ರಾಜ್ಯ ರಾಜಕಾರಣದಲ್ಲಿ ಜೋಡೆತ್ತು ಎಂದು ಖ್ಯಾತಿ ಪಡೆದಿದ್ದ ಡಿ.ಕೆ ಶಿವಕುಮಾರ್ ಹಾಗು ಕುಮಾರಸ್ವಾಮಿ ಇದೀಗ ಪರಸ್ಪರ ಎದುರಾಳಿಗಳಾಗಿ ಬದಲಾಗಿದ್ದಾರೆ. ಕಳೆದೊಂದು ವಾರದಿಂದ ಪರಸ್ಪರ ವಾದ ಪ್ರತಿವಾದ ಮಾಡ್ತಿರೋ ಇಬ್ಬರು ನಾಯಕರು ತೀರ ವಯಕ್ತಿಕವಾಗಿಯೂ ವಾಗ್ದಾಳಿ ನಡೆಸುತ್ತಿದ್ದಾರೆ. ನಿನ್ನೆ ಡಿ.ಕೆ ಶಿವಕುಮಾರ್ ಕೇಳಿದ್ದ ಪ್ರಶ್ನೆಗಳಿಗೆ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಉತ್ತರ ಕೊಡುವ ಜೊತೆಗೆ ಡಿ.ಕೆ ಶಿವಕುಮಾರ್ ಸವಾಲನ್ನು ಒಪ್ಪಿಕೊಂಡು ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದಾರೆ. ಕುಮಾರಸ್ವಾಮಿ ಸುದ್ದಿಗೋಷ್ಠಿಯನ್ನು ಟಿವಿಯಲ್ಲಿ ವೀಕ್ಷಣೆ ಮಾಡ್ತಿದ್ದ ಡಿಸಿಎಂ ಡಿಕೆ ಶಿವಕುಮಾರ್, ಉತ್ತರ ಕೊಡುವುದಕ್ಕೆ ತಯಾರಿ ಮಾಡಿಕೊಂಡಿದ್ದರು. ಆದರೆ ಕುಮಾರಸ್ವಾಮಿ ಆರೋಪಗಳ ಪಟ್ಟಿ ನೋಡ್ತಿದ್ದ ಹಾಗೆ ಮೌನಕ್ಕೆ ಶರಣಾದ ಡಿಸಿಎಂ, ಏನನ್ನೂ ಮಾತನಾಡದೆ ಅವನು ಹೇಳ್ತಾನೆ, ನಾನು ಹೇಳ್ತೇನೆ. ಬೇಡ ಬಿಡಿ ಬಹಿರಂಗ ಚರ್ಚೆಯಲ್ಲೇ ಉತ್ತರ ಕೊಡ್ತೇನೆ ಎಂದಷ್ಟೆ ಹೇಳಿ ಚರ್ಚೆಗೆ ಇತಿಶ್ರೀ ಹಾಡುವ ಸೂಚನೆ ಕೊಟ್ಟಿದ್ದಾರೆ.
ಕುಮಾರಸ್ವಾಮಿ ಕೊಟ್ಟ ಆರೋಪಗಳ ಸುರಿಮಳೆ ಹೇಗಿದೆ..?
ವಿಜಯ ದಶಮಿ ಹಬ್ಬದ ದಿನ ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ.ಕೆ ಶಿವಕುಮಾರ್ ವೈಯಕ್ತಿಕವಾಗಿ ನನ್ನ ಮೇಲೆ ವಾಗ್ದಾಳಿ ಮಾಡಿದ್ದಾರೆ. ಡಿಸಿಎಂ ಒಂದು ಸವಾಲನ್ನೂ ಹಾಕಿದ್ದಾರೆ. ಟಿಆರ್ಪಿ ಚಾನೆಲ್ನಲ್ಲಿ ಡಿಬೆಟ್ಗೆ ರೆಡಿ ಅಂತ ಹೇಳಿದ್ದಾರೆ. ಅವರ ಸವಾಲನ್ನು ನಾನೂ ಸ್ವೀಕಾರ ಮಾಡ್ತೀನಿ, ಕದ್ದು ಪಲಾಯನ ಮಾಡಲ್ಲ. ನನ್ನ ಬಳಿ ಇರುವ ಸರಕು ಪಲಾಯನ ಮಾಡುವಂತದ್ದು ಅಲ್ಲ ಎಂದಿದ್ದಾರೆ. ಸಿಎಂ ಶ್ವೇತಪತ್ರ ಹೊರಡಿಸಲು ನನ್ನ ಸಂಪೂರ್ಣ ಸಹಕಾರ ಇದೆ. ಬಿಜೆಪಿಯ ಆಡಳಿತದಿಂದ ಆರ್ಥಿಕ ಪರಿಸ್ಥಿತಿ ಹಾಳಾಗಿದೆ ಅಂತಾರೆ. 2018 ರಲ್ಲಿ ಚುನಾವಣೆಗೆ ಹೋಗುವ ಮುನ್ನ ವಸತಿ ಇಲಾಖೆಯಲ್ಲಿ ಮನೆ ನಿರ್ಮಾಣಕ್ಕೆ ಎಲ್ಲರಿಗೂ ಆದೇಶ ಹೊರಡಿಸಿದ್ರು. ಆದ್ರೆ ಕೇವಲ 2,700 ಕೋಟಿ ಅನುದಾನ ಅಷ್ಟೇ ಮೀಸಲಿಟ್ಟಿದ್ರು. ನೀರಾವರಿ ಯೋಜನೆಗಳನ್ನ ಘೋಷಣೆ ಮಾಡಿ ಅಸ್ತಿಭಾರ ಹಾಕೊಂಡು ಬಂದ್ರು. ಆದ್ರೆ ಬಜೆಟ್ನಲ್ಲಿ ಹಣ ಎಷ್ಟು ಇಟ್ಟಿದ್ರು ಅಂತಾ ಪ್ರಶ್ನಿಸಿದ್ದಾರೆ. ಈ ಮೂಲಕ ಮೈತ್ರಿ ಪಕ್ಷ ಬಿಜೆಪಿಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಟೆಂಡರ್ ಕರೆದು ಕಮಿಷನ್ ವಸೂಲಿ ಮಾಡಿಕೊಂಡ ಆರೋಪ..!
2013 ರಿಂದ 2018ರ ತನಕ ಅಧಿಕಾರದಲ್ಲಿದ್ದ ಕಾಂಗ್ರೆಸ್ ಚುನಾವಣೆಗೆ ಹೋಗುವ ಮೊದಲು ಹಣಕಾಸು ಇಲಾಖೆ ಒಪ್ಪಿಗೆ ಇಲ್ಲದೆ ಟೆಂಡರ್ ಕರೆದು ಗುತ್ತಿಗೆದಾರರಿಂದ ಕಮಿಷನ್ ವಸೂಲಿ ಮಾಡಿದ್ದಾರೆ. ಪಿಡಬ್ಲೂಡಿ ಇಲಾಖೆಯಲ್ಲಿ 1,500 ಕೋಟಿ ಅವಾರ್ಡ್ ಮಾಡಿ, ಯಾವ ಯಾವ ಕಂಟ್ರಾಕ್ಟರ್ಗಳಿಂದ ಎಷ್ಟೆಷ್ಟು ವಸೂಲಿ ಮಾಡಿದ್ದೀರಿ..? ಎಂದು ಪ್ರಶ್ನಿಸಿದ್ದಾರೆ. ಇನ್ನು ಎಂಭತ್ತು ಜನ ಶಾಸಕರು ಯಾವ ಷರತ್ತು ಇಲ್ಲದೆ ನನ್ನನ್ನು ಸಿಎಂ ಮಾಡಿದ್ದಕ್ಕೆ ಕನಿಷ್ಠ ಕೃತಜ್ಞತೆ ಇಲ್ಲ ಅಂತಾರೆ. ಡೇ ಒಂದರಿಂಲೇ ಷರತ್ತು ಹಾಕಿಕೊಂಡು ಬಂದ್ರು. ದೇವೆಗೌಡ್ರು ಎಲ್ಲರ ಎದುರು ನೀವೇ ಸಿಎಂ ಆಗಿ ಅಂತ ಕಾಂಗ್ರೆಸ್ಗೆ ಬಿಟ್ಟಿದ್ರು. ಆದ್ರೆ ಕಾಂಗ್ರೆಸ್ ಹೈಕಮಾಂಡ್ ನೀವೇ ಸಿಎಂ ಆಗಿ ಅಂತ ಮನೆ ಬಾಗಿಲಿಗೆ ಕಳಿಸಿದ್ರು. ರೈತರ ಸಾಲ ಮನ್ನಾ ಮಾಡಲು ಆರ್ಥಿಕ ಇಲಾಖೆ ನನ್ನ ಬಳಿ ಬೇಕೆಂದು ಕಂಡಿಷನ್ ಹಾಕಿದೆ. ನನ್ನ ಬಳಿ ಆರ್ಥಿಕ ಇಲಾಖೆ ಇಲ್ಲದಿದ್ರೆ ರೈತರ ಸಾಲ ಮನ್ನಾ ಮಾಡಲು ಬಿಡ್ತಿರಲಿಲ್ಲ. ಪಾಪ ನಮ್ಮ ಸಿಎಂ ಕುಮಾರಸ್ವಾಮಿ ವಿಲನ್ ಅಂದಿದ್ದಾರೆ. ಹೌದು ರಾಜಕೀಯವಾಗಿ ವಿಲನ್ ನಾನೆ, ವಿಪಕ್ಷದವನಾಗಿ ನಾನು ಅವರಿಗೆ ಸ್ನೇಹಿತನಾಗಲು ಸಾಧ್ಯವಿಲ್ಲ. ನೀವು ಮಾಡುವ ತಪ್ಪು ಕೆಲಸಕ್ಕೆ ನಾನು ವಿಲನ್ ಎಂದಿದ್ದಾರೆ.

ಮೈತ್ರಿ ಸರ್ಕಾರ ತೆಗೆದಿದ್ದು ಬಿಜೆಪಿ ಅಲ್ಲ, ಕಾಂಗ್ರೆಸ್ನವರು..!
ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರವನ್ನು ಬಿಜೆಪಿ ಅವರು ತೆಗೆದ್ರು ಅಂತೀರಲ್ಲ ಡಿಕೆಶಿಯವ್ರೆ.. ಸರ್ಕಾರ ರಚನೆಯಾದ ಹದಿನೈದು ದಿನದಲ್ಲಿ ರಮೇಶ್ ಜಾರಕಿಹೊಳಿ ಅಜ್ಮೀರ್ಗೆ ಹೋದ್ರಲ್ಲ ನನ್ನಿಂದ ಹೋದ್ರ..? ಬೆಳಗಾವಿ ಬಂಡಾಯ ಯಾರು ಸರಿಪಡಿಸಬೇಕಿತ್ತು..? ರಮೇಶ್ ಜಾರಕಿಹೊಳಿ ಮನೆಗೆ ನಾನು ಎಷ್ಟು ಬಾರಿ ಹೋದೆ..? ನೀವು ಕೈಜೋಡಿಸದಿದ್ರೆ ಅವರು ಯಾಕೆ ಸರ್ಕಾರ ತೆಗೆಯುತ್ತಿದ್ರು..? ಪದೇ ಪದೆ ತಾಜ್ವೆಸ್ಟೆಂಡ್, ಅಮೆರಿಕದಲ್ಲಿ ಕೂತಿದ್ರು ಅಂತಾರೆ. ಐಎಂಎ ಪ್ರಕರಣದಲ್ಲಿ ಡಿಸಿಎಂ ಆತ್ಮೀಯರನ್ನ ಸಿಲುಕಿಸಲು ಹೊರಟೆ ಅಂತ ಸರ್ಕಾರ ತೆಗೆಯಲು ಹೊರಟ್ರು. ಅಮೆರಿಕದಿಂದ ಬಂದಾಗ ಬಿಜೆಪಿ ಐದು ಜನ ಶಾಸಕರು ಬರ್ತಾರೆ ಅಂದಾಗ ನೀವುಗಳು ಏನಂದ್ರಿ..? ಪರಮೇಶ್ವರ್ ಮನೆಯಿಂದ ಬಿಜೆಪಿ ಕ್ಯಾಂಪ್ಗೆ ಹೋದವರು ಯಾರು..? ಶ್ರೀಮಂತ್ ಪಾಟೀಲ್ನ ಕಳಿಸಿದ್ದು ಯಾರು.. ಮಾಡಬಾರದ್ದು ಮಾಡಿದ್ದೀನಿ ಅಂತ ಪದೇ ಪದೇ ತಾಜ್ ವೆಸ್ಟೆಂಡ್ ಅಂತೀರಲ್ಲ. ಒಂದೆರಡು ಗಂಟೆ ರೆಸ್ಟ್ಗೆ ಹೋಗ್ತಿದ್ದೆ ಅದರಲ್ಲಿ ತಪ್ಪೇನು ಎಂದಿದ್ದಾರೆ. ಅಪ್ಪ ನಮಸ್ಕಾರ ಕಣ್ರಪ್ಪ, 14 ತಿಂಗಳಲ್ಲಿ ಜನ ಸೇವೆ ಮಾಡಲು ಅವಕಾಶ ಕೊಟ್ಟಿದ್ದಕ್ಕೆ ಕೃತಜ್ಞತೆ ಕಣ್ರಪ್ಪ ಎಂದು ವ್ಯಂಗ್ಯವಾಡಿದ್ದಾರೆ.
ನೈಸ್ ಅಕ್ರಮ ಸಕ್ರಮ ಮಾಡಿಕೊಳ್ಳಲು ಬೆಂಗಳೂರಿಗೆ ಸೇರ್ಪಡೆ..!
ಬೆಂಗಳೂರಿನಿಂದ ಕನಕಪುರದವರೆಗೆ ಬ್ರಾಂಡ್ ಬೆಂಗಳೂರು ಮಾಡಲು ಹೊರಟಿದ್ದಾರೆ. ಯಾಕೆ ಅಂದ್ರೆ ನೈಸ್ ರಸ್ತೆ ನಿರ್ಮಾಣಕ್ಕೆ ಒತ್ತುವರಿಯಾದ ಎಂಟು ಎಕರೆ ಸರ್ಕಾರಿ ಭೂಮಿಯನ್ನ ಗುಳುಂ ಮಾಡಿದ್ದಾರೆ. ಅಮಾಸೆಗೌಡ, ಭಾಗ್ಯ, ಲಕ್ಷ್ಮೀ ಸೇರಿದಂತೆ ಇನ್ನಿತರ ಜಮೀನನ್ನ ಡಿ.ಕೆ ಸುರೇಶ್ ಹೆಸರಿಗೆ ನೊಂದಣಿ ಆಗುತ್ತೆ. ನೈಸ್ ಮಾಲೀಕನಿಂದ ಎನ್ಓಸಿ ಬೇಕು. ಕೆಐಎಡಿಬಿ ಸ್ವಾಧೀನ ಆಗಿದ್ದ ಜಮೀನು ನೋಂದಣಿ ಮಾಡಿಸಿಕೊಂಡಿದ್ದೀರಿ. ಕಾನೂನು ವಿರೋಧವಾಗಿ ನೊಂದಣಿಯಾಗಿದೆ. 8 ಎಕರೆ ಜಮೀನು ನೋದಣಿ ಮಾಡಿಕೊಂಡಿದ್ದಾರೆ. ಹೊಸಕೆರೆ ಹಳ್ಳಿಯ ಬಳಿಯ ಕೆಐಎಡಿಬಿ ಭೂಮಿ ಅದು. ನೈಸ್ ಅಕ್ರಮದಲ್ಲಿ ಮಾಡಬಾರದ್ದನ್ನ ಮಾಡಿದ್ದಾರೆ. ಇದು ಬ್ರಹ್ಮಾಂಡ ಭ್ರಷ್ಟಾಚಾರ. ಕುಮಾರಸ್ವಾಮಿ ಹತಾಶರಾಗಿದ್ದಾರೆ ಅಂತಾರೆ, ಸಿಎಂ ಸ್ಥಾನ ನಮ್ಮಪ್ಪನ ಆಸ್ತಿನಾ..? ಇದು ಸ್ಯಾಂಪಲ್ ಅಷ್ಟೇ, ದೊಡ್ಡ ಹಗರಣ ಇದು. ನೈಸ್ ಅಕ್ರಮದ ವಿಚಾರವಾಗಿ ಅವರ ಪಕ್ಷದ ಟಿ.ಬಿ.ಜಯಚಂದ್ರ ನಿಸ್ಪಕ್ಷಪಾತ ವರದಿ ನೀಡಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾಗೆ ದೂರು ಕೊಡ್ತೇನೆ. ಎಲ್ಲಾ ದಾಖಲೆಗಳು ನನ್ನ ಬಳಿ ಇವೆ, ಯಾರು ದಾಖಲೆಗಳನ್ನ ಬದಲಾವಣೆ ಮಾಡಲು ಆಗಲ್ವಲ್ಲ ಎಂದು ಟಾಂಟ್ ಕೊಟ್ಟಿದ್ದಾರೆ.
ಆಪ್ತರ ಗೋಲ್ಮಾಲ್ ಬಗ್ಗೆ ಕುಮಾರಸ್ವಾಮಿ ಹೇಳ್ತಿದ್ದಂತೆ ಮೌನ..!
ಅಪ್ಪ ಶಿವಕುಮಾರ್ ಸಾಹೆಬ್ರೆ, ಕನಕಪುರದಲ್ಲಿ ಬಮೂಲ್ ಮಿಲ್ಕ್ ಪೌಡರ್ ಕಾರ್ಖಾನೆಗೆ ಭೂಮಿ ಕೊಟ್ಟ ರೈತರ ಹೆಸರಲ್ಲಿ ಪರಿಹಾರವನ್ನ ನಿಮ್ಮ ಪಟಾಲಂ ಲೂಟಿ ಹೊಡೆದ್ರು. ಒಟ್ಟು ಐವತ್ತು ಎಕರೆ ಭೂಮಿ ವಶಪಡಿಸಿಕೊಳ್ಳಲಾಗಿದೆ. ಆ ರೈತರ ಬಳಿ ಇವರ ಪಟಾಲಂ ಜಿಪಿಎ ಮಾಡಿಕೊಂಡು ಹೆಚ್ಚಿನ ಪರಿಹಾರ ಪಡೆದುಕೊಂಡಿದ್ದಾರೆ. ಅಧಿಕಾರ ಯಾವತ್ತೂ ಶಾಶ್ವತ ಅಲ್ಲ ಮಿಸ್ಟರ್ ಶಿವಕುಮಾರ್, ಕಾಲ ಚಕ್ರ ಹೀಗೆ ಇರಲ್ಲ, ತಿರುಗುತ್ತಾ ಇರುತ್ತೆ ಎಂದಿದ್ದಾರೆ. ಇಷ್ಟೆಲ್ಲಾ ಆರೋಪ ಮಾಡ್ತಿದ್ದಂತೆ ಥಂಡಾ ಹೊಡೆದಿರುವ ಡಿಕೆ ಶಿವಕುಮಾರ್, ಶಿವಕುಮಾರ್ ಪಟಾಲಮ್ನಿಂದ ರೈತರ ಪರಿಹಾರ ಹಣ ಲೂಟಿ ಎಂಬ ಆರೋಪಕ್ಕೆ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ನೋಡ್ರಿ, ನಾನು ಏನು ಮಾಡಿದ್ದೇನೆ, ಅವನು, ಅವರು ಏನು ಮಾಡಿದ್ದಾರೆ ಅನ್ನೋದನ್ನು ಬಿಚ್ಚಿ ಮಾತಾಡೋಣ. ಗಾಳಿಯಲ್ಲಿ ಗುಂಡು ಹೊಡೆಯೋದು, ಹಿಟ್ ಅಂಡ್ ರನ್ ಮಾಡೋದಲ್ಲ. ಸಮಯ ಫಿಕ್ಸ್ ಮಾಡಿ ಅಲ್ಲಿ ಬಂದು ಎಲ್ಲವನ್ನೂ ಮಾತಾಡೋಣ ಎಂದಷ್ಟೇ ಹೇಳಿದ್ದಾರೆ ಡಿಕೆಶಿ. ಹೆಚ್.ಡಿ ಕುಮಾರಸ್ವಾಮಿ ಅವರ ಬೇರೆ ಯಾವುದೇ ಆರೋಪಗಳಿಗೂ ಪ್ರತಿಕ್ರಿಯೆ ಕೊಡದೆ ಮೌನಕ್ಕೆ ಶರಣಾಗಿದ್ದಾರೆ.






