ಲಾಲ್ ಬಾಗ್ ಗೆ ತೊಂದರೆಯಾಗಬಾರದು, ಜನರಲ್ಲಿ ನಾಗರಿಕ ಪ್ರಜ್ಞೆ ಮೂಡಿಸಿ, ಶಾಲಾ ಮುಂಭಾಗದ ರಸ್ತೆಗಳಲ್ಲಿ ಸಂಚಾರ ದಟ್ಟಣೆ, ಓಸಿ ಸಿಸಿ ಸಮಸ್ಯೆ ನಿವಾರಣೆ, ಕಸ ನಿರ್ವಹಣೆ ಬಗ್ಗೆ ಚರ್ಚೆ

“ಟನಲ್ ರಸ್ತೆ ಯೋಜನೆಯಿಂದ ಲಾಲ್ ಬಾಗ್ ತೊಂದರೆಯಾಗದಂತೆ ನೋಡಿಕೊಳ್ಳಿ, ಓಸಿ ಸಿಸಿ ಸಮಸ್ಯೆ, ಕಸದ ಸಮಸ್ಯೆ ನಿವಾರಿಸಿ ಎಂಬ ಮನವಿಗಳ ಜೊತೆಗೆ, ಜನರಲ್ಲಿ ನಾಗರಿಕ ಪ್ರಜ್ಞೆ ಮೂಡಿಸಿ, ಶಾಲಾ ಮುಂಭಾಗದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಣ ವಿಚಾರವಾಗಿ ಬೆಂಗಳೂರಿನ ನಾಗರಿಕರ ಸಲಹೆಗಳನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಆಲಿಸಿದರು.
ಬೆಂಗಳೂರಿನ ನಾಗರಿಕರ ಬಳಿಗೆ ಹೋಗಿ, ಅವರ ಅಭಿಪ್ರಾಯ, ಸಲಹೆ, ಅಹವಾಲುಗಳನ್ನು ಸ್ವೀಕರಿಸಲು ಹಮ್ಮಿಕೊಂಡಿರುವ ಬೆಂಗಳೂರು ನಡಿಗೆ ಕಾರ್ಯಕ್ರಮದ ಭಾಗವಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ ಶಿವಕುಮಾರ್ ಅವರು ಶನಿವಾರ ಮುಂಜಾನೆ ಲಾಲ್ ಬಾಗ್ ಉದ್ಯಾನದಲ್ಲಿ ನಡಿಗೆ ಜೊತೆಗೆ ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿದರು.

ಡಿಸಿಎಂ ಬಳಿ ತಮ್ಮ ಸಲಹೆಗಳನ್ನು ಮುಕ್ತವಾಗಿ ಹಂಚಿಕೊಂಡ ಸಾರ್ವಜನಿಕರು ಉಪಮುಖ್ಯಮಂತ್ರಿಗಳ ಈ ಹೆಜ್ಜೆಯನ್ನು ಮುಕ್ತಕಂಠದಿಂದ ಸ್ವಾಗತಿಸಿದರು. ಸಾರ್ವಜನಿಕರ ಸಲಹೆ, ಮನವಿ ಹಾಗೂ ಅವರ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ಬೆಂಗಳೂರು ಕೇಂದ್ರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ಅವರು ದಾಖಲು ಮಾಡಿಕೊಂಡರು.
ಹಿರಿಯ ನಾಗರಿಕರಾದ ಆರ್.ಸಿ ಜಗನ್ನಾಥ್ ಅವರು ಲಾಲ್ ಬಾಗ್ ನಲ್ಲಿ ಯಾವುದೇ ಯೋಜನೆ ಕೈಗೊಳ್ಳಬೇಡಿ ಹಾಗೂ ಇದಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಡಿಸಿಎಂ, “ಯಾವುದೇ ಕಾರಣಕ್ಕೂ ಲಾಲ್ ಬಾಗ್ ಗೆ ಧಕ್ಕೆ ಆಗುವುದಿಲ್ಲ. ಟನಲ್ ರಸ್ತೆ ಭೂಮಿಯ ಒಳಗೆ ಹಾದು ಹೋಗಲಿದೆ. ಲಾಲ್ ಬಾಗ್ ಬಂಡೆಯ ಪಕ್ಕದಲ್ಲಿ ಟನಲ್ ಗೆ ಪ್ರವೇಶ ನೀಡಲು ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ. ಆ ಜಾಗವನ್ನು ಪರಿಶೀಲಿಸುತ್ತೇನೆ. ಅಗತ್ಯವಿದ್ದರೆ ಈ ಯೋಜನೆಯಲ್ಲಿ ಮಾರ್ಪಾಡು ಮಾಡುತ್ತೇವೆ” ಎಂದು ಭರವಸೆ ನೀಡಿದರು.

ಕಾರ್ತಿಕ್ ಕುಮಾರ್ ಎಂಬುವವರು ಸರ್ಕಾರ ಏನೇ ಕೆಲಸ ಮಾಡಿದರೂ ಜನರಲ್ಲಿ ನಾಗರಿಕ ಪ್ರಜ್ಞೆ ಮೂಡದಿದ್ದರೆ ಯಶಸ್ವಿಯಾಗುವುದಿಲ್ಲ. ಹೀಗಾಗಿ ಇದಕ್ಕೆ ಅಗತ್ಯ ಜಾಗೃತಿ ಮೂಡಿಸುವ ಕ್ರಮಕೈಗೊಳ್ಳಿ ಎಂದು ಸಲಹೆ ನೀಡಿದರು. ಇನ್ಮು ಸಿಬಿಡಿ ಶಾಲೆಗಳ ಆವರಣದಲ್ಲಿ ಜಾಗ ಇದ್ದರು, ರಸ್ತೆಯಲ್ಲಿ ವಾಹನ ನಿಲ್ಲಿಸುತ್ತಾರೆ. ಇದರಿಂದ ಸಂಚಾರ ದಟ್ಟಣೆ ಹೆಚ್ಚುತ್ತದೆ, ಈ ಶಾಲೆಗಳು ತಮ್ಮ ಆವರಣದಲ್ಲಿ ವಾಹನ ಇಟ್ಟುಕೊಳ್ಳುವಂತೆ ಮಾಡಿ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಅವರು “ಈ ವಿಚಾರವಾಗಿ ಖಂಡಿತ ಆಲೋಚನೆ ಮಾಡಿ, ಅಗತ್ಯ ಕ್ರಮ ಕೈಗೊಳ್ಳುತ್ತೇವೆ” ಎಂದು ಭರವಸೆ ನೀಡಿದರು.
ಇನ್ನು 30×50 ನಿವೇಶನದಲ್ಲಿ ಮನೆ ಕಟ್ಟುತ್ತಿದ್ದು ಓಸಿ ಮತ್ತು ಸಿಸಿ ಸಮಸ್ಯೆ ಇದೆ ಎಂದರು, ಮತ್ತೊಬ್ಬರು 40×60 ನಿವೇಶನದಲ್ಲಿ ಮನೆ ಕಟ್ಟುತ್ತಿದ್ದೇವೆ ಎಂದು ಓಸಿ ಸಿಸಿ ವಿನಾಯಿತಿ ನೀಡಿ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಅವರು, “ನಿನ್ನೆಯಷ್ಟೇ 30×40 ನಿವೇಶನಕ್ಕೆ ವಿನಾಯಿತಿ ನೀಡಿದ್ದೇವೆ. ಉಳಿದಂತೆ ಎರಡನೇ ಹಂತದಲ್ಲಿ ಇತರೆ ಕಟ್ಟಡಗಳ ಬಗ್ಗೆ ತೀರ್ಮಾನ ಮಾಡುತ್ತೇವೆ” ಎಂದು ಭರವಸೆ ನೀಡಿದರು.

ರಾಜಾರಾಂ ಎಂಬುವವರು ಬೆಂಗಳೂರಿನ ರಸ್ತೆಯಲ್ಲಿ ಮೆಟ್ರೋ ಅಥವಾ ಯಾವುದೇ ಕಾಮಗಾರಿ ನಡೆದರೂ ಆ ಭಾಗದ ರಸ್ತೆಯನ್ನು ಯೋಜನೆ ಆರಂಭದಿಂದ ಅಂತ್ಯದವರೆಗೆ ಅವರೇ ನಿರ್ವಹಣೆ ಮಾಡುವಂತೆ ನೋಡಿಕೊಳ್ಳಬೇಕು. ಆಗ ರಸ್ತೆ ಗುಂಡಿ ಬಿದ್ದರೂ ಅವರೇ ಅದನ್ನು ಮುಚ್ಚಿ ನಿರ್ವಹಣೆ ಮಾಡಿದಂತಾಗುತ್ತದೆ. ಆಗ ಅರ್ಧದಷ್ಟು ಸಮಸ್ಯೆ ನಿವಾರಣೆ ಆಗಲಿದೆ ಎಂದರು.

ಜಯನಗರ 4ನೇ ಬ್ಲಾಕ್ ನಿವಾಸಿಯೊಬ್ಬರು 7ಬಿ ಮುಖ್ಯರಸ್ತೆಯಲ್ಲಿ ಬೀದಿ ದೀಪ ಇಲ್ಲ. ಈ ಬಗ್ಗೆ ದೂರು ನೀಡಿದರೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಅಹವಾಲು ಹೇಳಿಕೊಂಡರು. “ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸುತ್ತೇವೆ. ಇದರ ಜೊತೆಗೆ ಬೆಂಗಳೂರಿನ ಎಲ್ಲಾ ಬೀದಿ ದೀಪಗಳನ್ನು ಬದಲಿಸಿ ಎಲ್ ಇಡಿ ದೀಪ ಅಳವಡಿಸಲಾಗುತ್ತದೆ. ಮುಂದಿನ ಆರು ತಿಂಗಳಲ್ಲಿ ಈ ಕೆಲಸ ನಡೆಯಲಿದೆ” ಎಂದು ಭರವಸೆ ನೀಡಿದರು.

ಸೆಂಟ್ ಫ್ರಾನ್ಸಿಸ್ ಶಾಲೆ ಶಿಕ್ಷಕಿ ತಮ್ಮ ಶಾಲೆ ಬಳಿಯ ರಸ್ತೆಯಲ್ಲಿ ಕಸ ಸುರಿಯುತ್ತಾರೆ, ರಸ್ತೆ ಹದಗೆಟ್ಟಿದೆ ಎಂದು ತಮ್ಮ ಅಹವಾಲು ಹೇಳಿಕೊಂಡರು. “ನಿಮ್ಮ ಶಾಲೆ ಬಳಿಗೆ ಅಧಿಕಾರಿಗಳ ತಂಡವನ್ನು ಕಳುಹಿಸಿ ಸಮಸ್ಯೆ ಬಗೆಹರಿಸಲು ಸೂಚಿಸುತ್ತೇನೆ. ನಿಮ್ಮನ್ನು ಸಂಪರ್ಕ ಮಾಡಲು ತಿಳಿಸುತ್ತೇನೆ” ಎಂದು ಭರವಸೆ ನೀಡಿದರು.