ನವದೆಹಲಿ : ಟಿಎಂಸಿ (TMC) ಹಾಗೂ ಆಪ್ ಹೇಳಿಕೆ ಬಳಿಕ ಕಾಂಗ್ರೆಸ್ (Congress) ನಾಯಕರು ಮೈತ್ರಿಯ ಬಗ್ಗೆ ಆಶಾಭಾವನೆಯನ್ನು ವ್ಯಕ್ತಪಡಿಸಿದ್ದು, ಅಂತಿಮವಾಗಿ ಎರಡೂ ಪಕ್ಷಗಳ ರಾಷ್ಟ್ರೀಯ ನಾಯಕರು ಮಾತುಕತೆ ನಡೆಸುವ ಸಾಧ್ಯತೆ ಇದೆ.ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಮಮತಾ ಬ್ಯಾನರ್ಜಿ (Mamatha benerji) ಘೋಷಿಸಿದ್ದಾರೆ. ಇದರ ಬೆನ್ನಲ್ಲಿ ಪಂಜಾಬ್ನಲ್ಲಿ ಎಎಪಿ ಕೂಡ ಏಕಾಂಗಿಯಾಗಿ ಕಣಕ್ಕಿಳಿಯಲಿದೆ ಎಂದು ಭಗವಂತ್ ಮಾನ್ ಹೇಳಿದ್ದಾರೆ.
![](https://pratidhvani.com/wp-content/uploads/2024/01/Celeste-Wallander-78-1024x581.webp)
ಪಂಜಾಬ್ನಲ್ಲಿ ಎಎಪಿಯ ಘೋಷಣೆ ನಿರೀಕ್ಷಿತವೇ ಆಗಿದ್ದು, ಕಾಂಗ್ರೆಸ್ ಮತ್ತು ಎಎಪಿಯ ರಾಜ್ಯ ನಾಯಕತ್ವವು ಮೊದಲಿನಿಂದಲೇ ಪಂಜಾಬ್ನಲ್ಲಿ ಮೈತ್ರಿಗೆ ವಿರೋಧಿಸಿತ್ತು.ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆ ಪಶ್ಚಿಮ ಬಂಗಾಳಕ್ಕೆ ಪ್ರವೇಶಿಸುವ ಒಂದು ದಿನದ ಮೊದಲು ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಮತಾ ಬ್ಯಾನರ್ಜಿ ಜೊತೆ ಸಂಬಂಧ ಉತ್ತಮವಾಗಿದೆ ಎಂದು ಹೇಳಿಕೆ ಕೊಟ್ಟ ಒಂದು ದಿನದ ನಂತರ ಮಮತಾ ಏಕಾಂಗಿ ಸ್ಪರ್ಧೆ ಹೇಳಿಕೆ ಕೊಟ್ಟಿದ್ದರು. ಆದರೆ, ಮಮತಾ-ಜಿ ಇಲ್ಲದೆ INDIA ನ್ನು ಊಹಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ ಮತ್ತು ವಿರೋಧ ಪಕ್ಷದ ಒಕ್ಕೂಟವು ಪಶ್ಚಿಮ ಬಂಗಾಳದಲ್ಲಿ ಲೋಕಸಭೆ ಚುನಾವಣೆಯಲ್ಲಿ ಒಂದಾಗಿ ಹೋರಾಡಲಿದೆ ಎಂದು ಹೇಳಿಕೊಂಡಿದೆ.
![](https://pratidhvani.com/wp-content/uploads/2024/01/2qb9tqbo_india_625x300_30_August_23-1024x630.webp)
ನಾವು ಬಿಜೆಪಿಯನ್ನು ಸೋಲಿಸಲು ಬಯಸುತ್ತೇವೆ ಮತ್ತು ಬಿಜೆಪಿಯನ್ನು ಸೋಲಿಸಲು ನಾವು ಏನು ಬೇಕಾದರೂ ಮಾಡುತ್ತೇವೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ರಾಹುಲ್ ಗಾಂಧಿ ಅವರು ಮಮತಾ ಜಿ ಮತ್ತು ಟಿಎಂಸಿ ಭಾರತದ ಮೈತ್ರಿಯ ಅತ್ಯಂತ ಬಲವಾದ ಆಧಾರ ಸ್ತಂಭವಾಗಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅಸ್ಸಾಂನ ಬೊಂಗೈಗಾಂವ್ನಲ್ಲಿ ಮಾತನಾಡಿ, ಮಮತಾ ಜೀ ಇಲ್ಲದ INDIA ಮೈತ್ರಿಯನ್ನು ನಾವು ಊಹಿಸಲು ಸಾಧ್ಯವಿಲ್ಲ. INDIA ಮೈತ್ರಿಯಂತೆಯೇ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯಲಿದೆ ಎಂದು ಹೇಳಿದ್ದಾರೆ.
![](https://pratidhvani.com/wp-content/uploads/2024/01/rg-sixteen_nine-jpg.webp)
ನಾನು ಕಾಂಗ್ರೆಸ್ ಪಕ್ಷದೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ, ಬಂಗಾಳದಲ್ಲಿ ನಾವು ಏಕಾಂಗಿಯಾಗಿ ಹೋರಾಡುತ್ತೇವೆ ಎಂದು ನಾನು ಯಾವಾಗಲೂ ಹೇಳುತ್ತೇನೆ. ನಮ್ಮದು ಜಾತ್ಯತೀತ ಪಕ್ಷ ಮತ್ತು ಬಂಗಾಳದಲ್ಲಿ ನಾವು ಏಕಾಂಗಿಯಾಗಿ ಬಿಜೆಪಿಯನ್ನು ಸೋಲಿಸುತ್ತೇವೆ. ನಾನು ಅನೇಕ ಪ್ರಸ್ತಾಪಗಳನ್ನು ನೀಡಿದ್ದೇನೆ ಆದರೆ ಅವರು ಅವುಗಳನ್ನು ಮೊದಲಿನಿಂದಲೂ ತಿರಸ್ಕರಿಸಿದರು. ರಾಹುಲ್ ಗಾಂಧಿಯವರ ನ್ಯಾಯ ಯಾತ್ರೆಯು ಬಂಗಾಳದ ಮೂಲಕ ಹಾದುಹೋಗುವ ಬಗ್ಗೆ ತನಗೆ ತಿಳಿಸಲಾಗಿಲ್ಲ. ನಾನು ಇಂಡಿಯಾ ಬ್ಲಾಕ್ನ ಭಾಗವಾಗಿದ್ದರೂ ಸೌಜನ್ಯಕ್ಕಾಗಿ ಪಶ್ಚಿಮ ಬಂಗಾಳಕ್ಕೆ ಬರುವುದಾಗಿ ಅವರು ನನಗೆ ತಿಳಿಸಿಲ್ಲ, ಹಾಗಾಗಿ ಬಂಗಾಳದ ಮಟ್ಟಿಗೆ ನನಗೆ ಯಾವುದೇ ಸಂಬಂಧವಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು. ಆದರೆ ಅಖಿಲ ಭಾರತ ಮಟ್ಟದಲ್ಲಿ ಏನು ಮಾಡಬೇಕೆಂದು ನಾವು ನಿರ್ಧರಿಸುತ್ತೇವೆ. ನಮ್ಮದು ಜಾತ್ಯತೀತ ಪಕ್ಷ ಎಂದು ಹೇಳಿದ್ದರು. ಇದರರ್ಥ ಮೈತ್ರಿಯಿಂದ ಸಂಪೂರ್ಣವಾಗಿ ಟಿಎಂಸಿ ಹೊರಗೆ ಬಂದಿಲ್ಲ ಎನ್ನುವುದು ಸ್ಪಷ್ಟವಾಗಿದೆ.
ಕಾಂಗ್ರೆಸ್ ನಾಯಕಿ ದೀಪಾ ದಾಸ್ಮುನ್ಸಿ ಹೈದರಾಬಾದ್ನಲ್ಲಿ ಮಮತಾ ಪರೋಕ್ಷವಾಗಿ ಬಿಜೆಪಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ ಬಂಗಾಳ ಕಾಂಗ್ರೆಸ್ ಮುಖ್ಯಸ್ಥ ಮತ್ತು ಮಮತಾ-ವಿಮರ್ಶಕ ಅಧೀರ್ ರಂಜನ್ ಚೌಧರಿ ಅವರು ಕೇಂದ್ರ ನಾಯಕತ್ವದ ಅಂಗಳಕ್ಕೆ ಸೀಟು ಹಂಚಿಕೆ ಚೆಂಡನ್ನು ಎಸೆದಿದ್ದಾರೆ. ಕಾಂಗ್ರೆಸ್ನ ಉನ್ನತ ನಾಯಕರು ಶೀಘ್ರದಲ್ಲೇ ಮಮತಾ ಅವರನ್ನು ಸಂಪರ್ಕಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಪಂಜಾಬ್ ಸಿಎಂ ಭಗವಂತ್ ಮಾನ್, ಎಎಪಿ ಪಂಜಾಬ್ನಲ್ಲಿ ಯಾವುದೇ ಮೈತ್ರಿಯನ್ನು ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಎಎಪಿ ದೆಹಲಿಯಲ್ಲಿ ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯಿದೆ.
ಸೀಟು ಹಂಚಿಕೆಯ ಕಸರತ್ತಿನ ವಿಳಂಬ, ಅಸಮಂಜಸ ಬೇಡಿಕೆಗಳು ಮತ್ತು ಮುಖ್ಯಮಂತ್ರಿ ವಿರುದ್ಧ ಬಂಗಾಳ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ರಂಜನ್ ಚೌಧರಿಯವರ ಹೇಳಿಕೆಗಳು ಮಮತಾ ಅವರು ಮೈತ್ರಿ ವಿರುದ್ಧ ಘೋಷಣೆಗೆ ಕಾರಣವಾಗಿದೆ ಎಂದು ಟಿಎಂಸಿ ಮೂಲಗಳು ತಿಳಿಸಿದೆ.ಪಂಜಾಬ್ನಲ್ಲಿ ಎಎಪಿಯ ನಿಲುವು ಕಾಂಗ್ರೆಸ್ಗೆ ಆಶ್ಚರ್ಯ ತಂದಿಲ್ಲ. ಎರಡೂ ಪಕ್ಷಗಳ ರಾಜ್ಯ ಘಟಕಗಳು ರಾಜ್ಯದಲ್ಲಿ ಮೈತ್ರಿಯನ್ನು ವಿರೋಧಿಸಿದ್ದವು. ಖರ್ಗೆ ಮತ್ತು ರಾಹುಲ್ ಭೇಟಿ ವೇಳೆ ಸ್ವತಃ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಈ ಬಗ್ಗೆ ಸೂಚಿಸಿದ್ದರು. ಕಾಂಗ್ರೆಸ್ನ ರಾಷ್ಟ್ರೀಯ ನಾಯಕತ್ವ ಎಎಪಿ ಜೊತೆಗೆ ಪಂಜಾಬ್ನಲ್ಲಿ ಮೈತ್ರಿ ಬಗ್ಗೆ ಮಾತುಕತೆಗೆ ನಿರಾಕರಿಸಿತ್ತು. ಆದರೆ ದೆಹಲಿಯಲ್ಲಿ ಸೀಟು ಹಂಚಿಕೆಯನ್ನು ಚರ್ಚಿಸಲಾಗುವುದು ಎಂದು ಹೇಳಿತ್ತು.