ಕೂಡ್ಲಿಗಿ: ಬೆಳಗಾವಿ ಅಧಿವೇಶನದ ಹೊತ್ತಿಗೆ ನವೆಂಬರ್ ಕ್ರಾಂತಿಯಿಂದ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಬರಲಿದ್ದಾರೆ. ಆದರೆ ಡಿ.ಕೆ.ಶಿವಕುಮಾರ್ ಮಾತ್ರ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಭವಿಷ್ಯ ನುಡಿದಿದ್ದಾರೆ.
ವಿಜಯನಗರದ ಕೂಡ್ಲಿಗಿಯಲ್ಲಿ ಮಾತನಾಡಿದ ಶ್ರೀರಾಮಲು, ಡಿ.ಕೆ. ಶಿವಕುಮಾರ್ ಸದ್ಯ ಕೆಪಿಸಿಸಿ ಅಧ್ಯಕ್ಷ ಸ್ಥಾನದೊಂದಿಗೆ ಉಪ ಮುಖ್ಯಮಂತ್ರಿಯಾಗಿದ್ದು, ನಾಲೈದು ಖಾತೆಗಳೊಂದಿಗೆ ಬೆಂಗಳೂರನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ಅವರಿಗೆ ಬಹಳ ಜವಾಬ್ದಾರಿಗಳಿದ್ದು, ಅವುಗಳನ್ನೇ ಮುಂದುವರಿಸಿಕೊಂಡು ಹೋಗಲಿದ್ದಾರೆ. ಆದರೆ ಡಿಕೆಶಿ 2028ರ ತನಕ ಮುಖ್ಯಮಂತ್ರಿ ಆಗುವುದಿಲ್ಲ. ಮೂರನೇ ವ್ಯಕ್ತಿ ಮುಖ್ಯಮಂತ್ರಿಯಾಗಲಿದ್ದು, ಯಾರು ಎಂಬ ಪ್ರಶ್ನೆ ಮಾತ್ರ ಇದೆ ಎಂದರು.
ಇನ್ನು ಸತೀಶ್ ಜಾರಕಿಹೊಳಿ ಹಿಂದಿನಿಂದಲೂ ಅಹಿಂದ ನಾಯಕರಾಗಿದ್ದು, ಅವರಿಗೆ ಅವಕಾಶ ಮಾಡಿಕೊಡುವ ಬಗ್ಗೆ ಸ್ವತಃ ಮುಖ್ಯಮಂತ್ರಿ ಪುತ್ರ ಹೇಳಿದ್ದಾರೆ. ಸತೀಶ್ ಮುಖ್ಯಮಂತ್ರಿಯಾದರೆ ನಾವು ಕೂಡ ಸಂತೋಷಪಡುತ್ತೇವೆ. ಏಕೆಂದರೆ ಅವರು ನಮ್ಮ ಉತ್ತರ ಕರ್ನಾಟಕದವರಾಗಿದ್ದು, ಅವರಿಂದ ಇಲ್ಲಿಗೆ ಅನುಕೂಲವಾಗಲಿದೆ. ನವೆಂಬರ್ ಕ್ರಾಂತಿಯಿಂದ ಸರ್ಕಾರ ಬಿದ್ದರೆ ಮಧ್ಯಂತರ ಚುನಾವಣೆಗೆ ನಾವು ಸಿದ್ದವಾಗಿದ್ದೇವೆ ಎಂದು ತಿಳಿಸಿದ್ದಾರೆ.













