“Each and every vote will take us to record victory in the upcoming Assembly elections. It will give us new energy to work for development and growth (ಪ್ರತಿ ಮತವೂ ನಮ್ಮನ್ನು ವಿಧಾನಸಭಾ ಚುನಾವಣೆಯ ದಾಖಲೆಯ ಜಯದತ್ತ ತೆಗೆದುಕೊಂಡು ಹೋಗುತ್ತದೆ. ಅಭಿವೃದ್ಧಿ ಮತ್ತು ಪ್ರಗತಿಯ ಕೆಲಸ ಮಾಡಲು ಅದು ನಮಗೆ ಹೊಸ ಶಕ್ತಿಯನ್ನು ನೀಡುತ್ತದೆ)”
ಇದು ಮೋದಿಯವರು ಬುಧವಾರ ಉತ್ತರಪ್ರದೇಶದ ಸೋನಭದ್ರಾದಲ್ಲಿ ವಿಧಾನಸಭಾ ಚುನಾವಣೆ ಪ್ರಚಾರ ರ್ಯಾಲಿಯಲ್ಲಿ ಆಡಿದ ಮಾತು. ಮೋದಿಯವರು ಅತ್ತ ಉತ್ತರಪ್ರದೇಶ ಮತ್ತು ಮಣಿಪುರದ ವಿಧಾನಸಭಾ ಚುನಾವಣಾ (UP election and Manipur election) ಪ್ರಚಾರ ಭಾಷಣಗಳಲ್ಲಿ ಬಿಡುವಿಲ್ಲದಷ್ಟು ಬ್ಯುಸಿಯಾಗಿರುವಾಗಲೇ ಅತ್ತ ಉಕ್ರೇನಿನಲ್ಲಿ ಚಂದನ್ ಜಿಂದಾಲ್ ಎಂಬ ಪಂಜಾಬ್ ಮೂಲದ ವಿದ್ಯಾರ್ಥಿ ಸಾವು ಕಂಡಿದ್ದಾರೆ. ಕಳೆದ 24 ಗಂಟೆಯಲ್ಲಿ ಕರ್ನಾಟಕದ ನವೀನ್ ಸೇರಿದಂತೆ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಯುದ್ಧಗ್ರಸ್ತ ಉಕ್ರೇನಿನಲ್ಲಿ ಜೀವ ಕಳೆದುಕೊಂಡಿದ್ದಾರೆ.
ಒಟ್ಟು ಉಕ್ರೇನಿನಲ್ಲಿ ಶಿಕ್ಷಣ ಪಡೆಯುತ್ತಿದ್ದ ಸುಮಾರು 19 ಸಾವಿರ ಭಾರತೀಯ ವಿದ್ಯಾರ್ಥಿಗಳ ಪೈಕಿ ಈವರೆಗೆ ಕೆಲವೇ ಸಾವಿರ ಮಂದಿ ಮಾತ್ರ ದೇಶಕ್ಕೆ ಸುರಕ್ಷಿತವಾಗಿ ವಾಪಸ್ಸಾಗಿದ್ದಾರೆ. ಆರಂಭದಲ್ಲಿ ಯುದ್ಧದ ಸೂಚನೆಗಳನ್ನು ಅರಿತು ಸಕಾಲಿಕ ಕ್ರಮಗಳನ್ನು ಕೈಗೊಳ್ಳುವಲ್ಲಿ ಎಡವಿದ ಮೋದಿಯವರ ಸರ್ಕಾರದ ಹೊಣೆಗೇಡಿತನದಿಂದಾಗಿ ಇದೀಗ ಸಾವಿರಾರು ವಿದ್ಯಾರ್ಥಿಗಳು ಉಕ್ರೇನಿನಲ್ಲಿ ಸಾವು ಬದುಕಿನ ಆತಂಕದಲ್ಲಿದ್ದಾರೆ. ರಷ್ಯಾ ಗಡಿಯಂಚಿನ ಪೂರ್ವ ಉಕ್ರೇನ್ ಪ್ರದೇಶಗಳಲ್ಲಿ (, ukraine russia conflict) ಸಿಲುಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳು (Indian students) ಸಾವಿನ ದವಡೆಯಲ್ಲಿದ್ದಾರೆ. ಆ ಭಾಗದಲ್ಲಿ ರಷ್ಯನ್ ದಾಳಿ (russia attack) ತೀವ್ರವಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ಕಾಲೇಜು ಮತ್ತು ಹಾಸ್ಟೆಲುಗಳಲ್ಲಿ, ಖಾಸಗೀ ಮನೆಗಳಲ್ಲಿ ಸಿಲುಕಿರುವ ಸಾವಿರಾರು ವಿದ್ಯಾರ್ಥಿಗಳು ತಮ್ಮ ಜೀವ ರಕ್ಷಣೆಗಾಗಿ ನಿತ್ಯ ಮೊರೆ ಇಡುತ್ತಲೇ ಇದ್ದಾರೆ.
ಆದರೆ, ಭಾರತೀಯ ರಕ್ಷಣಾ ಕಾರ್ಯಾಚರಣೆ ಆಪರೇಷನ್ ಗಂಗಾದ (Opperation Ganga) ವಿಮಾನಗಳು ಉಕ್ರೇನಿನ ನೆರೆಯ ರಾಷ್ಟ್ರಗಳಿಂದ ಮತ್ತು ಯುದ್ಧದ ಪರಿಸ್ಥಿತಿಯಿಂದ ದೂರವಿರುವ ಪಶ್ಚಿಮ ಉಕ್ರೇನಿನಲ್ಲಿರುವ ನಾಗರಿಕರನ್ನು ಮಾತ್ರ ಕರೆತರುತ್ತಿವೆ. ಹಾಗೆ ಕರೆ ತಂದವರ ಸಂಖ್ಯೆ ಕೂಡ ಈವರೆಗೆ 4000 ಸಾವಿರವನ್ನೂ ದಾಟಿಲ್ಲ. ಆದರೆ ವಿಪರ್ಯಾಸವೆಂದರೆ, ಉತ್ತರಪ್ರದೇಶದ ಘಾಜಿಪುರ್ ಮತ್ತು ಸೋನಭದ್ರಾ ಚುನಾವಣಾ ಪ್ರಚಾರದ ಭಾಷಣದಲ್ಲಿ ಮೋದಿಯವರು, ಈಗಾಗಲೇ ಉಕ್ರೇನಿನಲ್ಲಿ ಸಿಲುಕಿರುವ ಎಲ್ಲಾ ಭಾರತೀಯರನ್ನೂ ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ. ಆಪರೇಷನ್ ಗಂಗಾ ಕಾರ್ಯಾಚರಣೆ ಯಶಸ್ವಿಯಾಗಿಬಿಟ್ಟಿದೆ ಎಂಬರ್ಥದಲ್ಲಿ ಮಾತನಾಡಿದ್ದಾರೆ.
“ಜಾಗತಿಕ ಮಟ್ಟದಲ್ಲಿ ವೃದ್ಧಿಯಾಗಿರುವ ಭಾರತದ ಶಕ್ತಿ ಮತ್ತು ಪ್ರಭಾವದ ಕಾರಣಕ್ಕೆ ಉಕ್ರೇನಿನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ತರಲು ಸಾಧ್ಯವಾಗಿದೆ. ಆಪರೇಷನ್ ಗಂಗಾ ಕಾರ್ಯಾಚರಣೆ ಯಶಸ್ವಿಯಾಗಿದೆ. ರಕ್ಷಣಾ ಕಾರ್ಯಾಚರಣೆಯ ಮೇಲುಸ್ತುವಾರಿಗೆ ನಾಲ್ವರು ಸಚಿವರನ್ನೂ ಕಳಿಸಲಾಗಿದೆ?” ಎಂದಿರುವ ಮೋದಿಯವರು ಇನ್ನೂ 15 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಯುದ್ಧ ಭೂಮಿಯಲ್ಲಿ ಜೀವ ರಕ್ಷಣೆಗೆ ಅಂಗಾಲಾಚುತ್ತಿರುವಾಗಲೇ ಅವರ ರಕ್ಷಣೆಯ ವಿಷಯವನ್ನೇ ಚುನಾವಣಾ ಮತ ಗಳಿಕೆಯ ದಾಳವಾಗಿ ಉರುಳಿಸಿದ್ದಾರೆ!
ಹೀಗೆ ದೇಶದ ನಾಗರಿಕರ ಜೀವ ರಕ್ಷಣೆ, ದೇಶದ ಯೋಧರ ಸಾಹಸ, ಗಡಿ ರಕ್ಷಣೆಯ ತ್ಯಾಗ ಬಲಿದಾನಗಳನ್ನು ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳುವುದು ಮೋದಿ (Modi) ಮತ್ತು ಬಿಜೆಪಿಗೆ (BJP) ಹೊಸದೇನೂ ಅಲ್ಲ. ಪುಲ್ವಾಮಾ ದಾಳಿಯಂತಹ ಭೀಕರ ದಾಳಿಯಲ್ಲಿ ಮಡಿದ ನಲವತ್ತು ಮಂದಿ ಭಾರತೀಯ ಯೋಧರ (Indian Soldier) ಸಾವನ್ನು ಕೂಡ ಚುನಾವಣಾ ವಿಷಯವಾಗಿ ಬಳಸಿಕೊಂಡಿದ್ದರು ಮತ್ತು ಆ ಘಟನೆಯ ಹಿಂದಿನ ಗುಪ್ತಚರ ವೈಫಲ್ಯ ಮತ್ತು ಸೇನಾ ಕಾರ್ಯವಿಧಾನದ ಲೋಪಗಳ ಪ್ರಶ್ನೆಗಳನ್ನ ಬದಿಗೊತ್ತಿ, ಆ ಬಗ್ಗೆ ದೇಶದ ಜನತೆಗೆ ಉತ್ತರದಾಯಿಯಾಗಿರಬೇಕಾದ ಹೊಣೆಗಾರಿಕೆಯನ್ನು ಕೊಡವಿಕೊಂಡು ಸರ್ಜಿಕಲ್ ಸ್ಟ್ರೈಕ್ (Surgical Strike) ನಂತಹ ಹೊಸತಲ್ಲದ ಸೇನಾ ಕಾರ್ಯಾಚರಣೆಯನ್ನು ಕೂಡ ಪಕ್ಷದ ಮತ್ತು ವೈಯಕ್ತಿಕ ಲಾಭಕ್ಕೆ ಬಳಸಿಕೊಂಡ ಉದಾಹರಣೆ ಇನ್ನೂ ಜನಮಾನಸದಿಂದ ಮರೆಯಾಗಿಲ್ಲ.
ಇದೀಗ ಮತ್ತದೇ ಚುನಾವಣಾ ಲಾಭದ ಹಪಾಹಪಿ ಮರುಕಳಿಸಿದೆ. ಮೋದಿಯವರ ಈ ವರಸೆಯನ್ನೇ ದೇಶದ ಬಹುತೇಕರು ಪ್ರಶ್ನಿಸುತ್ತಿದ್ದಾರೆ. ಆ ಕಾರಣಕ್ಕೇ ಸಾಮಾಜಿಕ ಜಾಲತಾಣಗಳಲ್ಲಿ (social Media) #IndiaHasWeakPM, #ModiActNow, #ModisFailedForeignPolicy, #modimadedisaster, #ModiIsPutin ಮತ್ತು #GodiMedia_DeshVirodhi ದಂತಹ ಹ್ಯಾಷ್ ಟ್ಯಾಗ್ ಗಳು ಟ್ರೆಂಟ್ ಆಗಿವೆ.
ಅದರಲ್ಲೂ ಕರ್ನಾಟಕದ ನವೀನ್ ಸಾವಿನ ಬಳಿಕ ಬುಧವಾರ ಪಂಜಾಬ್ (Punjab) ಮೂಲದ ಮತ್ತೊಬ್ಬ ವಿದ್ಯಾರ್ಥಿ ಸಾವು ಸಂಭವಿಸುತ್ತಿದ್ದಂತೆ ಟ್ವಿಟರ್, ಫೇಸ್ ಬುಕ್ (Twitter, Facebook) ಮುಂತಾದ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಯುದ್ಧಗ್ರಸ್ಥ ಉಕ್ರೇನಿನಲ್ಲಿ ಸಿಲುಕಿರುವ ಭಾರತೀಯರನ್ನು ಸಕಾಲದಲ್ಲಿ ರಕ್ಷಿಸಿ ವಾಪಸು ಕರೆತರುವಲ್ಲಿ ಎಡವಿದ ಸರ್ಕಾರ, ತನ್ನ ಆ ವೈಫಲ್ಯದಿಂದಾಗಿ ಸಂಭವಿಸುತ್ತಿರುವ ಸಾವು-ನೋವುಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಬದಲು, ಇಡೀ ವಿಷಯವನ್ನು ತಿರುವು ಮುರುವು ಮಾಡಿ, ಸುಳ್ಳು ಮಾತುಗಳ ಮೂಲಕ, ದೇಶದ ಜನರನ್ನು ಹಾದಿ ತಪ್ಪಿಸುವಲ್ಲಿ ನಿರತವಾಗಿದೆ. ವಿದೇಶಾಂಗ ನೀತಿಯ ವೈಫಲ್ಯ, ವಿಳಂಬ ಧೋರಣೆಗಳಿಗೆ ಹೊಣೆಗಾರಿಕೆ ಹೊತ್ತು ದೇಶದ ಜನರ ಕ್ಷಮೆ ಯಾಚಿಸಬೇಕಾದ ಸರ್ಕಾರ, ಕನಿಷ್ಟ ನಾಚಿಕೆಯನ್ನೂ ಬಿಟ್ಟು ತನ್ನ ನಾಗರಿಕರ ಸಂಕಷ್ಟವನ್ನೇ ಚುನಾವಣಾ ಬಂಡವಾಳ ಮಾಡಿಕೊಳ್ಳುತ್ತಿರುವುದು ಅನಾಗರಿಕ ಮತ್ತು ಹೇಯ ಎಂದು ಟೀಕಿಸಿದ್ದಾರೆ.
ಭಾರತೀಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಉಕ್ರೇನಿನ ಕಾರ್ಕೀವ್ (ukraine kharkiv) ನಗರ ಸೇರಿದಂತೆ ಪೂರ್ವ ಉಕ್ರೇನ್ ಮೇಲೆ ರಷ್ಯಾ ವಾಯುದಾಳಿ ತೀವ್ರಗೊಳಿಸಿದೆ. ಕ್ಷಿಪಣಿ ದಾಳಿಯಿಂದಾಗಿ ಸಾವಿರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಆ ಹಿನ್ನೆಲೆಯಲ್ಲಿ ನಾಗರಿಕ ಪ್ರದೇಶದ ಮೇಲಿನ ದಾಳಿಯನ್ನು ಖಂಡಿಸಿ, ಕೂಡಲೇ ನಾಗರಿಕ ಪ್ರದೇಶದ ಮೇಲಿನ ದಾಳಿಯನ್ನು ನಿಲ್ಲಿಸುವಂತೆ ರಷ್ಯಾಕ್ಕೆ ಪ್ರಬಲ ಆಕ್ಷೇಪ ವ್ಯಕ್ತಪಡಿಸುವ ಬದಲು, ಬಿಕ್ಕಟ್ಟನ್ನು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ ಎಂದು ತಣ್ಣನೆ ಸಲಹೆ ನೀಡಿ ಕೈತೊಳೆದುಕೊಂಡಿರುವ ಮೋದಿಯವರು, ಅದೇ ರಷ್ಯಾ ದಾಳಿಯನ್ನೇ ಮುಂದಿಟ್ಟುಕೊಂಡು ಆಪರೇಷನ್ ಗಂಗಾ ಕಾರ್ಯಾಚರಣೆಯ ರಾಜಕೀಯ ಲಾಭ ಪಡೆಯಲು ಮಾತ್ರ ಇನ್ನಿಲ್ಲದ ಉತ್ಸಾಹ- ಉಮೇದು ತೋರಿದ್ದಾರೆ. ಹಾಗಾಗಿ ಮೋದಿಯವರ ಈ ಚುನಾವಣಾ ಲಾಭದ ಹಪಾಹಪಿ ಸಹಜವಾಗಿಯೇ ನಾಗರಿಕ ಸಮಾಜದ ಆಕ್ರೋಶ ಮತ್ತು ಜಿಗುಪ್ಸೆಗೆ ಕಾರಣವಾಗಿದೆ.