
ಮದ್ದೂರು ಕಾಂಗ್ರೆಸ್ ಶಾಸಕ ಉದಯ್ ಗೌಡ ನಟ ದರ್ಶನ್ ಕೃತ್ಯದ ಸಮರ್ಥನೆಗೆ ಮುಂದಾಗಿದ್ದಾರೆ. ದರ್ಶನ್ಗೆ ಸ್ವಲ್ಪ ಮುಂಗೋಪ, ಸಿಟ್ಟು ಜಾಸ್ತಿ. ಆದ್ರೆ ಕೊಲೆ ಮಾಡುವವನಲ್ಲ ದರ್ಶನ್ ಎಂದು ಷರಾ ಬರೆದಿದ್ದಾರೆ. ಆತ ಅಭಿಮಾನಿಗಳ ಬಳಿ ಮಾಧ್ಯಮದವರ ಬಳಿ ಸ್ವಲ್ಪ ಮುಂಗೋಪದಿಂದ ಮಾತಾಡ್ತಾನೆ ಅಷ್ಟೇ. ಸದ್ಯಕ್ಕೆ ಪೋಲೀಸ್ ತನಿಖೆ ನಡೆಯುತ್ತಿದೆ. ತನಿಖೆ ಮುಗಿದ ಮೇಲೆ ಮಾತಾಡೋಣ ಎಂದಿದ್ದಾರೆ ಶಾಸಕ ಉದಯ್ ಗೌಡ.

ದರ್ಶನ್ ತುಂಬಾ ಸಿಡುಕು, ಸಿಟ್ಟು ಸ್ವಭಾವದವರು. ನನಗೆ ಹಲವು ವರ್ಷಗಳಿಂದ ದರ್ಶನ್ ಸ್ನೇಹಿತ. ಆದರೆ ಈ ರೀತಿ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ. ಅವರ ಜೊತೆಗಿರುವವರು ಮಾಡಿದ್ರಾ..? ಇವರ ಮೇಲೆ ಏನಾದ್ರೂ ಹಾಕಿದ್ರಾ;;? ಗೊತ್ತಿಲ್ಲ. ತನಿಖೆಯಿಂದ ಎಲ್ಲವೂ ಹೊರಗೆ ಬರಬೇಕು. ನಾನು ಈಗಲೇ ಏನನ್ನೂ ಹೇಳೋಕೆ ಆಗಲ್ಲ. ಅಧಿಕಾರಿಗಳು ತನಿಖೆ ಮಾಡ್ತಿದ್ದಾರೆ. ತನಿಖೆ ಆಗಲಿ ಸತ್ಯ ಹೊರಗೆ ಬರಲಿ ಎಂದಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಏನು ಎತ್ತ ಹೊರಬರುತ್ತೆ. ರಾಜ್ಯದ ಜನರಿಗೂ ಗೊತ್ತಾಗುತ್ತದೆ. ನಾವ್ಯಾರೂ ದರ್ಶನ್ ರಕ್ಷಣೆ ಮಾಡುವಂತೆ ಸಿಎಂ ಬಳಿ ಹೋಗಿಲ್ಲ. ಈ ಪ್ರಕರಣ ನಡೆದು 15 ದಿನ ಆಗಿದೆ. ಒಂದು ವೇಳೆ ಆ ರೀತಿ ಮಾಡಿದ್ರೆ ಹೀಗೆ ನಡೆಯುತ್ತಿರಲಿಲ್ಲ ಎಂದಿದ್ದಾರೆ.
ಲೋಕಸಭಾ ಚುನಾವಣಾ ಪ್ರಚಾರದ ವೇಳೆ ತನ್ನ ಗನ್ ಮ್ಯಾನ್ ಮೇಲೆ ದರ್ಶನ್ ಬೆಂಬಲಿಗರ ಹಲ್ಲೆ ಮಾಡಿರುವ ವಿಚಾರದ ಬಗ್ಗೆ ಮಾತನಾಡಿ, ನನ್ನ ಗನ್ ಮ್ಯಾನ್ ಮೇಲೆ ಹಲ್ಲೆ ಅನ್ನೋದು ಗೊತ್ತಿಲ್ಲ. ಅದೆಲ್ಲವೂ ಸುಳ್ಳು. ನನಗೆ ಐದಾರು ಮಂದಿ ಗನ್ ಮ್ಯಾನ್ ಇದ್ದಾರೆ. ಹಲ್ಲೆ ಮಾಡಿದ್ದರೆ ನನಗೆ ಗೊತ್ತಾಗುತ್ತಿರಲಿಲ್ವೇ? ಎಂದಿದ್ದಾರೆ. ಅಂತಾದ್ದೂ ಯಾವುದೂ ಆಗಿಲ್ಲ. ಅದೆಲ್ಲವೂ ಸುಳ್ಳು ಸೃಷ್ಟಿ ಅಷ್ಟೇ ಎಂದು ದರ್ಶನ್ ಪರವಾಗಿ ಮಾತನಾಡಿದ್ದಾರೆ.

ಲೋಕಸಭಾ ಚುನಾವಣಾ ಪ್ರಚಾರಕ್ಕೆ ದರ್ಶನ್ ಬಂದಿದ್ದ ವೇಳೆ ದರ್ಶನ್ ಬೆಂಬಲಿಗರನ್ನು ತಡೆದಿದ್ದರು ಅನ್ನೋ ಕಾರಣಕ್ಕೆ ಗನ್ ಮ್ಯಾನ್ ಮೇಲೆ ಹಲ್ಲೆ ನಡೆದಿತ್ತು. ಮದ್ದೂರು ಶಾಸಕನ ಮನೆಯಲ್ಲಿಯೇ ಗನ್ ಮ್ಯಾನ್ ಆಗಿದ್ದ ಡಿಎಆರ್ ಪೇದೆ ನಾಗೇಶ್ ಮೇಲೆ ಏಪ್ರಿಲ್ 22 ರಂದು ಹಲ್ಲೆ ನಡೆದಿತ್ತು. ಮದ್ದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದ ಸ್ಟಾರ್ ಚಂದ್ರು ಪರ ದರ್ಶನ್ ಕ್ಯಾಂಪೇನ್ಗೆ ಬಂದಿದ್ದ ವೇಳೆ ದರ್ಶನ್ ಪಟಾಲಂ ಗಲಾಟೆ ನಡೆದಿತ್ತು. ಮುಖಂಡರನ್ನ ಹತ್ತಿರಕ್ಕೆ ಬಿಟ್ಟುಕೊಳ್ಳುವ ವಿಚಾರದಲ್ಲಿ ಜಗಳ ತೆಗೆದಿದ್ದ ಲಕ್ಷ್ಮಣ್, ನಾಗರಾಜು ಹಾಗೂ ಇತರರು ಕದಲೂರು ಉದಯ್ ಮನೆ ಮುಂದೆ ಪೇದೆ ನಾಗೇಶ್ ಮೇಲೆ ಹಲ್ಲೆ ಮಾಡಿದ್ದರು.
ಪೊಲೀಸರು ನಮ್ಮನ್ನ ಏನು ಮಾಡಲು ಆಗಲ್ಲ. ನಮ್ಮತ್ರ ಏನು ಕಿತ್ಕೊಳೋಕೆ ಆಗಲ್ಲ ಎಂದು ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ ಬಗ್ಗೆ ಕೆಸ್ತೂರು ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ರು ನಾಗೇಶ್. ಮದ್ದೂರಿನ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ನಾಗೇಶ್ ಬಗ್ಗೆ Medical Legal Case ಕೂಡ ಆಗಿತ್ತು. ಆ ನಂತರ ರಾಜಿ ಸಂಧಾನದ ಮೂಲಕ ನಾಗೇಶರನ್ನ ಕಳುಹಿಸಿದ್ದರು ಶಾಸಕ ಉದಯ್ ಗೌಡ. ಶಾಸಕ ಉದಯ್ ಗೌಡ ಕೂಡ ಗನ್ ಮ್ಯಾನ್ ಬೆಂಬಲಕ್ಕೆ ನಿಲ್ಲಲಿಲ್ಲ ಎನ್ನುವ ಕಾರಣಕ್ಕೆ ಶಾಸಕ ಉದಯ್ ಗನ್ ಮ್ಯಾನ್ ಹುದ್ದೆಯಿಂದ ಹೊರಬಂದಿದ್ದರು ಪೇದೆ ನಾಗೇಶ್. ಇದೀಗ ಡಿಎಆರ್ ತುಕಡಿಯಲ್ಲಿ ನಾಗೇಶ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಆದರೂ ದರ್ಶನ್ ಬಗ್ಗೆ ಕಾಂಗ್ರೆಸ್ ಶಾಸಕ ಸಾರ್ವಜನಿಕವಾಗಿ ಸಮರ್ಥನೆಗೆ ಮುಂದಾಗಿದ್ದಾರೆ. ಹಲ್ಲೆ ಕೇಸ್ ಬಗ್ಗೆ ಸಚಿವ ಚಲುವರಾಯಸ್ವಾಮಿ ಮಾಗಡಿಯಲ್ಲಿ ಮಾತನಾಡಿ, ಗನ್ ಮ್ಯಾನ್ ಮೇಲೆ ಹಲ್ಲೆ ಆಗಿರುವುದು ನನ್ನ ಗಮನಕ್ಕೆ ಬಂದಿಲ್ಲ. ಆ ಬಗ್ಗೆ ವಿಚಾರ ತಿಳಿದುಕೊಳ್ತೀನಿ ಎಂದಿದ್ದಾರೆ. ಪೊಲೀಸ್ ಮೇಲೆ ಹಲ್ಲೆ ಮಾಡಿರುವ ಪ್ರಕರಣ ಮತ್ತಷ್ಟು ಚುರುಕು ಪಡೆಯುವ ಸಾಧ್ಯತೆಯಿದೆ. ಆದರೆ ಸಿಎಂ ಸಿದ್ದರಾಮಯ್ಯ ಒತ್ತಡ ಹಾಕಿದ್ರೂ ನಾನು ಕೇಳಲ್ಲ ಎಂದ ಬಳಿಕವೂ ಕಾಂಗ್ರೆಸ್ ಶಾಸಕರು ದರ್ಶನ್ ಬಗ್ಗೆ ಜನರಲ್ಲಿ ಸಾಫ್ಟ್ ಕಾರ್ನರ್ ಮೂಡಿಸುವ ಪ್ರಯತ್ನ ಆರಂಭಿಸಿದ್ದಾರೆ ಎನ್ನಬಹುದು.
ಕೃಷ್ಣಮಣಿ