಯಲ್ಲಿ ಒತ್ತಡ ತಂತ್ರ ಅನುಸರಿಸಿದ್ದು, ಜಗದೀಶ್ ಶೆಟ್ಟರ್ಗೆ ಟಿಕೆಟ್ ಘೋಷಣೆ ವಿಳಂಬದಿಂದ ರೊಚ್ಚಿಗೆದ್ದ ಹುಬ್ಬಳ್ಳಿ ಪಾಲಿಕೆಯ 16 ಮಂದಿ ಸದಸ್ಯರು ರಾಜೀನಾಮೆ ನೀಡಿದ್ದಾರೆ. ಅಭಿಮಾನಿಗಳು ಬಂದು ರಾಜೀನಾಮೆ ಕೊಡ್ತಿದ್ದಾರೆ. ನನಗೂ ಒಂದು ಲಿಮಿಟ್ ಇರುತ್ತೆ, ಎಲ್ಲಿವರೆಗೆ ಕಾಯೋದು..? ಎನ್ನುವ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧವೂ ಅಸಮಾಧಾನ ಹೊರ ಹಾಕಿದ್ದಾರೆ. ಇನ್ನು ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ತಾರಾ..? ಅನ್ನೋ ಪ್ರಶ್ನೆಗೆ ಕಾಂಗ್ರೆಸ್ ಆಗಲಿ, ಬೇರೆ ಯಾರೇ ಆಗಲಿ ನನ್ನನ್ನು ಸಂಪರ್ಕ ಮಾಡಿಲ್ಲ. ನಮ್ಮ ಕುಟುಂಬದಿಂದ ಯಾರೂ ಚುನಾವಣೆಗೆ ಸ್ಪರ್ಧೆ ಮಾಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪಕ್ಷೇತರ ಸ್ಪರ್ಧೆಗೆ ಅನಿಯಾಗ್ತಿದ್ದಾರೆ ಜಗದೀಶ್ ಶೆಟ್ಟರ್..!
ಜಗದೀಶ್ ಶೆಟ್ಟರ್ಗೆ ಪ್ರಮುಖ ಎದುರಾಳಿ ಅಂದರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಎನ್ನುವ ಮಾತಿದೆ. ಈ ಹಿಂದೆ ನಡೆದಿದ್ದ ಕೆಲವು ವಾಕ್ಸಮರದಿಂದ ಇಬ್ಬರೂ ನಾಯಕರ ನಡುವೆ ಮುಖಮನಸು ಇದೆ. ಅಂದಿನಿಂದ ಜಗದೀಶ್ ಶೆಟ್ಟರ್ಗೆ ಟಿಕೆಟ್ ತಪ್ಪಿಸುವ ಉದ್ದೇಶದಿಂದ ಕೆಲಸ ಮಾಡಿದ್ದಾರೆ ಎನ್ನುವ ಮಾತು ಕ್ಷೇತ್ರದಲ್ಲಿದೆ. ಇನ್ನು ಬಸವರಾಜ ಬೊಮ್ಮಾಯಿ ಹಾಗು ಜಗದೀಶ್ ಶೆಟ್ಟರ್ಗೂ ರಾಜಕೀಯ ಜಿದ್ದಾಜಿದ್ದಿ ಇದೆ. ಈ ಹಿಂದೆ ಕ್ಷೇತ್ರದ ವಿಚಾರಲ್ಲೂ ಇಬ್ಬರು ನಾಯಕರ ನಡುವೆ ನಡೆದಿದ್ದ ಜಟಾಪಟಿ ಈಗ ಟಿಕೆಟ್ ಕೊಡುವ ವಿಚಾರದಲ್ಲಿ ಅಡ್ಡಗಾಲು ಹಾಕಿದ್ದಾರೆ ಎನ್ನಲಾಗ್ತಿದೆ. ಜಗದೀಶ್ ಶೆಟ್ಟರ್ಗೆ ಟಿಕೆಟ್ ಕೊಡದಂತೆ ಹೈಕಮಾಂಡ್ ಮೇಲೆ ಪ್ರಹ್ಲಾದ್ ಜೋಷಿ ಹಾಗು ಬಸವರಾಜ ಬೊಮ್ಮಾಯಿ ಪ್ರಭಾವ ಹೆಚ್ಚಾಗಿದೆ ಎನ್ನುವ ಮಾತುಗಳಿವೆ. ಆದರೆ ಜಗದೀಶ್ ಶೆಟ್ಟರ್ ಮಾಜಿ ಸಿಎಂ ಆಗಿರುವ ಕಾರಣಕ್ಕೆ ಕಾಂಗ್ರೆಸ್ ಹಾಗು ಜೆಡಿಎಸ್ಗೆ ಸೇರ್ಪಡೆ ಆಗುವುದು ಬಹುತೇಕ ಅನುಮಾನ. ಆದರೆ ಪಕ್ಷೇತರವಾಗಿ ಸ್ಪರ್ಧೆ ಮಾಡಿ ಶಕ್ತಿ ತೋರಿಸಬೇಕು ಎಂದು ಮಾತುಗಳು ನಡೆಯುತ್ತಿವೆ. ಇದೀಗ ಬಿಜೆಪಿ ಹೈಕಮಾಂಡ್ ಜಗದೀಶ್ ಶೆಟ್ಟರ್ ಅವರನ್ನೂ ಬಿಟ್ಟುಕೊಡುತ್ತಾ..? ಅಥವಾ ಉಳಿಸಿಕೊಳ್ಳುವ ಮನಸ್ಸು ಮಾಡುತ್ತಾ ಅನ್ನೋದು ಗುಟ್ಟಾಗಿ ಉಳಿದಿದೆ.
ನಳೀನ್ ಕುಮಾರ್ ಹೇಳಿದ್ದ ಮಾತು ಸತ್ಯವಾಗುತ್ತಾ..?
ಈ ಹಿಂದೆ ನಳೀನ್ ಕುಮಾರ್ ಕಟೀಲ್ ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಜಗದೀಶ್ ಶೆಟ್ಟರ್ ಹಾಗು ಕೆ.ಎಸ್ ಈಶ್ವರಪ್ಪ ಅವರನ್ನು ಪಕ್ಷದಿಂದ ಬದಿಗೆ ಸರಿಸುವ ನಿರ್ಧಾರ ಆಗಿದೆ. ಇನ್ಮುಂದೆ ನಮ್ಮ ಹಿಡಿತಕ್ಕೆ ಪಕ್ಷ ಬರಲಿದೆ ಎಂದಿದ್ದರು. ಈಗಾಗಲೇ ಕೆ.ಎಸ್ ಈಶ್ವರಪ್ಪ ಅವರಿಗೆ ಟಿಕೆಟ್ ನೀಡುವುದಿಲ್ಲ ಎನ್ನುವ ಕಾರಣಕ್ಕೆ ಈಶ್ವರಪ್ಪ ಈಗಾಗಲೇ ರಾಜಕೀಯ ನಿವೃತ್ತಿ ಘೋಷಣೆ ಆಗಿದೆ. ಇದೀಗ ಜಗದೀಶ್ ಶೆಟ್ಟರ್ಗೂ ರಾಜಕೀಯ ನಿವೃತ್ತಿಯ ಒತ್ತಡ ಹಾಕಲಾಗಿದೆ ಎನ್ನಲಾಗಿದ್ದು, ಜಗದೀಶ್ ಶೆಟ್ಟರ್ ಪಕ್ಷದ ಹೈಕಮಾಂಡ್ ಮಾತಿಗೆ ತಿರುಗಿ ಬಿದ್ದಿದ್ದಾರೆ. ಇದೀಗ ಪಾಲಿಕೆಯ 16 ಸದಸ್ಯರು ರಾಜೀನಾಮೆ ನೀಡಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಪ್ರಮುಖ ನಿರ್ಧಾರ ಎಂದಿದ್ದಾರೆ. ಬಿ.ಎಸ್. ಯಡಿಯೂರಪ್ಪ, ಲಕ್ಷ್ಮಣ ಎಂ ಸವದಿ ಬಳಿಕ ಮತ್ತೋರ್ವ ಲಿಂಗಾಯತ ನಾಯಕ ಜಗದೀಶ್ ಶೆಟ್ಟರ್ ಬಿಜೆಪಿ ಪಕ್ಷದಿಂದ ಹೊರಬರುವ ಎಲ್ಲಾ ಸಾಧ್ಯತೆಗಳಿವೆ. ಅಂದರೆ ಮಾಜಿ ಸಿಎಂ ಕುಮಾರಸ್ವಾಮಿ ಈ ಹಿಂದೆ ಹೇಳಿದ್ದು ‘ಬಿಜೆಪಿಯಲ್ಲಿ ಬ್ರಾಹ್ಮಣ ಸಿಎಂ ಚಿಂತನೆ’ ಎಂಬ ಹೇಳಿಕೆಯನ್ನು ನೆನಪು ಮಾಡಿಕೊಳ್ಳಬಹುದು. ಲಿಂಗಾಯತ ನಾಯಕರು ಏಕಾಏಕಿ ಬಿಜೆಪಿ ಪಕ್ಷದಿಂದ ನಿರಂತರವಾಗಿ ಪಕ್ಷ ಬಿಡುತ್ತಿರುವುದು ಬಿಜೆಪಿಗೆ ಮುಳುವಾಗುವ ಸಾಧ್ಯತೆಯನ್ನು ತೋರಿಸುತ್ತಿದೆ.
ಕೃಷ್ಣಮಣಿ