
ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ನಿಂದ ಸಂವಿಧಾನ ಬಚಾವ್ ಪ್ರತಿಭಟನಾ ಸಮಾವೇಶ ನಡೆಸಲಾಗಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಸಚಿವರಾದ ಹೆಚ್.ಕೆ ಪಾಟೀಲ, ಸಂತೋಷ್ ಲಾಡ್, ಶಿವಾನಂದ್ ಪಾಟೀಲ, ಶಿವರಾಜ್ ತಂಗಡಗಿ ಮತ್ತಿತರರು ಭಾಗಿಯಾಗಿದ್ದು, ಧಾರವಾಡ, ಗದಗ, ಹಾವೇರಿ ಹಾಗೂ ಕೊಪ್ಪಳ ಜಿಲ್ಲೆಗಳ ಸಾವಿರಾರು ಕಾರ್ಯಕರ್ತರು ಭಾಗಿಯಾಗದ್ದಾರೆ.

ಬೆಲೆ ಏರಿಕೆ ಮೂಲಕ ಕೇಂದ್ರ ಸರ್ಕಾರ ಜನರ ಪಿಕ್ ಪಾಕೆಟ್ ಮಾಡ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ. ಬೆಲೆ ಏರಿಕೆಗೆ ಮುಕ್ತಿ ಹಾಡಲು ಗ್ಯಾರಂಟಿ ನೀಡಿದ್ದೇವೆ. ಐದು ಗ್ಯಾರಂಟಿ ಕೊಟ್ಟು ಜನರಿಗೆ ಶಕ್ತಿ ನೀಡ್ತೀದ್ದೇವೆ. ಆದರೂ ಬಿಜೆಪಿ ಯವರು ಜನಾಕ್ರೋಶ ಯಾತ್ರೆ ಮಾಡ್ತಿದೆ. ಬಿಜೆಪಿ ಜನಾಕ್ರೋಶ ಯಾತ್ರೆ ಆರಂಭದ ವೇಳೆಯೇ ಕೇಂದ್ರ ಡಿಸೇಲ್ ದರ ಏರಿಸಿತು. ಅದರ ವಿರುದ್ಧ ಬಿಜೆಪಿ ಏಕೆ ಹೋರಾಟ ಮಾಡ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ಎರಡು ವರ್ಷ ಪೂರೈಸಿದ ವೇಳೆ ವಿಜಯನಗರದಲ್ಲಿ ದೊಡ್ಡ ಸಮಾವೇಶ ಮಾಡ್ತೇವೆ, ಪೌರ ಕಾರ್ಮಿಕರ ಸೇವೆ ಖಾಯಂ ಮಾಡ್ತೇವೆ ಅಂತ ಭರವಸೆ ನೀಡಿದ್ದೆವು. ಅದರಂತೆ ಇವತ್ತು 12600 ಜನ ಪೌರ ಕಾರ್ಮಿಕರಿಗೆ ಸೇವೆ ಖಾಯಮಾತಿ ಮಾಡಿದ ಪ್ರಮಾಣ ಪತ್ರ ನೀಡಿದ್ದೇವೆ. ಬೆಲೆ ಏರಿಕೆ ಮೂಲಕ ಕೇಂದ್ರ ಜನರ ಪಿಕ್ ಪಾಕೆಟ್ ಮಾಡ್ತಿದೆ. ಆದರೂ ಬಿಜೆಪಿ ಜನಾಕ್ರೋಶ ಯಾತ್ರೆ ಮಾಡ್ತಿದೆ. ನಿಮ್ಮ ಜನಾಕ್ರೋಶ ಕೇಂದ್ರ ಸರ್ಕಾರದ ಮೇಲಿರಲಿ. ನಮ್ಮ ಸರ್ಕಾರದ ಮೇಲಲ್ಲ, ಮಹದಾಯಿ ವಿಚಾರದಲ್ಲಿ ಬಿಜೆಪಿ ವಿಜಯೋತ್ಸವ ಮಾಡಿತ್ತು. ಆದರೆ ಇದುವರೆಗೂ ಯಾಕೆ ಅನುಷ್ಠಾನ ಆಗಿಲ್ಲ..? ನಮ್ಮ ಸರ್ಕಾರಕ್ಕೆ ಬದ್ಧತೆ ಇದೆ. ಸಂವಿಧಾನ ಉಳಿಸಲು ನಾವು ಈ ಹೋರಾಟ ಮಾಡ್ತೇವೆ. ಬಿಜೆಪಿ ಹೋರಾಟ ಮಾಡಲು ಬಂದರೆ ಅದಕ್ಕೆ ನಾವು ಅವಕಾಶ ನೀಡಲ್ಲ, ಇದು ಕಾಂಗ್ರೆಸ್ ಸಂಕಲ್ಪ ಎಂದಿದ್ದಾರೆ|

ಸಂವಿಧಾನ ಬಚಾವ್ ಸಮಾವೇಶದಲ್ಲಿ ಸಚಿವ ಸಂತೋಷ್ ಲಾಡ್ ಮಾತನಾಡಿ, ಸುಪ್ರೀಂ ಕೋರ್ಟ್ ತೀರ್ಪು ತಮ್ಮ ಪರವಾಗಿ ಬಂದರೆ ಒಳ್ಳೆಯದು. ವಿರುದ್ಧ ಬಂದರೆ ಬಿಜೆಪಿ ನ್ಯಾಯಾಂಗದ ಮೇಲೆ ಸವಾರಿ ಮಾಡಲು ಯತ್ನಿಸುತ್ತದೆ ಎಂದು ವಾಗ್ದಾಳಿ ಮಾಡಿದ್ದಾರೆ. ಬೇರೆ ಎಲ್ಲ ಹಕ್ಕುಗಳನ್ನು ಮೊಟಕುಗೊಳಿಸುವ ಕೆಲಸವನ್ನು ಬಿಜೆಪಿ ಮಾಡ್ತಿದೆ. ಅಗತ್ಯ ವಸ್ತುಗಳು ಗಗನಕ್ಕೇರಿವೆ. ಸಬ್ಸಿಡಿ ಜಾಸ್ತಿ ಕೊಟ್ಟರೆ ಕಾರ್ಪೂರೇಟ್ ಸಂಸ್ಥೆಗಳು ಮುಚ್ಚಿ ಹೋಗುತ್ತವೆ ಎಂದು ವ್ಯಂಗ್ಯವಾಡಿದ್ದಾರೆ.

ಬೆಲೆ ಏರಿಕೆ ತಡೆಗಟ್ಟುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ವಾಗ್ದಾಳಿ ಮಾಡಿದ್ದಾರೆ. ಬಡವರಿಗೆ ಬಿಜೆಪಿ ಪದೇ ಪದೇ ಅನ್ಯಾಯ ಮಾಡುತ್ತಿದೆ. ಮನುಸ್ಮೃತಿ ಸಂವಿಧಾನ ಆಗಲು ಸಾಧ್ಯವಿಲ್ಲ, ಸಂವಿಧಾನ ಬದಲಾವಣೆ ಮಾಡೋ ಹುನ್ನಾರ ನಡೆದಿದೆ. ಕೇವಲ ರಾಜಕೀಯ ಪ್ರಚಾರ ಪಡೆದುಕೊಂಡರೆ ಸಾಲದು. ಸಂವಿಧಾನ ಮತ್ತು ಸಮಾನತೆ ಬಗ್ಗೆ ಬಿಜೆಪಿ ಯವರು ಬಹಳ ಮಾತನಾಡುತ್ತಾರೆ. ಆದರೆ ನಡೆದುಕೊಳ್ಳುವ ರೀತಿಯೇ ಬೇರೆ ಎಂದಿದ್ದಾರೆ.