ದಿನಾಂಕ 1 ಅಕ್ಟೋಬರ್ 2023ರಂದು ನಂಜನಗೂಡಿನ ಅಂಬೇಡ್ಕರ್ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ (ಕೆಎಸ್ಡಿಎಸ್ಎಸ್) ಅಧ್ಯಯನ ಶಿಬಿರದಲ್ಲಿ ಮಂಡಿಸಿದ ಉಪನ್ಯಾಸದ ಲೇಖನ ರೂಪ :-
ನಾ ದಿವಾಕರ ಅವರ ಬರಹ – ಭಾಗ 1
ಭಾರತದ ಸಂವಿಧಾನದ ಮೂಲ ಅಂತಃಸತ್ವವನ್ನು ನಾವು ಕಾಣಬೇಕಿರುವುದು ಅದರಲ್ಲಿ ಅಂತರ್ಗತವಾಗಿರುವ ಸಾಮಾಜಿಕ ನ್ಯಾಯ ಮತ್ತು ಸಾಂಸ್ಕೃತಿಕ ಬಹುತ್ವದ ನೆಲೆಗಳಲ್ಲಿ. ಈ ಎರಡೂ ಅಂಶಗಳನ್ನು ಎಲ್ಲಿಯವರೆಗೆ ನಾವು ಕಾಪಾಡಿಕೊಳ್ಳುತ್ತೇವೆಯೋ ಅಲ್ಲಿಯವರೆಗೆ ಭಾರತದ ಪ್ರಜಾಪ್ರಭುತ್ವ ಗಟ್ಟಿಯಾಗಿರುತ್ತದೆ. ಸಾಮಾಜಿಕ ನ್ಯಾಯ ಎನ್ನುವುದನ್ನು ಎರಡು ನೆಲೆಗಳಲ್ಲಿ ನೋಡಬೇಕಾಗುತ್ತದೆ. ಮೊದಲನೆಯದು ಸರ್ಕಾರಗಳು ಸಾಂವಿಧಾನಿಕವಾಗಿ ರೂಪಿಸುವ ಆಡಳಿತ ನೀತಿಗಳು, ಯೋಜನೆಗಳು ಹಾಗೂ ಉಪಕ್ರಮಗಳ ಹಿನ್ನೆಲೆಯಲ್ಲಿ ತಳಮಟ್ಟದ ಸಮಾಜದಲ್ಲಿ ಸಾಧಿಸಬಹುದಾದ ಸಮಾನತೆ ಮತ್ತು ಪ್ರಾತಿನಿಧ್ಯ. ಎರಡನೆಯದು ಕೆಳಸ್ತರದ ಸಮಾಜದ ತಳಸಮುದಾಯಗಳು, ಅವಕಾಶವಂಚಿತರು, ತುಳಿತಕ್ಕೊಳಗಾದವರು ಹಾಗೂ ಅಂಚಿಗೆ ತಳ್ಳಲ್ಪಟ್ಟ ಜನಸಮೂಹಗಳು ತಮ್ಮ ನಿತ್ಯ ಜೀವನ ಮತ್ತು ಜೀವನೋಪಾಯದ ಮಾರ್ಗಗಳಲ್ಲಿ ಗುರುತಿಸಬಹುದಾದ ಸಮಾನತೆಯ ಅಂಶಗಳು. ಸಮಾನತೆ ಎಂಬ ಉದಾತ್ತ ಪರಿಕಲ್ಪನೆಯನ್ನು ಪ್ರತ್ಯೇಕಿಸಿ ನೋಡುವುದಕ್ಕಿಂತಲೂ ಸಾಮಾಜಿಕ-ರಾಜಕೀಯ-ಆರ್ಥಿಕ ಹಾಗೂ ಸಾಂಸ್ಕೃತಿಕ ವಲಯಗಳಲ್ಲಿ ತಳಸಮುದಾಯದ ಜನತೆ ತಮ್ಮ ನಿತ್ಯಬದುಕಿನಲ್ಲಿ ಸಮಾನತೆ ಕಾಣಲು ಸಾಧ್ಯವಾಗುತ್ತಿದೆಯೆ ಎಂದು ನೋಡುವುದು ಇವತ್ತಿನ ತುರ್ತು.
ಈ ಹಿನ್ನೆಲೆಯಲ್ಲಿ ನಾನು ಮಂಡಿಸಲಿರುವ ವಿಷಯಕ್ಕೆ ಪೂರಕವಾಗಿ ಕೆಲವು ಅಧಿಕೃತ ಅಂಕಿ ಅಂಶಗಳನ್ನು ಇಲ್ಲಿ ನೀಡಲು ಇಚ್ಚಿಸುತ್ತೇನೆ :
ಕೇಂದ್ರ ಸರ್ಕಾರದ 91 ಹೆಚ್ಚುವರಿ ಕಾರ್ಯದರ್ಶಿಗಳ ಪೈಕಿ 10 ಎಸ್ಸಿ/ಎಸ್ಟಿ ಮತ್ತು 4 ಒಬಿಸಿ ಇದ್ದಾರೆ. 245 ಜಂಟಿ ಕಾರ್ಯದರ್ಶಿಗಳ ಪೈಕಿ 26 ಎಸ್ಸಿ/ಎಸ್ಟಿ ಮತ್ತು 29 ಒಬಿಸಿ ಇದ್ದಾರೆ. 2019ರ ಕೇಂದ್ರ ಸರ್ಕಾರದ ಮಾಹಿತಿಯನುಸಾರ ಸೇರ್ಪಡೆಯಾದ 89 ಕಾರ್ಯದರ್ಶಿಗಳ ಪೈಕಿ 1 ಎಸ್ಸಿ , 3 ಎಸ್ಟಿ ಮತ್ತು 0 ಒಬಿಸಿ ಇದ್ದಾರೆ. 2022ರ ಜನವರಿ 1ರ ಮಾಹಿತಿಯ ಅನುಸಾರ : ದೇಶದ 45 ಕೇಂದ್ರ ವಿಶ್ವವಿದ್ಯಾಲಯಗಳಲ್ಲಿ ಎಸ್ಸಿಗಳಿಗೆ ಮೀಸಲಾದ 306ರ ಪೈಕಿ 234, ಎಸ್ಟಿಗಳ 140 ರ ಪೈಕಿ 107, ಒಬಿಸಿಗಳ 389ರ ಪೈಕಿ 352 ಪ್ರಾಧ್ಯಾಪಕ ಹುದ್ದೆಗಳು ಖಾಲಿ ಉಳಿದಿವೆ. ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಎಸ್ಸಿ ಸಮುದಾಯದ ಏಕೈಕ ಪ್ರೊಫೆಸರ್ ಇದ್ದಾರೆ. ಎಸ್ಟಿ ಮತ್ತು ಒಬಿಸಿ ಸಮುದಾಯದಿಂದ ಒಬ್ಬರೂ ಇಲ್ಲ.
2021ರ ವೇಳೆಗೆ ಪ್ರತಿಷ್ಠಿತ ಐಐಎಮ್ಗಳಲ್ಲಿ ಎಸ್ಸಿ/ಎಸ್ಟಿ-ಒಬಿಸಿಗಳಿಗೆ ಮೀಸಲಾಗಿರುವ ಶೇ 60ರಷ್ಟು ಹುದ್ದೆಗಳು ಖಾಲಿ ಉಳಿದಿದ್ದವು. 2021ರವರೆಗೂ ದೇಶದಲ್ಲಿರುವ 22 ಐಐಟಿಗಳಲ್ಲಿ ಎಸ್ಸಿ ಸಮುದಾಯದ ಬೋಧಕರ ಸಂಖ್ಯೆ 10 ಅಥವಾ ಅದಕ್ಕಿಂತಲೂ ಕಡಿಮೆ. ಏಳು ಐಐಟಿಗಳಲ್ಲಿ 10ಕ್ಕಿಂತಲೂ ಕಡಿಮೆ ಒಬಿಸಿಗಳಿದ್ದಾರೆ. ದೇಶದ ಎಸ್ಟಿ ಜನಸಂಖ್ಯೆಯ 1.96 ಕೋಟಿ ಕುಟುಂಬಗಳ ಪೈಕಿ 8.6 ಲಕ್ಷ ಕುಟುಂಬಗಳು ಅಂದರೆ ಶೇ 4.37ರಷ್ಟು ಸರ್ಕಾರಿ ನೌಕರಿ ಪಡೆದಿವೆ. 3.96 ಎಸ್ಸಿ ಕುಟುಂಬಗಳ ಪೈಕಿ 13 ಲಕ್ಷ ಅಂದರೆ ಶೇ 3.96ರಷ್ಟು ಸರ್ಕಾರಿ ನೌಕರಿ ಪಡೆದಿವೆ. ಭಾರತದ 10 ಕೋಟಿ ದಲಿತರು ಬಹು ಆಯಾಮದ ಬಡತನದಲ್ಲಿ ಬಳಲುತ್ತಿದ್ದಾರೆ. ಅಂದರೆ ಕಳಪೆ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯ, ಅಪೌಷ್ಟಿಕತೆ, ಕುಡಿಯುವ ಶುದ್ಧ ನೀರಿನ ಕೊರತೆ, ವಿದ್ಯುತ್ ಕೊರತೆ ಹಾಗೂ ಅತ್ಯಂತ ಕಡಿಮೆ ಪ್ರಮಾಣದ ಶಾಲಾ ಶಿಕ್ಷಣವನ್ನು ಹೊಂದಿರುವುದನ್ನು ಬಹುಆಯಾಮದ ಬಡತನ ಎಂದು ವ್ಯಾಖ್ಯಾನಿಸಲಾಗುತ್ತದೆ.
ತಲಾ ಆದಾಯ ರಾಷ್ಟ್ರೀಯ ಮಟ್ಟದಲ್ಲಿ 74 ಸಾವಿರ ರೂಗಳಿದ್ದರೆ ಇದ್ದರೆ ದಲಿತರಿಗೆ 47 ಸಾವಿರ ರೂಗಳಷ್ಟಿದೆ. ದೇಶದ ಶೇ 80 ರಷ್ಟು ದಲಿತರು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಾರೆ. ದೇಶದ ಆದಿವಾಸಿಗಳಲ್ಲಿ ಶೇ 50ರಷ್ಟು, ದಲಿತರಲ್ಲಿ ಶೇ 33 ಮುಸ್ಲಿಮರಲ್ಲಿ ಶೇ 33ರಷ್ಟು ಬಡತನ ಕಾಡುತ್ತಿದೆ. 2018-22ರ ಅವಧಿಯಲ್ಲಿ ದೇಶಾದ್ಯಂತ ದಲಿತರ ಮೇಲೆ 1,89,945 ದೌರ್ಜನ್ಯ ಪ್ರಕರಣಗಳು ನಡೆದಿವೆ. ಇವುಗಳ ಪೈಕಿ 1.50 ಲಕ್ಷ ಪ್ರಕರಣಗಳಲ್ಲಿ ಚಾರ್ಜ್ ಷೀಟ್ ಸಲ್ಲಿಸಲಾಗಿದೆ. ಶಿಕ್ಷೆಯಾಗಿರುವುದು ಕೇವಲ 27,754 ಪ್ರಕರಣಗಳಲ್ಲಿ. 2009-19ರ ಅವಧಿಯಲ್ಲಿ ದಲಿತ ಮಹಿಳೆಯರ ಮೇಲಿನ ಅತ್ಯಾಚಾರಗಳು ಶೇ 159 ರಷ್ಟು ಹೆಚ್ಚಾಗಿವೆ. 2021ರ ವೇಳೆಗೆ ಪರಿಶಿಷ್ಟ ಜಾತಿಗಳ ಮೇಲಿನ ಅತ್ಯಾಚಾರದ 70,818 ಪ್ರಕರಣಗಳು, ಆದಿವಾಸಿಗಳ ಮೇಲಿನ 12,159 ಪ್ರಕರಣಗಳಲ್ಲಿ ವಿಚಾರಣೆ ಬಾಕಿ ಉಳಿದಿವೆ.
ಈ ಅಂಕಿ ಅಂಶಗಳನ್ನು ನಿಮ್ಮ ಮುಂದಿರಿಸುವ ಮೂಲ ಉದ್ದೇಶ ಎಂದರೆ ಡಾ. ಬಿ.ಆರ್. ಅಂಬೇಡ್ಕರ್ ಆಶಿಸಿದ ಸಾಮಾಜಿಕ ನ್ಯಾಯವನ್ನು ಸಾಕಾರಗೊಳಿಸುವಲ್ಲಿ ನಾವು ಎಷ್ಟು ಹಿಂದುಳಿದಿದ್ದೇವೆ ಎಂದು ಮನವರಿಕೆ ಮಾಡಲು. ಅಥವಾ ನಾವು ಪರಿಭಾವಿಸಿರುವ ಸಾಮಾಜಿಕ ನ್ಯಾಯ ಎಷ್ಟು ದುರ್ಬಲವಾಗಿದೆ ಎಂಬುದನ್ನು ನೆನಪಿಸಲು. ಹೀಗೆ ಯೋಚಿಸುವಾಗ ನಮ್ಮನ್ನಾಳುವ ಅಧಿಕಾರ ರಾಜಕಾರಣದತ್ತ ಕಣ್ಣುಹಾಯಿಸಿದರೆ ನಮಗೆ ಬಹಳ ಆಶಾದಾಯಕ ಎನ್ನುವ ಚಿತ್ರಣವೇ ಕಾಣುತ್ತದೆ. ಸಂಸತ್ತಿನಲ್ಲಿ 84 ಎಸ್ಸಿ, 47 ಎಸ್ಟಿ ಸದಸ್ಯರಿದ್ದಾರೆ. ರಾಜ್ಯ ವಿಧಾನಸಭೆಗಳಲ್ಲಿ 614 ಎಸ್ಸಿ, 554 ಎಸ್ಟಿ ಸದಸ್ಯರಿದ್ದಾರೆ.
“ ದಲಿತರು ಮತ್ತು ದಲಿತ ರಾಜಕಾರಣದ ಸವಾಲುಗಳ “ ಬಗ್ಗೆ ಮಾತನಾಡುವ ಮುನ್ನ ಈ ಅಂಕಿಅಂಶಗಳು ಏಕೆ ಮುಖ್ಯವಾಗುತ್ತವೆ ? ಕೊನೆಯಲ್ಲಿ ನೀಡಿರುವ ದತ್ತಾಂಶವನ್ನು ಗಮನಿಸಿ. ಒಟ್ಟು 1299 ಜನಪ್ರತಿನಿಧಿಗಳು ನಮ್ಮನ್ನು ಶಾಸನಸಭೆಗಳಲ್ಲಿ ಪ್ರತಿನಿಧಿಸುತ್ತಿದ್ದಾರೆ. ಇದಕ್ಕೂ ಮುನ್ನ ನೀಡಿರುವ ಮಾಹಿತಿಯತ್ತ ಒಮ್ಮೆ ನೋಡಿ. ಈ ಜನಪ್ರತಿನಿಧಿಗಳ ಪೈಕಿ ಎಷ್ಟು ಜನರು ಮೇಲಿನ ಕರಾಳ ಪರಿಸ್ಥಿತಿಯ ಬಗ್ಗೆ ಕನಿಷ್ಠ ಪಕ್ಷ ಮಾತನಾಡುತ್ತಿದ್ದಾರೆ ಅಥವಾ ಸರ್ಕಾರಗಳ ಗಮನ ಸೆಳೆಯುತ್ತಿದ್ದಾರೆ ? ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ ಎನ್ನುವುದಾದರೆ ಏಕೆ ಹೀಗೆ ? ಇವರ ಪ್ರಾತಿನಿಧ್ಯಕ್ಕೆ ಅರ್ಥವೇನಿದೆ ? ಹಸಿವ ಕಂದನಿಗೆ ಅನ್ನ ನೀಡದ ತಾಯಿಗೂ ಇವರಿಗೂ ವ್ಯತ್ಯಾಸವೇನಿದೆ ? ದಲಿತರ ಸ್ಥಿತಿಗತಿಗಳಲ್ಲಿ ಸುಧಾರಣೆಯಾಗಿದೆ ಎಂಬ ಮೇಲ್ನೋಟದ ಚಿತ್ರಣಕ್ಕೂ ಈ ದತ್ತಾಂಶಗಳಿಗೂ ಇರುವ ಅಪಾರ ಅಂತರ ವಾಸ್ತವವನ್ನು ಮರೆಮಾಚುವ ಒಂದು ಗಟ್ಟಿ ಪರದೆಯಂತೆ ತೋರುತ್ತದೆ ಅಲ್ಲವೇ ? ಭಾರತದ ಸಾಮಾಜಿಕ ವ್ಯವಸ್ಥೆಯ ಮೇಲೆ ಇಂದಿಗೂ ಹಿಡಿತ ಸಾಧಿಸಿರುವ ಪಿತೃಪ್ರಧಾನತೆ, ಶ್ರೇಣಿ ರಾಜಕಾರಣದ ಪಾರಮ್ಯ ಮತ್ತು ಶ್ರೇಷ್ಠತೆ ಹಾಗೂ ಬೌದ್ಧಿಕ ಮೇಲರಿಮೆಗಳೇ ಇದಕ್ಕೆ ಕಾರಣ ಎನ್ನುವುದನ್ನು ನಾವು ಅರಿಯಬೇಕಿದೆ. ಈ ಅರಿವಿನ ವಿಸ್ತರಣೆಯಾಗಿಯೇ ನಾನು ದಲಿತ ರಾಜಕಾರಣ ಮತ್ತು ಸವಾಲುಗಳನ್ನು ಕುರಿತು ಮಾತನಾಡಲಿದ್ದೇನೆ.
ದಲಿತ ರಾಜಕಾರಣದ ಮೂರು ಆಯಾಮಗಳು
ದಲಿತ ರಾಜಕಾರಣವನ್ನು ವಿಮರ್ಶಾತ್ಮಕವಾಗಿ ನೋಡಿದಾಗ ನಮಗೆ ಮೂರು ಆಯಾಮಗಳು ಕಂಡುಬರುತ್ತವೆ. ಅಧಿಕಾರ ರಾಜಕಾರಣ, ಸಾಮಾಜಿಕ ರಾಜಕಾರಣ ಮತ್ತು ಸಾಂಸ್ಕೃತಿಕ ರಾಜಕಾರಣ. ಡಾ.ಬಿ.ಆರ್.ಅಂಬೇಡ್ಕರ್ ಆಶಿಸಿದ ಸಾಮಾಜಿಕ ನ್ಯಾಯವನ್ನು ವಾಸ್ತವ ನೆಲೆಗಟ್ಟಿನಲ್ಲಿ ಸಾಕಾರಗೊಳಿಸಬೇಕಾದರೆ ಈ ಮೂರೂ ಮಜಲುಗಳಲ್ಲಿ ನಾವು ನ್ಯಾಯ ಸಂಪಾದಿಸಬೇಕಿದೆ ಅಥವಾ ನ್ಯಾಯಕ್ಕಾಗಿ ಹೋರಾಡಬೇಕಿದೆ. ಕಳೆದ ಐದು ದಶಕಗಳ ದಲಿತ ಚಳುವಳಿಗಳ ಹಿನ್ನೆಲೆಯಲ್ಲಿ ಈ ಮೂರೂ ಮಜಲುಗಳನ್ನು ಭೇದಿಸಿ ನೋಡುವ ಪ್ರಯತ್ನ ಮಾಡುತ್ತೇನೆ.
ಅಧಿಕಾರ ರಾಜಕಾರಣ
ಶಾಸನಸಭೆಗಳಿಗೆ ಜನರಿಂದಲೇ ಚುನಾಯಿತರಾದ ದಲಿತ ಸಮುದಾಯದ ಜನಪ್ರತಿನಿಧಿಗಳ ಕಾರ್ಯವೈಖರಿ ಮತ್ತು ಅವರಿಂದ ದಲಿತ ಸಮುದಾಯಗಳಿಗೆ ತಲುಪುವ ಪ್ರಯೋಜನಗಳತ್ತ ಗಮನ ಹರಿಸಿದಾಗ ನಮಗೆ ಬಹುಮುಖ್ಯವಾಗಿ ಕಾಣಬೇಕಿರುವುದು ಜನಪ್ರತಿನಿಧಿಗಳಲ್ಲಿ ಇರಬಹುದಾದ/ಇರಬೇಕಾದ ಅಥವಾ ಬಹುಮಟ್ಟಿಗೆ ಇಲ್ಲವಾಗಿರುವ ದಲಿತ ಪ್ರಜ್ಞೆ. ದಲಿತ ಪ್ರಜ್ಞೆಯನ್ನು ಸಂಕುಚಿತ ಆವರಣದೊಳಗೆ ಸಿಲುಕಿಸದೆ ವಿಶಾಲಾರ್ಥದಲ್ಲಿ ನೋಡಿದಾಗ ಶೋಷಿತ ಸಮುದಾಯಗಳ ಬಗ್ಗೆ ಇರಬೇಕಾದ ಸಹಾನುಭೂತಿ (Empathy) ಎಂದು ವ್ಯಾಖ್ಯಾನಿಸಬಹುದು. ಸಂವಿಧಾನಕ್ಕೆ ಪ್ರಮಾಣಬದ್ಧರಾಗಿ ಅಧಿಕಾರ ವಹಿಸಿಕೊಳ್ಳುವ ಜನಪ್ರತಿನಿಧಿಗಳು ಸಾಂವಿಧಾನಿಕ ಮೂಲ ಆಶಯಗಳನ್ನು ಈಡೇರಿಸಲು ಎಷ್ಟು ಬದ್ಧರಾಗಿರುತ್ತಾರೆ ಎನ್ನುವುದೇ ಇಲ್ಲಿ ಪ್ರಮುಖ ಮಾನದಂಡವಾಗುತ್ತದೆ. ತಾವು ಪ್ರತಿನಿಧಿಸುವ ಅಪಾರ ಜನಕೋಟಿಯ ನಿತ್ಯ ಬದುಕಿನ ನೋವು-ತಲ್ಲಣಗಳಿಗೆ ಸ್ಪಂದಿಸುವುದು ಒಂದೆಡೆಯಾದರೆ ಮತ್ತೊಂದೆಡೆ ಈ ಜನಸ್ತೋಮ ಎದುರಿಸುವ ಜಟಿಲ ಸಿಕ್ಕು-ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೈಗೊಳ್ಳುವ ರಾಜಕೀಯ ತೀರ್ಮಾನಗಳು ಮತ್ತು ಆಡಳಿತ ನೀತಿ ನಿರೂಪಣೆಗಳು ಮತ್ತೊಂದೆಡೆ ಮುಖ್ಯವಾಗುತ್ತದೆ.
ಈ ನೆಲೆಯಲ್ಲಿ ನಿಂತು ನೋಡಿದಾಗ ನಮಗೆ ನಿರಾಸೆ ಕಾಡುವುದೇ ಹೆಚ್ಚು. ಏಕೆಂದರೆ ಮೇಲೆ ಉಲ್ಲೇಖಿಸಿದ ದೌರ್ಜನ್ಯ-ತಾರತಮ್ಯ ಮತ್ತು ಅಸಮಾನತೆಗಳ ದೃಷ್ಟಿಯಿಂದ ಗಮನಿಸಿದರೆ ಜನಪ್ರತಿನಿಧಿಗಳ (ದಲಿತ ಪ್ರತಿನಿಧಿಗಳನ್ನೂ ಒಳಗೊಂಡಂತೆ) ಸ್ಪಂದನೆ ಮತ್ತು ಸಹಾನುಭೂತಿ ಮಾತುಗಳಲ್ಲಿ ಹೆಚ್ಚು ಕಾಣುತ್ತದೆಯೇ ಹೊರತು ಕೃತಿಯಲ್ಲಿ ಅಲ್ಲ. ರಾಜಕೀಯ ಒತ್ತಾಸೆಗಳು, ಪಕ್ಷಾಧಾರಿತ ಸೈದ್ಧಾಂತಿಕ ಒಲವು ಮತ್ತು ನಿಲುಮೆ, ಅಧಿಕಾರ ಕೇಂದ್ರಿತ ಅನಿವಾರ್ಯತೆಗಳು ಹಾಗೂ ತಮ್ಮ ವ್ಯಕ್ತಿಗತ ವರ್ಚಸ್ಸು-ವೈಯುಕ್ತಿಕ ಅಸ್ತಿತ್ವ-ಭವಿಷ್ಯ ಇವೆಲ್ಲವೂ ನಿರ್ಣಾಯಕವಾಗಿಬಿಡುತ್ತವೆ. ಪ್ರಜಾಪ್ರಭುತ್ವ ಎಂದರೆ ಜನರ ಕೈಗೇ ಅಧಿಕಾರ ಎಂಬ ಉದಾತ್ತ ಚಿಂತನೆಯಿಂದ ಬಹುದೂರ ಸರಿದಿರುವ ಭಾರತದ ಅಧಿಕಾರ ರಾಜಕಾರಣದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳು ನಶಿಸುತ್ತಿವೆ ಎಂದು ಏಕೆ ನಮಗೆ ಭಾಸವಾಗುತ್ತದೆ ? ಏಕೆಂದರೆ ಚುನಾಯಿತ ಪ್ರತಿನಿಧಿಗಳ ದೃಷ್ಟಿಯಲ್ಲಿ, ರಾಜಕೀಯ ಅಧಿಕಾರ ಶಾಶ್ವತವಾದ ಜೀವನೋಪಾಯದ ಅವಕಾಶದಂತೆ ಗೋಚರಿಸುತ್ತದೆ. ಅಸ್ತಿತ್ವ ಮತ್ತು ಅಸ್ಮಿತೆಗಳ ಚೌಕಟ್ಟಿನೊಳಗೇ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಪ್ರತಿನಿಧಿಗಳಿಗೆ ಮತದಾರರು ಅಥವಾ ವಿಶಾಲ ಜನತೆ ಪಗಡೆಯ ಕಾಯಿಗಳಂತೆ ಕಾಣುತ್ತಾರೆ. ಕೆಲವೊಮ್ಮೆ ದಾಳಗಳಂತೆಯೂ ಕಾಣುವುದರಿಂದಲೇ ತಮ್ಮ ಗೆಲುವು ಸಾಧಿಸಲು “ ದಲಿತ ಅಸ್ಮಿತೆ/ಪ್ರಜ್ಞೆ ”ಯನ್ನು ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಾರೆ.
ಅಂಬೇಡ್ಕರ್ ಬಯಸಿದ “ರಾಜಕೀಯ ಅಧಿಕಾರಕ್ಕೂ” ಇಂದು ನಾವು ಕಾಣುತ್ತಿರುವ ಈ ಪರಿಯ “ಅಧಿಕಾರ ರಾಜಕಾರಣಕ್ಕೂ” (Political Power and Power Politics) ನಡುವೆ ಇರುವ ಅಪಾರ ವ್ಯತ್ಯಾಸವನ್ನು ಇಲ್ಲಿ ಗಮನಿಸಬೇಕಿದೆ. ಈ ಅಂತರಕ್ಕೆ ಕಾರಣ ಭಾರತದ ರಾಜಕೀಯ ನಕ್ಷೆಯನ್ನು ನಿಯಂತ್ರಿಸುತ್ತಿರುವ ಬಂಡವಾಳಶಾಹಿ ಅರ್ಥವ್ಯವಸ್ಥೆ ಮತ್ತು ಡಿಜಿಟಲ್ ಯುಗದಲ್ಲಿ ಮತ್ತಷ್ಟು ಬಿಗಿಯಾಗುತ್ತಿರುವ ಕಾರ್ಪೋರೇಟ್ ಬಂಡವಾಳದ ಮಾರುಕಟ್ಟೆ ನಿಯಂತ್ರಣ. ಅಂಬೇಡ್ಕರ್ ಬಯಸಿದ್ದ ಸಮಾಜವಾದಿ ಆರ್ಥಿಕ ನೀತಿಗಳು ಹಂತಹಂತವಾಗಿ ನಶಿಸಿಹೋಗುತ್ತಿರುವುದನ್ನು ಕಂಡೂ ಕಾಣದಂತಿರುವ ದಲಿತ ರಾಜಕಾರಣವು , ಸಮಾನ ಭೂ ಹಂಚಿಕೆ, ಭೂಮಿಯ ಮೇಲಿನ ನಿಯಂತ್ರಣ, ಸಾರ್ವಜನಿಕ ಉದ್ದಿಮೆಗಳ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸರ್ಕಾರಿ ಸ್ವಾಮ್ಯ, ಸಂಪತ್ತಿನ ಸಮಾನ ಹಂಚಿಕೆ ಇವೇ ಮುಂತಾದ ಅಂಬೇಡ್ಕರರ ಉನ್ನತ ಆದರ್ಶಗಳನ್ನು ಎಂದೋ ಮರೆತಂತೆ ಕಾಣುತ್ತಿದೆ. ಅಥವಾ ಈ ಅಂಶಗಳು ಸಂಘಟನೆಗಳ ಕಾರ್ಯಸೂಚಿಯ ಪ್ರಮುಖ ಭಾಗವಾಗಿ ಕಾಣುವುದಿಲ್ಲ. ದಲಿತರನ್ನೇ ಪ್ರಧಾನವಾಗಿ ಪ್ರತಿನಿಧಿಸುವ ಬಹುಜನ ರಾಜಕಾರಣದಲ್ಲೂ, ಬಹುಜನ ಪಕ್ಷಗಳಲ್ಲೂ ಒಂದು ಆರ್ಥಿಕ ಕಾರ್ಯಯೋಜನೆ ಅಥವಾ ಆಲೋಚನಾ ವಿಧಾನ ಇಲ್ಲದಿರುವುದು, ಜಾಗತೀಕರಣ ಮತ್ತು ನವ ಉದಾರವಾದವನ್ನು ಎದುರಿಸುವ ಪರ್ಯಾಯ ಅರ್ಥನೀತಿ ಇಲ್ಲದಿರುವುದು ಇದನ್ನೇ ಸೂಚಿಸುತ್ತದೆ. ಇಲ್ಲಿ ನಮಗೆ ಮಾರ್ಕ್ಸ್ ಮತ್ತು ಅಂಬೇಡ್ಕರ್ ಅನುಸಂಧಾನ ಬಹಳ ಮುಖ್ಯವಾಗಿ ಕಾಣುತ್ತದೆ. ಆದರೆ ದಲಿತ ರಾಜಕಾರಣಕ್ಕೆ ಮಾರ್ಕ್ಸ್ ಅಪಥ್ಯವಾಗಿಯೇ ಕಾಣುವುದು ದುರದೃಷ್ಟಕರ.
ಮುಂದುವರೆಯುತ್ತದೆ,,,,,