ಮುಂಬೈ ಮೂಲದ ಮೊಗವೀರ ಕೋ-ಆಪರೇಟಿವ್ ಬ್ಯಾಂಕ್ನ ಹಣಕಾಸು ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಿದೆ. ಬ್ಯಾಂಕ್ನ ಆರ್ಥಿಕ ಪರಿಸ್ಥಿತಿ ಕುರಿತು ಗಂಭೀರ ಕಳವಳ ವ್ಯಕ್ತಪಡಿಸಿರುವ ಆರ್ಬಿಐ, ಠೇವಣಿದಾರರ ಹಿತಾಸಕ್ತಿ ರಕ್ಷಿಸುವ ಉದ್ದೇಶದಿಂದ ಹಲವು ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಿದೆ.ಹೊಸ ನಿರ್ದೇಶನಗಳ ಪ್ರಕಾರ, ಬ್ಯಾಂಕ್ನ ಉಳಿತಾಯ, ಚಾಲ್ತಿ ಅಥವಾ ಇತರ ಯಾವುದೇ ಖಾತೆಗಳಿಂದ ಗ್ರಾಹಕರು ಗರಿಷ್ಠ ₹1 ಲಕ್ಷದವರೆಗೆ ಮಾತ್ರ ಹಣವನ್ನು ಹಿಂಪಡೆಯಲು ಅವಕಾಶವಿದೆ. ಈ ನಿರ್ಬಂಧವು ಪ್ರಾಥಮಿಕವಾಗಿ ಆರು ತಿಂಗಳ ಕಾಲ ಜಾರಿಯಲ್ಲಿರಲಿದ್ದು, ಬಳಿಕ ಪರಿಸ್ಥಿತಿಯನ್ನು ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ.

ಇದೀಗ ಬ್ಯಾಂಕ್ ಹೊಸ ಠೇವಣಿಗಳನ್ನು ಸ್ವೀಕರಿಸಲು, ಹೊಸ ಸಾಲಗಳನ್ನು ಮಂಜೂರು ಮಾಡಲು ಅಥವಾ ಈಗಿರುವ ಸಾಲಗಳನ್ನು ಮರುನವೀಕರಿಸಲು ಸಾಧ್ಯವಿಲ್ಲ. ಜೊತೆಗೆ ಹೊಸ ಹೂಡಿಕೆಗಳು ಹಾಗೂ ಹೆಚ್ಚುವರಿ ಹಣಕಾಸು ಹೊಣೆಗಾರಿಕೆಗಳನ್ನು ಸ್ವೀಕರಿಸುವುದಕ್ಕೂ ನಿರ್ಬಂಧ ವಿಧಿಸಲಾಗಿದೆ.ಆರ್ಬಿಐ ಮಾಹಿತಿ ಪ್ರಕಾರ, ಬ್ಯಾಂಕ್ನ ದ್ರವ್ಯತೆ (Liquidity) ಸ್ಥಿತಿ ದುರ್ಬಲವಾಗಿರುವ ಕಾರಣ ಗ್ರಾಹಕರಿಗೆ ಹಣ ಪಾವತಿಸುವ ಸಾಮರ್ಥ್ಯದ ಮೇಲೆ ಒತ್ತಡ ಉಂಟಾಗಿದೆ. ಇದೇ ಹಿನ್ನೆಲೆಯಲ್ಲಿ ಬ್ಯಾಂಕ್ನ ಹಣಕಾಸು ಸ್ಥಿರತೆ ಕಾಪಾಡಲು ಮತ್ತು ಎಲ್ಲ ಠೇವಣಿದಾರರಿಗೂ ಕನಿಷ್ಠ ಮಟ್ಟದ ಹಣ ಲಭ್ಯವಾಗುವಂತೆ ಈ ಕ್ರಮಗಳನ್ನು ಜಾರಿಗೆ ತರಲಾಗಿದೆ.

ಬ್ಯಾಂಕ್ನ ನಿರ್ದೇಶಕರ ಮಂಡಳಿ ಹಾಗೂ ಆಡಳಿತ ಮಂಡಳಿಯೊಂದಿಗೆ ಆರ್ಬಿಐ ನಿರಂತರ ಸಂಪರ್ಕದಲ್ಲಿದ್ದು, ಪರಿಸ್ಥಿತಿ ಸುಧಾರಿಸಲು ಹಲವು ಸಲಹೆಗಳನ್ನು ನೀಡಿದೆ. ಆದರೆ, ಬ್ಯಾಂಕ್ ಆಡಳಿತದಿಂದ ಸಮರ್ಪಕ ಸುಧಾರಣಾ ಕ್ರಮಗಳು ಕಂಡುಬರದ ಹಿನ್ನೆಲೆಯಲ್ಲಿ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.ಆದರೆ, ಬ್ಯಾಂಕ್ನ ಬ್ಯಾಂಕಿಂಗ್ ಪರವಾನಗಿಯನ್ನು (Licence) ರದ್ದುಗೊಳಿಸಲಾಗಿಲ್ಲ ಎಂಬುದನ್ನು ಆರ್ಬಿಐ ಸ್ಪಷ್ಟಪಡಿಸಿದೆ. ಬ್ಯಾಂಕ್ ಸಂಪೂರ್ಣವಾಗಿ ಮುಚ್ಚಲ್ಪಟ್ಟಿಲ್ಲ ಮತ್ತು ನಿಯಮಗಳಿಗೆ ಅನುಗುಣವಾಗಿ ತನ್ನ ಮೂಲಭೂತ ಬ್ಯಾಂಕಿಂಗ್ ಸೇವೆಗಳನ್ನು ಮುಂದುವರಿಸಬಹುದು.
ಬ್ಯಾಂಕ್ನ ಆರ್ಥಿಕ ಪರಿಸ್ಥಿತಿ ಸುಧಾರಿಸಿದರೆ, ಮುಂದಿನ ದಿನಗಳಲ್ಲಿ ಈ ನಿರ್ಬಂಧಗಳನ್ನು ಸಡಿಲಿಸುವ ಅಥವಾ ಹಿಂತೆಗೆದುಕೊಳ್ಳುವ ಸಾಧ್ಯತೆಯೂ ಇದೆ ಎಂದು ಆರ್ಬಿಐ ತಿಳಿಸಿದೆ. ಹೀಗಾಗಿ ಖಾತೆದಾರರು ಆತಂಕಪಡುವ ಬದಲು ಅಧಿಕೃತ ಮಾಹಿತಿಗಳತ್ತ ಗಮನಹರಿಸುವಂತೆ ಸಲಹೆ ನೀಡಲಾಗಿದೆ.






