ರಾಜ್ಯದ ಯಾವುದೇ ವಾಹನಗಳ ನೋಂದಣಿ ಫಲಕಗಳ ಮೇಲೆ ಅನಧಿಕೃತ ಫಲಕಗಳನ್ನು ಯಾವುದೇ ಸಂಘ, ಸಂಸ್ಥೆಗಳ ಹೆಸರು, ಚಿನ್ನೆ, ಲಾಂಛನವನ್ನು ಹಾಕುವಂತಿಲ್ಲ ಆತರ ಹಾಕಿದರೆ ಅದು ನಿಯಮಬಾಹಿರ ಎಂದು ರಾಜ್ಯ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ.
ಈ ಕುರಿತಂತೆ ಕರ್ನಾಟಕ ರಾಜ್ಯಪತ್ರದಲ್ಲಿ ಸುತ್ತೋಲೆ ಹೊರಡಿಸಿರುವ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರು,, ವಾಹನಗಳ ನೋಂದಣಿ ಸಂಖ್ಯಾ ಫಲಕಗಳನ್ನು ಕೇಂದ್ರ ಮೋಟಾರು ವಾಹನಗಳ ನಿಯಮಗಳ 1989ರ ನಿಯಮ 50ರಲ್ಲಿ ನಿಗದಿಪಡಿಸಲಾದ ಮಾನದಂಡಗಳಿಗೆ ಅನುಗುಣವಾಗಿ ಅಳವಡಿಸಬೇಕಾಗಿರುತ್ತದೆ ಎಂದು ತಿಳಿಸಿದ್ದಾರೆ.

ಕರ್ನಾಟಕ ಮೋಟಾರು ವಾಹನಗಳ ನಿಯಮಗಳ1989ರ ನಿಯಮ145-ಎ ರಲ್ಲಿ ಖಾಸಗಿ ವಾಹನಗಳು ಸರ್ಕಾರದ ಲಾಂಛನ ಮತ್ತು ಹೆಸರುಗಳನ್ನು ವಾಹನಗಳ ಮೇಲೆ ಪ್ರದರ್ಶಿಸುವುದನ್ನು ನಿರ್ಬಂಧಿಸಲಾಗಿದೆ. ತಮ್ಮ ವಾಹನಗಳ ಮೇಲೆ ಸರ್ಕಾರಿ ಲಾಂಛನ ಅಥವಾ ಹೆಸರುಗಳನ್ನು ಅಳವಡಿಸಬೇಕಾದಲ್ಲಿ, ಕೇಂದ್ರ ಸರ್ಕಾರದಿಂದ ಅನುಮತಿ ಪಡೆದುಕೊಳ್ಳುವುದು ಅವಶ್ಯಕವಾಗಿರುತ್ತದೆ ಎಂದಿದ್ದಾರೆ.
ಈ ಬಗ್ಗೆ ಕೋರ್ಟ್ ಆದೇಶ ಕೂಡ ಇದ್ದು, ಸರ್ಕಾರದ ಲಾಂಛನಗಳನ್ನು ಉಪಯೋಗಿಸದಂತೆ ಹಾಗೂ ವಾಹನಗಳ ಮೇಲೆ ನಿಗಮ, ಮಂಡಳಿ ಮತ್ತು ಸಂಸ್ಥೆಗಳ ಹೆಸರುಗಳನ್ನು ಬರೆದ ಯಾವುದೇ ತರಹದ ಫಲಕ ಅಥವಾ ಬರಹಗಳನ್ನು ಅಳವಡಿಸಬಹಾದು ಎಂದು ಸ್ಪಷ್ಟ ಆದೇಶ ಮಾಡಿದೆ. ಮಾನ್ಯ ನ್ಯಾಯಾಲಯದ ಆದೇಶದಂತೆ ಸೂಕ್ತ ಕ್ರಮ ತೆಗೆದುಕೊಂಡು, ತ್ವರಿತವಾಗಿ ಅನಧಿಕೃತ ಫಲಕಗಳನ್ನು ತೆರವುಗೊಳಿಸಲು ಮತ್ತು ತೆಗೆದುಕೊಂಡ ಕ್ರಮಗಳ ವಿವರಗಳನ್ನು ಮಾಹಿತಿ ರೂಪದಲ್ಲಿ ನೀಡಲು ತಿಳಿಸಿದ್ದಾರೆ.
ಇಲ್ಲಿಯವರೆಗೆ ಸಾರಿಗೆ ಇಲಾಖೆ ತೆರವುಗೊಳಿಸಿರುವ ನೇಮ್ ಬೋರ್ಡ್ ಹಾಗೂ ದಂಡ ಎಷ್ಟು ಗೊತ್ತಾ..?
ರಾಜ್ಯಾದ್ಯಂತ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಶಿವಮೊಗ್ಗ, ಬೆಳಗಾವಿ, ಗುಲ್ಬರ್ಗಾ ವಿಭಾಗದಲ್ಲಿ ಸಾರಿಗೆ ಇಲಾಖೆ ಕಾರ್ಯಾಚರಣೆ ಈಗಾಗಲೇ ಕೈಗೊಂಡಿದೆ. 2019 ಡಿಸೆಂಬರ್ ನಿಂದ 2022 ಏಪ್ರಿಲ್ ವರೆಗೂ ತಪಾಸಣೆ ನಡೆಸಿದ ಒಟ್ಟು ವಾಹನಗಳ ಸಂಖ್ಯೆ 4,90,736. ತಪಾಸಣೆ ನಡೆಸಿದ ವಾಹನಗಳ ಪೈಕಿ, 12,520 ಪ್ರಕರಣ ದಾಖಲಿಸಿ, ದಾಖಲಾದ ಪ್ರಕರಣಗಳಿಂದ ವಸೂಲಿಯಾದ ಒಟ್ಟು 10,43,4397 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.
ಇದೇ ವೇಳೆ ಕಳೆದೊಂದು ತಿಂಗಳಲ್ಲಿ ಎಂದರೆ 16-03-22- ರಿಂದ 12-04-22 ರವರೆಗೆ 27,351 ವಾಹನಗಳ ತಪಾಸಣೆ ಮಾಡಲಾಗಿದೆ. ಈ ಪೈಕಿ 575 ವಾಹಗನಗಳ ಮೇಲೆ ಪ್ರಕರಣ ದಾಖಲು ಮಾಡಿದ್ದು, ಇದರಿಂದ ಒಟ್ಟು 1,78,900 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.



