ಚಾಮರಾಜನಗರ ಹಾಲಿ ಸಂಸದರಾಗಿದ್ದ 76 ವರ್ಷದ ಶ್ರೀನಿವಾಸ್ ಪ್ರಸಾದ್ ವಿಧಿವಶರಾಗಿದ್ದಾರೆ. ಭಾನುವಾರ ತಡರಾತ್ರಿ 1.20 ಕ್ಕೆ ಓಲ್ಡ್ ಏರ್ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀನಿವಾಸ್ ಪ್ರಸಾದ್, ಚಿಕಿತ್ಸೆಗಾಗಿ ಇದೇ ಏಪ್ರಿಲ್ 22 ರಂದು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿ ಆಗದೇ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನರಾಗಿದ್ದಾರೆ.
1947 ಆಗಸ್ಟ್ 6 ರಂದು ಜನಿಸಿದ್ದ ಶ್ರೀನಿವಾಸ ಪ್ರಸಾದ್ಗೆ 76 ವರ್ಷ ವಯಸ್ಸಾಗಿತ್ತು. ಮೈಸೂರು – ಚಾಮರಾಜನಗರ ಭಾಗದ ಪ್ರಭಾವಿ ದಲಿತ ನಾಯಕನಾಗಿ ಬೆಳೆದಿದ್ದರು. ಕಳೆದ ತಿಂಗಳು ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಣೆ ಮಾಡಿದ್ದರು. ಮೂವರು ಹೆಣ್ಣು ಮಕ್ಕಳಾದ ಪ್ರತಿಮಾ ಪ್ರಸಾದ್, ಪೂರ್ಣಿಮಾ ಪ್ರಸಾದ್ ಮತ್ತು ಪೂನಂ ಪ್ರಸಾದ್ ಅವರ ಜೊತೆಗೆ ಸಾವಿರಾರು ಅಭಿಮಾನಿಗಳನ್ನು ಅಗಲಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ತನ್ನದೇ ಶಕ್ತಿ ಹೊಂದಿದ್ದ ಪ್ರಸಾದ್, ಮೊದಲಿಗೆ ಕಾಂಗ್ರೆಸ್, ಜೆಡಿಯು, ಆ ಬಳಿಕ ಕಾಂಗ್ರೆಸ್, ಜೀವನದ ಅಂತ್ಯಕಾಲದಲ್ಲಿ ಬಿಜೆಪಿ ಜೊತೆಗೆ ಗುರುತಿಸಿಕೊಂಡಿದ್ದರು.