ಶಿವಮೊಗ್ಗ ಜಿಲ್ಲೆ ಹೊಸನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಮೊದಲ ಬಲಿ ಆಗಿದೆ. ಕಾಲು ಸಂಕದಲ್ಲಿ ಕಾಲು ಜಾರಿ ಬಿದ್ದು ಮಹಿಳೆ ಸಾವು ಸಂಭವಿಸಿದೆ. ಬೈಸೆ ಗ್ರಾಮದಲ್ಲಿ ಜಮೀನಿಗೆ ತೆರಳುವಾಗ ಹಳ್ಳಕ್ಕೆ ಅಡ್ಡಲಾಗಿ ಹಾಕಿದ್ದ ಕಾಲು ಸಂಕ ದಾಟುವಾಗ ಜಾರಿ ಹಳ್ಳಕ್ಕೆ ಬಿದ್ದು 43 ವರ್ಷದ ಮಹಿಳೆ ಶಶಿಕಲಾ ಸಾವನ್ನಪ್ಪಿದ್ದಾರೆ.
ಶಶಿಕಲಾ ಮೃತದೇಹ ಮಧ್ಯಾಹ್ನದ ಬಳಿಕ ಪತ್ತೆಯಾಗಿದ್ದು ನಗರ ಪೊಲೀಸ್ ಠಾಣೆ ಪೊಲೀಸರು ಸ್ಥಳ ಮಹಜರ್ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಬೈಸೆ ಗ್ರಾಮದ ಬಳಿ ಜಾಮಿಜೆಡ್ಡು ಗುಡ್ಡದ ಕಡೆಯಿಂದ ರಭಸವಾಗಿ ಮಳೆ ನೀರು ಹಳ್ಳದ ರೀತಿಯಲ್ಲಿ ಹರಿಯುತ್ತಿತ್ತು. ಹಳ್ಳವನ್ನು ದಾಟಲು ಅಡ್ಡಲಾಗಿ ಅಡಿಕೆ ದಬ್ಬೆ ಬಳಸಿ ಸಾರ ಅಥವಾ ಸಂಕ ಕಟ್ಟಿ ತಮ್ಮ ತಮ್ಮ ಹೊಲಕ್ಕೆ, ತೋಟಕ್ಕೆ ತೆರಳಲು ವ್ಯವಸ್ಥೆ ಮಾಡಿಕೊಂಡಿದ್ದರು.
ಭತ್ತದ ಸಸಿ ಮೆಡುವುದಕ್ಕೆ ಹೋಗಿದ್ದ ಶಶಿಕಲಾ ಮನೆಗೆ ವಾಪಸ್ ಆಗದ ಹಿನ್ನೆಲೆಯಲ್ಲಿ ಕುಟುಂಸ್ಥರು ಹುಡುಕಾಟ ನಡೆಸಿದ್ದರು. ಕಾಲು ಸಂಕದಿಂದ ಹಳ್ಳದಲ್ಲಿ ಮುಂದೆ ಹುಡುಕುತ್ತಾ ಹೋದಾಗ ಕುಟುಂಬಸ್ಥರಿಗೆ ಒಂದು ಕಿಲೋಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಧುಮುಕದ ಗದ್ದೆ ಕಾಲು ಸೇತುವೆ ಹತ್ತಿರ ಹಳ್ಳದಲ್ಲಿ ಶಶಿಕಲಾ ಮೃತದೇಹ ಮರಕ್ಕೆ ಸಿಕ್ಕಿ ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.