ನಿರೀಕ್ಷೆಯಂತೆ ಪ್ರಧಾನಿ ನರೇಂದ್ರ ಮೋದಿಯವರ ಸಂಪುಟ ವಿಸ್ತರಣೆಯಾಗಿದೆ. ಸಂಪುಟ ವಿಸ್ತರಣೆ ಎಂಬ ನಿರೀಕ್ಷಿತ ಸಂಗತಿಯ ಹೊರತು ಈ ವಿಸ್ತರಣೆಯಲ್ಲಿ ಉಳಿದೆಲ್ಲವೂ ಅನಿರೀಕ್ಷಿತವೇ ಎಂಬಷ್ಟರ ಮಟ್ಟಿಗೆ ಬೆಳವಣಿಗೆಗಳು ನಡೆದಿವೆ.
ಸಂಪುಟಕ್ಕೆ ಸೇರಿರುವ ಹೊಸಬರ ದೊಡ್ಡ ಪಡೆ ಮತ್ತು ಹೊಸಬರಿಗಾಗಿ ಜಾಗ ಖಾಲಿ ಮಾಡಲು ಘಟಾನುಘಟಿ ಸಚಿವರು ರಾಜೀನಾಮೆ ನೀಡಿರುವುದು ಕೂಡ ಅನಿರೀಕ್ಷಿತವೇ. ಅದರಲ್ಲೂ ಕರ್ನಾಟಕದ ಮಟ್ಟಿಗಂತೂ ಮೋದಿಯವರ ಈ ಸಂಪುಟ ವಿಸ್ತರಣೆ ಶಾಕ್ ಮೇಲೆ ಶಾಕ್ ಕೊಟ್ಟಿದೆ.
ಏಕೆಂದರೆ; ಒಂದು ಕಡೆ ಸಂಪುಟ ಸೇರ್ಪಡೆಯ ಸಂಭಾವ್ಯರ ಕುರಿತು ಕಳೆದ ಒಂದು ವಾರದಿಂದ ನಡೆದ ಚರ್ಚೆಗಳು, ವದಂತಿಗಳು ಮತ್ತು ರಾಜಕೀಯ ಪಂಡಿತರ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾಗಿ ಬಹುತೇಕ ಎಲ್ಲರ ಊಹೆಯನ್ನೂ ಮೀರಿ ನಾಲ್ವರು ಅನಿರೀಕ್ಷಿತವಾಗಿ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಈ ನಾಲ್ವರೂ ರಾಜ್ಯ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂಬುದು ಗಮನಾರ್ಹ. ಆದರೆ, ಪ್ರಮಾಣ ವಚನ ಸ್ವೀಕರಿಸಿದ ನಾಲ್ವರೂ ಸಂಸದರೂ ಇದೇ ಮೊದಲ ಬಾರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ ಮತ್ತು ಈಗಾಗಲೇ ಇರುವ ಕ್ಯಾಬಿನೆಟ್ ದರ್ಜೆ ಸಚಿವ ಪ್ರಹ್ಲಾದ್ ಜೋಷಿಯವರನ್ನು ಸೇರಿ ರಾಜ್ಯದ ಐವರು ಸಚಿವರು ಮೋದಿ ಸಂಪುಟದಲ್ಲಿ ಸ್ಥಾನ ಪಡೆದಂತಾಗಿದೆ ಎಂಬುದು ವಿಶೇಷ.
ಕೇಂದ್ರ ಸಂಪುಟ ಪುನರ್ರಚನೆ: ಸದಾನಂದ ಗೌಡರಿಗೆ ಕೊಕ್, ರಾಜ್ಯದಿಂದ ನಾಲ್ವರಿಗೆ ಸಚಿವ ಸ್ಥಾನ ಸಾಧ್ಯತೆ.!
ಆದರೆ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಉದ್ಯಮಿ ಮತ್ತು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಚಿತ್ರದುರ್ಗ ಸಂಸದ ಎ ನಾರಾಯಣಸ್ವಾಮಿ ಹಾಗೂ ಬೀದರ್ ಸಂಸದ ಭಗವಂತ ಖೂಬಾ ಸೇರಿದಂತೆ ಯಾರೋಬ್ಬರೂ ಈ ಬಾರಿ ಕೇಂದ್ರ ಸಂಪುಟದಲ್ಲಿ ಸ್ಥಾನಪಡೆಯಲಿದ್ದಾರೆ ಎಂಬ ಯಾವ ನಿರೀಕ್ಷೆಗಳೂ ಇರಲಿಲ್ಲ. ಆ ದೃಷ್ಟಿಯಿಂದಲೂ ಈ ನಾಲ್ವರ ಆಯ್ಕೆ ಅನಿರೀಕ್ಷಿತವೇ.
ಆದರೆ, ಅದಕ್ಕಿಂತ ಶಾಕಿಂಗ್ ಆಗಿರುವುದು ಕೇಂದ್ರ ಸಚಿವ ಸಂಪುಟದಿಂದ ಹೊರಬಿದ್ದಿರುವ ಘಟಾನುಘಟಿ ನಾಯಕರ ಪಟ್ಟಿ. ಅದರಲ್ಲೂ ಬಿಜೆಪಿಯ ಪ್ರಮುಖ ಮುಖಗಳಲ್ಲಿ ಒಂದಾಗಿದ್ದವರೇ ಈ ಪಟ್ಟಿಯಲ್ಲಿದ್ದಾರೆ. ರವಿಶಂಕರ್ ಪ್ರಸಾದ್, ಪ್ರಕಾಶ್ ಜಾವ್ಡೇಕರ್, ಡಾ ಹರ್ಷವರ್ಧನ್… ಹೀಗೆ ಸಂಪುಟದಿಂದ ಹೊರಬಿದ್ದ 12 ಮಂದಿಯ ಪೈಕಿ ಹಲವು ಘಟಾನುಘಟಿ ನಾಯಕರೇ ಇದ್ದಾರೆ. ಆ ಪೈಕಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದಗೌಡರು ಕೂಡ ಒಬ್ಬರು. ರವಿಶಂಕರ್ ಪ್ರಸಾದ್, ಜಾವ್ಡೇಕರ್ ಅವರುಗಳು ತಮ್ಮ ಖಾತೆಗಳ ನಿರ್ವಹಣೆಯ ವಿಷಯದಲ್ಲಿ ಕೂಡ ಹಿಂದೆ ಬಿದ್ದವರಲ್ಲ ಎಂಬ ಮಾತುಗಳಿದ್ದವು. ಆ ಹಿನ್ನೆಲೆಯಲ್ಲಿ ಅವರಿಬ್ಬರ ರಾಜೀನಾಮೆಯ ಹಿಂದೆ ಬಿಜೆಪಿಯ ಪಕ್ಷ ಸಂಘಟನೆಗೆ ಪ್ರಭಾವಿ ನಾಯಕರನ್ನು ಬಳಸಿಕೊಳ್ಳುವ ಉದ್ದೇಶವಿರಬಹುದೆ ಎಂಬ ಲೆಕ್ಕಾಚಾರಗಳಿವೆ.
ಕೇಂದ್ರ ಸಚಿವ ಸಂಪುಟ ಪುನರ್ರಚನೆ: ಕೇಂದ್ರ ಆರೋಗ್ಯ ಸಚಿವ ಸೇರಿ ಹಲವು ಹಿರಿಯ ಸಚಿವರ ರಾಜೀನಾಮೆ
ಆದರೆ, ಡಾ ಹರ್ಷವರ್ಧನ್ ಮತ್ತು ಡಿ ವಿ ಸದಾನಂದಗೌಡರ ವಿಷಯದಲ್ಲಿ ಆ ಮಾತು ಹೇಳಲಾಗದು. ಕರೋನಾ ಸಮಯದಲ್ಲಿ ಮಾತ್ರವಲ್ಲ; ಕರೋನಾ ಪೂರ್ವದಲ್ಲಿ ಕೂಡ ದೇಶದ ಆರೋಗ್ಯ ಸಚಿವರಾಗಿ ಡಾ ಹರ್ಷವರ್ಧನ್ ಅವರದ್ದು ಅಷ್ಟೇನು ಸಾಧನೆ ಇರಲಿಲ್ಲ. ಇನ್ನು ಕರೋನಾ ಹೊತ್ತಿನಲ್ಲಂತೂ ದೇಶದ ಜನ ಹಾದಿಬೀದಿಯಲ್ಲಿ ಸಾಯುತ್ತಿರುವಾಗ ಸಚಿವರಾಗಿ ಹರ್ಷವರ್ಧನ್, ಹೆಂಡತಿಯೊಂದಿಗೆ ಬೆಂಡೆ ಕಾಯಿ ಹೆಚ್ಚುತ್ತಾ ಅಡುಗೆ ಮನೆಯಲ್ಲಿ ಕಾಲಕಳೆಯುತ್ತಾ, ಲಾಕ್ ಡೌನ್ ಸಮಯದಲ್ಲಿ ಗಂಡಸರು ತಮ್ಮ ಪತ್ನಿಯರಿಗೆ ಹೇಗೆ ನೆರವಾಗಬೇಕು ಎಂದು ಪಾಠ ಮಾಡಿ ದೇಶದ ಜನರ ಆಕ್ರೋಶಕ್ಕೆ ಈಡಾಗಿದ್ದರು. ಎರಡನೇ ಅಲೆಯ ಹೊತ್ತಿನಲ್ಲಂತೂ ಕನಿಷ್ಟ ಕರೋನಾ ಭೀಕರ ಅಟ್ಟಹಾಸದ ನಡುವೆ ದೇಶದ ಜನರಲ್ಲಿ ವಿಶ್ವಾಸ ಹುಟ್ಟಿಸುವ, ಭರವಸೆ ಹುಟ್ಟಿಸುವ ಯಾವ ಪ್ರಯತ್ನವನ್ನೂ ಅವರು ಮಾಡಲಿಲ್ಲ. ಇನ್ನು ಅವರ ಹೊಣೆಗಾರಿಕೆಯ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟುಹೋಗಿತ್ತು ಎಂಬುದಕ್ಕೆ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ, ಆ್ಯಂಬುಲೆನ್ಸ್ ಸಿಗದೆ, ಔಷಧ ಸಿಗದೆ, ವೈದ್ಯರು ಸಿಗದೆ ಹಾದಿಬೀದಿಗಳಲ್ಲಿ ಪ್ರಾಣಬಿಟ್ಟು ದೇಶದ ಲಕ್ಷಾಂತರ ಮಂದಿಯ ನತದೃಷ್ಟ ಸಾವುಗಳೇ ಸಾಕ್ಷಿ.
ಕೇಂದ್ರ ಸಚಿವ ಸಂಪುಟದ ನೂತನ ಸದಸ್ಯರ ಸಂಪೂರ್ಣ ಪಟ್ಟಿ ಇಲ್ಲಿದೆ..
ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡರ ವಿಷಯದಲ್ಲಿ ಕೂಡ, ಸಿಕ್ಕದ್ದು ದೊಡ್ಡ ದೊಡ್ಡ ಖಾತೆಗಳಾದರೂ, ಅವುಗಳ ನಿರ್ವಹಣೆಯಲ್ಲಿ ಹೆಜ್ಜೆಹೆಜ್ಜೆಗೂ ಎಡವಿದರು ಎಂಬುದು ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಿರುವ ಸಂಗತಿ. ಮೋದಿಯವರ ಮೊದಲ ಅವಧಿಯಲ್ಲೇ ಮಹತ್ವದ ರೈಲ್ವೆ ಖಾತೆಯ ಕ್ಯಾಬಿನೆಟ್ ಸಚಿವರಾಗಿ ಸದಾನಂದ ಗೌಡರು ಆಯ್ಕೆಯಾಗಿದ್ದರು. ಆದರೆ, ಗೌಡರ ಕಾರ್ಯವೈಖರಿ ನೋಡಿ, ಒಂದೇ ಬಜೆಟ್ ಮಂಡನೆಯ ಬಳಿಕ ಅವರನ್ನು ಆ ಖಾತೆಯಿಂದ ಕಿತ್ತು ಹಾಕಲಾಗಿತ್ತು. ಬಳಿಕ ಕಾನೂನು ಸಚಿವರಾಗಿದ್ದ ಅವರು, ಆ ಹೊಣೆಗಾರಿಕೆಯನ್ನು ಕೂಡ, ನಿಭಾಯಿಸುವಲ್ಲಿ ಯಶಸ್ವಿಯಾಗಿರಲಿಲ್ಲ. ಜೊತೆಗೆ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಖಾತೆಯ ಹೊಣೆಗಾರಿಕೆಯನ್ನೂ ಹೊತ್ತಿದ್ದರು. ಹಾಗೇ ಅಂದಿನ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿದ್ದ ಕರ್ನಾಟಕದ ಪ್ರಭಾವಿ ನಾಯಕ ಅನಂತ ಕುಮಾರ್ ಅವರ ಅಕಾಲಿಕ ನಿಧನದಿಂದಾಗಿ, ಆ ಪ್ರಮುಖ ಖಾತೆಯನ್ನೂ ಗೌಡರಿಗೆ ವಹಿಸಲಾಗಿತ್ತು. ಆದರೆ, ಕೊಟ್ಟ ಕುದುರೆಯನ್ನು ಏರುವಲ್ಲಿ ಗೌಡರು ಪದೇಪದೆ ಎಡವಿದರು.
ಈ ನಡುವೆ ಅವರ ‘ಕುದುರೆ ಸವಾರಿ’ಯ ಕಥೆಗಳು ಹೆಚ್ಚು ಪ್ರಚಲಿತಕ್ಕೆ ಬಂದಿದ್ದು, ಕಳೆದ ಕೆಲವು ದಿನಗಳಿಂದ ಭಾರೀ ಸುದ್ದಿಯಾಗಿವೆ. ವಾಸ್ತವವಾಗಿ ಈ ಬಾರಿ ಅವರಿಗೆ ಸಚಿವ ಸ್ಥಾನ ಕೈತಪ್ಪಲು ಕೂಡ ಅವರ ಖಾತೆ ನಿರ್ವಹಣೆಯ ವೈಫಲ್ಯ ಒಂದು ಕಡೆಯಾದರೆ, ಈ ‘ಕುದುರೆ ಸವಾರಿ’ಯ ರೋಚಕ ಕಥೆಗಳು ಮತ್ತೊಂದು ಕಡೆಯಲ್ಲಿ ಕಾರಣವಾಗಿವೆ. ಅಂತಹ ಸಾಹಸಗಳು ವೀಡಿಯೋಗಳು ಹರಿದಾಡುತ್ತಿವೆ, ರಾಮನಗರ ಸುತ್ತಮುತ್ತು ಕುದುರೆ ಸವಾರಿಯ ಗುಸುಗುಸು ಸ್ಫೋಟಕ್ಕೆ ಕಾದಿದೆ ಎಂಬ ಮಾಹಿತಿ ಪಕ್ಷದ ವರಿಷ್ಠರವರೆಗೆ ತಲುಪಿದೆ. ಆ ಹಿನ್ನೆಲೆಯಲ್ಲಿ ನಾಳೆ ಪಕ್ಷಕ್ಕೆ ಮತ್ತು ತಮ್ಮ ಸರ್ಕಾರಕ್ಕೆ ಆಗಬಹುದಾದ ಮುಜುಗರದಿಂದ ಪಾರಾಗಲು ಸ್ವತಃ ಮೋದಿಯವರೇ ಗೌಡರನ್ನು ಸಂಪುಟದಿಂದ ಕೈಬಿಡುವ ನಿರ್ಧಾರಕ್ಕೆ ಬಂದಿದ್ದರು.
ಹಾಗಾಗಿ ಕೊಟ್ಟ ಕುದುರೆಯನ್ನು(ಖಾತೆ) ಏರಲಾರದ ವೈಫಲ್ಯ ಒಂದು ಕಡೆಯಾದರೆ, ಕಂಡ ‘ಕುದುರೆ ಸವಾರಿ’ಯ ಏರಿದ ಗುಸುಗುಸು-ಗದ್ದಲ ಮತ್ತೊಂದು ಕಡೆ. ಎರಡೂ ಸೇರಿ ಗೌಡರ ಸಚಿವ ಸ್ಥಾನ ಕೈತಪ್ಪಿಹೋಯಿತು ಎಂಬ ಮಾತುಗಳು ಸ್ವತಃ ಬಿಜೆಪಿಯ ಪಾಳೆಯದಲ್ಲೇ ಕುಹಕದ ಮಾತಾಗಿ, ಹಾಸ್ಯಚಟಾಕಿಯಾಗಿ ಹರಿದಾಡುತ್ತಿವೆ.
ಇದಕ್ಕೆ ಪೂರಕವೆಂಬಂತೆ, ಮಾಜಿ ಸಚಿವ ಸದಾನಂದಗೌಡರು, ಇತ್ತೀಚೆಗೆ ತಾನೆ ತಮ್ಮ ವಿರುದ್ದದ ಯಾವುದೇ ಮಾನಹಾನಿಕರ ಸುದ್ದಿ, ಸಿಡಿ ಪ್ರಸಾರ ಮಾಡದಂತೆ ಗೌಡರು ಮಾಧ್ಯಮಗಳ ವಿರುದ್ಧ ನ್ಯಾಯಾಲಯದ ತಡೆಯಾಜ್ಞೆ ತಂದಿದ್ದಾರೆ. ವಾಸ್ತವವಾಗಿ ಸದಾನಂದಗೌಡರು ನ್ಯಾಯಾಲಯದ ತಡೆಯಾಜ್ಞೆ ತಂದಿರುವುದಕ್ಕೂ, ಅವರನ್ನು ಸಂಪುಟದಿಂದ ಕೈಬಿಟ್ಟಿರುವುದಕ್ಕೂ ನೇರ ಸಂಬಂಧವಿಲ್ಲದೆಯೂ ಇರಬಹುದು. ಆದರೆ, ಒಂದು ಕಡೆ ಸರಣಿ ಸಿಡಿಗಳು ವಿಷಯ ಜನರ ನಡುವೆ ಗುಸುಗುಸು ಸುದ್ದಿಯಾಗಿರುವ ಹೊತ್ತಿನಲ್ಲೇ ಮಾಜಿ ಸಚಿವರು ‘ಹೆಗಲು ಮುಟ್ಟಿ ನೋಡಿಕೊಂಡು’ ದಿಢೀರನೇ ತಡೆಯಾಜ್ಞೆ ತಂದಿರುವುದು. ಅದರ ಬೆನ್ನಲ್ಲೇ ರಸಗೊಬ್ಬರ ಖಾತೆಯಂತಹ ಆಯಕಟ್ಟಿನ ಖಾತೆಯಿಂದ ಅವರನ್ನು ಮೋದಿಯವರು ಕೈಬಿಟ್ಟಿರುವುದು, .. ಎಲ್ಲವೂ ಕೇವಲ ಕಾಕತಾಳೀಯವಾಗಿರಲಿಕ್ಕಿಲ್ಲ! ಅಲ್ಲವೆ?