ಭಾರತೀಯರು ಅದರಲ್ಲೂ ಕನ್ನಡಿಗರೊಬ್ಬರು ದೂರದ ಕೆನಡಾ ಸಂಸದರಾಗಿ ಆಯ್ಕೆಯಾಗಿ ಅಲ್ಲಿಯ ಸಂಸತ್ತಿನಲ್ಲಿ ನಮ್ಮ ಮಾತೃಭಾಷೆ ಕನ್ನಡ ಭಾಷೆಯಲ್ಲೇ ಮಾತನಾಡುವ ಮೂಲಕ ಚಂದ್ರ ಆರ್ಯ ಅವರು ಕನ್ನಡ ನಾಡು, ಕನ್ನಡ ಭಾಷೆ, ಕನ್ನಡಿಗರ ಮೇಲಿನ ತಮ್ಮ ಪ್ರೀತಿ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.
ಹೌದು, ಕೆನಡಾ ಸಂಸತ್ತಿನಲ್ಲಿ, ಕನ್ನಡಿಗ ಸಂಸದ ಚಂದ್ರ ಆರ್ಯ ಅವರು, ತಮ್ಮ ಮಾತೃಭಾಷೆಯ ಪ್ರೇಮವನ್ನು ತೋರಿದ್ದಾರೆ. ಸಂಸತ್ ನಲ್ಲಿ ಕನ್ನಡದಲ್ಲಿಯೇ ಮಾತನಾಡಿ, ಕನ್ನಡದ ಕಲರವನನ್ನು ಕೆನಡಾ ಸಂಸತ್ ನಲ್ಲಿ ಉಂಟು ಮಾಡಿದ್ದಾರೆ.
ಈ ಕುರಿತು ಖುದ್ದು ಅವರೇ ಮಾಹಿತಿ ನೀಡಿದ್ದು, ನಮಸ್ಕಾರ, ನಾನು ಇಂದು ಕೆನಡಾ ಸಂಸತ್ತಿನಲ್ಲಿ ನನ್ನ ಮಾತೃಭಾಷೆ ಕನ್ನಡದಲ್ಲಿ ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ.

ಮುಂದುವರೆದು, ಪುರಾತನ ಇತಿಹಾಸವುಳ್ಳ ಸುಂದರವಾದ ನಮ್ಮ ಕನ್ನಡ ಭಾಷೆಯನ್ನ, 5 ಕೋಟಿ ಜನ ಮಾತನಾಡುತ್ತಾರೆ. ಪ್ರಪಂಚದಲ್ಲಿ ಇದೇ ಮೊದಲ ಬಾರಿಗೆ ವಿದೇಶದ ಸಂಸತ್ತಿನಲ್ಲಿ ಕನ್ನಡ ಭಾಷೆಯ ಮೂಲಕ ಮಾತನಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ.
ಮಾನ್ಯ ಸಭಾಪತಿ,
ಕೆನಡಾ ದೇಶದ ಸಂಸತ್ತಿನಲ್ಲಿ ನನ್ನ ಮಾತೃಭಾಷೆ ಕನ್ನಡದಲ್ಲಿ ಮಾತನಾಡಲು ಅವಕಾಶ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಭಾರತದ ದೇಶದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನ ದ್ವಾರಾಳು ಗ್ರಾಮದ ವ್ಯಕ್ತಿಯೊಬ್ಬ ಕೆನಡಾದಲ್ಲಿ ಸಂಸತ್ ಸದಸ್ಯನಾಗಿ ಆಯ್ಕೆಯಾಗಿ ಮತ್ತು ಕನ್ನಡದಲ್ಲಿ ಮಾತನಾಡುವುದು ಸುಮಾರು ಐದು ಕೋಟಿ ಕನ್ನಡಿಗರಿಗೆ ಹೆಮ್ಮೆಯ ಕ್ಷಣ. ಕೆನಡಾ ದೇಶದ ಕನ್ನಡಿಗರು 2018ನೇ ಇಸವಿಯಲ್ಲಿ ಕೆನಡಾದ ಈ ಸಂಸತ್ತಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು. ರಾಷ್ಟ್ರಕವಿ ಕುವೆಂಪು ಬರೆದಿರುವ ಮತ್ತು ನಟಸಾರ್ವಭೌಮ ಡಾ. ರಾಜಕುಮಾರ್ ಹಾಡಿರುವ ಭಾವಗೀತೆಯ ಕೆಲವು ಪದಗಳೊಂದಿಗೆ ನನ್ನ ಹೇಳಿಕೆಯನ್ನು ಮುಗಿಸುತಿದ್ದೇನೆ.
ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು.. ಧನ್ಯವಾದಗಳು ಸಭಾಪತಿಗಳೆ ಎಂದು ತಮ್ಮ ಮಾತು ಮುಗಿಸಿದ್ದಾರೆ.






