ನಾಳೆಯ ಬಜೆಟ್ಟಿನಲ್ಲಿ ಏನನ್ನು ನಿರೀಕ್ಷಿಸಬಹುದು ಎಂಬುದು ಒಂದು ಊಹೆಯ ಜೂಜು ಎಂದು ಅನ್ನಿಸುವುದು ಈ ಬಾರಿಯ ಆರ್ಥಿಕ ಸರ್ವೇ ನೋಡಿದಾಗ. ಕೃಷಿಯಂಥಾ ಕ್ಷೇತ್ರದ ರೋಗನಿದಾನ (ಡಯಾಗ್ನೋಸ್ಟಿಕ್) ವರದಿ ಇಲ್ಲಿದೆ.
ಈ ವರದಿ ಈ ಬಾರಿ ಮುಖ್ಯ ಆರ್ಥಿಕ ಸಲಹೆಗಾರರಿಲ್ಲದೇ ಸರಕಾರದ ಖಾಯಂ ಆರ್ಥಿಕ ಸಮಿತಿಯ ಮೂಲಕ ಸಾದರ ಪಡಿಸಲಾಗಿದೆ. ಆದ್ದರಿಂದಲೇ ಈ ಹಿಂದಿನ ವರದಿಗಳಲ್ಲಿದ್ದ ಸ್ವಾಯತ್ತ ವಿಶ್ಲೇಷಣೆಯ ಛಾಯೆ ಇದರಲ್ಲಿಲ್ಲ. ಸರಕಾರದ ಘೋಷಣೆಗಳು – ಸಮರ್ಥನೆಗಳನ್ನು ಹಾಗೆ ಹಾಗೆಯೇ ಈ ಸರ್ವೇ ಬಳಸಿಕೊಂಡು ಒಂದು ರೋಸೀ ಪಿಕ್ಷರ್ ನ್ನು ಕೊಡಲು ನೋಡಿದೆ. ಆದರೆ ಈ ಸರ್ವೇಯರುಗಳ ದುರಾದೃಷ್ಟಕ್ಕೆ ಅವರಲ್ಲಿರುವ ಅಂಕಿ-ಅಂಶಗಳು ಚಿತ್ರಗಳು ಬೇರೆಯೇ ಚಿತ್ರ ನೀಡುತ್ತಿವೆ. ಇದು ಒಂದರ್ಥದಲ್ಲಿ ಡಯಾಗ್ನೋಸ್ಟಿಕ್ ರಿಪೋರ್ಟ್ ರೋಗಿಯ ಸ್ಥಿತಿ ಗಂಭೀರ ಎಂದು ಹೇಳುತ್ತಿದ್ದಾಗ ವೈದ್ಯನೊಬ್ಬ ಪರವಾಗಿಲ್ಲ ನೋ ಪ್ರಾಬ್ಲೆಂ ಎಂದು ಹುಸಿ ಭರವಸೆ ನೀಡಿದಂತಿದೆ.
ಆಹಾರ ಉತ್ಪಾದನೆಯ ವಿವರ ನೋಡಿ: ಭತ್ತ ಗೋಧಿ ಬಿಟ್ಟರೆ ಉಳಿದ ಧಾನ್ಯಗಳು ( ಸಿರಿಧಾನ್ಯ, ಜೋಳ ಇತ್ಯಾದಿ) ಉತ್ಪಾದನೆ ಗಮನಾರ್ಹ ಹೆಚ್ಚಳವಾಗಿಯೇ ಇಲ್ಲ. ನೆನಪಿಡಿ, ಇವೆಲ್ಲ ಬಹುತೇಕ ಮಳೆ ಆಶ್ರಿತ ಪ್ರದೇಶದ ಬೆಳೆಗಳು . ಅದೇ ರೀತಿ ಕಾಳುಗಳು, ಎಣ್ಣೆ ಬೀಜ ಮತ್ತು ಹತ್ತಿ ಉತ್ಪಾದನೆಯಲ್ಲಿ ಬಹುತೇಕ ಸ್ಥಾಗಿತ್ಯ ಕಂಡು ಬರುತ್ತದೆ.
![](https://pratidhvani.com/wp-content/uploads/2022/01/agri-production-1024x732.jpg)
ಇದು ದಟ್ಟವಾಗಿ ಕಾಣಿಸುವುದು ಖಾದ್ಯ ತೈಲ ಕ್ಷೇತ್ರದಲ್ಲಿ. ಮೋದಿ ಪದಗ್ರಹಣ ಕಾಲಕ್ಕಿಂತ ಹಿಂದಿನ ವರ್ಷ ಇದ್ದ ಎಣ್ಣೆ ಕಾಳು ಉತ್ಪಾದನೆಯ ಶೇ. ೧೦ರಷ್ಟು ಮಾತ್ರಾ ಹೆಚ್ಚುವರಿ ಉತ್ಪಾದನೆ ಕಳೆದ ಏಳು ವರ್ಷಗಳಲ್ಲಾಗಿದೆ. ಆದರೆ ಖಾದ್ಯ ತೈಲದ ಆಮದು ಶೇ. ೨೦ರಷ್ಟು ಹೆಚ್ಚಾಗಿದೆ.
![](https://pratidhvani.com/wp-content/uploads/2022/01/oil-seeds-1024x850.jpg)
ಇದು ಇನ್ನಷ್ಟು ಢಾಳಾಗಿ ಕಾಣಿಸುವುದು ತಾಳೆ ಎಣ್ಣೆಯ ಆಮದಿನಲ್ಲಿ. ವರ್ಷಕ್ಕೆ ೮೮ ಲಕ್ಷ ಟನ್ನಿನಷ್ಟು ತಾಳೆ ಎಣ್ಣೆ ಆಮದಾಗುತ್ತಿದೆ. ಅಂದರೆ ಸುಮಾರು ೯೮%.
![](https://pratidhvani.com/wp-content/uploads/2022/01/Palm-oil.jpg)
ಈ ದುರ್ದಮ ಸ್ಥಿತಿಯಲ್ಲಿ ಕೃಷಿ ಕ್ಷೇತ್ರ ಇರುವುದನ್ನು ಸ್ಪಷ್ಠವಾಗಿ ತೋರಿಸುವುದು ಈ ಕ್ಷೇತ್ರದಲ್ಲಿ ಸೃಷ್ಟಿಯಾದ ಬಂಡವಾಳದ ವಿವರ. ೨೦೧೧-೧೨ರ ವೇಳೆಗೆ ( ಅಂದರೆ ಯು.ಪಿ.ಎ. ಕಾಲದಲ್ಲಿ!) ಈ ಬಂಡವಾಳ ಸೃಷ್ಟಿಯ ಪ್ರಮಾಣ ೧೮.೨% ಇದ್ದರೆ ಚೌಕಿದಾರನ ರಾಜ್ಯಭಾರದ ಏಳನೆಯವರ್ಷ ೧೫.೯ಕ್ಕೆ ಇಳಿದಿದೆ. ಸರಕಾರದ ಹೂಡಿಕೆ ೨.೭ ಇದೆ, ಅಷ್ಟೇ.
![](https://pratidhvani.com/wp-content/uploads/2022/01/share-of-Agri-in-GCF.jpg)
ಇದರ ಮುಂದುವರಿಕೆಯಾಗಿ ರೈತರ ಆದಾಯ ಮೂಲದ ವಿವರ ನೋಡಿದರೆ ದಿಗಿಲಾಗುತ್ತದೆ. ಚೌಕಿದಾರನ ಘೋಷಣೆ ಪ್ರಕಾರ ಈ ವರ್ಷ ರೈತರ ಆದಾಯ ದ್ವಿಗುಣ ಆಗಬೇಕು. ಆದರೆ ರೈತನ ಆದಾಯದಲ್ಲಿ ಕೃಷಿಯ ಪಾಲು ಇಳಿದು ಕೂಲಿ ಮೂಲಕ ಹುಟ್ಟುವ ಆದಾಯ ಹೆಚ್ಚಿದೆ. ಚೌಕಿದಾರ ರಾಜ್ಯಭಾರ ಶುರು ಮಾಡುವಾಗ ಕೃಷಿಯಿಂದ ರೈತನ ಆದಾಯ ೪೮% ( ಸುಮಾರಾಗಿ ಅರ್ಧಕ್ಕರ್ಧ ಆದಾಯ) ಇತ್ತು. ಈಗ ಅದು ೩೭%ಕ್ಕೆ ಇಳಿದಿದೆ. ಕೂಲಿಯಿಂದ ಹುಟ್ಟಿದ ಆದಾಯ ೩೨% ಇದ್ದದ್ದು ೪೦% ಕ್ಕೆ ಏರಿದೆ!!
![](https://pratidhvani.com/wp-content/uploads/2022/01/income-ratio-1024x533.jpg)
ಈ ದುಸ್ಥಿತಿ ಸುಧಾರಿಸುವ ಲಕ್ಷಣ ಇದೆಯೇ? ಇದು ಮೂಲತಃ ನೀರಿನ ಲಭ್ಯತೆ/ ಉತ್ತಮ ಮಳೆ ಮೇಲೆ ನಿಂತಿದೆ. ನಮ್ಮಲ್ಲಿ ಶೇ. ೪೯ರಷ್ಟು ನೀರಾವರಿ ಪ್ರದೇಶ ಇದೆ ಎಂದು ಸರಕಾರ ಹೇಳಿಕೊಳ್ಳುತ್ತಿದೆ. ಆದರೆ ಈ ಅಂಕಿಅಂಶ ಅದೆಷ್ಟು ಹಾದಿ ತಪ್ಪಿಸುವ ಲೆಕ್ಕ ಎಂದರೆ ಈ ೪೯%ದಲ್ಲಿ ಶೇ. ೪೦ರಷ್ಟು ಕಾಲುವೆ ನೀರಾವರಿ, ಉಳಿದ ೬೦ ಶೇ. ಅಂತರ್ಜಲ ಎಂದು ಸರಕಾರವೇ ಹೇಳಿದೆ. ಕಣ್ಣಿಗೆ ಕಾಣದ , ಯಾವ ನಿಯಂತ್ರಣವೂ ಇಲ್ಲದ ಅಂತರ್ಜಲದ ಬಳಕೆಯನ್ನು ಬಿಡುಬೀಸಾಗಿ ಹರಿಯುವ ಕಾಲುವೆ ನೀರಾವರಿ ಜೊತೆ ಸೇರಿಸಿದರೆ ಏನರ್ಥ? ಈ ನೀರಾವರಿ ರೈತರ ಅನುಕರಣೆಯ ಮೋಹಕ್ಕೆ ಬಿದ್ದ ಬೋರವೆಲ್ ರೈತರು ವರ್ಷ ವರ್ಷ ನೀರು ಪೋಲು ಮಾಡುತ್ತಾ ನೀರೇ ಖಾಲಿಯಾಗುವ ಅಪಾಯದಲ್ಲಿದ್ದಾರೆ.
ಈ ಕೆಳಗಿನ ಚಿತ್ರ ನೋಡಿ. ನೀರಿನ ಲಭ್ಯತೆಯ ಒತ್ತಡ ಎಷ್ಟಿದೆಯೆಂದರೆ ಬಹುತೇಕ ಭಾರತ ನೀರಿನ ಕೊರತೆ ಅನುಭವಿಸುತ್ತಿದೆ.
ಮುಂದಿನ ವರ್ಷಗಳಲ್ಲಿ ಇದು ಕೃಷಿ ಉತ್ಪಾದನೆಯ ಮೇಲೆ ಬೀರುವ ಪರಿಣಾಮ ಎಂತಾದ್ದಿರಬಹುದು ಎಂದು ಹೇಳಲು ಬ್ರಹ್ಮಾಂಡ ಜೋಯಿಸರು ಬೇಕಾಗಿಲ್ಲ!
![](https://pratidhvani.com/wp-content/uploads/2022/01/water-stress.jpg)
ಈ ಕೆಂಪು ಚಿತ್ರ ಕಂಡರೆ ಚೌಕಿದಾರನ ಭಕ್ತರು ಕಮ್ಯುನಿಸ್ಟರ ಹಾವಳಿ ಎಂದು ಹೇಳಲೂಬಹುದು. ಆದರೆ ಈ ಅಪಾಯದ ಚಿಹ್ನೆಯ ಭಾರತವನ್ನು ಸುಜಲಾ, ಶ್ಯಾಮಲ, ಬಣ್ಣಕ್ಕೆ ಬದಲಾಯಿಸಲು ಪ್ರಾಮಾಣಿಕ ಬದ್ಧತೆ ಬೇಕು. ಅದಾನಿ, ಅಂಬಾನಿ ಕೈಲಿ ಇದು ಸಾಧ್ಯವಾಗದು. ಹೆಚ್ಚೆಂದರೆ ಅವರು ಹಸಿರು ಪೈಂಟ್ ಬಳಿಯಬಹುದು,!!
–