ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಗುಂಬಜ್ ಮಾದರಿ ಬಸ್ ಸ್ಟ್ಯಾಂಡ್ ವಿವಾದಕ್ಕೆ ತೆರೆಬಿದ್ದಿದೆ. . ಶಾಸಕ ರಾಮದಾಸ್ ಹಾಗೂ ಸಂಸದ ಪ್ರತಾಪ್ ಸಿಂಹ ಜಟಾಪಟಿಗೆ ತಾರ್ಕಿಕ ಅಂತ್ಯ ಸಿಕ್ಕಿದೆ.
ವಿವಾದಿತ ಗುಂಬಾಜ್ ಮಾದರಿಯ ಬಸ್ ನಿಲ್ದಾಣ ವಿಚಾರಕ್ಕೆ ಸಂಬಂಧಿಸಿದಂತೆ ಕೊನೆಗೂ ಸಂಸದ ಪ್ರತಾಪ್ ಸಿಂಹ ಮೇಲುಗೈ ಸಾಧಿಸಿದ್ದಾರೆ. ಬಸ್ ಸ್ಟ್ಯಾಂಡ್ ಮೇಲೆ ಎರಡು ಚಿಕ್ಕ ಗೋಪುರ ಮಧ್ಯೆ ಒಂದು ದೊಡ್ಡ ಗೋಪುರ ಇದ್ದರೆ ಅದು ಮುಸ್ಲಿಂ ಮಾದರಿ ಕಟ್ಟಡ. ಅದನ್ನ ತೆರವು ಮಾಡೇ ಮಾಡುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದರು.
ಇದೀಗ ಅದನ್ನು ತೆರವು ಮಾಡಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಂಹ ಕೊಟ್ಟ ಮಾತಿನಂತೆ ನಾನು ನಡೆದುಕೊಂಡಿದ್ದೇನೆ. ಅದನ್ನ ತೆರವು ಮಾಡುತ್ತೇನೆ ಎಂದಿದ್ದೆ, ಅದರಂತೆ ಈಗ ತೆರವುವಾಗಿದೆ. ಕಾಲಾವಕಾಶ ಕೇಳಿ ಮಾತಿನಂತೆ ಜಿಲ್ಲಾಧಿಕಾರಿ ನಡೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ವಾಸ್ತವ ಅರಿತು ಜನಾಭಿಪ್ರಾಯಕ್ಕೆ ತಲೆಬಾಗಿದ ರಾಮದಾಸ್ ಜೀ ಗೂ ಧನ್ಯವಾದಗಳು ಎಂದು ಫೇಸ್ ಬುಕ್ ಮುಖಪುಟದಲ್ಲಿ ಸಂಸದ ಪ್ರತಾಪ್ ಸಿಂಹ ಬರೆದುಕೊಂಡಿದ್ದಾರೆ.
ಇನ್ನೊಂದು ಕಡೆ ಅನವಶ್ಯಕವಾಗಿ ಧರ್ಮ ಲೇಪನ ಮಾಡಿದ್ದು ನನಗೆ ನೋವಾಗಿದೆ ಎಂದು ಶಾಸಕ ರಾಮದಾಸ್ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೊಂಡಿದ್ದಾರೆ. ಇದು ವಿವಾದಿತ ಬಸ್ ನಿಲ್ದಾಣ ವಿಚಾರದಲ್ಲಿ ಶಾಸಕ ರಾಮದಾಸ್ ಗೆ ಹಿನ್ನಡೆ ತಂದಿದೆ ಎನ್ನಲಾಗಿದೆ.
ಆಡಿದ ಮಾತಿನಂತೆ ನಡೆದುಕೊಂಡಿದ್ದೀನಿ ಎಂದು ಸಂಸದ ಪ್ರತಾಪ್ ಸಿಂಹ ಬೀಗುತ್ತಿರುವುದು ಮುಂದೆ ಸಂಸದ – ಶಾಸಕರ ನಡುವೆ ಮತ್ತೊಂದು ಸಮರಕ್ಕೆ ನಾಂದಿ ಹಾಡಲಿದೆಯೇ ಎಂದು ಕಾದುನೋಡಬೇಕಿದೆ.
