ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ – ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ -2023ರ ಕಾರ್ಯಚಟುವಟಿಕೆಗೆ ನೀಡಿದ್ದ ಅನುಮತಿಯನ್ನು ದುರುಪಯೋಗಗೊಂಡಿರುವ ಬಗ್ಗೆ ಹಾಗೂ ಚಿಲುಮೆ ಸಂಸ್ಥೆ ಮತದಾರರ ದತ್ತಾಂಶವನ್ನು ಅನಧಿಕೃತವಾಗಿ ಕದ್ದಿರುವ ಬಗ್ಗೆ ಪ್ರತಿಧ್ವನಿ ಮತ್ತು TheNewsMinute ಜಂಟಿ ತನಿಖಾ ವರದಿ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಅಧಿಕಾರಕ್ಕಾಗಿ ಬಿಜೆಪಿ ಎಂತಹ ಹೀನ ಕೆಲಸಕ್ಕೂ ಸೈ ಎಂದು ಕಿಡಿಕಾರಿದ್ದಾರೆ.
ಓಟರ್ ಐಡಿ ಹಗರಣದ ಮೂಲಕ ಮಾನಗೆಟ್ಟ BJPಯವರ ನೀಚಕೃತ್ಯ ಬಯಲಾಗಿದೆ. ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹಿಸುವ ಮೂಲಕ ಪ್ರಜಾಪ್ರಭುತ್ವವನ್ನೇ ಕಗ್ಗೊಲೆ ಮಾಡುವ ಹೀನ ಕೆಲಸಕ್ಕೆ BJPಯವರು ಕೈ ಹಾಕಿದ್ದಾರೆ. ಖಾಸಗಿ ಸಂಸ್ಥೆಗಳು ಮತದಾರರ ಮಾಹಿತಿ ಸಂಗ್ರಹಿಸಲು ಅಧಿಕಾರವೇ ಇಲ್ಲ. ಹೀಗಿರುವಾಗ BBMP ಖಾಸಗಿ ಸಂಸ್ಥೆಗೆ ಈ ಜವಾಬ್ಧಾರಿ ನೀಡಿದ್ಯಾಕೆ ಎಂದು ಪ್ರಶ್ನಿಸಿದ್ದಾರೆ.
BBMP ವ್ಯಾಪ್ತಿಯಲ್ಲಿ ಮತದಾರರ ಖಾಸಗಿ ಮಾಹಿತಿ ಸಂಗ್ರಹಿಸಿರುವ ಚಿಲುಮೆ ಎಂಬ ಸಂಸ್ಥೆ BJPಗೆ ಮತ ಹಾಕದವರನ್ನು ಪಟ್ಟಿಯಿಂದ ಕೈ ಬಿಟ್ಟಿದೆ. ಇದು ಅಕ್ಷಮ್ಯ ಅಪರಾಧ ಮತ್ತು ಚುನಾವಣಾ ವ್ಯವಸ್ಥೆ ಮೇಲೆ ಜನರು ಇಟ್ಟಿರುವ ನಂಬಿಕೆಗೆ ಎಸಗಿದ ದ್ರೋಹ. ಇಂತಹ ಹೀನ ಕೃತ್ಯ ಮುಖ್ಯಮಂತ್ರಿಗಳ ಹಾಗೂ ಇನ್ನುಳಿದ BJP ನಾಯಕರ ಗಮನಕ್ಕೆ ಬಾರದೆ ನಡೆಯಲು ಸಾಧ್ಯವೇ ಎಂದು ಕಿಡಿಕಾರಿದ್ದಾರೆ.
ಮತದಾರರ ಮಾಹಿತಿ ಸಂಗ್ರಹಣೆ ಹಾಗೂ ಪರಿಷ್ಕರಣೆ ಚುನಾವಣಾ ಆಯೋಗದ ಕೆಲಸ. ಖಾಸಗಿ ಸಂಸ್ಥೆಗೆ ಯಾವ ಮಾನದಂಡದ ಆಧಾರದಲ್ಲಿ ಈ ಜವಾಬ್ಧಾರಿ ನೀಡಲಾಗಿದೆ.? ಈ ಅಕ್ರಮದಲ್ಲಿ ರಾಜ್ಯ ಚುನಾವಣಾ ಆಯೋಗದ ಪಾಲು ಇದ್ದಂತಿದೆ. ಹಾಗಾಗಿ ಈ ಕೂಡಲೇ ಕೇಂದ್ರ ಚುನಾವಣಾ ಆಯೋಗ ಮಧ್ಯ ಪ್ರವೇಶ ಮಾಡಿ ಈ ಆರೋಪದ ಬಗ್ಗೆ ಸವಿಸ್ತಾರ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
PSI ಹಗರಣ, 40% ಕಮೀಷನ್ ಹಗರಣ, ಪ್ರಾಧ್ಯಾಪಕರ ನೇಮಕಾತಿ ಹಗರಣ ಸೇರಿದಂತೆ ಸಾಲು ಸಾಲು ಹಗರಣದಲ್ಲಿ ಮುಳುಗಿರುವ ಈ ಸರ್ಕಾರದ ಮೇಲೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ಹಾಗಾಗಿ ವಾಮಮಾರ್ಗದ ಮೂಲಕ ಚುನಾವಣೆ ಗೆಲ್ಲಲು BJP ನಾಯಕರು ಅಕ್ರಮ ಮತದಾರರ ಪಟ್ಟಿ ಪರಿಷ್ಕರಣೆಗೆ ಕೈ ಹಾಕಿದ್ದಾರೆ. ಅಧಿಕಾರಕ್ಕಾಗಿ BJP ಎಂತಹ ಹೀನ ಕೆಲಸಕ್ಕೂ ಸೈ ಎಂದು ಕೆಂಡಕಾರಿದ್ದಾರೆ.
ಓಟರ್ ಐಡಿ ಹಗರಣದಲ್ಲಿ ಪ್ರಭಾವಿ ಸಚಿವರೊಬ್ಬರ ಕೈವಾಡವಿರುವ ಮಾಹಿತಿಯಿದೆ. ಆ ಬಗ್ಗೆಯೂ ತನಿಖೆಯಾಗಬೇಕು. ಈ ಹಗರಣದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು. ಚುನಾವಣಾ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಈ ಹಗರಣವನ್ನು ಸರ್ಕಾರ ಈ ಕೂಡಲೇ ನ್ಯಾಯಾಂಗ ತನಿಖೆಗೆ ಒಪ್ಪಿಸಲಿ ಎಂದು ಆಗ್ರಹಿಸಿದ್ದಾರೆ.