ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಹುಲಿ ಉಗುರು ಹಾಕಿದ್ರು ಅನ್ನೋ ಕಾರಣಕ್ಕೆ ಅರೆಸ್ಟ್ ಮಾಡಲಾಗಿತ್ತು. ಆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಎಲ್ಲಾ ನಾಯಕ ನಟರು, ರಾಜಕಾರಣಿಗಳ ಮಕ್ಕಳ ಫೋಟೋಗಳು ವೈರಲ್ ಆಗುವುದಕ್ಕೆ ಶುರುವಾಯ್ತು. ಆ ಬಳಿಕ ಇರಲಿ ಅಂತಾ ಎಲ್ಲಾ ನಾಯಕ ನಟರು ಹಾಗು ರಾಜಕಾರಣಿಗಳ ಮನೆಯಿಂದಲೂ ಹುಲಿ ಉಗುರಿನ ಪೆಂಡೆಂಟ್ ವಶಕ್ಕೆ ಪಡೆಯಲಾಗಿದೆ. ಆದರೆ ಎಲ್ಲರೂ ಹೇಳಿದ್ದೇ ಹೇಳಿದ್ದು, ಅದು ಸಿಂಥೆಟಿಕ್, ಅದು ಪ್ಲಾಸ್ಟಿಕ್, ಅದು ಹುಲಿ ಉಗುರು ಅಲ್ಲ, ಅದು ಮದುವೆಯಲ್ಲಿ ಸ್ನೇಹಿತರು ಗಿಫ್ಟ್ ಮಾಡಿದ್ದು ಎಂದಿದ್ದಾರೆ. ಆದರೆ ಅದೆಲ್ಲಾ ನಕಲಿನಾ..? ಪ್ಲಾಸ್ಟಿಕ್ ನಿಜನಾ ಎನ್ನುವಂತಾಗಿದೆ.
![](https://pratidhvani.com/wp-content/uploads/2023/10/Varthur-Santosh-1024x576.jpg)
ಸವದಿ ಪುತ್ರ, ಚಿನ್ನದ ಅಂಗಡಿ ಮಾಲೀಕ ಹಾಕಿದ್ದು ಪ್ಲಾಸ್ಟಿಕ್ ಉಗುರು..!!
![](https://pratidhvani.com/wp-content/uploads/2023/10/1200-675-19871460-thumbnail-16x9-don223-1024x576.jpg)
ಬೆಳಗಾವಿಯ ಚಿಕ್ಕೋಡಿಯಲ್ಲಿ ಲಕ್ಷ್ಮಣ್ ಸವದಿ ಪುತ್ರ ಸುಮಿತ್ ಸವದಿ ಹುಲಿ ಉಗುರು ಪೆಂಡೆಂಟ್ ಧರಿಸಿದ್ದ ಫೋಟೋ ವೈರಲ್ ಆಗಿತ್ತು. ಈ ಬಗ್ಗೆ ಅರಣ್ಯ ಅಧಿಕಾರಿಗಳು ಕೂಡ ಮನೆಗೆ ಭೇಟಿ ಕೊಟ್ಟು ಹುಲಿ ಉಗುರು ಎನ್ನಲಾದ ಪೆಂಡೆಂಟ್ ವಶಕ್ಕೆ ಪಡೆಯಲಾಗಿದೆ. ಸುಮಿತ್ ಸವದಿ ಅವರ ಅಣ್ಣ ಚಿದಾನಂದ ಸವದಿ, ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನನ್ನ ಸಹೋದರನ ಬಳಿ ಇರೋದು ಪ್ಲಾಸ್ಟಿಕ್ ಉಗುರು. ಮದುವೆ ಸಮಾರಂಭದಲ್ಲಿ ಅವನ ಗೆಳೆಯರು ಉಡುಗರೆಯಾಗಿ ನೀಡಿದ್ದರು. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಪ್ಲಾಸ್ಟಿಕ್ ಉಗುರನ್ನ ಹಸ್ತಾಂತರಿಸಿದ್ದೇವೆ. ಅಲ್ಲದೇ ಅರಣ್ಯ ಅಧಿಕಾರಿಗಳ ಯಾವುದೇ ರೀತಿಯ ತನಿಖೆಗೆ ನಾವು ಸಹಕರಿಸುತ್ತೇವೆ ಅಂತಾನು ಚಿದಾನಂದ ಸವದಿ ಹೇಳಿದ್ರು.
ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಹಾಕಿದ್ದೂ ನಕಲಿ ಉಗುರು..!
![](https://pratidhvani.com/wp-content/uploads/2023/10/tiger-claw-pendant-Hebbalkar-1.webp)
ರಾಜ್ಯ ಸಚಿವ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಆಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃನಾಲ್ ಕೂಡ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಫೋಟೋ ವೈರಲ್ ಆಗಿತ್ತು. ಈ ಹಿನ್ನೆಲೆ ಬೆಳಗಾವಿಯ ಕುವೆಂಪುನಗರದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮನೆಗೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಡಿಎಫ್ಒ ಶಂಕರ ಕಲ್ಲೋಳಿಕರ್ ಮತ್ತು ಎಸಿಎಫ್ ಸುರೇಶ ತೇಲಿ ಭೇಟಿ ನೀಡಿದ್ದ ವೇಳೆ, ಇದು ಪ್ಲಾಸ್ಟಿಕ್ ಹುಲಿ ಉಗುರಿನ ಪೆಂಡೆಂಟ್, ನಿಜವಾದ ಹುಲಿ ಉಗುರಲ್ಲ.. ಮದುವೆ ಸಂದರ್ಭದಲ್ಲಿ ಸಂಬಂಧಿಕರು ಗಿಫ್ಟ್ ಕೊಟ್ಟಿದ್ದರು ಅಂತಾ ಹೇಳಿದ್ದಾರೆ. ಜೊತೆಗೆ ಅರಣ್ಯ ಅಧಿಕಾರಿಗಳ ತನಿಖೆಗೆ ಸಂಪೂರ್ಣ ಸಹಕಾರ ಕೊಡ್ತೀವಿ ಅಂತಾನೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಹೆಬ್ಬಾಳ್ಕರ್ ಅಳಿಯನ ಕೊರಳಲ್ಲೂ ಅದೇ ನಕಲಿ..!
![](https://pratidhvani.com/wp-content/uploads/2023/10/tigerclawpendant2-1698322234-1024x576.jpg)
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಗ ಅಷ್ಟೇ ಅಲ್ಲದೆ ಅಳಿಯನ ಕೊರಳಲ್ಲಿಯೂ ಹುಲಿ ಉಗುರು ಎನ್ನಲಾದ ಪೆಂಡೆಂಟ್ ಪತ್ತೆಯಾಗಿದೆ. ಹುಬ್ಬಳ್ಳಿಯ ಕಾಂಗ್ರೆಸ್ ಯುವ ಮುಖಂಡ ರಜತ್ ಉಳ್ಳಾಗಡ್ಡಿ ಕೊರಳಲ್ಲೂ ಹುಲಿ ಉಗುರು ಲಾಕೆಟ್ ಧರಿಸಿದ್ದ ಫೋಟೋಗಳು ವೈರಲ್ ಆಗಿದ್ದವು. ಆ ಬಳಿಕ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಪರಿಮಳಾ ನೇತೃತ್ವದಲ್ಲಿ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿರುವ ರಜತ್ ಉಳ್ಳಾಗಡ್ಡಿ, ನಾನು ಹಾಕಿದ್ದ ಪೆಂಡೆಂಟ್ ಹುಲಿ ಉಗುರಿನದ್ದು ಅಲ್ಲ. ಅದೇ ಮಾದರಿಯದ್ದು ಅಷ್ಟೇ. ಮದುವೆ ಸಂದರ್ಭದಲ್ಲಿ ಈವೆಂಟ್ ಮ್ಯಾನೇಜ್ಮೆಂಟ್ನವರು ನನಗೆ ಹಾಕಿದ್ದರು. ಅದು ನನ್ನ ಸ್ವಂತದ್ದೂ ಅಲ್ಲ ಎಂದಿದ್ದಾರೆ.
ಇವರೆಲ್ಲಾ ಸತ್ಯವನ್ನೇ ಹೇಳಿದ್ರಾ..? ಅದು ಪ್ಲಾಸ್ಟಿಕ್ ಹೌದ..?
![](https://pratidhvani.com/wp-content/uploads/2023/10/nikil-1024x576.webp)
ಮಾಜಿ ಸಿಎಂ ಕುಮಾರಸ್ವಾಮಿ ಕೂಡ ನಿಖಿಲ್ ಕುಮಾರಸ್ವಾಮಿ ಹಾಕಿದ್ದ ಪೆಂಡೆಂಟ್ ಹುಲಿ ಉಗುರಿನದ್ದು ಅಲ್ಲ. ಅದು ಸಿಂಥೆಟಿಕ್ ಎಂದಿದ್ದರು. ಅದು ಹೇಗೆ..? ಎಲ್ಲಾ ರಾಜಕಾರಣಿಗಳು ಹಾಗು ಸಿನಿಮಾ ನಟರು ಹಾಕಿಕೊಂಡಿದ್ದ ಎಲ್ಲಾ ಹುಲಿ ಉಗುರಿನ ಪೆಂಡೆಂಟ್ ನಕಲಿ ಆಗಿದ್ದು..? ಅನ್ನೋದು ಜನರ ಮನಸ್ಸಲ್ಲಿ ಗಟ್ಟಿಯಾಗಿ ಉಳಿದುಕೊಂಡಿದೆ. ಒಬ್ಬ ವರ್ತೂರು ಸಂತೋಷ್ ಬಂಧನ ಆಗ್ತಿದ್ದ ಹಾಗೆ ಅಸಲಿ ಪೆಂಡೆಂಟ್ ಇದ್ದರೂ ನಕಲಿ ಪೆಂಡೆಂಟ್ ತಂದು ಅಧಿಕಾರಿಗಳಿಗೆ ಕೊಡದೆ ಇರುವಷ್ಟು ದಡ್ಡರೇ..? ಅನ್ನೋದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಅಸಲಿ ಉಗುರನ್ನು ಮರೆಮಾಚಿ ನಕಲಿ ಪೆಂಡೆಂಟ್ ಕೊಟ್ಟರೆ ಅರಣ್ಯ ಅಧಿಕಾರಿಗಳು ಇದಲ್ಲ ಅದು ಬೇರೆ ಎಂದು ಹೇಳುವಷ್ಟು ಸರ್ವಶಕ್ತರೇ..? ಇಲ್ಲಾ ಅಂದ್ಮೇಲೆ ಸರ್ಕಾರವೇ ಇರಲಿ, ಕಾನೂನೇ ಇರಲಿ ದಾಳಿ ಮಾಡುವುದು ಬಡವರ ಮೇಲೆ ಮಾತ್ರ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ.
–ಕೃಷ್ಣಮಣಿ