ಭಾರತ ಐತಿಹಾಸಿಕ ಘಟನೆಯೊಂದಕ್ಕೆ ಸಾಕ್ಷಿಯಾಗಲು ಸಜ್ಜಾಗಿದೆ. ಸುಪ್ರೀಂ ಕೋರ್ಟ್ ಕೊಲಿಜಿಯಂ ಸಮಿತಿ ದೆಹಲಿ ಹೈ ಕೋರ್ಟ್ ನ್ಯಾಯಾಧೀಶರ ಸ್ಥಾನಕ್ಕೆ ಸಲಿಂಗಿ ಎಂದು ಗುರುತಿಸಿಕೊಂಡಿದ್ದ ಸೌರಭ್ ಕಿರ್ಪಾಲ್ ಎಂಬವರನ್ನು ಶಿಫಾರಸ್ಸು ಮಾಡಿದೆ. ನವೆಂಬರ್ 11ರಂದು ಈ ಬಗ್ಗೆ ಚರ್ಚೆ ಮಾಡಿರುವ ಸುಪ್ರೀಂ ಕೋರ್ಟ್ ಕೊಲಿಜಿಯಂ ಸಮಿತಿ ಸೌರಭ್ ಕಿರ್ಪಾಲ್ ರ ನ್ಯಾಯ ಸೇವೆಯನ್ನು ಗುರುತಿಸಿ ಈ ನಿರ್ಧಾರಕ್ಕೆ ಬಂದಿದೆ. ಒಂದು ವೇಳೆ ಹಿರಿಯ ನ್ಯಾಯವಾದಿ ಸೌರಭ್ ಕಿರ್ಪಾಲ್ ದೆಹಲಿ ಹೈ ಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡರೆ ದೇಶದಲ್ಲಿ ಇದೇ ಮೊದಲ ಬಾರಿಗೆ ಸಲಿಂಗಿಯೊಬ್ಬರು (Gay) ಹೈ ಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡು ಇತಿಹಾಸ ಬರೆಯಲಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿಯಾಗಿರುವ ಇಂದಿರಾ ಜೈಸಿಂಗ್ ʻʻಕೊನೆಗೂ ದೇಶದ ನ್ಯಾಯಾಂಗ ವ್ಯವಸ್ಥೆ Inclusive Judiciary ವ್ಯವಸ್ಥೆಯ ಕಡೆ ಸಾಗುತ್ತಿದೆʼʼ ಎಂದು ಈ ಬೆಳವಣಿಗೆ ಬಗ್ಗೆ ಹರ್ಷ ವ್ಯಕ್ತ ಪಡಿಸಿದ್ದಾರೆ.
2017ರಲ್ಲೇ ಹೈ ಕೋರ್ಟ್ ನ್ಯಾಯಾಧೀಶರಾಗಿ ಶಿಫಾರಸ್ಸು!
ಇದೇ ವರ್ಷದ ಮಾರ್ಚ್ ನಲ್ಲಿ ಚೀಫ್ ಜಸ್ಟಿಸ್ ಆಗಿರುವ ಎಸ್ಎ ಬೊಬ್ಡೆ ಸೌರಭ್ ಕಿರ್ಪಾಲ್ ಅವರನ್ನು ಹೈ ಕೋರ್ಟ್ ನ್ಯಾಯಾದೀಶರ ಸ್ಥಾನಕ್ಕೆ ಶಿಫಾರಸ್ಸು ಮಾಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದ್ದರು. ಅಂದಹಾಗೆ, ಸೌರಭ್ ಕಿರ್ಪಾಲ್ ಹೆಸರು ಇದು ನಾಲ್ಕನೇ ಬಾರಿಗೆ ಹೈ ಕೋರ್ಟ್ ನ್ಯಾಯಾಧೀಶರ ಹುದ್ದೆಗೆ ಶಿಫಾರಸ್ಸಾಗಿದೆ. ಈ ಮೊದಲು ಎಂದರೆ, 2017ರ ಅಕ್ಟೋಬರ್ ನಲ್ಲೂ ಸುಪ್ರೀಂ ಕೋರ್ಟ್ ಕೊಲಿಜಿಯಂ ಸಮಿತಿ ಇದೇ ಸೌರಭ್ ಕಿರ್ಪಾಲ್ ಹೆಸರನ್ನು ಉಚ್ಛನ್ಯಾಯಾಲಯದ ನ್ಯಾಯಾಧೀಶರ ಹುದ್ದೆಗೆ ಶಿಫಾರಸ್ಸು ಮಾಡಿತ್ತು. ಅದಾಗಿಯೂ ಸರ್ಕಾರ ಇವರನ್ನು ಕಡೆಗಣಿಸಿತ್ತು. ಇದೀಗ ಮತ್ತೆ ಸಲಿಂಗಿಯಾಗಿ ಗುರುತಿಸಿಕೊಂಡಿರುವ ಸೌರಭ್ ಕಿರ್ಪಾಲ್ ಹೆಸರು ಮುನ್ನೆಲೆಗೆ ಬಂದಿದೆ.

ದಿ ಪ್ರಿಂಟ್ ಗೆ ಈ ಹಿಂದೆ ನೀಡಿದ್ದ ಸಂದರ್ಶನವೊಂದರಲ್ಲಿ ಸೌರಭ್ ಕಿರ್ಪಾಲ್ ಈ ಬಗ್ಗೆ ಮಾತನಾಡಿದ್ದರು. ಸತತವಾಗಿ ಹೈ ಹೋರ್ಟ್ ನ್ಯಾಯಾಧೀಶರಾಗಲು ಹೆಸರು ಮುನ್ನೆಲೆಗೆ ಬಂದಿದ್ದರೂ ಆಗದೇ ಇರುವುದು ಬೇಸರದ ಸಂಗತಿ. ಅವರಿಗೆ ನನ್ನ ಸೇವೆಗಿಂತ ನನ್ನ ಲೈಂಗಿಕ ಆಸಕ್ತಿಯೇ ಮುಖ್ಯವೆನಿಸಿದೆ ಎಂದು ಎನಿಸುತ್ತಿದೆ ಎಂದಿದ್ದರು.
ಸುಪ್ರೀ ಕೋರ್ಟ್ನಲ್ಲಿ ಸಲಿಂಗಿಗಳ ಹಕ್ಕುಗಳಿಗಾಗಿ ಹೋರಾಟ!
ಸೌರಭ್ ಕಿರ್ಪಾಲ್ 2108ರಲ್ಲಿ ಸಲಿಂಗಿಗಳ ಪರವಾದ ವಾದವನ್ನು ಸುಪ್ರೀಂ ಕೋರ್ಟ್ನಲ್ಲಿ ಮಂಡಿಸಿದ್ದರು. ಸುದೀರ್ಘವಾದ ನ್ಯಾಯ ಹೋರಟದ ಕೊನೆಯಲ್ಲಿ ಸೌರಭ್ ಕಿರ್ಪಾಲ್ ಸಲಿಂಗ ಕಾಮ ಅಪರಾಧವಲ್ಲ ಎಂಬ ನಿಲುವನ್ನು ಗಟ್ಟಿಯಾಗಿ ಪ್ರತಿಪಾದಿಸಿದ್ದರು. ಪರಿಣಾಮ ಸುಪ್ರೀಂ ಕೋರ್ಟ್ ದೇಶದಲ್ಲಿ ಸಲಿಂಗಕಾಮಿಗಳ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವಂತೆ ಮತ್ತು ಸಲಿಂಗಕಾಮಿಯಾಗುವುದು ಅಪರಾಧವಲ್ಲ ಎಂಬ ಆದೇಶವನ್ನು ಹೊರಡಿಸಿತ್ತು.

2018ರಲ್ಲಿ ಸೌರಭ್ ಕಿರ್ಪಾಲ್ ಹೆಸರು ಮುನ್ನೆಲೆಗೆ ಬಂದಾಗ ಕೇಂದ್ರ ಸರ್ಕಾರ ಅವರ ಹಿನ್ನೆಲೆ ಬಗ್ಗೆ ಮಾಹಿತಿ ಕಲೆಹಾಕುವ ಅಗತ್ಯವಿದೆ ಎಂದು ಹೇಳಿತ್ತು. ಈ ಬಗ್ಗೆ ಇಂಟೆಲಿಜೆನ್ಸ್ ಬ್ಯೂರೋ 2018ರಲ್ಲಿ ಮಾಹಿತಿ ಕಲೆ ಹಾಕಲು ಶುರು ಮಾಡಿ 2019ರ ಕೊನೆಯಲ್ಲಿ ಮಾಹಿತಿ ಸಂಗ್ರಹ ಮಾಡಿ ಮುಗಿಸಿತ್ತು. ಈ ಬಗ್ಗೆ ಅಂದೇ ಒಕ್ಕೂಟ ಸರ್ಕಾರಕ್ಕೂ ವರದಿ ಸಲ್ಲಿಕೆಯಾಗಿತ್ತು. ಅಂತರರಾಷ್ಟ್ರೀಯ ಸಂಪರ್ಕದ ಬಗ್ಗೆ ಇವರ ಮೇಲೆ ಅನುಮಾನ ಪಡಲಾಗಿತ್ತು. ಹೀಗಾಗಿ ಒಕ್ಕೂಟ ಸರ್ಕಾರ ಐಬಿಗೆ ಒಪ್ಪಿಸಿ ಮಾಹಿತಿ ಕಲೆ ಹಾಕಿದೆ ಎಂದಿತ್ತು.
ಸೌರಭ್ ಕಿರ್ಪಾಲ್ ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಹಾಗೂ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ತನ್ನ ವಿಧ್ಯಾಭ್ಯಾಸ ಮುಗಿಸಿಕೊಂಡಿದ್ದಾರೆ. ನಂತರ ಕಳೆದ 20 ವರ್ಷಗಳ ಕಾಲ ನ್ಯಾಯವಾದಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರ ತಂದೆ ಬಿಎನ್ ಕಿರ್ಪಾಲ್ 2002ರಲ್ಲಿ ಆರು ತಿಂಗಳ ಕಾಲ ಸುಪೀಂ ಕೋರ್ಟ್ ಚೀಫ್ ಜಸ್ಟಿಸ್ ಆಗಿ ಸೇವೆ ಸಲ್ಲಿಸಿದ್ದಾರೆ.