ಇಂಡಿಯನ್ ಅಮೇರಿಕನ್ ಮುಸ್ಲಿಂ ಕೌನ್ಸಿಲ್ (IAMC) ಬುಧವಾರ ಆಯೋಜಿಸಿದ್ದ ‘ಭಾರತದ ಬಹುತ್ವ ಸಂವಿಧಾನವನ್ನು ರಕ್ಷಿಸುವ ಕುರಿತ ವಿಶೇಷ ಸಭೆಯಲ್ಲಿ’ ಮಾತನಾಡಿದ ಭಾರತದ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು, ದೇಶದಲ್ಲಿ ಇತ್ತೀಚಿಗೆ ಪ್ರವೃತ್ತಿಗಳು ‘ನಾಗರಿಕ ರಾಷ್ಟ್ರೀಯತೆಯ ಸುಸಂಬದ್ಧ ತತ್ವ’ಕ್ಕೆ ಕ್ಕ ವಿರುದ್ಧವಾಗಿ ‘ಸಾಂಸ್ಕೃತಿಕ ರಾಷ್ಟ್ರೀಯತೆಯ ಹೊಸ ಮತ್ತು ಕಾಲ್ಪನಿಕ ತತ್ವವನ್ನು’ ಒಪ್ಪಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ.
“ಇದು ಧಾರ್ಮಿಕ ಬಹುಮತ ಮತ್ತು ಏಕಸ್ವಾಮ್ಯದ ರಾಜಕೀಯ ಅಧಿಕಾರದ ಸೋಗಿನಲ್ಲಿ ಚುನಾವಣಾ ಬಹುಮತವನ್ನು ಪ್ರಸ್ತುತಪಡಿಸಲು ಪ್ರಯತ್ನಿಸುತ್ತದೆ. ಇದು ನಾಗರಿಕರನ್ನು ಅವರ ನಂಬಿಕೆಯ ಆಧಾರದ ಮೇಲೆ ಪ್ರತ್ಯೇಕಿಸಲು ಬಯಸುತ್ತದೆ, ಅಸಹಿಷ್ಣುತೆಯನ್ನು ಹೊರಹಾಕುತ್ತದೆ, ಅನ್ಯತೆಯನ್ನು ಪ್ರಚೋದಿಸುತ್ತದೆ ಮತ್ತು ಆತಂಕ ಮತ್ತು ಅಭದ್ರತೆಯನ್ನು ಉತ್ತೇಜಿಸುತ್ತದೆ. ಇತ್ತೀಚಿನ ಕೆಲವು ಘಟನೆಗಳು ಕಾನೂನಿನ ನಿಯಮಗಳಿಂದ ಮಾತ್ರ ನಿಯಂತ್ರಿಸಲ್ಪಡುವ ನಮ್ಮ ಹಕ್ಕನ್ನೇ ಲೇವಡಿ ಮಾಡಲಾಗುತ್ತಿದೆ”ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ವರ್ಚುವಲ್ ಆಗಿ ಪ್ರಾಯೋಜಿಸಲಾದ ಈ ಈವೆಂಟ್ ಅನ್ನು IAMC ಜೊತೆ ಅಮ್ನೆಸ್ಟಿ ಇಂಟರ್ನ್ಯಾಶನಲ್ ಯುಎಸ್, ಜಿನೋಸೈಡ್ ವಾಚ್, ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್ ಮತ್ತು ನ್ಯೂಯಾರ್ಕ್ ಸ್ಟೇಟ್ ಕೌನ್ಸಿಲ್ ಆಫ್ ಚರ್ಚ್ಗಳು ಸಹ ಪ್ರಾಯೋಜಿಸಿವೆ ಮಾಡಿವೆ ಎಂದು ವರದಿಯಾಗಿದೆ. “ಈ ಪ್ರವೃತ್ತಿಗಳನ್ನು ಕಾನೂನು ಬದ್ಧವಾಗಿ ಮತ್ತು ರಾಜಕೀಯವಾಗಿ ಎದುರಿಸಬೇಕಾಗಿದೆ” ಎಂದೂ ಇದೇ ಸಂದರ್ಭದಲ್ಲಿ ಅವರು ಹೇಳಿದ್ದಾರೆ.
ಹಿಂದೂ ರಾಷ್ಟ್ರದ ಪರಿಕಲ್ಪನೆ
ಚರ್ಚೆಯಲ್ಲಿ ಮಾತನಾಡಿದ ಬೆಂಗಳೂರಿನ ಆರ್ಚ್ಡಿಯೊಸಿಸ್ ಆರ್ಚ್ಬಿಷಪ್ ಪೀಟರ್ ಮಚಾಡೊ ಅವರು ಕರ್ನಾಟಕದ ಮತಾಂತರ ವಿರೋಧಿ ಕಾಯ್ದೆ 2021ರ ಬಗ್ಗೆ ಮಾತಾಡಿ “ಈ ಮಸೂದೆಯು ಅಗತ್ಯವಿಲ್ಲ ಸಂವಿಧಾನವು ಸಾಕಷ್ಟು ಪ್ರಬಲವಾಗಿದೆ. ನಾವು ಅನೇಕ ಕಾನೂನುಗಳು ಮತ್ತು ನಿಬಂಧನೆಗಳನ್ನು ಹೊಂದಿದ್ದೇವೆ, ಅನೇಕ ಸಂಸದೀಯ ಕಾಯಿದೆಗಳು, ಬಲವಂತದ ಅಥವಾ ಮೋಸದ ಮತಾಂತರಗಳನ್ನು ಖಂಡಿತವಾಗಿ ತಡೆಯುತ್ತವೆ” ಎಂದು ಅವರು ಹೇಳಿದರು. ಈ ಶಾಸನವು “ಕ್ರೈಸ್ತರ ಮೇಲಿನ ತಾರತಮ್ಯಕ್ಕೆ ಕಾರಣವಾಗಬಹುದು ಮತ್ತು ಮದುವೆಯ ಸ್ವಾತಂತ್ರ್ಯ ಮತ್ತು ಗೌಪ್ಯತೆಯ ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ” ಎಂದು ಅವರು ಪ್ರತಿಪಾದಿಸಿದರು.
ಯುನೈಟೆಡ್ ಸ್ಟೇಟ್ಸ್ ಕಮಿಷನ್ ಆನ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಂನ ಅಧ್ಯಕ್ಷರಾದ ನಾಡಿನ್ ಮೆಂಝಾ, “ದುರದೃಷ್ಟವಶಾತ್, ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಪರಿಸ್ಥಿತಿಗಳು ಕ್ಷಿಪ್ರಗತಿಯಲ್ಲಿ ಕ್ಷೀಣಿಸುತ್ತಿವೆ” ಎಂದು ಇದೇ ಸಂದರ್ಭದಲ್ಲಿ ಹೇಳಿದರು.
“2014 ರ ನಂತರ ಬಿಜೆಪಿ ನೇತೃತ್ವದ ಭಾರತ ಸರ್ಕಾರವು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಹಿಂದೂ ರಾಜ್ಯದ ತನ್ನ ಸೈದ್ಧಾಂತಿಕತೆಯನ್ನು ಹೆಚ್ಚು ಸಾಂಸ್ಥಿಕಗೊಳಿಸಿದೆ. ಕಾನೂನುಗಳ ಅಡಿಪಾಯ ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರನ್ನು ಒಳಗೊಂಡಿರುವ ದೇಶದ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ದಲಿತರು ಹಾಗೂ ಆದಿವಾಸಿ ಗಳಿಗೆ ಪ್ರತಿಕೂಲವಾಗಿ ಪರಿಣಮಿಸುತ್ತಿದೆ” ಎಂದು ಹೇಳಿದ್ದಾರೆ.
ಈವೆಂಟ್ನಲ್ಲಿ ಮಾತನಾಡಿದ ಮ್ಯಾಸಚುಸೆಟ್ಸ್ ಡೆಮಾಕ್ರಟಿಕ್ ಸೆನೆಟರ್ ಎಡ್ ಮಾರ್ಕಿ ಅವರು “ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಧಾನಿ ಮೋದಿಯವರ ಸರ್ಕಾರದ ಪ್ರಯತ್ನಗಳ ಬಗ್ಗೆ ನಾನು ಆತಂಕಿತನಾಗಿದ್ದೇನೆ” ಎಂದು ಹೇಳಿದ್ದಾರೆ. “ಧಾರ್ಮಿಕ ಮತಾಂತರಗಳ ಕಾನೂನುಗಳು, ಪೌರತ್ವ ಮತ್ತು ಇತರ ನಿರ್ಬಂಧಿತ ಕ್ರಮಗಳು ಭಾರತದ ಅಂತರ್ಗತ ಜಾತ್ಯತೀತ ಸಂವಿಧಾನ ಮತ್ತು ಯಾವುದೇ ಪ್ರಜಾಪ್ರಭುತ್ವದ ಮೂಲ ತತ್ವಗಳ ಉಲ್ಲಂಘನೆಯಾಗಿದೆ” ಎಂದು ಹೇಳಿದ ಮಾರ್ಕಿ “ಜಗತ್ತಿನ ಎಲ್ಲೇ ಮೂಲಭೂತವಾದ ಮಾನವ ಹಕ್ಕುಗಳಿಗೆ ಚ್ಯುತಿ ಬಂದರೂ ಮಾತನಾಡುವುದು ಯುನೈಟೆಡ್ ಸ್ಟೇಟ್ಸ್ನ ಕರ್ತವ್ಯವಾಗಿದೆ” ಎಂದಿದ್ದಾರೆ.
ಇತ್ತೀಚೆಗಷ್ಟೇ ಅಂತರರಾಷ್ಟ್ರೀಯವಾಗಿ ದೇಶದ ಮಾನ ಹರಾಜು ಹಾಕಿದ ‘ಬುಲ್ಲಿ ಬಾಯಿ’ ಅಪ್ಲಿಕೇಶನ್ನ ಸಂತ್ರಸ್ತೆಯರಲ್ಲಿ ಒಬ್ಬರಾದ ಉದ್ಯಮಿ ಮತ್ತು ಹೋರಾಟಗಾರ್ತಿ ಅಮಿನಾ ಕೌಸರ್ ಅವರು ಈವೆಂಟ್ನಲ್ಲಿ ಭಾಗವಹಿಸಿ, “ಮಹಿಳೆಯರನ್ನು ವಿಭಿನ್ನವಾಗಿ ಟ್ರೋಲ್ ಮಾಡಲಾಗುತ್ತಿದೆ ಮತ್ತು ಇದು ಮಹಿಳೆಯರ ಮೇಲಿನ ಎಲ್ಲಾ ರೀತಿಯ ದೌರ್ಜನ್ಯಗಳಿಗಿಂತ ಹೆಚ್ಚು ಅಪಾಯಕಾರಿ” ಎಂದು ಪ್ರತಿಪಾದಿಸಿದರು. ಭಾರತೀಯ ಮುಸ್ಲಿಂ ಮಹಿಳೆಯರು ಒಳಗಾಗುತ್ತಿರುವ ‘ವ್ಯವಸ್ಥಿತ, ಸರ್ಕಾರಿ ಪ್ರಾಯೋಜಿತ’ ಹಿಂಸೆಯನ್ನು ಗಮನಿಸಬೇಕು ಎಂದು US ಸರ್ಕಾರವನ್ನು ಒತ್ತಾಯಿಸಿದ ಅವರು ಇದಕ್ಕೆ ಭಾರತ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಯುಎಸ್ ಸರ್ಕಾರವನ್ನು ಕೇಳಿಕೊಂಡಿದ್ದಾರೆ.
ಇದೇ ಚರ್ಚೆಯಲ್ಲಿ ಮಾತನಾಡುತ್ತಾ ಮಾರಿಷಸ್ನ ಮಾಜಿ ಅಧ್ಯಕ್ಷ ಅಮೀನಾ ಗುರಿಬ್-ಫಕಿಮ್ ಅವರು ಭಾರತೀಯ ಸಂವಿಧಾನವು ‘ಅದರ ವಿಚಾರ ಮತ್ತು ಸಾಂಸ್ಥಿಕವಾಗಿ ಅನನ್ಯವಾಗಿದೆ’ ಆದರೆ ಮಾನವ ಹಕ್ಕುಗಳ ರಕ್ಷಣೆಯ ಕುರಿತು ಭಾರತೀಯ ಸಂವಿಧಾನದಲ್ಲಿನ ಎಲ್ಲಾ ಸಾಂವಿಧಾನಿಕ ನಿಬಂಧನೆಗಳ ಹೊರತಾಗಿಯೂ, ಅಲ್ಪಸಂಖ್ಯಾತರ ಹಕ್ಕುಗಳನ್ನು ಹೇಗೆ ತುಳಿಯಲಾಗುತ್ತಿದೆ ಎಂಬುದರ ಕುರಿತು ಅಂತರರಾಷ್ಟ್ರೀಯ ಮಾಧ್ಯಮಗಳು ಪ್ರತಿದಿನ ವರದಿ ಮಾಡುತ್ತಿರುವುದು ನಿಜಕ್ಕೂ ದುರದೃಷ್ಟಕರ ಎಂದು ಹೇಳಿದರು.
ಅಮ್ನೆಸ್ಟಿ ಇಂಟರ್ನ್ಯಾಶನಲ್ USನ ಏಷ್ಯಾ ಅಡ್ವೊಕಸಿ ಡೈರೆಕ್ಟರ್ ಕ್ಯಾರೊಲಿನ್ ನ್ಯಾಶ್ ಅವರು, ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿದ್ದ ಕಸ್ಟಡಿಯಲ್ಲಿದ್ದಾಗ ಕಳೆದ ವರ್ಷ ಜುಲೈನಲ್ಲಿ ನಿಧನರಾದ ಫಾದರ್ ಸ್ಟಾನ್ ಸ್ವಾಮಿಯ ಬಗ್ಗೆ ಮಾತನಾಡುತ್ತಾ “ಅವರು ಸರ್ಕಾರದಿಂದ ಕಿರುಕುಳಕ್ಕೊಳಗಾಗಿದ್ದರು” ಎಂದು ಪ್ರತಿಪಾದಿಸಿದರು.
ನ್ಯಾಶ್, ಮ್ಯಾನ್ಜಾ, ಮೆಕ್ಗವರ್ನ್ ಮತ್ತು ರಾಬರ್ಟ್ ಎಫ್. ಕೆನಡಿ ಮಾನವ ಹಕ್ಕುಗಳ ಅಧ್ಯಕ್ಷ ಕೆರ್ರಿ ಕೆನಡಿ, ಕಳೆದ ವರ್ಷ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ‘ಭಯೋತ್ಪಾದನಾ ನಿಧಿ ಸಂಗ್ರಹ’ ಮಾಡಿದ ಆರೋಪದಡಿಯಲ್ಲಿ ಬಂಧಿತರಾಗಿರುವ ಜಮ್ಮು ಮತ್ತು ಕಾಶ್ಮೀರ ನಾಗರಿಕ ಸಮಾಜದ ಒಕ್ಕೂಟದ ಸಂಯೋಜಕರಾಗಿದ್ದ ಖುರ್ರಂ ಪರ್ವೇಜ್ ಅವರ ಬಗ್ಗೆ ಮಾತನಾಡಿ ಆದಷ್ಟು ಬೇಗ ಅವರಿಗೆ ನ್ಯಾಯ ಒದಗಿಸಿಕೊಡಬೇಕು ಎಂದರು.
The religious majority that decides the electoral majority: Hamid Ansari’s worry about the new nationalism of India