ಹಿಮಾಚಲ ಪ್ರದೇಶ ರಾಜ್ಯದ ಸಮ್ಮರ್ ಹಿಲ್ ಪ್ರದೇಶದಲ್ಲಿ ಕುಸಿದು ಬಿದ್ದ ಶಿವ ದೇವಾಲಯದ ಅವಶೇಷಗಳಡಿ ಮತ್ತೊಬ್ಬ ವ್ಯಕ್ತಿಯ ಶವ ಪತ್ತೆಯಾಗಿದ್ದು, ಚಂಬಾದಲ್ಲಿ ಇನ್ನಿಬ್ಬರು ಸಾವಿಗೀಡಾಗಿದ್ದಾರೆ. ೀ ಮೂಲಕ ರಾಜ್ಯದಲ್ಲಿ ಮಳೆಯ ಆರ್ಭಟಕ್ಕೆ ಮೃತರ ಸಂಖ್ಯೆ 74ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಶುಕ್ರವಾರ (ಆಗಸ್ಟ್ 18) ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಅವಶೇಷಗಳಲ್ಲಿ ಇನ್ನೂ ಹಲವರು ಹೂತುಹೋಗಿರುವ ಶಂಕೆ ಇದೆ.
ಮುಂಗಾರು ಆರಂಭವಾದ 55 ದಿನಗಳಲ್ಲಿ ಹಿಮಾಚಲ ಪ್ರದೇಶ ರಾಜ್ಯದಲ್ಲಿ 113 ಕಡೆ ಭೂಕುಸಿತ ಸಂಭವಿಸಿದ್ದು, ಲೋಕೋಪಯೋಗಿ ಇಲಾಖೆಗೆ (ಪಿಡಬ್ಲ್ಯುಡಿ) 32,491 ಕೋಟಿ ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್ಎಚ್ಎಐ) 1,000 ಕೋಟಿ ನಷ್ಟವಾಗಿದೆ ಎಂದು ಎನ್ಡಿಟಿವಿ ವರದಿ ತಿಳಿಸಿದೆ.
“ರಾಜ್ಯದ ರಾಜಧಾನಿ ಶಿಮ್ಲಾದ ಸಮ್ಮರ್ಹಿಲ್, ಫಾಗಲಿ ಮತ್ತು ಕೃಷ್ಣಾನಗರದಲ್ಲಿ ಭೂಕುಸಿತದ ಮೂರು ಘಟನೆಗಳಲ್ಲಿ ಸಾವಿನ ಸಂಖ್ಯೆ 21ಕ್ಕೆ ತಲುಪಿದೆ” ಎಂದು ಶಿಮ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಕುಮಾರ್ ಗಾಂಧಿ ತಿಳಿಸಿದ್ದಾರೆ.
ಹಿಮಾಚಲ ಪ್ರದೇಶ ಸಮ್ಮರ್ ಹಿಲ್ ಮತ್ತು ಕೃಷ್ಣನಗರ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈವರೆಗೆ ಸಮ್ಮರ್ ಹಿಲ್ನಲ್ಲಿ 14 ಶವಗಳು, ಫಾಗಲಿಯಲ್ಲಿ ಐದು ಮತ್ತು ಕೃಷ್ಣನಗರದಲ್ಲಿ ಎರಡು ಶವಗಳನ್ನು ಹೊರ ತೆಗೆಯಲಾಗಿದೆ ಎಂದು ಅವರು ಹೇಳಿದರು.
ಸೋಮವಾರ ಭೂಕುಸಿತ ಸಂಭವಿಸಿದಾಗ ಶಿವ ದೇವಸ್ಥಾನದಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಭಾನುವಾರದಿಂದ ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದ್ದು, ಶಿಮ್ಲಾ ಸೇರಿ ಹಲವು ಜಿಲ್ಲೆಗಳಲ್ಲಿ ಭೂಕುಸಿತ ಉಂಟಾಗಿದೆ.
![ಹಿಮಾಚಲ ಪ್ರದೇಶ](https://pratidhvani.com/wp-content/uploads/2023/08/chala-1024x576.webp)
ಹಿಮಾಚಲ ಪ್ರದೇಶ ರಾಜ್ಯದಲ್ಲಿ ಹಲವು ರಸ್ತೆಗಳು ಅಸ್ತವ್ಯಸ್ತಗೊಂಡಿದ್ದು, ಆಗಾಗ್ಗೆ ಭೂಕುಸಿತಗಳು ಸಂಭವಿಸುತ್ತಿರುವುದರಿಂದ ಶಿಮ್ಲಾ ನಗರ ವಿಧಾನಸಭಾ ವಿಭಾಗದಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವಂತೆ ಅಧಿಕಾರಿಗಳು ಗುರುವಾರ ಆದೇಶ ಹೊರಡಿಸಿದ್ದಾರೆ.
ಜುಲೈ ಮತ್ತು ಈ ವಾರದಲ್ಲಿ ಸುರಿದ ಭಾರಿ ಮಳೆಯಿಂದ ರಾಜ್ಯದಲ್ಲಿ ಸುಮಾರು 710 ಸಾವಿರ ಕೋಟಿ ನಷ್ಟ ಆಗಿರುವ ಅಂದಾಜು ಇದೆ. ಹಾನಿಗೊಳಗಾದ ಮೂಲಸೌಕರ್ಯ ಮರುನಿರ್ಮಾಣಕ್ಕೆ ಒಂದು ವರ್ಷ ಬೇಕಾಗಲಿದೆ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ತಿಳಿಸಿದ್ದಾರೆ.
11 ಕೋಟಿ ರೂ. ಆರ್ಥಿಕ ನೆರವು
ಹಿಮಾಚಲ ಪ್ರದೇಶದಲ್ಲಿ ಉಂಟಾಗಿರುವ ಭಾರೀ ಮಳೆ ಮತ್ತು ಭೂಕುಸಿತದಿಂದ ಉಂಟಾಗಿರುವ ಹಾನಿಗೆ 11 ಕೋಟಿ ರೂ. ಆರ್ಥಿಕ ನೆರವು ನೀಡುವುದಾಗಿ ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಫೇಲ್ ಘೋಷಿಸಿದ್ದಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಫೇಲ್ ಅವರು ಗುರುವಾರ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖಿಂದರ್ ಸಿಂಗ್ ಸುಖು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಿದ್ದು, ಪರಿಸ್ಥಿತಿಯನ್ನು ಎದುರಿಸಲು ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಿಮಾಚಲ ಪ್ರದೇಶ | ಮಳೆ, ಭೂಕುಸಿತದಲ್ಲಿ ಮೃತರ ಸಂಖ್ಯೆ 60ಕ್ಕೆ ಏರಿಕೆ
‘ದೇವಭೂಮಿ’ ಹಿಮಾಚಲ ಪ್ರದೇಶಕ್ಕೆ ತೀವ್ರ ಪ್ರಕೃತಿ ವಿಕೋಪ ಅಪ್ಪಳಿಸಿದ್ದು, ಈ ಪರಿಸ್ಥಿತಿಯಲ್ಲಿ ಛತ್ತೀಸ್ಗಢದ ಜನರು ಹಿಮಾಚಲ ಪ್ರದೇಶದ ಜನರೊಂದಿಗೆ ನಿಂತಿದ್ದಾರೆ ಎಂದು ಬಫೇಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಪತ್ತಿನ ಸಂತ್ರಸ್ತರ ಪರಿಹಾರ ಮತ್ತು ಪುನರ್ವಸತಿಗಾಗಿ ಹಿಮಾಚಲ ಪ್ರದೇಶ ಸರ್ಕಾರಕ್ಕೆ ಛತ್ತೀಸ್ಗಢದ ಜನರ ಪರವಾಗಿ 11 ಕೋಟಿ ರೂ. ಹಣವನ್ನು ಬಿಡುಗಡೆ ಮಾಡುವುದಾಗಿ ಬಘೇಲ್ ಘೋಷಿಸಿದ್ದಾರೆ.