ಕರೋನಾ ಎರಡನೇ ಅಲೆ ಎಂಬುದು ಒಂದು ಕಡೆ ಭಾರತೀಯರ ಪಾಲಿಗೆ ದಿಢೀರ್ ಆಘಾತ ತಂದಿದ್ದರೆ, ಮತ್ತೊಂದು ಕಡೆ ಭಾರತೀಯ ಜನತಾ ಪಾರ್ಟಿ ಸರ್ಕಾರದ ಯಡವಟ್ಟುಗಳನ್ನೂ ಬಯಲು ಮಾಡುತ್ತಿದೆ.
ಅದು ಆಮ್ಲಜನಕವಿರಬಹುದು, ರೆಮಿಡಿಸಿವರ್ ಮಾತ್ರೆಗಳಿರಬಹುದು, ಆಸ್ಪತ್ರೆಯ ಬೆಡ್, ವೈದ್ಯಕೀಯ ಸಿಬ್ಬಂದಿ ಇರಬಹುದು, ಸೋಂಕಿತರ ಸಂಖ್ಯೆ, ಆಮ್ಲಜನಕ ಮತ್ತು ಚಿಕಿತ್ಸೆ ಸಿಗದೆ ಆಸ್ಪತ್ರೆಗಳಲ್ಲಿ, ಬೀದಿಬೀದಿಯಲ್ಲಿ ಸತ್ತವರ ಸಂಖ್ಯೆ ಇರಬಹುದು, ಕೊನೆಗೆ ಲಾಕ್ ಡೌನ್ ಎಂದು ಅಧಿಕೃತವಾಗಿ ಘೋಷಿಸದೇ ಜಗತ್ತಿನ ಅತ್ಯಂತ ಭೀಕರ ಲಾಕ್ ಡೌನ್ ಹೇರಿರುವುದೇ ಇರಬಹುದು,.. ಯಾವ ವಿಷಯದಲ್ಲಿಯೂ ಸರ್ಕಾರ ವಾಸ್ತವಾಂಶಗಳನ್ನು ದೇಶದ ಜನರ ಮುಂದಿಟ್ಟಿಲ್ಲ. ಬದಲಾಗಿ ಹಸೀಸುಳ್ಳುಗಳ ಮೂಲಕ, ತಿರುಚಿದ ಡೇಟಾಗಳ ಮೂಲಕ ಎಲ್ಲವನ್ನೂ ನಿಭಾಯಿಸುತ್ತಿರುವ, ನಿಯಂತ್ರಿಸುತ್ತಿರುವ ಮತ್ತು ಇಡೀ ಜಗತ್ತೇ ಭಾರತದ ಹೀನಾಯ ಪರಿಸ್ಥಿತಿಯ ಕುರಿತು ಆತಂಕ ಮತ್ತು ಮರುಕ ವ್ಯಕ್ತಪಡಿಸುತ್ತಿರುವ ಹೊತ್ತಿನಲ್ಲೂ ‘ಸಬ್ ಚೆಂಗಾಸಿ’ ಎಂಬ ಚಿತ್ರಣವನ್ನೇ ಕೊಡುತ್ತಿದೆ.

ದೇಶದ ಮುಖ್ಯವಾಹಿನಿ ಮಾಧ್ಯಮಗಳನ್ನು ತನ್ನ ಆಣತಿಯಂತೆ ಪಳಗಿಸಿಕೊಂಡಿರುವ ಸರ್ಕಾರ, ಟಿವಿ ಮತ್ತು ಪತ್ರಿಕೆಗಳಲ್ಲಿ ಕರೋನಾ ವಾಸ್ತವಾಂಶಗಳು ಎದ್ದುಕಾಣದಂತೆ ವ್ಯವಸ್ಥಿತವಾಗಿ ನಿರ್ವಹಿಸುತ್ತಿದೆ. ದೇಶದ ಬಹುತೇಕ ಸುದ್ದಿ ಮಾಧ್ಯಮಗಳಲ್ಲಿ ಕರೋನಾ ಕುರಿತ ಸುದ್ದಿಗಳಲ್ಲಿ, ಕರ್ಫ್ಯೂ ಹೇರಿಕೆ, ಪೊಲೀಸರ ಕಾರ್ಯಾಚರಣೆ, ಮಾಸ್ಕ್ ಅಭಿಯಾನ, ಮೋದಿ ಸಭೆಗಳು ತುಂಬಿ ತುಳುಕುತ್ತಿವೆ. ಈ ನಡುವೆ ಅಪರೂಪಕ್ಕೆ ಕರೋನಾ ಸೋಂಕಿತರು ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ, ಆಮ್ಲಜನಕ ಸಿಗದೆ, ರೆಮಿಡಿಸಿವರ್ ಸಿಗದೆ, ಆಂಬ್ಯುಲೆನ್ಸ್ ಸಿಗದೆ ಪರದಾಡುವ, ಜೀವ ಕಳೆದುಕೊಳ್ಳುವ ಘಟನೆಗಳು ವರದಿಯಾದರೂ, ಅವು ಎಂದೂ ಗಮನ ಸೆಳೆಯುವ ವರದಿಗಳಾಗಿ ಬಿಂಬಿತವಾಗುವುದು ವಿರಳ. ಇನ್ನು ಪ್ರತಿ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಎಷ್ಟು ಆಮ್ಲಜನಕ, ರೆಮಿಡಿಸಿವರ್ ಮುಂತಾದ ಸೌಲಭ್ಯಗಳಿಗೆ ಬೇಡಿಕೆ ಇದೆ, ಎಷ್ಟು ಲಭ್ಯವಿದೆ. ಬೇಡಿಕೆ ಮತ್ತು ಲಭ್ಯತೆ ನಡುವಿನ ಅಂತರಕ್ಕೆ ಕಾರಣವೇನು? ಈಗಿನ ಹಾಹಾಕಾರಕ್ಕೆ ಸರ್ಕಾರ ಎಷ್ಟು ಹೊಣೆ? ಎಲ್ಲಿ ಎಡವಿತು? ವಿದೇಶಗಳಿಗೆ ರಫ್ತಾದದ್ದು, ಆಗುತ್ತಿರುವುದು ಎಷ್ಟು ಎಂಬ ಮಾಹಿತಿಗಳನ್ನು ಹೆಕ್ಕಿ ದೇಶದ ಜನರಿಗೆ ತಿಳಿಸುವ ನೈಜ ಪತ್ರಿಕಾವೃತ್ತಿ ಮಾಡುತ್ತಿರುವ ಮಾಧ್ಯಮಗಳನ್ನು ಮುಖ್ಯವಾಹಿನಿಯಲ್ಲಿ ಪತ್ತೆ ಮಾಡುವುದು ದುಸ್ತರ ಎಂಬಷ್ಟರಮಟ್ಟಿಗೆ ಪರಿಸ್ಥಿತಿ ಇದೆ.
ಆದರೆ, ವಿದೇಶಿ ಮಾಧ್ಯಮಗಳನ್ನು ಬಾಯಿಮುಚ್ಚಿಸುವುದು ಸುಲಭವಲ್ಲ. ಹಾಗಾಗಿ ಭಾರತದ ಸದ್ಯದ ಕರೋನಾ ಭೀಕರತೆ ಮತ್ತು ಸರ್ಕಾರದ ನಯವಂಚಕ ನಡೆಗಳ ನೈಜ ಚಿತ್ರಣ ವಿದೇಶಿ ಮಾಧ್ಯಮಗಳಲ್ಲಿ ದಿನವಹಿ ಧಾರಾವಾಹಿಯಂತೆ ಕಳೆದ ಏಳೆಂಟು ದಿನಗಳಿಂದ ಪ್ರಕಟವಾಗುತ್ತಲೇ ಇವೆ. ಅದು ವಾಷಿಂಗ್ಟನ್ ಪೋಸ್ಟ್ ಇರಬಹುದು, ನ್ಯೂಯಾರ್ಕ್ ಟೈಮ್ಸ್ ಇರಬಹುದು, ಅಲ್ ಜಜೀರಾ, ದ ಗಾರ್ಡಿಯನ್, ದ ಡೈಲಿ ಮೇಲ್, ಲೀ ಮಾಂಡೆ, ಒ ಗ್ಲೋಬೊ, ಜಪಾನ್ ಟೈಮ್ಸ್, ಸಿಡ್ನಿ ಮಾರ್ನಿಂಗ್ ಹೆರಾಲ್ಡ್, ಗಲ್ಫ್ ಟೈಮ್ಸ್ ,.. ಹೀಗೆ ಸಾಲು ಸಾಲು ಜಾಗತಿಕ ಮುಂಚೂಣಿ ಮಾಧ್ಯಮಗಳು ವಿಶೇಷ ವರದಿಗಳು, ಸಾಕ್ಷಾತ್ ವರದಿಗಳು, ವಿಶ್ಲೇಷಣೆ, ಸಂದರ್ಶನ, ಸಂಪಾದಕೀಯ ಬರಹಗಳ ಮೂಲಕ ಭಾರತದ ಕೋವಿಡ್ ಬಿಕ್ಕಟ್ಟಿನ ಕುರಿತು ಜಗತ್ತಿನ ಗಮನ ಸೆಳೆದಿವೆ.

ಅಂತಹ ಪ್ರಮುಖ ವರದಿಗಳ ಪೈಕಿ, ಭಾರತದ ಕೋವಿಡ್ ಸಾವುಗಳ ವಿಷಯದಲ್ಲಿ ಸರ್ಕಾರದ ಅಧಿಕೃತ ಅಂಕಿಅಂಶಗಳಿಗೂ ಮತ್ತು ವಾಸ್ತವಿಕವಾಗಿ ಸ್ಮಶಾನ ಮತ್ತು ಚಿತಾಗಾರಗಳಲ್ಲಿನ ಲಭ್ಯ ಮಾಹಿತಿಗೂ ಇರುವ ಅಜಗಜಾಂತರದ ಕುರಿತ ‘ದ ಫೈನಾನ್ಸಿಯಲ್ ಟೈಮ್ಸ್’ ವಿಶ್ಲೇಷಣೆಯೂ ಒಂದು.
ಭಾರತದಲ್ಲಿ ಈ ಬಾರಿಯ ಕರೋನಾ ಎರಡನೇ ಅಲೆ ಊಹೆಗೂ ನಿಲುಕದ ರೀತಿಯಲ್ಲಿ ದೇಶದಾದ್ಯಂತ ವ್ಯಾಪಿಸಿದೆ. ಹೊರಜಗತ್ತಿಗೆ ಸರ್ಕಾರ ಮತ್ತು ಮುಖ್ಯವಾಹಿನಿ ಮಾಧ್ಯಮಗಳ ನೀಡುತ್ತಿರುವ ಚಿತ್ರಣಕ್ಕಿಂತ ವಾಸ್ತವದಲ್ಲಿ ತೀರಾ ಭೀಕರ ಪರಿಸ್ಥಿತಿ ತಲೆದೋರಿದೆ. ಅಲ್ಲಿನ ಕರೋನಾ ಅಟ್ಟಹಾಸದ ನೈಜ ಚಿತ್ರಣ ಸಿಗಬೇಕೆಂದರೆ ಸ್ಮಶಾನ, ಖಬರ್ಸ್ತಾನ, ಚಿತಾಗಾರಗಳನ್ನು ಗಮನಿಸಬೇಕಿದೆ. ಚಿತಾಗಾರಗಳಲ್ಲಿ ಒಂದು ಕಡೆ ಶವಸಂಸ್ಕಾರಕ್ಕಾಗಿ ಕಿ.ಮೀಗಟ್ಟಲೆ ಸರದಿ ನಿಂತಿರುವ ಕೋವಿಡ್ ಮೃತ ದೇಹಗಳನ್ನು ಹೊತ್ತ ಆಂಬ್ಯುಲೆನ್ಸ್ ಗಳು, ಮತ್ತೊಂದು ಕಡೆ ಅಲ್ಲಿನ ಪ್ರತಿ ದಿನದ ಶವಸಂಸ್ಕಾರದ ಮಾಹಿತಿ ನೀಡುವ ಅಂಕಿಅಂಶಗಳನ್ನು ಗಮನಿಸಿದರೆ ದೇಶದ ಸಾವುನೋವುಗಳ ಅಸಲೀ ಅಂದಾಜು ಸಿಗಲಿದೆ ಎಂದು ವರದಿ ಹೇಳಿದೆ.

ತಜ್ಞರ ಎಚ್ಚರಿಕೆ, ಸಲಹೆಗಳ ಬಳಿಕವೂ ಎರಡನೇ ಅಲೆಯನ್ನು ಎದುರಿಸಲು ವೈದ್ಯಕೀಯ ವ್ಯವಸ್ಥೆಯನ್ನು ಸಜ್ಜುಗೊಳಿಸದೆ, ದೇಶದಲ್ಲಿ ಕರೋನಾ ಸೋಂಕು ಸಂಪೂರ್ಣ ಮುಗಿದುಹೋಗಿದೆ. ದೇಶ ಕರೋನಾ ವಿರುದ್ಧದ ಸಮರ ಗೆದ್ದುಬಿಟ್ಟಿದೆ ಎಂದು ಹೇಳಿಕೆ ಕೊಡುವುದು ಮತ್ತು ಅದರಂತೆ ಬೃಹತ್ ಚುನಾವಣಾ ರ್ಯಾಲಿಗಳು, ಧಾರ್ಮಿಕ ಸಮಾವೇಶಗಳನ್ನು ನಡೆಸಿದ ದೇಶದ ಪ್ರಧಾನಿ ಮೋದಿ ಮತ್ತು ಅವರ ಭಾರತೀಯ ಜನತಾ ಪಕ್ಷದ ನಾಯಕರ ಸ್ವಯಂಕೃತ ಅಪರಾಧವೇ ದೇಶದ ಈ ದುರಂತಕ್ಕೆ ಕಾರಣ ಎಂದಿರುವ ‘ದ ಫೈನಾನ್ಸಿಯಲ್ ಟೈಮ್ಸ್’, ಒಂದು ಕಡೆ ಯಾವುದೇ ತಯಾರಿ ಇಲ್ಲದೆ ಕೈಚೆಲ್ಲಿದ ಆಡಳಿತ ವ್ಯವಸ್ಥೆ, ಮತ್ತೊಂದು ಕಡೆ ದೇಶದ ಮುಂಚೂಣಿ ನಾಯಕರ ಉದಾಸೀನ ಮತ್ತು ಉಡಾಫೆಯನ್ನು ಅನುಸರಿಸಿದ ದೇಶದ ಜನಸಾಮಾನ್ಯರು ಕೋವಿಡ್ ಮುನ್ನೆಚ್ಚರಿಕೆ ಮಾರ್ಗಸೂಚಿಗಳನ್ನು ಗಾಳಿಗೆ ತೂರಿದ ಪರಿಣಾಮ, ದೇಶದ ಇಡೀ ವ್ಯವಸ್ಥೆ ಕುಸಿದುಬಿದ್ದಿದೆ ಎಂದು ವಿಶ್ಲೇಷಿಸಿದೆ.
ಆದರೆ, ತನ್ನ ಲೋಪಗಳನ್ನು ಮತ್ತು ಅಸಮರ್ಥತೆಯನ್ನು ಮುಚ್ಚಿಕೊಳ್ಳಲು ಎಂದಿನಂತೆ ಇನ್ನಿಲ್ಲದ ಸರ್ಕಸ್ಸು ಮಾಡುತ್ತಿರುವ ಸರ್ಕಾರ, ಕೋವಿಡ್ ಪರೀಕ್ಷೆ, ಸೋಂಕಿತರ ಸಂಖ್ಯೆ, ಆಸ್ಪತ್ರೆ ಮತ್ತು ವೈದ್ಯಕೀಯ ವ್ಯವಸ್ಥೆ ಸೇರಿದಂತೆ ಪ್ರತಿ ಹಂತದಲ್ಲಿಯೂ ಅಂಕಿಅಂಶಗಳನ್ನು ತಿರುಚುವ ಮೂಲಕ ದೇಶದ ಜನರಿಂದ ಕಟುವಾಸ್ತವಾಂಶಗಳನ್ನು ಮುಚ್ಚಿಡುತ್ತಿದೆ. ಸರ್ಕಾರದ ಇಂತಹ ತಂತ್ರದಿಂದ ಕೋವಿಡ್ ಮೃತರ ಸಂಖ್ಯೆ ಕುರಿತ ಅಂಕಿಅಂಶಗಳು ಕೂಡ ಹೊರತಾಗಿಲ್ಲ ಎಂದಿರುವ ವರದಿ, ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶ, ಬಿಹಾರ ಸೇರಿದಂತೆ ವಿವಿಧ ರಾಜ್ಯಗಳ ಆಯ್ದ ಏಳು ಜಿಲ್ಲೆಗಳ ಚಿತಾಗಾರಗಳ ಮಾಹಿತಿ ಆಧಾರಿತ ಸ್ಥಳೀಯ ಮಾಧ್ಯಮಗಳ ವರದಿಗಳನ್ನು ಆಧರಿಸಿ ಕೆಲವು ಅಂಕಿಅಂಶಗಳನ್ನೂ ಉಲ್ಲೇಖಿಸಿದೆ.

ಆ ಪ್ರಕಾರ, ಬಹುತೇಕ ಬಿಜೆಪಿ ಸರ್ಕಾರಗಳೇ ಇರುವ ಆ ರಾಜ್ಯಗಳ(ಬಿಹಾರದಲ್ಲಿ ಬಿಜೆಪಿ ಮೈತ್ರಿ ಸರ್ಕಾರ) ಆಯ್ದ ಏಳು ಜಿಲ್ಲೆಗಳಲ್ಲಿ ತೀರಾ ಇತ್ತೀಚಿನ ದಿನಗಳಲ್ಲಿ(ಏ.21ರವರೆಗೆ) ಕನಿಷ್ಟ 1833 ಕೋವಿಡ್ ಸಾವುಗಳು ಸಂಭವಿಸಿವೆ ಎಂದು ಚಿತಾಗಾರ, ಸ್ಮಶಾನದ ಮಾಹಿತಿ ಹೇಳುತ್ತಿವೆ. ಆದರೆ, ಸರ್ಕಾರಗಳ ಅಧಿಕೃತ ಮಾಹಿತಿ ಪ್ರಕಾರ, ಆ ಜಿಲ್ಲೆಗಳ ವ್ಯಾಪ್ತಿಯಲ್ಲಿ ಆ ಅವಧಿಯಲ್ಲಿ ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ ಕೇವಲ 228!
ಗುಜರಾತಿನ ಜಾಮನಗರ ಜಿಲ್ಲೆಯಲ್ಲಿ ಕೋವಿಡ್ ನಿಂದ 100 ಮಂದಿ ಮೃತಪಟ್ಟಿರುವುದನ್ನು ಚಿತಾಗಾರ ದಾಖಲೆಗಳು ಧೃಢಪಡಿಸಿದರೆ, ಸರ್ಕಾರಿ ಅಧಿಕೃತ ಮಾಹಿತಿಯ ಪ್ರಕಾರ ಕೋವಿಡ್ ಮೃತರ ಸಂಖ್ಯೆ ಕೇವಲ ಒಂದು! ಅಂದರೆ ಸರ್ಕಾರಿ ಅಧಿಕೃತ ಪ್ರಮಾಣಕ್ಕಿಂತ ನೂರು ಪಟ್ಟು ವಾಸ್ತವ ಸಾವಿನ ಪ್ರಮಾಣವಿದೆ. ಹಾಗೇ ಮಧ್ಯಪ್ರದೇಶದ ಭೋಪಾಲ್ ನ ಕೋವಿಡ್ ಸಾವಿನ ವಿಷಯದಲ್ಲಿಸರ್ಕಾರಿ ಅಂಕಿ ಅಂಶಗಳಿಗೂ, ವಾಸ್ತವಿಕ ಚಿತಾಗಾರದ ಮಾಹಿತಿಗೂ ಬರೋಬ್ಬರಿ 24 ಪಟ್ಟು ವ್ಯತ್ಯಾಸವಿದೆ. ಗುಜರಾತಿನ ಬರೂಚ್ ವಿಷಯದಲ್ಲಿ ಕೂಡ ಈ ಅಂತರ ಸುಮಾರು 17 ಪಟ್ಟು ಇದ್ದರೆ, ಲಖನೌದಲ್ಲಿ ಈ ಅಂತರ 3 ಪಟ್ಟು, ವಡೋದರಲ್ಲಿ 21 ಪಟ್ಟು, ಪಟನಾದಲ್ಲಿ ಆ ಪ್ರಮಾಣ 4 ಪಟ್ಟು ಹೆಚ್ಚಿದೆ ಎಂದು ಅಂಕಿಅಂಶಸಹಿತ ವರದಿ ಮಾಡಲಾಗಿದೆ.
ದೇಶದ ಮೂಲೆಮೂಲೆಯಲ್ಲಿ ಸ್ಮಶಾನ, ಚಿತಾಗಾರಗಳ ಮುಂದೆ ಶವಗಳು ಸರತಿ ಸಾಲುಗಟ್ಟಿರುವ ಚಿತ್ರಣ ದಿನದಿಂದ ದಿನಕ್ಕೆ ಭೀಕರ ಸ್ವರೂಪ ಪಡೆಯುತ್ತಿರುವ ಹೊತ್ತಿನಲ್ಲಿ ದೇಶದ ಮಾಧ್ಯಮಗಳು ವಾಸ್ತವಾಂಶಗಳನ್ನು ಮರೆಮಾಚುವ ಕಳ್ಳಾಟ ಆಡುತ್ತಿರುವಾಗ ವಿದೇಶಿ ಮಾಧ್ಯಮಗಳು ಹೀಗೆ ನಿಗಿನಿಗಿ ಸತ್ಯವನ್ನು ಬೆತ್ತಲುಗೊಳಿಸುತ್ತಿವೆ. ಹಾಗೇ ಗೋದಿ ಮೀಡಿಯಾಗಳೂ ಬೆತ್ತಲಾಗುತ್ತಿವೆ!