ಮೇಲಿನ ತಲೆಬರಹ ನೋಡಿದರೆ ನಿಮಗೆ ಆಶ್ಚರ್ಯ ಅನಿಸಬಹುದು. ಆದರೆ ಬಳ್ಳಾರಿ ಮತ್ತು ಹೊಸಪೇಟೆ ಜಿಲ್ಲೆಗಳ ಜನರಿಗೆ ಇದೆಲ್ಲ ಸಾಮಾನ್ಯ. ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಆಗಾಗ ಸಣ್ಣಪುಟ್ಟ ಒಳ ಒಪ್ಪಂದ ನಡೆಯುತ್ತವೆ. ಹಾಗಂತ ಅದನ್ನೇನೂ ಬಹಿರಂಗವಾಗಿ ತೋರಿಸಲ್ಲ.
ತಮಗೇ ಮತ್ತೊಮ್ಮೆ ಕಾಂಗ್ರೆಸ್ ಟಿಕೆಟ್ ಎಂದು ನಿರಾಳರಾಗಿದ್ದ ಕೊಂಡಯ್ಯರಿಗೆ ಈಗ ಸ್ವಲ್ಪ ಅಡ್ಡಿ ಎದುರಾಗಿದೆ. ಕಾಂಗ್ರೆಸ್ನ ಅನಿಲ್ ಲಾಡ್ ವಿಧಾನ ಪರಿಷತ್ ಪ್ರವೇಶಿಸುವ ಬಯಕೆಯೊಂದಿಗೆ ಕಾಂಗ್ರೆಸ್ ಟಿಕೆಟ್ಗೆ ಲಾಬಿ ನಡೆಸಿದ್ದಾರೆ. ಇದಕ್ಕೆ ಅವರ ಸಹೋದರ ಸಂತೋಷ್ ಲಾಡ್ ಪರೋಕ್ಷವಾಗಿ ಬೆಂಬಲಿಸುತ್ತಿದ್ದಾರೆ. ಈ ಗದ್ದಲದ ನಡುವೆ ಬಿಜೆಪಿ ಇನ್ನೂ ಅಭ್ಯರ್ಥಿಯನ್ನು ಯಾರೆಂದು ನಿರ್ಧರಿಸಿಲ್ಲ!
ಎಂಎಲ್ಸಿ ಚುನಾವಣೆಯ ನೆಪದಲ್ಲಿ ಬಳ್ಳಾರಿಯಲ್ಲಿ ನಡೆಯುತ್ತಿರುವ ರಾಜಕೀಯದ ಚಿತ್ರಣವನ್ನು ʼಪ್ರತಿಧ್ವನಿʼ ನೀಡುತ್ತಿದೆ. ಈ ಮೊದಲು ಕಾಂಗ್ರೆಸ್ನ ಕೊಂಡಯ್ಯ ಮತ್ತು ಬಿಜೆಪಿಯ ರೆಡ್ಡಿ-ರಾಮುಲುಗಳ ನಡುವಿನ ಅಲಿಖಿತ ಹೊಂದಾಣಿಕೆ ಬಗ್ಗೆ ʼಪ್ರತಿಧ್ವನಿʼ ಬೆಳಕು ಚೆಲ್ಲಿತ್ತು.
ಈಗ ಅಖಾಡದಲ್ಲಿ ಮತ್ತಷ್ಟು ಭರ್ಜರಿ ಚಟುವಿಕೆಗಳು ನಡೆದಿವೆ. ಕಾಂಗ್ರೆಸ್ನ ಎಂಎಲ್ಸಿ ಕೊಂಡಯ್ಯ ಈಗಾಗಲೇ ಒಂದು ಸುತ್ತಿನ ʼಸರಬರಾಜುʼ ಕ್ರಿಯೆಯನ್ನು ಮುಗಿಸಿ ಮತದಾರರನ್ನು (ಸ್ಥಳೀಯ ಸಂಸ್ಥೆಗಳ ಸದಸ್ಯರು) ತಲುಪಿದ್ದಾರೆ. ಈ ಸರಬರಾಜು ಪ್ರಕ್ರಿಯೆಯಲ್ಲಿ ಕೆಲವು ಕಡೆ ಬಿಜೆಪಿ ಕಾರ್ಯಕರ್ತರನ್ನೂ ಕೊಂಡಯ್ಯ ಬಳಸಿಕೊಂಡಿದ್ದು ಗುಟ್ಟಾಗೇನೂ ಉಳಿದಿಲ್ಲ.
ಈ ಎಂಎಲ್ಸಿ ಕ್ಷೇತ್ರದಲ್ಲಿ ಕಾಂಗ್ರೆಸ್ನ ಐವರು ಎಂಎಲ್ಎಗಳು ಇರುವುದು, ಸ್ಥಳೀಯ ಸಂಸ್ಥೆಗಳ ಸದಸ್ಯರ ಸಂಖ್ಯೆಯೂ ಹೆಚ್ಚಿರುವುದು ಕಾಂಗ್ರೆಸ್ಗೆ ಪಕ್ಷಕ್ಕೆ ಅಡ್ವಾಂಟೇಜ್. ಈ ಐವರು ಶಾಸಕರಲ್ಲಿ ನಾಲ್ವರು ಅನಿಲ್ ಲಾಡ್ಗೆ ಟಿಕೆಟ್ ಕೊಡಿ ಎಂದು ಹೈಕಮಾಂಡ್ಗೆ ಪತ್ರ ಬರೆದಿದ್ದಾರೆ.
ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ತಟಸ್ಥ ನಿಲುವು ಅಂದರೆ ಗಾಳಿ ಬೀಸಿದ ಕಡೆ ಚಲಿಸುವ ನಿಲುವು ಹೊಂದಿದ್ದಾರೆ. ಕಂಪ್ಲಿ ಶಾಸಕ ಜೆ.ಎಂ ಗಣೇಶ್, ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್, ಸಂಡೂರಿನ ಶಾಸಕ ತುಕಾರಾಮ್ ಮತ್ತು ಹೂವಿನ ಹಡಗಲಿ ಶಾಸಕ ಪರಮೇಶ್ವರ್ ನಾಯ್ಕ್ ಈ ಸಲ ಕೊಂಡಯ್ಯರ ಬದಲು ಅನಿಲ್ ಲಾಡ್ಗೆ ಟಿಕೆಡ್ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಅಂತಿಮವಾಗಿ ಹೈಕಮಾಂಡ್ ಟಿಕೆಟ್ ನಿರ್ಧರಿಸಲಿದ್ದು, ಈ ಐವರು ಶಾಸಕರು ಕೊಂಡಯ್ಯರೇ ಇರಲಿ, ಅನಿಲ್ ಲಾಡ್ ಇರಲಿ ಕಾಂಗ್ರೆಸ್ ಪರ ಕೆಲಸ ಮಾಡಲಿದ್ದಾರೆ.
ಈ ನಡುವೆ ಒಂದು ಸಣ್ಣ ಕಿರಿಕ್ ಕೂಡ ನಡೆದು ಮುಕ್ತಾಯವಾಗಿದೆ. ಹಗರಿಬೊಮ್ಮನಹಳ್ಳಿ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಸಭೆಯೊಂದರಲ್ಲಿ ತಮ್ಮದೇ ಪಕ್ಷದ ಕೊಂಡಯ್ಯ ವಿರುದ್ಧ ಮಾತನಾಡಿದ್ದರು. ಭೀಮಾನಾಯ್ಕ್ ಗೆ ಫೋನಾಯಿಸಿದ ಕೊಂಡಯ್ಯ ತರಾಟೆಗೆ ತೆಗೆದುಕೊಂಡಿದ್ದರು. ʼನನಗೆ ವಯಸ್ಸಾಗಿದೆ. ಕೊನೆ ಬಾರಿ ರಾಜಕೀಯ ಮಾಡುವೆ. ನಾನು 1996ರ ಪಾಲಿಟಿಕ್ಸ್ ಶುರು ಮಾಡಿದರೆ ನಿನಗೆ 2023ರ ಚುನಾವಣೆಯ ಟಿಕೆಟ್ ಸಿಗಲು ಸಾಧ್ಯವೇ?ʼ ಎಂದು ಪ್ರಶ್ನೆ ಮಾಡಿದ್ದಾರೆ. ಕೊಂಡಯ್ಯರು ಹಗರಿಬೊಮ್ಮನಹಳ್ಳಿಯ ಮದುವೆಯೊಂದಕ್ಕೆ ಹೋದಾಗ ಅವರನ್ನು ಮನೆಗೆ ಕರೆದ ಭೀಮಾನಾಯ್ಕ್ ಸಮಾಧಾನ ಪಡಿಸಿದ್ದಾರೆ. ʼನೀವು ಎಷ್ಟು ಕಾಂಗ್ರೆಸ್ ಮತಗಳನ್ನು ತಪ್ಪಿಸಲು ಯತ್ನಿಸುತ್ತೀರೊ ನನಗೆ ಅಷ್ಟು ಬಿಜೆಪಿ ಮತಗಳು ಬರಲಿವೆʼ ಎಂದೂ ಕೊಂಡಯ್ಯ ಹೇಳಿದ್ದಾರೆ. ಇದು ಬಳ್ಳಾರಿ ಜಿಲ್ಲೆಯ ರಾಜಕಾರಣದಲ್ಲಿ ಜನರಿಗೆ ಚರ್ಚೆಯ ವಿಷಯವಾಗಿತ್ತು.
ಹಿನ್ನಡೆಯಲ್ಲಿ ಬಿಜೆಪಿ
ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಸದಸ್ಯರೇ ಹೆಚ್ಚಿದ್ದಾರೆ. ಬಳ್ಳಾರಿ ಬಿಜೆಪಿಯೂ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅದರ ಬಳಿ ಸಮರ್ಥ ಅಭ್ಯರ್ಥಿಯೂ ಇಲ್ಲ .ಜಿಪಂ ಮತ್ತು ತಾಪಂ ಸದಸ್ಯರ ಅನುಪಸ್ಥಿತಿಯಲ್ಲಿ ಚುನಾವಣೆ ನಡೆಯಲಿದ್ದು ಗ್ರಾಮ ಪಂಚಾಯತಿ ಸದಸ್ಯರೇ ಮತಗಳೇ ನಿರ್ಣಾಯಕ. ಐವರು ಎಂಎಲ್ಎಗಳ ಕಾರಣದಿಂದ ಗ್ರಾಪಂಗಳಲ್ಲಿ ಕಾಂಗ್ರೆಸ್ ಪಾರುಪತ್ಯವಿದೆ.
ಬಿಜೆಪಿಯಿಂದ ಹೊಸಪೇಟೆ ಶಾಸಕ ಮತ್ತು ಪ್ರವಾಸೋದ್ಯಮ ಸಚಿವ ಆನಂದ್ಸಿಂಗ್ ಅವರ ಭಾವಮೈದ ಮುನ್ನಾಭಾಯಿ ಅಲಿಯಾಸ್ ಧರ್ಮೇಂದ್ರಸಿಂಗ್ ಅವರಿಗೆ ಟಿಕೆಟ್ ಕೊಡುವ ಸಾಧ್ಯತೆ ಇವೆ. ಕೊಂಡಯ್ಯ ನಿಂತರ ಮುನ್ನಾಭಾಯಿಯನ್ನು ಬಿಜೆಪಿಯೇ ಸೋಲಿಸಬಹುದು. ಅನಿಲ್ ಲಾಡ್ ನಿಂತರ ಮುನ್ನಾಭಾಯಿ ಗೆಲ್ಲಿಸುವ ಪ್ರಯತ್ನ ಮಾಡಬಹುದು.
ಹೊಸ ರೂಮರ್ ಪ್ರಕಾರ ಆನಂದಸಿಂಗ್ ಈಗಾಗಲೇ ಒಂದು ಕಾಲನ್ನು ಕಾಂಗ್ರೆಸ್ ದೋಣಿಯಲ್ಲಿ ಇಟ್ಟಿದ್ದು, 2023rರ ಚುನಾವಣೆ ಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯಲು ಕೊಂಡಯ್ಯ ನೆರವಾಗಬಹುದು ಎಂದು ಲೆಕ್ಕಾಚಾರ ಹಾಕಿದ್ದಾರೆ. ಆನಂದಸಿಂಗ್ ಅವರಿಗೆ ಪಕ್ಷ ಬದಲಿಸುವುದು ಒಂದು ಆಟವಾಗಿದೆ. ಆದರೆ ಅವರನ್ನು ಪದೇ ಪದೇ ಸೇರಿಸಿಕೊಳ್ಳುವ ಪಕ್ಷಗಳಿಗೆ ಏನಾಗಿದೆ?
ಆದರೆ ಸದ್ಯದ ಚಿತ್ರಣ ನೋಡಿದರೆ ಕೊಂಡಯ್ಯರೇ ನಿಲ್ಲಲಿ ಅಥವಾ ಅನಿಲ್ ಲಾಡ್ರೇ ನಿಲ್ಲಲಿ, ಕಾಂಗ್ರೆಸ್ ಗೆಲುವು ಹೆಚ್ಚೂ ಕಡಿಮೆ ನಿಶ್ಚಿತವಾದಂತಿದೆ. ಇದಕ್ಕೆ ಬಿಜೆಪಿ ಪರೋಕ್ಷವಾಗಿ ನೆರವು ನೀಡಲಿದೆ!