E20.. E10.. E85..ಇದು ಪೆಟ್ರೋಲ್ನ ಕಥೆಯಲ್ಲ, ಇದು ಈ ದೇಶದ ಕಥೆ, ಈ ದೇಶದಲ್ಲಿ ಪ್ರಜೆಗಳೇ ಪ್ರಭುಗಳು ಎಂದ ಪ್ರಜಾಪ್ರಭುತ್ವದ ಕಥೆ. ಪ್ರಜಾಪ್ರಭುತ್ವ ಎಂದರೆ ಐದು ವರ್ಷಕ್ಕೊಮ್ಮೆ ಮತ ಹಾಕುವುದಷ್ಟೇ ಅಲ್ಲ. ಪ್ರಜಾಪ್ರಭುತ್ವ ಎಂದರೆ ಆಯ್ಕೆ, ಪ್ರಶ್ನೆ, ಉತ್ತರದಾಯಿತ್ವ.

ಹೌದು.. ಒಂದು ಸರ್ಕಾರವನ್ನು ಜನರು ಆರಿಸುತ್ತಾರೆ. ಹಿಂದಿನ ಸರ್ಕಾರಗಳ ವೈಫಲ್ಯಗಳು ಬೇಡವೆಂದು ಬೇರೆ ಸರ್ಕಾರವನ್ನು ಆರಿಸುತ್ತಾರೆ ಆದರೆ ಆ ನಿರ್ಧಾರಗಳೇ ಜನರನ್ನು ಪೆಡಂಭುತವಾಗಿ ಕಾಡಿದರೆ ಅಥವಾ ಇಂತಹ ಸರ್ಕಾರದಲ್ಲಿ ಜನರು ತಮ್ಮ ಪ್ರಶ್ನಿಸುವ ಹಕ್ಕನ್ನು ಬಿಟ್ಟುಕೊಡುತ್ತಾರೆ ಅಂದರೆ ಅದಕ್ಕಿಂತ ದೊಡ್ಡ ದುರಂತ ಇನ್ನೊಂದಿಲ್ಲ.

E20 ಕುರಿತು ಕೆಲವರು ಬೆಂಬಲ ವ್ಯಕ್ತಪಡಿಸುತ್ತಾರೆ ನಿಜ. ಹಾಗೇ ಕೆಲವರು ಅದರ ಅನುಷ್ಠಾನ, ವಾಹನ ಹೊಂದಾಣಿಕೆ ಅಥವಾ ಪರ್ಯಾಯ ಆಯ್ಕೆಗಳ ಬಗ್ಗೆ ಪ್ರಶ್ನೆಯನ್ನೂ ಕೇಳುತ್ತಾರೆ. ಈ ಎರಡೂ ಪ್ರಜಾಪ್ರಭುತ್ವದಲ್ಲಿ ಸಹಜ. ಪ್ರಜಾಪ್ರಭುತ್ವದಲ್ಲಿ ಒಂದು ನೀತಿಯನ್ನು ಬೆಂಬಲಿಸುವ ಹಕ್ಕೂ ಇದೆ. ಅದನ್ನು ಪ್ರಶ್ನಿಸುವ ಹಕ್ಕೂ ಇದೆ. ಆದರೆ ಒಂದಂತೂ ಸತ್ಯ ಒಂದು ಸರ್ಕಾರವನ್ನು ಟೀಕಿಸುವುದು ಅಥವಾ ಪ್ರಶ್ನಿಸುವುದು ದೇಶವನ್ನು ಟೀಕಿಸಿದ ಹಾಗಲ್ಲ. ಅದೇ ರೀತಿ, ಒಂದು ಸರ್ಕಾರವನ್ನು ಬೆಂಬಲಿಸುವುದು ಪ್ರಜಾಪ್ರಭುತ್ವಕ್ಕೆ ವಿರೋಧವೂ ಅಲ್ಲ. ಬದಲಿಗೆ ಅದು ಒಂದು ದೇಶದ ಪ್ರಜೆಯ ಹಕ್ಕು.

ಸರ್ಕಾರಗಳು ಬದಲಾಗುತ್ತವೆ. ನೀತಿಗಳು ಬದಲಾಗುತ್ತವೆ. ಆದರೆ ಬದಲಾಗಬಾರದ ಒಂದು ವಿಷಯ ಇದೆ ನಾಗರಿಕನ ಪ್ರಶ್ನಿಸುವ ಹಕ್ಕು. E20 ಇರಬಹುದು. E10 ಇರಬಹುದು. ಶುದ್ಧ ಪೆಟ್ರೋಲ್ ಇರಬಹುದು. ಕ್ಯಾಶ್ಲೆಸ್ ಎಕಾನಮಿಯೂ ಇರಬಹುದು ಅಂತಿಮವಾಗಿ ನೀತಿಯ ಬಗ್ಗೆ ಚರ್ಚೆ ನಡೆಯಬಹುದು. ಆದರೆ ಪ್ರಜಾಪ್ರಭುತ್ವದ ಮೂಲ ಪ್ರಶ್ನೆ ಒಂದೇ ಜನರ ಅಭಿಪ್ರಾಯವನ್ನು ಆಲಿಸಲಾಗುತ್ತಿದೆಯೇ? ಜನರ ಮತದ ಭಿಕ್ಷೆಯಿಂದಲೇ ಅಧಿಕಾರಕ್ಕೆ ಬಂದವರು ಜನರಿಗಾಗಿಯೇ ಕೆಲಸ ಮಾಡುತ್ತಿದ್ದಾರೆಯೇ..? ಎನ್ನುವುದು.

ಯಾವುದೇ ಸರ್ಕಾರಕ್ಕೂ, ಯಾವುದೇ ಪಕ್ಷಕ್ಕೂ ಜನರ ಮುಂದೆ ಸ್ಪಷ್ಟನೆ ನೀಡುವ ಅಥವಾ ವಿವರಣೆ ನೀಡುವ ಬದ್ಧತೆ ಇರುತ್ತದೆಯೋ ಅದೇ ಪ್ರಜಾಪ್ರಭುತ್ವದ ನಿಜವಾದ ಶಕ್ತಿ. ಒಂದು ಆರೋಗ್ಯಕರ ಸಮಾಜ ಎಂದರೆ ಕೇಳುವ ಪ್ರಶ್ನೆಗಳನ್ನ ಆಲಿಸಿ ಅವರ ವಾದಗಳಿಗೆ ಉತ್ತರ ನೀಡಲಾಗುತ್ತದೆ. ಭಿನ್ನಾಭಿಪ್ರಾಯಗಳು ಚರ್ಚೆಗಳ ಮೂಲಕ ಎದುರಿಸಲಾಗುತ್ತವೆ. ಆದ್ದರಿಂದ ಪ್ರಜಾಪ್ರಭುತ್ವವನ್ನು ಉಳಿಸುವುದು ಕೇವಲ ಚುನಾವಣೆಗಳಲ್ಲ. ಜಾಗೃತ ನಾಗರಿಕರು, ವಿಚಾರಪೂರ್ಣ ಪ್ರಶ್ನೆಗಳು ಮತ್ತು ಉತ್ತರದಾಯಿತ್ವವನ್ನು ಕೇಳುವ ಸಂಸ್ಕೃತಿಯೇ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ಈಗಲೂ ಪ್ರಶ್ನೆ ಕೇಳದಿದ್ದರೆ ನಾಳೆ.. ಯಾವ ಪ್ರಶ್ನೆಕೇಳಬೇಕೆಂಬ ಆಯ್ಕೆಯೂ ನಿಮ್ಮದಾಗದೇ ಇರಬಹುದು. ಈಗಲೂ ಏಳದಿದ್ದರೆ ನಾಳೆ ಏಳಲೂ ಯಾರನ್ನೋ ಕೇಳಬೇಕಾದೀತು ಎಚ್ಚರ.






