
ಬೆಂಗಳೂರಿನಲ್ಲಿ ನಡೆಯುತ್ತಿರೋ ಚಲನಚಿತ್ರೋತ್ಸವ ಉದ್ಘಾಟನಾ ಕಾರ್ಯಕ್ರಮಕ್ಕೆ ಸ್ಟಾರ್ ನಟ-ನಟಿಯರು ಗೈರಾದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ರು.. ನಿಮ್ಮ ನಟ್ಟು ಬೋಲ್ಟ್ ಟೈಟ್ ಮಾಡೋದು ಗೊತ್ತು. ಇದನ್ನು ವಾರ್ನ್ ಅಂತಾ ಆದ್ರೂ ಅಂದ್ಕೊಳಿ, ಮನವಿ ಅಂತಾ ಆದ್ರೂ ಅನ್ಕೊಳಿ ಅಂತ ಎಚ್ಚರಿಸಿದ್ರು.. ಇದೇ ವಿಚಾರಕ್ಕೆ ಮಾತಾಡಿರೋ ಆರ್ ಅಶೋಕ್, ನಿಮ್ಮ ಸಚಿವ ರಾಜಣ್ಣ ಅವರ ನಟ್ ಬೋಲ್ಟನ್ನೇ ಟೈಟ್ ಮಾಡೋಕೆ ಆಗಿಲ್ಲ. ಇನ್ನು ಯಶ್, ಸುದೀಪ್, ದರ್ಶನ್ ಅವರ ನಟ್ ಬೋಲ್ಟನ್ನೂ ಟೈಟ್ ಮಾಡೋಕೆ ಆಗುತ್ತಾ..? ಅವರ ಸಿನಿಮಾಗಳೇನು ನಿಮ್ಮ ಆಶೀರ್ವಾದಿಂದ ಗೆದ್ದಿದ್ದಾವಾ..? ಎಂದು ತಿರುಗೇಟು ಕೊಟ್ಟಿದ್ದಾರೆ.

ಕೊಪ್ಪಳದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಡಿ.ಕೆ ಶಿವಕುಮಾರ್ ಬೆದರಿಕೆ ವಿಚಾರಕ್ಕೆ ತಿರುಗೇಟು ಕೊಟ್ಟಿದ್ದು, ಅದರ ಬಗ್ಗೆ ಮಾತನಾಡೋ ಅವಶ್ಯಕತೆ ಇಲ್ಲ. ಯಾರು ಬೆಂಬಲ ಕೊಟ್ಟಿದ್ದಾರೋ ಬಿಟ್ಟಿದ್ದಾರೋ ಅನ್ನೋದಲ್ಲ. ಅವರಿಗೆ ರಾಜ್ಯದ ಜನ 138 ಸ್ಥಾನ ಕೊಟ್ಟಿದ್ದಾರೆ. ನಟ್ ಬೋಲ್ಟ್ ಸರಿಮಾಡಲು ಜನ ಅಧಿಕಾರ ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.

ಡಿ.ಕೆ ಶಿವಕುಮಾರ್ ಹೇಳಿಕೆಗೆ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದ್ದು, ಸಿನಿಮಾ ರಂಗದಲ್ಲಿ ಇರುವ ಕಲಾವಿದರು, ನಿರ್ದೇಶಕರು, ನಿರ್ಮಾಪಕರಿಗೆ ಸಮಾಜದ ಆಗು ಹೋಗುಗಳ ಬಗ್ಗೆ ಪ್ರಜ್ಞೆ ಇದೆ. ಯಾವ ಸಂದರ್ಭದಲ್ಲಿ ಯಾವ ಹೋರಾಟ ಕೈ ಜೋಡಿಸಬೇಕೆಂಬುದು ಅವರ ವೈಯಕ್ತಿಕ ವಿಚಾರ. ರಾಜಕೀಯವಾಗಿ ಒಂದು ಪಕ್ಷದ ಜೊತೆ ಗುರುತಿಸಿಕೊಳ್ಳೋದಕ್ಕೆ ಬಹುಶಃ ಕಲಾವಿದರು ಹಿಂದೆ ಸರಿದಿರಬಹುದು. ಹಾಗಾಗಿ ಈ ರೀತಿ ನಟ್ ಬೋಲ್ಟ್ ಟೈಟ್ ಮಾಡ್ತೀನಿ ಅನ್ನೋದು ಸರಿಯಲ್ಲ. ಈ ವಿಷಯಗಳನ್ನ ಬಿಟ್ಟು ಎಲ್ಲರನ್ನ ಗೌರವಯುತವಾಗಿ ನಡೆದುಕೊಳ್ಳುವುದು ಕಲಿಯಬೇಕು ಎಂದಿದ್ದಾರೆ.

ರಾಜಕಾರಣಿಗಳ ಮಕ್ಕಳು ಚಿತ್ರರಂಗದಿಂದ ವಾಪಸ್ ರಾಜಕೀಯಕ್ಕೆ ಬಂದ ವಿಚಾರವಾಗಿ ಮಾತನಾಡಿ, ಡಿಸಿಎಂ ಡಿ.ಕೆ ಶಿವಕುಮಾರ್ಗೆ ತಿರುಗೇಟು ನೀಡಿದ ನಿಖಿಲ್ ಕುಮಾರಸ್ವಾಮಿ, ಕುಮಾರಣ್ಣ ವೃತಿ ಪ್ರಾರಂಭ ಮಾಡಿದ್ದು ಸಿನಿಮಾ ಹಂಚಿಕೆದಾರಾಗಿ. ಚಿತ್ರ ಪ್ರದರ್ಶನದ ವೇಳೆ ಹಲವಾರು ಸಿನಿಮಾಗಳನ್ನ ನಾನು ನೋಡಿದ್ದೇನೆ. 200 ಕ್ಕೂ ಹೆಚ್ಚು ಸಿನಿಮಾಗಳ ವಿತರಣೆ ಮಾಡಿ ಯಶಸ್ವಿ ವಿತರಕರಾಗಿ ಕೆಲಸ ಮಾಡಿದ್ದಾರೆ. ಆ ಹಿನ್ನೆಲೆಯಲ್ಲಿ ನನಗೂ ಸಹ ನನ್ನ ವೃತಿ ಬದುಕು, ರಾಜಕಾರಣ ಹೊರತುಪಡಿಸಿ ಸಿನಿಮಾ ರಂಗದಲ್ಲಿ ಪ್ರಾರಂಭ ಮಾಡಬೇಕು ಅಂತ ಕನಸು ಕಲ್ಪನೆ ಹೊತ್ತಿದ್ದೆ. ಬಹಳ ವರ್ಷಗಳ ತಯಾರಿ ಮಾಡ್ಕೊಂಡು ಜಾಗ್ವಾರ್ ಸಿನಿಮಾ ಮೂಲಕ ಎಂಟ್ರಿ ಕೊಟ್ಟೆ. ಹಾಗಾಗಿ ಸಿನಿಮಾ ರಂಗ ನಮಗೆ ಹೊಸದೇನು ಅಲ್ಲ ಎಂದಿದ್ದಾರೆ.

ನಟ್ ಬೋಲ್ಟ್ ಸರಿ ಮಾಡ್ತೇನೆ ಅಂತ ಧಮ್ ಕೊಡೋದು ಸರಿಯಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಸಿನಿಮಾ ಕಲಾವಿದರ ನಟ್ ಬೋಲ್ಟ್ ಸರಿ ಮಾಡ್ತೇನೆ ಅನ್ನೋ ಡಿ.ಕೆ ಶಿವಕುಮಾರ್ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ. ಪಾದಯಾತ್ರೆ ವೇಳೆ ಕಲಾವಿದರು ಬೆಂಬಲಿಸಿಲ್ಲ ಅನ್ನೋದನ್ನ ಒಪ್ಪೋಣ, ಹೋರಾಟಕ್ಕೆ ಬರಬೇಕೋ ಬೇಡವೋ ಅನ್ನೋದು ಅವರಿಗೆ ಬಿಟ್ಟ ವಿಚಾರ. ನಾವು ಅದನ್ನು ಹೇಳೋ ಅವಶ್ಯಕತೆ ಇಲ್ಲ. ಗೋಕಾಕ್ ವರದಿ ಜಾರಿ ಹೋರಾಟದ ಸಂದರ್ಭದಲ್ಲಿ ರಾಜಕುಮಾರ್ ಸ್ವಯಂ ಪ್ರೇರಿತರಾಗಿ ಧುಮುಕಿದ್ದರು. ಅವರೇ ಹೋರಾಟದ ನೇತೃತ್ವ ತೆಗೆದುಕೊಂಡಿದ್ದರು. ಕನ್ನಡ ಚಲನಚಿತ್ರ ರಂಗದ ಕಲಾವಿದರು ಇದರ ಬಗ್ಗೆ ವಿಚಾರ ಮಾಡಬೇಕು. ಅವರು ಹೊರಟಕ್ಕೆ ಬರದೇ ಇದ್ದಲ್ಲಿ ಜನರೇ ತೀರ್ಮಾನಿಸ್ತಾರೆ. ಕನ್ನಡ ಚಲನಚಿತ್ರ ಕಲಾವಿದರ ಬಗ್ಗೆ ಕನ್ನಡಿಗರೇ ತೀರ್ಮಾನ ಕೈಗೊಳ್ತಾರೆ. ಹೊರಾಟಕ್ಕೆ ಬನ್ನಿ ಅಂತ ಬೆದರಿಕೆ ಹಾಕೋದು ಸರಿಯಲ್ಲ ಎಂದಿದ್ದಾರೆ.