ಅವರ ಪರಂಪರೆ, ಮಠವನ್ನು ಉಳಿಸಿಕೊಂಡು ಹೋಗಬೇಕು ಎಂದು ಭಕ್ತರಲ್ಲಿ ಮನವಿ

“ಅಪ್ಪ ಅವರು, ಸಾಮಾಜಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಎಲ್ಲಾ ಜನರ ಜೊತೆ ಬೆರೆತು ಜನಸೇವೆ ಮಾಡಿದ ಧೀಮಂತ ಶರಣರು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ತಿಳಿಸಿದರು.
ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಕಲಬುರ್ಗಿಗೆ ತೆರಳಿದ ಶಿವಕುಮಾರ್ (DK Shivakumar) ಅವರು, ಸಚಿವ ಪ್ರಿಯಾಂಕ್ ಖರ್ಗೆ (Priyanka Kharge), ಕಲ್ಯಾಣ ಕರ್ನಾಟಕಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಜಯ್ ಸಿಂಗ್ ಮತ್ತಿತರರ ಜತೆ ಶರಣಬಸವೇಶ್ವರ ದೇವಸ್ಥಾನದಲ್ಲಿ ಇರಿಸಲಾಗಿದ್ದ ಪೂಜ್ಯ ಅಪ್ಪಾಜಿ ಅವರ ಪಾರ್ಥಿವ ಶರೀರಕ್ಕೆ ಪುಷ್ಪ ಅರ್ಪಿಸಿ ಅಂತಿಮ ನಮನ ಸಲ್ಲಿಸಿದರು. ಸಕಲ ಸರ್ಕಾರಿ ಗೌರವಗಳನ್ನು ಅರ್ಪಿಸಿದ ನಂತರ ಶಿವಕುಮಾರ್ ಅವರು ಅಪ್ಪಾಜಿ ಅವರ ಕುಟುಂಬ ಸದಸ್ಯರಿಗೆ ರಾಷ್ಟ್ರಧ್ವಜ ನೀಡಿದರು.

ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಶಿವಕುಮಾರ್ ಅವರು, “ನಾನು ಈ ಹಿಂದೆ ಕಲಬುರ್ಗಿಗೆ ಬಂದಾಗ ಅಪ್ಪ ಅವರನ್ನು ಭೇಟಿ ಮಾಡಿದ್ದೆ. ಮಲ್ಲಿಕಾರ್ಜುನ ಖರ್ಗೆ ಅವರು ನನಗೆ ಈ ವಿಚಾರ ತಿಳಿಸಿದರು. ಅವರು ಈ ಸಂದರ್ಭದಲ್ಲಿ ತೆರಳಲು ಆಗುತ್ತಿಲ್ಲ ಎಂದರು. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳು ನಮ್ಮ ಜೊತೆ ಚರ್ಚೆ ಮಾಡಿದ್ದಾರೆ. ನಮ್ಮ ಇಡೀ ಸರ್ಕಾರ ಅಪ್ಪಾಜಿ ಅವರ ಕುಟುಂಬ ಹಾಗೂ ಅವರ ಅನುಯಾಯಿಗಳ ಜೊತೆ ನಿಲ್ಲಲಿದೆ. ಅಪ್ಪಾ ಅವರಿಗೆ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಿಸಬೇಕು ಎಂದು ನಾನಿಲ್ಲಿಗೆ ಬಂದಿದ್ದೇನೆ. ರಾಷ್ಟ್ರಧ್ವಜವನ್ನು ಹಾರಿಸುವ ದಿನ ಅಪ್ಪ ಅವರ ಕುಟುಂಬಕ್ಕೆ ರಾಷ್ಟ್ರಧ್ವಜ ಅರ್ಪಿಸಿದ್ದೇವೆ. ಎಲ್ಲರಿಗೂ ಈ ಭಾಗ್ಯ ಸಿಗುವುದಿಲ್ಲ” ಎಂದು ತಿಳಿಸಿದರು.

“ಹುಟ್ಟು ಸಾವಿನ ಮಧ್ಯದಲ್ಲಿ ಅವರ ಅನೇಕ ಸಾಧನೆಗಳಿಗೆ ಸರ್ಕಾರ ಗೌರವ ಸಲ್ಲಿಸುವ ಕೆಲಸ ಮಾಡಿದೆ. ಅವರ ಪರಂಪರೆಯನ್ನು ಉಳಿಸಿಕೊಂಡು ಹೋಗಬೇಕು. ಈ ಐತಿಹಾಸಿಕ ಮಠವನ್ನು ಕಾಪಾಡಿಕೊಂಡು ಹೋಗಬೇಕು. ನೀವು ನಿಮ್ಮ ಮನೆಗಳನ್ನು ಯಾವ ರೀತಿ ಕಾಪಾಡುತ್ತೀರೋ, ಅದೇ ರೀತಿ ಮಠಗಳನ್ನು ಕಾಪಾಡಿಕೊಳ್ಳಬೇಕು ಎಂದು ಎಲ್ಲಾ ಭಕ್ತಾದಿಗಳಲ್ಲಿ ಮನವಿ ಮಾಡುತ್ತೇನೆ” ಎಂದರು.