ಗಡಿ ರಾಜ್ಯಗಳಲ್ಲಿ ಬಿಎಸ್ಎಫ್ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸುವ ಕೇಂದ್ರದ ನಿರ್ಧಾರವನ್ನು ಖಂಡಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯ ಪೊಲೀಸರ ಅನುಮತಿಯಿಲ್ಲದೆ ಬಿಎಸ್ಎಫ್ ಸಿಬ್ಬಂದಿ ಗ್ರಾಮಗಳಿಗೆ ಪ್ರವೇಶಿಸಕೂಡದು ಎಂದು ಸೂಚಿಸಿದ್ದರು.
ಈ ಕುರಿತು ರಾಜ್ಯಪಾಲ ಜಗದೀಪ್ ಧಂಖರ್ ಅವರು ಸಿಎಂ ಮಮತಾಗೆ ಪತ್ರ ಬರೆದು, “ನಿಮ್ಮ ನಿಲುವು ಒಕ್ಕೂಟ ವ್ಯವಸ್ಥೆ ಹಾಗೂ ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿಯಾಗಿದೆ. ಸಾಮರಸ್ಯ ಮತ್ತು ಸಹಕಾರದ ವಾತಾವರಣವನ್ನು ಸೃಷ್ಟಿಸಲು ಬಿಎಸ್ಎಫ್ ಕಾರ್ಯನಿರ್ವಹಣೆಯ ಕುರಿತು ತಮ್ಮ ನಿಲುವನ್ನು ಮರುಪರಿಶೀಲಿಸಬೇಕು’’ ಎಂದು ತಿಳಿಸಿದ್ದಾರೆ.
![](https://pratidhvani.com/wp-content/uploads/2021/12/PTI06_28_2021_000208B_1624894163860_1624894187847-1024x576.webp)
ರಾಜ್ಯಪಾಲರ ಪತ್ರಕ್ಕೆ ಪ್ರತಿಕ್ರಿಯಿಸಿರುವ ಟಿಎಂಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್, ರಾಜ್ಯಪಾಲ ಧಂಖರ್ ಅವರು ಬಿಜೆಪಿ ವಕ್ತಾರರಂತೆ ವರ್ತಿಸುವುದನ್ನು ಮೊದಲು ನಿಲ್ಲಿಸಬೇಕು. ರಾಜ್ಯಪಾಲರು ತಮ್ಮ ಹುದ್ದೆಯ ಘನತೆಯನ್ನು ಕಾಪಾಡಬೇಕು. ಒಕ್ಕೂಟ ವ್ಯವಸ್ಥೆಯ ಬಗ್ಗೆ ಮಾತನಾಡುವ ರಾಜ್ಯಪಾಲರು ಪಶ್ಚಿಮ ಬಂಗಾಳದಿಂದ ಡಾರ್ಜಿಲಿಂಗ್ ಬೆಟ್ಟಗಳನ್ನು ಬೇರ್ಪಡಿಸುವ ಕುರಿತು ಬಿಜೆಪಿ ಶಾಸಕರೊಬ್ಬರ ಬೇಡಿಕೆಯ ಬಗ್ಗೆ ಅವರ ನಿಲುವು ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಬಾಂಗ್ಲಾದೇಶ ಮತ್ತು ಪಾಕಿಸ್ತಾನದೊಂದಿಗೆ ತಮ್ಮ ಗಡಿಯನ್ನು ಹಂಚಿಕೊಳ್ಳುವ ರಾಜ್ಯಗಳಾದ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪಂಜಾಬ್ಗಳಲ್ಲಿ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ವ್ಯಾಪ್ತಿಯನ್ನು 15 ಕಿ.ಮೀ ನಿಂದ 50 ಕಿ.ಮೀ ವರೆಗೆ ವಿಸ್ತರಿಸಿ ಗೃಹ ಸಚಿವಾಲಯ ಇತ್ತೀಚೆಗೆ ಆದೇಶ ಹೊರಡಿಸಿತ್ತು.
ಪಶ್ಚಿಮ ಬಂಗಾಳ ಮತ್ತು ಪಂಜಾಬ್ ಎರಡೂ ಸರ್ಕಾರಗಳು ಕೇಂದ್ರದ ಕ್ರಮವನ್ನು ವಿರೋಧಿಸಿ ವಿಧಾನಸಭೆಯಲ್ಲಿ ಈ ಕುರಿತು ನಿರ್ಣಯಗಳನ್ನು ಅಂಗೀಕರಿಸಿವೆ. ನಾಡಿಯಾ ಜಿಲ್ಲೆಯ ಕೃಷ್ಣಾನಗರದಲ್ಲಿ ನಡೆದ ಆಡಳಿತ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಿಎಂ ಮಮತಾ, ಭದ್ರತಾ ಚೆಕ್ಪೋಸ್ಟ್ಗಳಲ್ಲಿ (ನಾಕಾ) ಹೆಚ್ಚು ಕಟ್ಟುನಿಟ್ಟಾಗಿ ಶೋಧ ನಡೆಸುವಂತೆ ಜಿಲ್ಲಾ ಪೊಲೀಸರಿಗೆ ಸೂಚಿಸಿದರು. “ಬಾಂಗ್ಲಾದೇಶದ ಗಡಿಯು ಕರೀಂಪುರದಿಂದ ಪ್ರಾರಂಭವಾಗುತ್ತದೆ ಮತ್ತು ನೀವು ಈ ಪ್ರದೇಶದಲ್ಲಿನ ಎಲ್ಲ ಚಟುವಟಿಕೆಗಳ ಮೇಲೆ ಕಣ್ಣಿಡಬೇಕು. ನಿಮ್ಮ ಅನುಮತಿಯಿಲ್ಲದೆ ಯಾವುದೇ ಚಟುವಟಿಕೆಯನ್ನು ಬಿಎಸ್ಎಫ್ ನಡೆಸುವುದಿಲ್ಲ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು. ಕಾನೂನು ಮತ್ತು ಸುವ್ಯವಸ್ಥೆ ರಾಜ್ಯದ ವಿಷಯವಾಗಿದ್ದು, ಸಾಮಾನ್ಯ ನಾಗರಿಕರ ಮೇಲೆ ಯಾವುದೇ ರೀತಿಯ ದಬ್ಬಾಳಿಕೆಯನ್ನು ನಾನು ಸಹಿಸುವುದಿಲ್ಲ,”ಎಂದು ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.
ಬಿಜೆಪಿ ನಾಯಕ ಸುವೇಂದು ಅಧಿಕಾರಿ ಮಮತಾ ನಿಲುವಿನ ಬಗ್ಗೆ ಟ್ವೀಟ್ ಮಾಡಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಎಸ್ಎಫ್ ಮತ್ತು ರಾಜ್ಯ ಪೊಲೀಸರ ನಡುವೆ ಬಿರುಕು ಮೂಡಿಸುತ್ತಿದ್ದಾರೆ. ಈ ರೀತಿಯಾದರೆ ರಾಜ್ಯದ ಮುಖ್ಯಮಂತ್ರಿಯಾಗುವಾಗ ಮಾಡಿದ ಪ್ರಮಾಣಕ್ಕೆ ಬದ್ಧರಾಗಿ, ಭಾರತದ ಸಂವಿಧಾನದ ಮೇಲೆ ನಂಬಿಕೆ ಮತ್ತು ನಿಷ್ಠೆಯನ್ನು ಹೇಗೆ ಹೊಂದುತ್ತಾರೆ? ಹಾಗೂ ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ಹೇಗೆ ಎತ್ತಿಹಿಡಿಯುತ್ತಾರೆ ಎಂಬುದು ನನಗೆ ಆಶ್ಚರ್ಯವಾಗಿದೆ,” ಎಂದು ಕುಟುಕಿದ್ದಾರೆ.