ಕಾಂಗ್ರೆಸ್ ನದ್ದು ಭಯೋತ್ಪಾದನೆಯ ಮಾನಸಿಕತೆಯಾಗಿದ್ದು, ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭಯೋತ್ಪಾದನೆಗೆ ಪ್ರೇರಣೆ ನೀಡಲಿದೆ. ಕಾಂಗ್ರೆಸ್ ಗೆ ಪೊಲೀಸ್ ಇಲಾಖೆಯ ಬಗ್ಗೆ ಗೌರವ ಇಲ್ಲ, ಭಯೋತ್ಪಾದಕರ ಮೇಲೆ ಪ್ರೀತಿ ಇದೆ ಎಂದರು
ಮಂಗಳೂರು: ಶಂಕಿತ ಉಗ್ರ ಶಾರಿಕ್ ಬಂಧನ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆ ಪ್ರಾರಂಭ ಮಾಡಿದೆ. ಭಯೋತ್ಪಾದನೆಗೆ ಮೂಲ ಪ್ರೇರಣೆಯೇ ಕಾಂಗ್ರೆಸ್ ಆಗಿದ್ದು, ಕಾಶ್ಮೀರದಲ್ಲಿ ಆರಂಭವಾದ ಭಯೋತ್ಪಾದನೆ ಪ್ರತೀ ಊರಿಗೆ ತಲುಪಿಸಿದ್ದು ಕಾಂಗ್ರೆಸ್ ಎಂದು ಕಿಡಿಕಾರಿದ ಅವರು, ಕಾಶ್ಮೀರದ ಬಾಂಬ್ ದೆಹಲಿ, ಕೊಯಮತ್ತೂರುನಲ್ಲಿ ಯುಪಿಎ ಕಾಲಘಟ್ಟದಲ್ಲಿ ಸ್ಫೋಟವಾಯಿತು. ಅಲ್ಲದೇ ಮುಂಬೈ ದಾಳಿ ರೂವಾರಿ ಕಸಬ್ ನನ್ನು ಬಂಧಿಸಿದ ಕಾಂಗ್ರೆಸ್ ಸರ್ಕಾರ ಆತನಿಗೆ ಅತಿಥಿ ಸತ್ಕಾರ ಮಾಡಿತ್ತು ಎಂದು ಟೀಕಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಹ ಇದೇ ಮನಸ್ಥಿತಿ ಹೊಂದಿದ್ದಾರೆ. ಹೀಗಾಗಿ ಮಂಗಳೂರು ಬಾಂಬ್ ಪ್ರಕರಣವನ್ನು ಭಯೋತ್ಪಾದನಾ ಅಲ್ಲ ಎಂದು ಡಿಕೆ ಶಿವಕುಮಾರ್ ಬಿಂಬಿಸುತ್ತಿದ್ದಾರೆ. ಬಂಧಿತ ಶಾರೀಕ್ ಹಿನ್ನಲೆ ಹಾಗೂ ಪೊಲೀಸ್ ತನಿಖೆ ಆಧಾರದಲ್ಲಿ ಆತ ಮಾಡಿದ್ದು ಭಯೋತ್ಪಾದನಾ ಕೃತ್ಯ ಎಂದು ಪೊಲೀಸರೇ ಹೇಳಿದ್ದಾರೆ. ಕಾಂಗ್ರೆಸ್ ಭಯೋತ್ಪಾದಕತೆ ಪರವಾಗಿದ್ದು, ಯಾವ ಸ್ವಾತಂತ್ರ್ಯಕ್ಕಾಗಿ ಕೆಲಸ ಮಾಡಿದ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಈಗ ದೇಶ ವಿರೋಧಿ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.
ಡಿ.ಕೆ. ಶಿವಕುಮಾರ್ ಹೇಳಿಕೆ ಭಯೋತ್ಪಾದಕರಿಗೆ ಪ್ರೇರಣೆ ನೀಡಿದೆ. ಕಾಶ್ಮೀರದ ಕಾಂಗ್ರೆಸ್ ನಾಯಕ ಭಯೋತ್ಪಾದಕರಿಗೆ ಒಂದುಕೋಟಿ ಆಫರ್ ನೀಡಿದ್ದಾನೆ. ಪಿಎಫ್ಐ ಕ್ರಿಮಿನಲ್ ಗಳ ಕೇಸ್ ಹಿಂಪಡೆದು ಕಾಂಗ್ರೆಸ್ ಬಿ ರಿಪೋರ್ಟ್ ಹಾಕಿದೆ. ಶಾರೀಕ್ ಈ ಹಿಂದೆ ಗೋಡೆ ಬರಹ ಬರೆದಾಗ ಅವನ ಪರವಾಗಿ ಕಾಂಗ್ರೆಸ್ ಹೇಳಿಕೆ ನೀಡಿದೆ. ಕಾಂಗ್ರೆಸ್ ನದ್ದು ಭಯೋತ್ಪಾದನೆಯ ಮಾನಸಿಕತೆಯಾಗಿದ್ದು, ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭಯೋತ್ಪಾದನೆಗೆ ಪ್ರೇರಣೆ ನೀಡಲಿದೆ. ಕಾಂಗ್ರೆಸ್ ಗೆ ಪೊಲೀಸ್ ಇಲಾಖೆಯ ಬಗ್ಗೆ ಗೌರವ ಇಲ್ಲ, ಭಯೋತ್ಪಾದಕರ ಮೇಲೆ ಪ್ರೀತಿ ಇದೆ ಎಂದರು.
ಕಾಂಗ್ರೆಸ್ ಈ ಹಿಂದೆ ವೋಟರ್ ಐಡಿ ಹಗರಣ ಮುಚ್ಚುವ ಕೆಲಸ ಮಾಡಿದೆ. ಆದರೆ ಬಿಜೆಪಿಗೆ ಪ್ರಕರಣ ಮುಚ್ಚುವ ಅಗತ್ಯತೆ ಇಲ್ಲ. ಕಾಂಗ್ರೆಸ್ ಕಾಲಘಟ್ಟದ ಹಗರಣದ ಪಿಎಸ್ಐ ಅಕ್ರಮ ನೇಮಕಾತಿಯ ಆರೋಪಿಗಳ ಬಂಧನವಾಗಿದೆ. ಜೊತೆಗೆ ಶಿಕ್ಷಕರ ನೇಮಕಾತಿ ಹಗರಣದ ತನಿಖೆ ನಡೆಯುತ್ತಿದ್ದು, ಇಂತಹ ಯಾವ ಕೆಲಸವನ್ನೂ ಬಿಜೆಪಿ ಮಾಡೋದಿಲ್ಲ. ವೋಟ್ ಬ್ಯಾಂಕ್ ಗೆ ಚಿಲ್ಲರೆ ರಾಜಕೀಯ ಮಾಡೋದು ಕಾಂಗ್ರೆಸ್ ಕೆಲಸ ಎಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.