ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಕೇಂದ್ರ ಅಧ್ಯಯನ ತಂಡ ರಾಜ್ಯ ಸರ್ಕಾರದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರದಲ್ಲೇ ಬರ ಪರಿಹಾರ ಹಣ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸೋಮವಾರ ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳ ಜೊತೆಗಿನ ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, “ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳು ಕಳೆದ ಮೂರು ದಿನಗಳಲ್ಲಿ ಮೂರು ತಂಡವಾಗಿ ರಾಜ್ಯದ ಎಲ್ಲಾ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಬೆಳೆ ಹಾನಿಯ ವಾಸ್ತವ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ರೈತರು ಹಾಗೂ ಜನಪ್ರತಿನಿಧಿಗಳ ಜೊತೆಗೂ ಚರ್ಚಿಸಿದ್ದಾರೆ.
ಅಲ್ಲದೆ, ಬರ ಘೋಷಣೆ ಸಂಬಂಧ ರಾಜ್ಯ ಸರ್ಕಾರ ಸಲ್ಲಿಸಿರುವ ಮನವಿ (ಮೆಮೊರಾಂಡಮ್) ವಸ್ತುಸ್ಥಿತಿಯಿಂದ ಕೂಡಿದೆ ಎಂದು ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಬರ ಪರಿಹಾರ ಹಣ ರಾಜ್ಯಕ್ಕೆ ಸಂದಾಯವಾಗಲಿದೆ ಎಂಬ ವಿಶ್ವಾಸ ಇದೆ” ಎಂದರು.
ಬರ ಪರಿಶೀಲನೆ ನಂತರ ಕೇಂದ್ರ ತಂಡ ನಮ್ಮ ಜೊತೆಯೂ ಚರ್ಚೆ ನಡೆಸಿದ್ದು, ರಾಜ್ಯದಲ್ಲಿ ಅಧಿಕ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಇದರಿಂದ ರೈತರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಇದೆ ಎಂದು ಸ್ವತಃ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದರು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ಹಂಚಿಕೊಂಡರು.
ಹೆಚ್ಚುವರಿಯಾಗಿ 21ತಾಲೂಕು ಬರ ಘೋಷಣೆಗೆ ಸಿದ್ಧತೆ
195 ತಾಲೂಕುಗಳ ಜೊತೆಗೆ ಎರಡನೇ ಹಂತದಲ್ಲಿ ಕೇಂದ್ರದ ಮಾನದಂಡದಂತೆ ಮತ್ತೆ 21 ತಾಲೂಕುಗಳ ಬರ ಘೋಷಣೆಗೆ ಸಿದ್ದತೆ ನಡೆಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಈಗಾಗಲೇ ರಾಜ್ಯದ್ಯಂತ 195 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ. ಅಕ್ಟೋಬರ್ ತಿಂಗಳ ಕೊನೆಯ ವರೆಗೆ ಮತ್ತೊಂದು ಹಂತದಲ್ಲಿ ಬರ ಪೀಡಿತ ತಾಲೂಕುಗಳ ಘೋಷಿಸಲು ರಾಜ್ಯ ಸರ್ಕಾರಕ್ಕೆ ಅವಕಾಶ ಇದೆ. ಹೀಗಾಗಿ ಉಳಿದ 41 ತಾಲೂಕುಗಳ ಪೈಕಿ 11 ಜಿಲ್ಲೆಗಳ 21 ತಾಲೂಕುಗಳಲ್ಲಿ ಮುಂದಿನ ಎರಡು ದಿನಗಳಲ್ಲಿ ಬೆಳೆ ಸಮೀಕ್ಷೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಈ ಮಾಹಿತಿ ಕೈಗೆ ಸಿಗುತ್ತಿದ್ದಂತೆ ಬರ ಘೋಷಣೆ ಮಾಡಲಾಗುವುದು. ಈ ಸಂಬಂಧ ಕೇಂದ್ರಕ್ಕೆ ಮತ್ತೊಂದು ಮನವಿ (ಮೆಮೊರಾಂಡಮ್) ಸಲ್ಲಿಸಲಾಗುವುದು. ಈ ಬಗ್ಗೆ ಈಗಾಗಲೇ ಕೇಂದ್ರ ಬರ ಅಧ್ಯಯನ ತಂಡದ ಜೊತೆಗೂ ಚರ್ಚೆ ನಡೆಸಲಾಗಿದೆ. ಅವರೂ ಸಹ ಮತ್ತೊಂದು ಮನವಿ ಸಲ್ಲಿಸಲು ಒಪ್ಪಿಗೆ ನೀಡಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಕೇಂದ್ರಕ್ಕೆ ಇಂದು ಮತ್ತೊಂದು ಪತ್ರ
ಬರ ಘೋಷಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಾನದಂಡ ಅನಾನುಕೂಲತೆಯಿಂದ ಕೂಡಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವರು ಹಾಗೂ ಕೇಂದ್ರ ಕೃಷಿ ಸಚಿವರನ್ನು ಖುದ್ದು ಭೇಟಿ ಮಾಡಿ ಚರ್ಚಿಸಲು ಹಾಗೂ ಬರ ಘೋಷಣೆಗೆ ಸಂಬಂಧಿಸಿದಂತೆ ರಾಜ್ಯದ ಮನವಿ ಪತ್ರ ನೀಡಲು ಅವಕಾಶ ನೀಡುವಂತೆ ಇಂದು ಮತ್ತೊಂದು ಪತ್ರ ಬರೆಯಲಾಗುವುದು ಎಂದರು.
ಈ ಬಗ್ಗೆ ಮಾತನಾಡಿದ ಸಚಿವರು, “ಈ ಹಿಂದೆಯೇ ಕೇಂದ್ರದ ಸಚಿವರ ಭೇಟಿಗೆ ಅವಕಾಶ ನೀಡುವಂತೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಪತ್ರ ಬರೆದು ಒತ್ತಾಯಿಸಿದ್ದರು. ಆದರೆ, ಭೇಟಿಗೆ ಅವಕಾಶ ನೀಡಲಾಗಿರಲಿಲ್ಲ. ಆನ್ ಲೈನ್ ಮೂಲಕ ಮನವಿ ಪತ್ರ ಸಲ್ಲಿಸಲು ಸೂಚಿಸಲಾಗಿತ್ತು. ಹೀಗಾಗಿ ಎರಡನೇ ಹಂತದ ಬರ ಘೋಷಣೆ ಮನವಿಯನ್ನಾದರೂ ಖುದ್ದು ಭೇಟಿಯಾಗಿ ಸ್ವೀಕರಿಸುವಂತೆ ಇಂದು ಮತ್ತೊಂದು ಪತ್ರ ಬರೆಯಲಾಗುವುದು” ಎಂದರು.
ವಯನ್ನಾದರೂ ಖುದ್ದು ಭೇಟಿ ನ
ಸಣ್ಣ- ಅತಿಸಣ್ಣ ರೈತರ ವಾಸ್ತವ ಅಂಕಿಸಂಖ್ಯೆ ನೀಡಲಾಗುವುದು:
ರಾಜ್ಯದ ಸಣ್ಣ-ಅತಿಸಣ್ಣ ರೈತರ ಅಂಕಿಸಂಖ್ಯೆ ಬಗ್ಗೆ ಕೇಂದ್ರ ಸರ್ಕಾರದ ಬಳಿ ಇರುವ ಮಾಹಿತಿ ಅವಾಸ್ತವವಾಗಿದೆ. ಕೇಂದ್ರದ ಮಾಹಿತಿಯ ಪ್ರಕಾರ ರಾಜ್ಯದ ಸಣ್ಣ-ಅತಿಸಣ್ಣ ರೈತರ ಸಂಖ್ಯೆ ಶೇ.46 ರಷ್ಟು ಮಾತ್ರ. ಆದರೆ, ವಾಸ್ತವದಲ್ಲಿ ಈ ಸಂಖ್ಯೆ ಶೇ.60ಕ್ಕೂ ಅಧಿಕವಾಗಿದೆ. ಈ ಮಾಹಿತಿಯನ್ನು ಕೇಂದ್ರಕ್ಕೆ ದೃಢಪಡಿಸಲು ಕೆಲವು ಪೂರಕ ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ. ಇನ್ನೂ ಒಂದು ವಾರದಲ್ಲಿ ಈ ಮಾಹಿತಿಯನ್ನು ಕೇಂದ್ರಕ್ಕೆ ನೀಡಲಾಗುವುದು ಎಂದರು.
ಹಸಿರು ಬರಕ್ಕೆ ಕೇಂದ್ರ ತಂಡ ಒಪ್ಪಿಗೆ:
ಕೆಲವು ಬರ ಪೀಡಿತ ತಾಲೂಕುಗಳಲ್ಲಿ ಹಸಿರು ತೆನೆಗಳು ಕಾಣಿಸಿಕೊಳ್ಳುತ್ತಿವೆ. ಆದರೆ, ಬೆಳೆ ಮಾತ್ರ ರೈತರ ಕೈಸೇರುತ್ತಿಲ್ಲ. ಮನವಿ ಪತ್ರದಲ್ಲಿ ಇದನ್ನು ರಾಜ್ಯ ಸರ್ಕಾರ ಹಸಿರು ಬರ ಎಂದು ಉಲ್ಲೇಖಿಸಿತ್ತು. ಹಲವೆಡೆ ಬರ ಪರಿಶೀಲನೆ ನಡೆಸಿದ ಕೇಂದ್ರ ಅಧ್ಯಯನ ತಂಡಕ್ಕೆ ವಿಜ್ಞಾನಿಗಳ ಮೂಲಕ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡಲಾಗಿದೆ. ಹೀಗಾಗಿ ಹಸಿರು ಬರವನ್ನು ಕೇಂದ್ರದ ತಂಡವೂ ಒಪ್ಪಿಕೊಂಡಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.
ಫಜಲ್ ಭೀಮಾ ಯೋಜನೆ ಅನಾನುಕೂಲತೆಯ ಬಗ್ಗೆಯೂ ಚರ್ಚೆ
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅನಾನುಕೂಲವಾಗಿದೆ. ರಾಜ್ಯ ವಿಧಾನಮಂಡಲದಲ್ಲೂ ಈ ಬಗ್ಗೆ ಚರ್ಚೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಓಗಳ ಜೊತೆಗೆ ನಡೆಸಿದ ಚರ್ಚೆಯಲ್ಲೂ ವಿವಿಧ ಸಚಿವರು ಈ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಪ್ರಧಾನ ಮಂತ್ರಿ ಫಜಲ್ ಭೀಮಾ ಯೋಜನೆ ರೈತರ ಪರವಾಗಿಲ್ಲ, ಈ ಯೋಜನೆಯಲ್ಲಿ ಸಾಕಷ್ಟು ಅನಾನುಕೂಲತೆಗಳಿವೆ. ಈ ವಿಚಾರವನ್ನು ಕೇಂದ್ರದ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವಂತೆ ಬರ ಅಧ್ಯಯನ ತಂಡಕ್ಕೆ ಮನವಿ ಮಾಡಲಾಗಿದೆ ಎಂದರು.