ಬೆಂಗಳೂರು : ಪ್ರತಿಯೊಬ್ಬ ಜೀವಿಗೂ ತನ್ನದೇ ಆದ ನೆಚ್ಚಿನ ಆಹಾರ ಸೇವಿಸುವುದು ಇಷ್ಟವಾಗುತ್ತದೆ. ಅದು ಪ್ರಾಣಿಗಳೇ ಆಗಿರಲಿ ಅಥವಾ ಮನುಷ್ಯರೇ ಆಗಿರಲಿ ಅದು ಅವರ ಸ್ವಾತಂತ್ಯ್ರಕ್ಕೆ ಬಿಟ್ಟ ವಿಚಾರವಾಗಿರುತ್ತದೆ. ಇದನ್ನು ಎಲ್ಲರೂ ಅರಿತುಕೊಳ್ಳಬೇಕಿದೆ. ಇರುವೆ ರುಚಿ ಇರುವೆಗೆ, ಹುಲಿ ರುಚಿ ಹುಲಿಗೆ ಹಾಗೂ ಸಿಂಹದ ರುಚಿ ಸಿಂಹಕ್ಕೆ ಆದರೆ ಇವುಗಳ ಬಗ್ಗೆ ಪ್ರಶ್ನೆ ಎತ್ತದ ಕೆಲ ಜನರು ಮಾನವರು ಸೇವಿಸುವ ಆಹಾರ ಪದ್ಧತಿಯ ಬಗ್ಗೆ ಟೀಕಿಸುತ್ತಿರುವ ಘಟನೆಗಳನ್ನು ಗಮನಿಸಿರುತ್ತೇವೆ.

ಇದೇ ಸಾಲಿಗೆ ಇದೀಗ ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ಸೇರ್ಪಡೆಯಾಗಿದ್ದಾರೆ. ಡಾಲಿ ಇತ್ತೀಚೆಗೆ ಹೋಟಲೊಂದರಲ್ಲಿ ತೆರಳಿ ತಮಗಿಷ್ಟವಾದ ಬಿರಿಯಾನಿ ಸೇವಿಸುವ ಫೋಟೊ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅದಕ್ಕೆ ನೆಟ್ಟಿಗರು ತಮಗೆ ಮನ ಬಂದಂತೆ ಕಮೆಂಟ್ ಹಾಕುವ ಮೂಲಕ ಡಾಲಿಯ ಆಹಾರದ ಹಕ್ಕಿನ ಬಗ್ಗೆ ಪ್ರಶ್ನೆ ಎತ್ತುವ ಹೀನ ಮನಸ್ಥಿತಿ ತೋರಿದ್ದಾರೆ. ತಿನ್ನುವ ಅನ್ನಕ್ಕೆ ಯಾವುದೇ ಜಾತಿಯ ಹಂಗಿಲ್ಲ, ತೊಡುವ ಬಟ್ಟೆಗೂ ಧರ್ಮದ ಹಂಗಿಲ್ಲ. ಆದರೂ ಹೀನ ಮನಸ್ಸಿನ ಜನರು ಈ ರೀತಿಯಾಗಿ ಇನ್ನೊಬ್ಬರ ಆಹಾರದ ಬಗ್ಗೆ ಬಾಯಿ ಬಡಿದುಕೊಳ್ಳುವುದು ಅವರ ಮಾನಸಿಕತೆಯ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಅದರಲ್ಲೂ ಡಾಲಿ ಧನಂಜಯ್ ಲಿಂಗಾಯತ ಎನ್ನುವ ಕಾರಣಕ್ಕೆ ಮಾಂಸಾಹಾರ ಸೇವನೆ ಮಾಡಬಾರದು ಎಂದು ಕೆಲವರು ಕಮೆಂಟ್ ಹಾಕಿದ್ದಾರೆ. ಇನ್ನೂ ಸ್ವಲ್ಪ ಜನ ಪರರ ಆಹಾರದ ಬಗ್ಗೆ ನಾವು ಮಾತನಾಡಬಾರದು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ಊಟ ತನ್ನ ಇಚ್ಚೆ ಹಾಗೂ ನೋಟ ಪರರ ಇಚ್ಚೆ ಎಂಬ ಮಾತಿದೆ. ಆದರೆ ಬಿಟ್ಟಿ ಇಂಟರ್ನೆಟ್ ಸಿಗುತ್ತದೆ ಎಂಬ ಕಾರಣಕ್ಕೆ ಯಾರದಾದರೂ ವೈಯಕ್ತಿಕ ವಿಚಾರಗಳಲ್ಲಿ ಮೂಗು ತೋರಿಸುವ ಹಕ್ಕು ಯಾರಿಗೂ ಇಲ್ಲ. ಅವರ ಬದುಕು ಅವರವರ ಇಷ್ಟ. ಅದು ಇನ್ನೊಬ್ಬರಿಗೆ ಯಾಕೆ ಎಂಬ ಕನಿಷ್ಠ ಜ್ಞಾನವೂ ಇಲ್ಲದಿರುವ ಮೂರ್ಖರು ಈ ರೀತಿಯಾದ ತಳಬುಡವಿಲ್ಲದ ಪ್ರಶ್ನೆಗಳನ್ನು ಎತ್ತುತ್ತಾರೆ ಎಂಬುವುದು ಸ್ಪಷ್ಟವಾಗುತ್ತದೆ.
ಅಷ್ಟಕ್ಕೂ ಲಿಂಗಾಯತನಾದರೆ ಮಾಂಸಾಹಾರ ಸೇವಿಸುವುದು ಬಿಡುವುದು ಅವರ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಅದೆಷ್ಟೋ ಜನರು ಮಾಂಸಾಹಾರ ಸೇವಿಸುತ್ತಾರೆ ಅದರ ಬಗ್ಗೆ ತುಟಿ ಬಿಚ್ಚದ ಸಮಾಜದ ಕೆಲವು ಕೊಳಕು ಮನಸ್ಸುಗಳು ಈ ರೀತಿಯಾದ ಅನವಶ್ಯಕ ವಿಚಾರಗಳ ಬಗ್ಗೆ ಚರ್ಚಿಸಲು ಇಚ್ಚಿಸುತ್ತವೆ. ಇದು ಒಂದು ರೀತಿಯಲ್ಲಿ ಅಪಾಯಕಾರಿಯಾದ ನಡೆಯಾಗಿದೆ. ಇದರಿಂದ ಒಬ್ಬ ವ್ಯಕ್ತಿಯ ಖಾಸಗಿ ವಿಚಾರಗಳಿಗೆ ಧಕ್ಕೆ ತರುವ ಕೆಲಸವನ್ನೂ ಈ ಮನಸ್ಥಿತಿಗಳು ಮಾಡುತ್ತಿರುವುದು ನಿಜಕ್ಕೂ ಕಳವಳಕಾರಿ ವಿಚಾರವಾಗಿದೆ.

ಮನಷ್ಯನಲ್ಲಿ ಎಷ್ಟೇ ಬುದ್ಧಿವಂತಿಕೆಯಿದ್ದರೂ ಸಹ ಪರರ ವೈಯಕ್ತಿಕ ವಿಚಾರಗಳ ಬಗ್ಗೆ, ಜೀವನದ ಕುರಿತು ಟೀಕಿಸುವಷ್ಟು ಅಧಃಪತನಕ್ಕೆ ಇಳಿಯಬಾರದು. ಕೇವಲ ಇದು ಡಾಲಿ ವಿಚಾರವಲ್ಲ, ಯಾರದೇ ಆಗಿರಲಿ ಖಾಸಗಿ ವಿಷಯಗಳಲ್ಲಿ ನಾವು ಭಾಗಿಯಾಗಬಾರದು ಎಂಬುದನ್ನು ಈ ಟೀಕಾಕಾರರು, ಸ್ವಯಂ ಘೋಷಿತ ಪ್ರಜ್ಞಾವಂತರು ಅರಿಯಬೇಕಿದೆ. ಆದರೆ ಈ ತೆರನಾದ ಟಿಪ್ಪಣಿ ಕಾರರ ಸ್ಥಿತಿಯನ್ನು ನಾವು ಹೀನ ಮನಸ್ಥಿತಿಗಳ ಬೌದ್ಧಿಕ ದಿವಾಳಿತನದ ಪರಮಾವಧಿ ಎಂದು ಕರೆಯಬಹುದೇನೋ..






