ಬೆಂಗಳೂರು: ಕಜ್ಜಾಯ ಕೊಡುವುದಾಗಿ ಕರೆದು ಖತರ್ನಾಕ್ ಮಹಿಳೆಯೊಬ್ಬಳು ಪಕ್ಕದ ಮನೆಯ ಅಜ್ಜಿ ಜೀವ ತೆಗೆದ ಘಟನೆ ಬೆಂಗಳೂರಿನ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೂಗೂರಿನಲ್ಲಿ ನಡೆದಿದೆ. 68 ವರ್ಷದ ಭದ್ರಮ್ಮ ಕೊಲೆಯಾದ ದುರ್ದೈವಿ. ಕೂಗೂರಿ ಗ್ರಾಮದ ನಿವಾಸಿಯಾದ ದೀಪಾ ಕೊಲೆಯ ಆರೋಪಿ ಎಂದು ಗುರುತಿಸಲಾಗಿದೆ.

ಕೂಗೂರಿನ ಭದ್ರಮ್ಮ ಹಾಗೂ ಆರೋಪಿ ದೀಪಾ ಅಕ್ಕಪಕ್ಕದ ಮನೆಯವರಾಗಿದ್ದು, ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ಒಬ್ಬರ ಮನೆಗೆ ಮತ್ತೊಬ್ಬರು ಹೋಗುವುದು ಬರುವುದು ಸಾಮಾನ್ಯವಾಗಿತ್ತು. ಆದರೆ ಅಕ್ಟೋಬರ್ 30ರ ಮಧ್ಯಾಹ್ನ ಭದ್ರಮ್ಮ ದಿಢೀರ್ ಕಾಣೆಯಾಗಿದ್ದರು. ಮೊದಲು ಕುಟುಂಬಸ್ಥರು ಎಲ್ಲೆಡೆ ಹುಡುಕಾಟ ನಡೆಸಿದ್ದು, ಬಳಿಕ ಸರ್ಜಾಪುರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಕೊನೆಗೆ ಪೊಲೀಸ್ ತನಿಖೆಯಲ್ಲಿ ನೆರೆ ಮನೆಯ ದೀಪಾ ಕೊಲೆಯ ಆರೋಪಿ ಎನ್ನುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಭದ್ರಮ್ಮ ಬಳಿ ಇದ್ದ ಚಿನ್ನದ ಸರಕ್ಕಾಗಿ ದೀಪಾ ಕಜ್ಜಾಯ ಕೊಡುವ ನೆಪದಲ್ಲಿ ಮನೆಗೆ ಕರೆದುಕೊಂಡು ಹೋಗಿ ಕೊ** ಮಾಡಿದ್ದು, ಬಳಿಕ ಚೀಲದಲ್ಲಿ ಕಟ್ಟಿ ಕಸ ಎಸೆಯುವ ಕಡೆಯಲ್ಲಿ ಎಸೆದಿದ್ದಾಳೆ. ಇತ್ತ ಪೊಲೀಸರ ವಿಚಾರಣೆಯಲ್ಲಿ ಭದ್ರಮ್ಮ ಕೊನೆಯ ಬಾರಿ ದೀಪಾ ಮನೆಗೆ ಹೋಗಿರುವುದು ಖಚಿತವಾಗಿದ್ದು, ತೀವ್ರ ವಿಚಾರಣೆ ನಡೆಸಿದಾಗ ಕೊ** ವಿಚಾರ ಬೆಳಕಿಗೆ ಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.







