ಭಾರತದ ಅತಿ ದೊಡ್ಡ ಸಮಸ್ಯೆ ಎಂದರೆ ಜಾತಿ ವ್ಯವಸ್ಥೆ, ಹಾಗೂ ಅದು ಜನ ಸಮುದಾಯದ ನಡುವೆ ತಂದೊಡ್ಡಿರುವ ಅಸಮಾನತೆ. ಅಸಮಾನತೆ ತೊಡೆದು ಹಾಕಲು ಹಲವಾರು ಯೋಜನೆಗಳನ್ನು, ನೀತಿ ನಿಯಮಗಳನ್ನು ಸರ್ಕಾರ ರೂಪಿಸಿದಾಗ್ಯೂ ದಲಿತರ ಮೇಲೆ ನಡೆಯುವ ದೈಹಿಕ ದೌರ್ಜನ್ಯ ಪ್ರತೀ ದಿನದ ಸುದ್ದಿಯಾಗಿದೆ. ಆದರೆ, ದಲಿತರ ಮೇಲೆ ಆಗುತ್ತಿರುವ ಮಾನಸಿಕ ದೌರ್ಜನ್ಯಗಳು ವರದಿಯಾಗುವುದು ಕಡಿಮೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬೊಮ್ಮಗುಡ್ಡ ಗ್ರಾಮದಲ್ಲಿ ಈಗ ಅಂತಹದ್ದೇ ಪ್ರಕರಣವೊಂದು ಪತ್ತೆಯಾಗಿದೆ. ಈ ಪ್ರಕರಣದೊಂದಿಗೆ ಗ್ರಾಮದಲ್ಲಿ ಇನ್ನೂ ಅಸ್ಪಶ್ಯತೆ ಜೀವಂತವಿರುವುದು ಬೆಳಕಿಗೆ ಬಂದಿದೆ.
ಹೋಟೆಲ್ ಒಂದರಲ್ಲಿ ದಲಿತ ವ್ಯಕ್ತಿಯೊಬ್ಬರಿಗೆ ಮೇಲಿನಿಂದ ನೀರು ಸುರಿಯುವ ವೀಡಿಯೋ ಈಗ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಗ್ರಾಮದಲ್ಲಿ ಇವತ್ತಿಗೂ ಅಸ್ಪಶ್ಯತೆ ಆಚರಿಸುತ್ತಿದ್ದು, ಹೋಟೆಲುಗಳಲ್ಲಿ ಬೇರೆ ಪ್ರಬಲ ಜಾತಿಯ ಜನರು ಬಳಸುವ ಪಾತ್ರೆಗಳನ್ನು ದಲಿತರು ಬಳಸುವಂತಿಲ್ಲ ಎಂಬಂತಿದೆ.
ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಮಾಡಲಾಗುತ್ತಿದೆ ಎಂಬ ಮಾಹಿತಿಯಿಂದ ಯಾದಗಿರಿ ಎಸ್ಪಿ ವೇದಮೂರ್ತಿ ಹಾಗೂ ಸುರಪುರ ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಸತ್ಯನಾರಾಯಣ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾನೂನು ಅರಿವು ಮೂಡಿಸಿದ್ದಾರೆ.
ಗ್ರಾಮದ ಹೊಟೇಲ್ನಲ್ಲಿ ತಾರತಮ್ಯ ಮಾಡುವದು ಹಾಗೂ ದೇವಸ್ಥಾನಗಳಲ್ಲಿ ಒಳಗೆ ಪ್ರವೇಶ ತಡೆಯುವುದು ಕಾನೂನು ಪ್ರಕಾರ ಅಪರಾಧವಾಗಿದ್ದು, ಯಾರೇ ಇಂತಹ ಆಚರಣೆ ಮಾಡಿದಲ್ಲಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಹೋಟೆಲ್ಗಳಲ್ಲಿ ಕುಡಿಯುವ ನೀರು ಅಥವಾ ವಸ್ತಗಳನ್ನು ಖರೀದಿಸಲು ಬಂದ ಪರಿಶಿಷ್ಟ ಜಾತಿಯವರನ್ನು ನಿಂದಿಸುವುದು, ಅವಮಾನಿಸುವುದು ಮಾಡಿದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಅಸ್ಪೃಶ್ಯತೆ ತೋರುವ ಹೊಟೇಲ್ಗಳನ್ನು ಮುಚ್ಚಿಸಲು ಸ್ಥಳೀಯ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ಗ್ರಾಮಸ್ಥರನ್ನು ಎಚ್ಚರಿಸಿದ್ದಾರೆ.
ಯಾದಗಿರಿ ಜಿಲ್ಲೆಯ ಹಲವು ಹಳ್ಳಿಗಳಲ್ಲಿ ಅಸ್ಪಶ್ಯತೆ ಇನ್ನೂ ಆಚರಿಸುತ್ತಿರುವುದರಿಂದ ಇತ್ತೀಚೆಗಷ್ಟೇ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಅಸ್ಪೃಶ್ಯತೆ ಆಚರಿಸಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದರು.
ಜಿಲ್ಲೆಯ ಕಿಲ್ಲನಕೇರಿ ವ್ಯಾಪ್ತಿಯ ನೀಲಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ನಡೆ- ಹಳ್ಳಿಯ ಕಡೆ ಗ್ರಾಮ ವಾಸ್ತವ್ಯದ ಕಾರ್ಯಕ್ರಮದಲ್ಲಿ ಭಾಗಿಯಾದ ಜಿಲ್ಲಾಧಿಕಾರಿ ಡಾ. ರಾಗ ಪ್ರಿಯಾ ಅಸ್ಪೃಶ್ಯತೆ ಆಚರಿಸದಂತೆ ಜನತೆಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದರು.
ನೀಲಹಳ್ಳಿ ಗ್ರಾಮದ ಸ್ಥಳೀಯರು ಅಸ್ಪೃಶ್ಯತೆ ಆಚರಿಸುತ್ತಿದ್ದಾರೆ ಎನ್ನುವ ದೂರಿನ ಹಿನ್ನೆಲೆ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಗ್ರಾಮದ ಹೊಟೇಲ್ ಹಾಗೂ ದೇವಾಸ್ಥಾನಕ್ಕೆ ಖುದ್ಧಾಗಿ ತೆರಳಿ ಅಸ್ಪೃಶ್ಯತೆ ಆಚರಿದಂತೆ ಜಾಗೃತಿ ಮೂಡಿಸಿದ್ದರು. ನೀಲಹಳ್ಳಿ ಗ್ರಾಮದ ಸ್ಥಳೀಯ ನಿವಾಸಿಗಳನ್ನ ಹೊಟೇಲ್ ಒಳಗೆ ಪ್ರವೇಶಿಸಿ ನೀರು ಕುಡಿಸಿ ಬಂದಿದ್ದರು. ತದನಂತರ ದೇವಾಸ್ಥನಕ್ಕೆ ತೆರಳಿ ದೇವಾಸ್ಥಾನದ ಒಳಗೆ ಪ್ರವೇಶಿಸುವಂತೆ ಸ್ಥಳೀಯ ನಿವಾಸಿಗಳನ್ನು ಸೂಚಿಸಿ, ದೇವಾಸ್ಥಾನದ ಸಮಿತಿಯ ಸದಸ್ಯರಿಗೆ ಅಸ್ಪೃಶ್ಯತೆ ಆಚರಿಸಿದ್ರೆ ಕಾನೂನುಬದ್ಧ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಖಡಕ್ಕಾಗಿ ಎಚ್ಚರಿಕೆ ನೀಡಿದ್ದರು.
ಜಿಲ್ಲೆಯ ಹಲವು ಗ್ರಾಮಗಳಲ್ಲಿ ಪರಿಶಿಷ್ಟರಿಗೆ ಹೋಟೆಲ್ ಪ್ರವೇಶವಿಲ್ಲ. ಪ್ರತ್ಯೇಕ ಲೋಟ ಮತ್ತು ಜಾಗ ಇಂದಿಗೂ ಇದೆ. ಪರಿಶಿಷ್ಟರಿಗೆ ಮೃತಪಟ್ಟರೆ ಅವರ ಸಂಸ್ಕಾರಕ್ಕೆ ಬರುವವರು ತಮ್ಮ ಹೋಟೆಲ್ಗೆ ಬರುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಹೋಟೆಲ್ಗಳನ್ನು ಬಂದ್ ಮಾಡುವುದು ಕೆಲ ಗ್ರಾಮಗಳಲ್ಲಿ ರೂಢಿಯಿದೆ’‘ಊರಿಗೆ ನೆಂಟರು ಬಂದಾಗ ಹೋಟೆಲ್ಗೆ ಹೋಗಬೇಕಾಗುತ್ತದೆ. ಅಲ್ಲಿ ನಮಗೆ ಪ್ರತ್ಯೇಕ ವ್ಯವಸ್ಥೆ ಇರುವುದು ಮುಜುಗರ ಉಂಟುಮಾಡುತ್ತದೆ. ಅಲ್ಲದೇ ಜಿಲ್ಲೆಯ ಹಲವು ಹಳ್ಳಿಯಲ್ಲಿ ಪರಿಶಿಷ್ಟರು ಕುಡಿಯಲು ನೀರು ತರಲು ಕೊಳವೆಬಾವಿಗೆ ಹೋದರೆ ಮೇಲ್ವರ್ಗದವರೂ ನೀರು ಮುಟ್ಟಿಸದೇ ಬಿಂದಿಗೆಗೆ ಮೇಲಿಂದ ಎತ್ತಿಹಾಕುತ್ತಾರೆ’ ಎಂದು ಯಾದಗಿರಿಯಲ್ಲಿ ನಡೆಯುತ್ತಿರುವ ಅಸ್ಪಶ್ಯತಾ ಆಚರಣೆಯನ್ನು ದಲಿತರು ವಿವರಿಸುತ್ತಾರೆ.