ಲಖ್ನೌ:
ಬಹು ದೊಡ್ಡ ಆರ್ಥಿಕ ಅವ್ಯವಹಾರ ಪ್ರಕರಣದಲ್ಲಿ ಮೊಹಮ್ಮದ್ ಇಕ್ಬಾಲ್ ಅವರನ್ನು ವಿಶೇಷ ಪಿಎಂಎಲ್ಎ ನ್ಯಾಯಾಲಯ ‘ಪಲಾಯನಗೈದ ಆರ್ಥಿಕ ಅಪರಾಧಿ’ (Fugitive Economic Offender) ಎಂದು ಘೋಷಿಸಿದೆ. ಈ ಸಂಬಂಧ ಸುಮಾರು ₹995.75 ಕೋಟಿ ಮೌಲ್ಯದ ಆಸ್ತಿಗಳನ್ನು ಕೇಂದ್ರ ಸರ್ಕಾರದ ವಶಕ್ಕೆ ಪಡೆಯಲು ನ್ಯಾಯಾಲಯ ಆದೇಶಿಸಿದೆ.ಈ ತೀರ್ಪು 2018ರ Fugitive Economic Offenders Act ಅಡಿಯಲ್ಲಿ ನೀಡಲಾಗಿದ್ದು, Enforcement Directorate (ED) ಸಲ್ಲಿಸಿದ್ದ ಅರ್ಜಿಯನ್ನು ಆಧರಿಸಿ ನ್ಯಾಯಾಲಯ ಕ್ರಮ ಕೈಗೊಂಡಿದೆ.

ಈ ಪ್ರಕರಣದ ಹಿನ್ನೆಲೆ, ಸಿಬಿಐ ದಾಖಲಿಸಿದ್ದ ಎಫ್ಐಆರ್ ಆಧಾರದ ಮೇಲೆ ತನಿಖೆ ಆರಂಭವಾಗಿತ್ತು. ಆರೋಪದ ಪ್ರಕಾರ, ಮೊಹಮ್ಮದ್ ಇಕ್ಬಾಲ್ ಹಾಗೂ ಅವರ ಸಹಚರರು ಉತ್ತರ ಪ್ರದೇಶದಲ್ಲಿ ಶುಗರ್ ಮಿಲ್ಗಳನ್ನು ವಂಚನಾಪೂರಿತವಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.ತನಿಖೆಯ ಸಂದರ್ಭದಲ್ಲಿ, ಇಕ್ಬಾಲ್ ವಿಚಾರಣೆಗೆ ಹಾಜರಾಗದೆ, ಸಮನ್ಸ್ ಹಾಗೂ ನಾನ್-ಬೈಲಬಲ್ ವಾರಂಟ್ ಹೊರಡಿಸಿದ್ದರೂ ದೇಶ ತೊರೆದು ದುಬೈಗೆ ಪರಾರಿಯಾಗಿದ್ದಾರೆ ಎಂಬುದು ಬಹಿರಂಗವಾಗಿದೆ. ನ್ಯಾಯಾಲಯಕ್ಕೆ ಹಾಜರಾಗಲು ನಿರಾಕರಿಸಿದ್ದ ಹಿನ್ನೆಲೆಯಲ್ಲಿ, ಇಡಿ ಅವರು ಅವರನ್ನು ಪಲಾಯನಗೈದ ಆರ್ಥಿಕ ಅಪರಾಧಿ ಎಂದು ಘೋಷಿಸಲು ಅರ್ಜಿ ಸಲ್ಲಿಸಿತ್ತು.

ನ್ಯಾಯಾಲಯ, ಇಡಿ ಸಲ್ಲಿಸಿದ್ದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ, ಇಕ್ಬಾಲ್ ಉದ್ದೇಶಪೂರ್ವಕವಾಗಿ ಕಾನೂನು ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ, ಅವರ ವಿರುದ್ಧದ ಆರೋಪಗಳನ್ನು ಪರಿಗಣಿಸಿ, ₹995.75 ಕೋಟಿ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಲು ಆದೇಶಿಸಿದೆ.ಈ ಕ್ರಮವು ದೇಶದಲ್ಲಿ ಆರ್ಥಿಕ ಅಪರಾಧಗಳಿಗೆ ತಡೆಗಟ್ಟುವ ಪ್ರಮುಖ ಹೆಜ್ಜೆಯಾಗಿ ಪರಿಗಣಿಸಲಾಯಿತು.






